ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂಕುಸಿತ, ಜಲಕ್ಷಾಮ, ಧಾರಣ ಸಾಮರ್ಥ್ಯಗಳ ಪರಿಷ್ಕೃತ ಪಾಠಗಳೊಂದಿಗೆ ಮೂರು ತಿಂಗಳ ಹೊಸ ಅಧ್ಯಯನದ ನಾಟಕೀಯ ಕೋರ್ಸ್ನ್ನು ಸರಕಾರ ಕೈಗೆತ್ತಿಕೊಂಡಿದೆ!
ಅಧ್ಯಯನ ಪ್ರಹಸನ ಮಾಡುವ ಸಮಿತಿಯೂ ರಚನೆಯಾಗಿದೆ.
1) ಈಗಾಗಲೆ ನಾಲ್ಕು ವರ್ಷದ (2021) ಹಿಂದೆ ಇಂತಹದೇ ಒಂದು ಸಮಿತಿ ರಚನೆಯಾಗಿ, ವಿಸ್ತ್ರುತ ವರದಿಯೂ ಆಗಿದೆ. ಅದಕ್ಕೂ ಕೋಟಿಗಟ್ಟಲೆ ಹಣ ಖರ್ಚು ತೋರಿಸಿ, ವರದಿಯ ಜೊತೆ ಲೆಕ್ಕವನ್ನೂ ಬರೆದಿಟ್ಟಿರಬಹುದು. ಭೂ ಕುಸಿತದ ಅಧ್ಯಯನಕ್ಕೆ ಬೊಕ್ಕಸದಿಂದ ಹಣ ಕುಸಿತ ಮಾತ್ರ ಆಗಿದೆ.
2) ನಾಲ್ಕು ವರ್ಷಗಳ ಹಿಂದೆ ಇದ್ದ ಸರಕಾರ ಬೇರೆ, ಈಗಿನ ಸರಕಾರ ಬೇರೆ. ಆಗಿನ ಅಧಿಕಾರದ ಮಳೆಯ ಹಣದ ಹೊಳೆಯಲ್ಲಿನ ಫಲಾನುಭವಿಗಳು ಬೇರೆ, ಈಗಿನವರು ಬೇರೆ! ಮುಂದೆ ಇನ್ನೊಂದಿಷ್ಟು ಸಮಿತಿ, ವರದಿಗಳು ಬಂದರೂ ಆಶ್ಚರ್ಯ ಇಲ್ಲ.
3) ಕಣ್ಣೊರೆಸುವ ಈ ಅಧ್ಯಯನ ತಂತ್ರಗಾರಿಕೆ ಬಗ್ಗೆಯೇ ಒಂದು ಪ್ರಾಮಾಣಿಕ, ನಂಬಿಕಸ್ತ ತನಿಖಾ ತಂಡದಿಂದ 'ತನಿಖಾ ಅಧ್ಯಯನ' ಆಗಬೇಕು!!? ಅಧ್ಯಯನಗಳಿಂದ ಏನು ಲಾಭ, ಯಾರಿಗೆ ಲಾಭ? ಎಷ್ಟು ಲಾಭ? ಇತ್ಯಾದಿ.
4) ಇನ್ನು ಜೀವ ವೈವಿಧ್ಯತೆಯ ಕತೆ ಹೇಳಿಕೊಂಡು, ನಿಧಾನವಾಗಿ ಪಶ್ಚಿಮಘಟ್ಟದ ನೆಲವಾಸಿಗಳನ್ನು ಒಕ್ಕಲೆಬ್ಬಿಸುವ ಭಾಗವಾಗಿಯೂ ಈ ಸ್ಟಡಿಗಳ ಕೆಲಸ ಮಾಡುತ್ತವೆ ಎಂಬುದು ಮೇಲ್ನೋಟಕ್ಕೆ ಸಾಮಾನ್ಯ ಮಲೆನಾಡು ನೆಲವಾಸಿಗಳಿಗೆ ಕಾಣುವ ಸತ್ಯ.
