ಸಕ್ಷಮ ಸಂಸ್ಥಾಪನಾ ದಿನಾಚರಣೆ

Upayuktha
0


ಮಂಗಳೂರು: ಸಕ್ಷಮ ದ.ಕ. ಜಿಲ್ಲಾ ಘಟಕವು ಸಕ್ಷಮ ಸಂಸ್ಥಾಪನಾ ದಿನದ ಆಚರಣೆಯ ಸಲುವಾಗಿ "ಶಿವಸದನ" ಹಿರಿಯ ನಾಗರಿಕರ ವಸತಿ ನಿಲಯ ಮತ್ತು ವಿಶೇಷ ಚೇತನರ ಆಶ್ರಯಧಾಮ ಮುರ ಪುತ್ತೂರು ದ.ಕ ಇಲ್ಲಿಗೆ ಶುಕ್ರವಾರ (ಜೂ.20) ಭೇಟಿ ನೀಡಿತು.


ಸಕ್ಷಮ ಜಿಲ್ಲಾಧ್ಯಕ್ಷರಾದ ರಾಜಶೇಖರ ಭಟ್ಟ ಕಾಕುಂಜೆಯವರ ಜೊತೆಯಲ್ಲಿ ಉಪಾಧ್ಯಕ್ಷ ವಾರಣಾಸಿ ಗಣೇಶ ಭಟ್ಟ, ಕಾರ್ಯದರ್ಶಿ ಹರೀಶ್ ಪ್ರಭು, ಕೋಶಾಧಿಕಾರಿ ಸತೀಶ್ ರಾವ್, ಸಹಕಾರ್ಯದರ್ಶಿ ಭಾಸ್ಕರ ಹೊಸಮನೆ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಪುತ್ತೂರು ಸಕ್ಷಮ ಘಟಕದ ಸದಸ್ಯರೂ ಆದ ಉಮೇಶ್ ನಾಯಕ್ ಉಪಸ್ಥಿತರಿದ್ದರು.


ಸ್ವಂತ ನೆಲದ ಮೂರು ಅಂತಸ್ತಿನ ಈ ಶಿವಸದನದಲ್ಲಿರುವ 60ಹಿರಿಯ ನಾಗರಿಕರು ಮತ್ತು 20 ವಿಶೇಷ ಚೇತನ ಮಕ್ಕಳ ಜೊತೆ ಕುಶಲ ವಿಚಾರಿಸುವ ಮೂಲಕ "ಸಕ್ಷಮ"ದ ಸಂಸ್ಥಾಪನಾ ದಿನವನ್ನು ಆತ್ಮೀಯವಾಗಿ ಆಚರಿಸಲಾಯಿತು.


ಸಂಸ್ಥೆಯಲ್ಲಿರುವ ಹಿರಿಯ ನಾಗರಿಕರನ್ನು ಶಿವಸದನದ ಸಂಸ್ಥಾಪಕರಾದ ಬೆಳ್ಳೆ ಕರುಣಾಕರ ರಾವ್ ಇವರು ಪರಿಚಯಿಸಿದರು. ಸಂಸ್ಥೆಯ ವ್ಯವಸ್ಥಾಪಕಿ ಸುಮತಿಯವರು ಮಾಹಿತಿ ನೀಡಿದರು.


ಇದೇ ಕಟ್ಟಡದಲ್ಲಿ ವಿಶೇಷ ಚೇತನರ ಶಾಲೆಯನ್ನೂ ನಡೆಸುತ್ತಿದ್ದು ಅಲ್ಲಿನ 4ಮಂದಿ ಶಿಕ್ಷಕರ ಮತ್ತು ಸಹಾಯಕರ ಪರಿಚಯದೊಂದಿಗೆ ವಿಶೇಷ ಚೇತನರ ಜೊತೆಗೆ ಬೆರೆತುಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟು ಆನಂದದ ಅನುಭೂತಿಗೆ ಕಾರಣರಾದರು.


ಇದೇ ಸಂದರ್ಭ ದಲ್ಲಿ ವಿಶೇಷಚೇತನರಿಗಾಗಿ ಶೈಕ್ಷಣಿಕ ಕಲಿಕಾ ಸಾಮಗ್ರಿಗಳನ್ನು ಸಕ್ಷಮ ಜಿಲ್ಲಾ ವತಿಯಿಂದ ವಿತರಿಸಿ ಸಂಸ್ಥೆಯ ಸಂತೋಷದಲ್ಲಿ ಪಾಲುಗೊಂಡ ಭಾಗ್ಯ ನಮ್ಮದಾಯಿತು.

