- ಹಿಂದೂ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಕಿರುಕಳ ನೀಡುತ್ತಿರುವ ಪೊಲೀಸರ ವಿರುದ್ಧ ಕ್ರಮಗೊಳ್ಳಿ
- ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಮೂಲಕ ರಾಜ್ಯಪಾಲರಿಗೆ ಮನವಿ: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ
ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆ-ಬೆದರಿಕೆ ಕರೆಗಳು ಹಾಗೂ ಕೋಮು ಭಾವನೆ ಕೆರಳಿಸುವ ಘಟನೆಗಳು ಗಂಭೀರ ಸ್ವರೂಪಾಗಿವೆ, ಯಾರು ತಪ್ಪಿತಸ್ಥರು ಅವರ ಮೇಲೆ ಕ್ರಮ ಜರುಗಿಸಲು ನಮ್ಮ ಅಡ್ಡಿ ಇಲ್ಲ. ಆದರೆ ಈಗ ನಡೆಯುತ್ತಿರುವುದು ಹಿಂದುಗಳನ್ನು ಮಾತ್ರ ಗುರಿ ಇಟ್ಟು ಭಯ ಸೃಷ್ಟಿಸುತ್ತಿರುವುದು ಸರಿ ಅಲ್ಲ. ಮಧ್ಯರಾತ್ರಿ ಮನೆ ಕದ ತಟ್ಟೆ ಹಿಂದೂ ಕಾರ್ಯಕರ್ತರ ಭಾವಚಿತ್ರ ತೆಗೆಯುವುದು, ಹೆದರಿಸುವುದು, ದೂರವಾಣಿ ಸಂಖ್ಯೆ ತೆಗೆದುಕೊಳ್ಳುವುದು, ಮನೆಯಲ್ಲಿ ತಂದೆ ತಾಯಿಗೆ ಹೆದರಿಸುವುದು ಇದು ನಿರಂತರ ನಡೆಯುತ್ತಲೇ ಇದೆ. ಬಹಿರಂಗವಾಗಿ ಮಂಗಳೂರು ಬೆಂಗಳೂರು ಹಾಗೂ ಇತರ ಕಡೆಗೆ ಅಂತರಾಷ್ಟ್ರೀಯ ಬೆದರಿಕೆಯ ಕರೆಗಳು, ಮುಂದಿನ ಗುರಿ ನೀನೇ ಎಂದು ಭಾವಚಿತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂದು ಸೌ. ವಿದುಲಾ ಹಳದೀಪುರ ಹೇಳಿದರು.
ಇವರು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಶುಕ್ರವಾರ (ಜೂ.06) ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕಡಬ ಸೇರಿದಂತೆ ಅನೇಕ ಕಡೆಗಳಿಂದ ವೃದ್ಧರು ಸೇರಿದಂತೆ ಅನೇಕ ಜನರಿಗೆ ತಡ ರಾತ್ರಿ ಕರೆ ಮಾಡಿ ಪೊಲೀಸರು ಅವರ ಮಾಹಿತಿ, ವಿಳಾಸ ಕೇಳಿದ್ದಾರೆ. ಸುಮಾರು 21 ಹಿಂದೂ ನಾಯಕರು, ರೈತರು, ಸಾಮಾಜಿಕ ಕಾರ್ಯಕರ್ತರಿಗೆ ಗಡಿಪಾರು ಆದೇಶವನ್ನು ಮಾಡಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಭಯದ ವಾತವರಣವು ನಿರ್ಮಾಣವಾಗಿದೆ. ಪೊಲೀಸರು ರಾತ್ರೊರಾತ್ರಿ ಹಿಂದೂಗಳ ಮನೆಗೆ ಬರುವುದರಿಂದ ಜನರಲ್ಲಿ ಭಯದ ವಾತವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಶ್ರೀ ರಾಮಸೇನೆಯ ಸಂಸ್ಥಾಪಕರಾದ ಪ್ರಮೋದ ಮುತಾಲಿಕ್ ಇವರು ಮಾತನಾಡುತ್ತಾ, ಎಲ್ಲವೂ ಈಗ ರಾಜ್ಯಾದ್ಯಂತ ಜಿಹಾದಿ ಮಾನಸಿಕತೆ ಬೆಳೆಯುತ್ತಿದೆ. ಪೊಲೀಸ್ ಇಲಾಖೆ ಬಗ್ಗೆ, ವಿಶ್ವಾಸ ಇದ್ದರೂ, ಸರ್ಕಾರದ ಮೇಲೆ ವಿಶ್ವಾಸ ಇಲ್ಲ. ಸರ್ಕಾರದ ಮುಲಾಜಿಗೆ, ಒತ್ತಡಕ್ಕೆ ಮಣಿದ ಪೊಲೀಸರ ಬಗ್ಗೆ ಸಂಶಯ ಮೂಡುತ್ತಿದೆ. ಸಂಘಟನೆ ಮಾಡುವ ಹಕ್ಕು ಸಂವಿಧಾನದಲ್ಲಿದೆ. ಗೋರಕ್ಷಣೆ ಹಿಂದೂ ಹುಡುಗಿಯರ ರಕ್ಷಣೆ, ಮತಾಂತರ ತಡೆಯುವುದು, ಜಿಹಾದಿ ಮಾನಸಿಕತೆಯ ಬಗ್ಗೆ ಜಾಗೃತಿ ಮೂಡಿಸುವುದು, ಇತ್ಯಾದಿ ಹಿಂದೂ ಕಾರ್ಯಕರ್ತರು ಮಾಡುವುದು ಅಪರಾಧ ಅಲ್ಲ ಇಂಥವರ ಮೇಲೆ ರೌಡಿಶೀಟರ, ಗೂಂಡಾ ಕಾಯ್ದೆ, ಗಡೀಪಾರು, ಕೇಸ್ ದಾಖಲಿಸುವುದು ಯಾವ ನ್ಯಾಯ? ಇದು ಸಂಘಟನೆಯ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಹತ್ತಿಕ್ಕುವುದು ಹೆದರಿಸುವುದು ಷಡ್ಯಂತ್ರವಾಗಿದೆ ಎಂದರು.
