ಮಂಗಳೂರು: ಬ್ಯಾರಿ ಕಲಾರಂಗ ಮಂಗಳೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಪ್ರಥಮ ಕಾರ್ಯಕ್ರಮವಾಗಿ ಸಂಘದ ಅಧ್ಯಕ್ಷ ಅಜೀಜ್ ಬೈಕಂಪಾಡಿ ಅವರು ಬರೆದ ‘ಬ್ಯಾರಿ ಬಾಸೆ ಪಡಿಕೋರು’ ಎಂಬ ಪುಸ್ತಕವನ್ನು ಗುರುವಾರ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಪುಸ್ತಕ ಬಿಡುಗಡೆಗೊಳಿಸಿದ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ ‘ದ.ಕ. ಜಿಲ್ಲೆ ತುಳು, ಕನ್ನಡ, ಕೊಂಕಣಿ, ಬ್ಯಾರಿ, ಅರೆಬಾಸೆ ಹೀಗೆ ವೈವಿಧ್ಯಮಯ ಭಾಷಿಗರ ಪ್ರದೇಶವಾಗಿದೆ. ‘ಬ್ಯಾರಿ ಭಾಷೆ ಪಡಿಕೋರು’ ಪುಸ್ತಕ ಭಾಷೆಯ ಬೆಳವಣಿಗೆಯ ಜತೆಗೆ ಹೊಸಬರಿಗೆ ಬ್ಯಾರಿ ಭಾಷೆಯ ಶಬ್ಧಗಳನ್ನು ತಿಳಿಯಲು ಸಹಕಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮಹಮ್ಮದ್ ಬಡ್ಡೂರು ಅವರು ಮಾತನಾಡಿ ‘ಭಾಷೆಯಲ್ಲಿ ಮೇಲು, ಕೀಳು ಎಂಬುವುದಿಲ್ಲ. ಮಾತನಾಡುವವರ ಸಂಖ್ಯೆಯಲ್ಲಿ ಮಾತ್ರ ಹೆಚ್ಚು ಕಡಿಮೆ ಇದೆ. ಹೊರ ಜಿಲ್ಲೆಗಳಿಂದ ಬರುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬಂದಿಗೆ ‘ಬ್ಯಾರಿ ಬಾಸೆ ಪಡಿಕೋರು’ ಪುಸ್ತಕ ಉತ್ತಮ ಕೈಪಿಡಿಯಾಗಿದೆ ಎಂದರು.
ಬ್ಯಾರಿ ಕಲಾರಂಗ ಅಧ್ಯಕ್ಷ, ಲೇಖಕ ಅಜೀಜ್ ಬೈಕಂಪಾಡಿ ಅವರು ಮಾತನಾಡಿ, ಬ್ಯಾರಿ ಭಾಷೆಯನ್ನು ಇತರ ಭಾಷಿಗರು ಸುಲಭವಾಗಿ ಕಲಿಯುವಂತಾಗಲಿ ಎನ್ನುವ ಉದ್ದೇಶದಿಂದ ವಿವಿಧ ಇಲಾಖೆ, ವಿದ್ಯಾಸಂಸ್ಥೆ ಹಾಗೂ ಗ್ರಂಥಾಲಯಗಳಿಗೆ ಈ ಪುಸ್ತಕವನ್ನು ಉಚಿತವಾಗಿ ಹಂಚಲಾಗುವುದು ಎಂದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರಿಗೆ ಪುಸ್ತಕದ ಪ್ರಥಮ ಪ್ರತಿ ನೀಡಲಾಯಿತು. ಬ್ಯಾರಿ ಕಲಾರಂಗದ ಸದಸ್ಯರಾದ ಇಸ್ಮಾಯಿಲ್ ಮೂಡುಶೆಡ್ಡೆ, ಶಾಹುಲ್ ಹಮೀದ್, ಸತೀಶ್ ಸುರತ್ಕಲ್, ಡಾ. ಸಿದ್ದೀಕ್ ಅಡ್ಡೂರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