  

ಇದೇ ಸಂದರ್ಭದಲ್ಲಿ ವಿಶೇಷ ಚೇತನರ ಸಬಲೀಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಕೈಗೊಳ್ಳಬೇಕಾದ ಮತ್ತು ಎಚ್ಚರಿಕೆ ವಹಿಸಬೇಕಾದ ವಿಷಯಗಳ ಬಗ್ಗೆ ಸಲಹೆ ಸೂಚನೆಗಳನ್ನು ಹಂಚಿಕೊಂಡು ಪೋಷಕರ ಜೊತೆ ಸಂವಾದ ಕಾರ್ಯ ಅಗತ್ಯವಾಗಿ ಕೈಗೊಳ್ಳಬೇಕು, ಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು "ಸಕ್ಷಮ"ವು ಸಕ್ಷಮವಾಗಿದೆ ಎಂದು ರಾಜಶೇಖರ ಭಟ್ಟ ಕಾಕುಂಜೆ ಮತ್ತು ವಾರಣಾಸಿ ಗಣೇಶ ಭಟ್ಟರು ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಪುತ್ತೂರು ಕಸಾಪ ಅಧ್ಯಕ್ಷರಾದ ಉಮೇಶ್ ನಾಯಕ್ ಮತ್ತು ವಿಶೇಷ ಚೇತನರ ಜೊತೆಗಿನ ಒಡನಾಟ ಮುದನೀಡಿತು.

 

ಸುಮಾರು ಮೂರುವರೆ ಘಂಟೆಯಷ್ಟು ಸಮಯ ಕಳೆದದ್ದೇ ಗಮನಕ್ಕೆ ಬರಲಿಲ್ಲ. ಭೋಜನದ ಆತಿಥ್ಯವನ್ನು ಸ್ವೀಕರಿಸಿ ಹೊರಟಾಗ ಕನಸಿನ ಲೋಕದಿಂದ ಎದ್ದು ಬಂದೆವು ಎಂದು ಅನಿಸಿತು. 


ಅನಾಥವಾಗಿ ಹೋಗಬಹುದಾಗಿದ್ದ ವಿದ್ಯಾರ್ಥಿ ನಿಲಯವನ್ನು ಖರೀದಿಸಿ ಅಲ್ಲಿ ಹಿರಿಯ ನಾಗರಿಕರ ವಸತಿ ನಿಲಯ ಮತ್ತು ವಿಶೇಷ ಚೇತನರಯ ಆಶ್ರಯಧಾಮವನ್ನು ಆರಂಭಿಸಿ 31.5.2019ರಂದು ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪಾದಕಮಲಗಳ ಸ್ಪರ್ಶದಿಂದ ಶಿವಸದನವನ್ನು ಪುನೀತವಾಗಿಸಿದ್ದರು. ಲಿಫ್ಟ್ ಸಹಿತ ಎಲ್ಲಾ ಸವಲತ್ತುಗಳನ್ನು ಹೊಂದಿರುವಂತೆ ಈ ಆಶ್ರಯಧಾಮದ ವ್ಯವಸ್ಥೆಯ ಸೇವೆಯಲ್ಲಿ ಸಮರ್ಪಿಸಿಕೊಂಡ ಶಿವಸದನದ ಸಂಸ್ಥಾಪಕರಾದ ಬೆಳ್ಳೆ ಕರುಣಾಕರ ರಾಯರ ವ್ಯಕ್ತಿತ್ವವು ನಿಬ್ಬೆರಗಾಗಿಸಿದ್ದು ಸತ್ಯ. ಇಲ್ಲಿ ಹಿರಿಯ ನಾಗರಿಕರು ಅನುಭವಿಸುತ್ತಿರುವ ಸ್ವಾತಂತ್ರ್ಯ, ಗೌರವ, ಆತ್ಮಾಭಿಮಾನಗಳ ಅನುಭವಕ್ಕೆ ಒಳಗಾದಾಗ ಮನೆಯ ಮಕ್ಕಳ ಜೊತೆಗಿದ್ದರೂ ಬಹುಷಃ ಇಷ್ಟು ಆನಂದದಿಂದ ಇರಲಾಗದೇನೋ ಎಂದು ಅನಿಸಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top