5) ಅಧ್ಯಯನ ವರದಿಗಳ ಸಿದ್ಧತೆಗೆ ತಂಡದಲ್ಲಿ, ಪಶ್ಚಿಮಘಟ್ಟದ ನೆಲವಾಸಿಗಳನ್ನು, ಸಂತ್ರಸ್ಥರನ್ನು, ಸ್ಥಳೀಯ ಕೃಷಿಕರನ್ನು, ಹೈನುಗಾರಿಕೆ ಮಾಡುವವರನ್ನು ಸೇರಿಸಿಕೊಳ್ಳಬೇಕು. ಆದರೆ, ಕೇವಲ ನಗರವಾಸಿ ತಜ್ಞರು, ನಗರ ಪರಿಸರವಾದಿಗಳು ಮಾತ್ರ ಈ ಸಮಿತಿಯಲ್ಲಿ ಇರುತ್ತಾರೆ. ಪರಿಣಾಮ ವರದಿಗಳಲ್ಲಿ ನಿರ್ಜೀವ ಕಣ್ಣುಗಳಿಗೆ ಕಂಡ ಅಸಂಬದ್ಧಗಳೇ ಸ್ಟ್ಯಾಟಿಸ್ಟಿಕ್ಸ್, ಗ್ರಾಫ್ಸ್ಗಳು ಆಗಿ ನಿರ್ಮಾಣವಾಗುತ್ತವೆ. ವಾಸ್ತವಾಂಶಗಳು ಈ ವರದಿಯ ಒಳಗೆ ಸೇರುವುದಿಲ್ಲ. ಒಂದು ನಿರ್ಜೀವ ವರದಿಯಾಗಿ ಬೆಂಗಳೂರಿನ ಯಾವುದೋ ಒಂದು ಕಟ್ಟಡದ ಕಬೋರ್ಡ್ ಸೇರುತ್ತವೆ. ಮುಗಿಯಿತು.
6) ಅಧ್ಯಯನ ಮಾಡುವ, ವರದಿ ತಯಾರಿಸುವ ತಜ್ಞರು ಕೂಡ ಸರಕಾರ ಕೊಡುವ ಹೈಟೆಕ್ ದುಬಾರಿ ಕಾರಿನಲ್ಲಿ ಬಂದು, ಜಂಗಲ್ ಹೈಟೆಕ್ ರೆಸಾರ್ಟ್ನಲ್ಲಿ ಸ್ಟೇ ಮಾಡಿ, ಬಹುಶಃ ಪಶ್ಚಿಮ ಘಟ್ಟದ ಜೀವವೈವಿದ್ಯದ ವಿಭಿನ್ನ ಕಾಡು ಪ್ರಾಣಿಗಳ ಮಾಂಸದ ಪ್ರಸಾದ ತಿಂದು, 'ಫಾರಿನ್ ಹಣ್ಣಿನ ರಸ' ಕುಡಿದು, ಮೋಜು-ಮಸ್ತಿಯ ಅಮಲಿನಲ್ಲಿ ವರದಿ ಬರೆದು, ವರದಿಗೆ ಷರಾ ಬರೆದು, AC ಕಾರಿನಲ್ಲಿ ಹಿಂದಿರುಗುತ್ತಾರೆ. ಕಾಡಂಚಿನ ನೆಲವಾಸಿಗಳನ್ನು, ರೈತರನ್ನು, ನಾಲ್ಕು ದನ ಕಟ್ಟಿದ ಗೋಪಾಲಕರನ್ನು, ಭೇಟಿ ಮಾಡುವುದಿಲ್ಲ. ಭೇಟಿ ಮಾಡಿ ಈಗ ಇರುವ ತೊಂದರೆಗಳೇನು, ವರದಿಯಲ್ಲಿ ಶಿಫಾರಸ್ ಮಾಡುವ ಯೋಜನೆಗಳಿಂದ ಅನುಕೂಲ-ಅನಾನುಕೂಲಗಳೇನು? ನೆಲವಾಸಿಗಳಿಗೆ ಪೂರಕವಾದ ಯಾವ ಶಿಫಾರಸ್ನ್ನು ಮಾಡಬೇಕು... ಉಹೂಂ, ಅದ್ಯಾವುದೂ ನಡೆಯಲ್ಲ. ರಕ್ಷಣಾ ಇಲಾಖೆಯ ಭದ್ರತೆಯ ರಹಸ್ಯಗಳಿಗಿಂತಲೂ ಹೆಚ್ಚು ರಹಸ್ಯಗಳೊಂದಿಗೆ ವರದಿ ತಯಾರಿಸುವ ಕೆಲಸವೂ ಸಮಿತಿಯ ಪ್ರೋಟೋಕಾಲ್ ಆಗಿರುತ್ತದೆ!?