ವಿಶ್ವ ಹಿಂದೂ ಪರಿಷತಿನ ಪ್ರಮುಖರು ಮತ್ತು ನ್ಯಾಯವಾದಿಗಳಾದ ಅಶೋಕ ಕನ್ವೇಕರ ಮಾತನಾಡಿ, ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ ಅವರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸುವುದು, ಅವರಿಗೆ ಕಿರುಕುಳ ನೀಡಿ ಅವರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತಿದೆ. ಈ ರೀತಿ ಪೊಲೀಸರು ಕಾನೂನಿನ ಎಲ್ಲ ನಿಯಮಗಳನ್ನು ಮೀರಿ ಹಿಂದೂ ಕಾರ್ಯಕರ್ತರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ಭಾರತ ಸಂವಿಧಾನದ ಕಲಂ 14, 17, 19 ಮತ್ತು 21 ರ ಉಲ್ಲಂಘನೆಯಾಗಿದೆ. ಅದಲ್ಲದೇ ಭಾರತೀಯ ನ್ಯಾಯ ಸಂಹಿತೆ ಕಲಂ 105, 107, 182, 352, 128 ಪ್ರಕಾರ ಇದು ಗಂಭೀರ ಅಪರಾಧವಾಗಿದೆ. ಇದು ಭಾರತದ ಸಂವಿದಾನವು ನೀಡಿದ ನಾಗರಿಕರ ಖಾಸಗಿ ಹಕ್ಕು ಮತ್ತು ಜೀವನದ ಹಕ್ಕನ್ನು ಕಸಿದು, ನಮ್ಮಲ್ಲಿ ಅಸುರಕ್ಷಿತ ಭಾವನೆ ನಿರ್ಮಾಣ ಮಾಡುವ ಪ್ರಯತ್ನವಾಗಿದೆ ಎಂದರು.
ಈ ದೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮಾನವ ಹಕ್ಕಗಳ ಉಲ್ಲಂಘನೆ ಮಾಡಿದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ಕಿರುಕುಳಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಪರಿಹಾರ ನೀಡಬೇಕು ಮತ್ತು ಸಂಬಂಧಿಸಿದವರಿಂದ ಲಿಖಿತ ಕ್ಷಮಾಪಣೆ ಮಾಡಲು ಆದೇಶಿಸಿ ಪೀಡಿತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ. ಇದೇ ದೂರಿನ ಪ್ರತಿಯನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ನೀಡಲಾಗಿದೆ.
ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕರಾದ ಪ್ರಮೋದ ಮುತಾಲಿಕ, ಸೌ. ವಿದುಲಾ ಹಳದೀಪುರ, ಹಿಂದೂ ಜನಜಾಗೃತಿ ಸಮಿತಿಯ ಅಶೋಕ ಭೋಜ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀರಾಮಸೇನೆ, ಹಿಂದು ಜಾಗರಣ ವೇದಿಕೆ, ಹಿಂದು ಜನಜಾಗೃತಿ ಸಮಿತಿ, ಶಿವಾಜಿ ಪ್ರತಿಷ್ಠಾನ ಸಮಿತಿ, ಭಗತ್ ಸಿಂಗ್ ಸೇವಾ ಸಂಘ, ಗೋವರ್ಧನ್ ಸೇವಾ ಸಮಿತಿ, ಯುವ ಜಾಗೃತಿ ಸೇನೆ, ಚಿಂತನ ಮಂಥನ, S.S.K ಮಹಿಳಾ ಮಂಡಳ, ಹಿಂದೂ ವಕೀಲರ ಸಂಘ, ದುರ್ಗಾ ಸೇನೆ, ಮಾತೃ ಶಕ್ತಿ ಮತ್ತು ಇತರ ಸಂಘಟನೆಗಳ ಪ್ರಮುಖರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