7) ವರದಿಯ ಅಂತಿಮ ಹಂತದಲ್ಲಿ ಮಂತ್ರಿಗಳು ಹೆಲಿಪ್ಯಾಡ್ ಇರುವ ಪಟ್ಟಣಕ್ಕೆ ಬಂದು, ಅಲ್ಲಿಂದ ಪಟಾಲಂ ಗ್ರೂಪ್ನೊಂದಿಗೆ ಕಪ್ಪು ಗ್ಲಾಸಿನ AC ಕಾರಿನಲ್ಲಿ ಚಲಿಸಿ, ಟಿಬಿಯಲ್ಲಿ ಚಾಯ್ಪೆ ಚರ್ಚಾ ನೆಡೆಸಿ, ಪ್ಲಾಸ್ಟಿಕ್ ಪ್ಲೇಟ್ನಲ್ಲಿ ಅರ್ಧ ಪಲಾವ್ ತಿಂದು, ಅರ್ಧ ಚಲ್ಲಿ, ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿದು, ಪ್ಲಾಸ್ಟಿಕ್ ಇರುವ ಪೇಪರ್ ಕಪ್ನಲ್ಲಿ ಕಾಫಿ ಕುಡಿದು, ಅರ್ಥವಾಗದ ವರದಿಯ ಮೇಲೆ ಕಣ್ಣಾಡಿಸಿ, ಪತ್ರಿಕಾ ಹೇಳಿಕೆ ಕೊಟ್ಟು, ಲೋಕಲ್ ನಾಯಕರಿಂದ ಪ್ಲಾಸ್ಟಿಕ್ ಹಾರ ಹಾಕಿಸಿಕೊಂಡು, ಹೆಲಿಕ್ಯಾಫ್ಟರ್ ಮೂಲಕ ರಾಜಧಾನಿಗೆ ಹೋಗುತ್ತಾರೆ. ಒಬ್ಬ ಮಂತ್ರಿ ಅರ್ಧ ಗಂಟೆ ಬಂದು ಹೋದರೆ ಪಟಾಲಂ ಜೊತೆ ಸೇರಿ ಆತ ಹಾಳು ಮಾಡಿದ ಪರಿಸರದ ಬಗ್ಗೆ, ಮರುದಿನ ಪೌರ ಕಾರ್ಮಿಕರನ್ನು ಕೇಳಿದರೆ ಭಾಗಶಃ ಮೌಖಿಕ ವರದಿ ಕೊಡುತ್ತಾರೆ! ಇದು ಮಲೆನಾಡಿನ ಪರಿಸರದ ಕರ್ಮ!
8) ಯಾರು ಎಲ್ಲಿ ಬೇಕಾದರೂ ಬೋರ್ವೆಲ್ ತೆಗೆಯಬಹುದು. ಹತ್ತಾರು ಎಕರೆ ಅಡಿಕೆ ತೋಟದವರು, ನೂರಾರು ಎಕರೆ ಕಾಫಿ ತೋಟದವರು ಎಷ್ಟು ಪಂಪ್ಸೆಟ್ಗಳನ್ನು ನೇರವಾಗಿ ಹೊಳೆಗೇ ಇಟ್ಟು (ಕರೆಂಟನ್ನೂ ಕದ್ದು!!?) ಎಷ್ಟು ದೂರಕ್ಕೆ ಬೇಕಾದರೂ ನೀರೆತ್ತಬಹುದು!! ಉಂಟಾಗಬಹದಾದ ಜಲಕ್ಷಾಮಕ್ಕೆ ಇವುಗಳೆಲ್ಲ ಕಾರಣವಾಗಬಹುದಾ? ಎಂಬುದು ಅಧ್ಯಯನ ಸಮಿತಿಯ ವಿವೇಚನೆಯ ಕಣ್ಣಿಗೆ ಕಾಣುವುದಿಲ್ಲ.
9) ದಿನ ದಿನಕ್ಕೂ ವಿಸ್ತರಿಸುತ್ತಿರುವ ಅಕೇಶಿಯ, ನೀಲಗಿರಿ ಕಾಡುಗಳಲ್ಲಿ ಜೀವ ವೈವಿಧ್ಯತೆ ಇರಲು ಸಾಧ್ಯವಾ? ಗ್ಲೋಬಲ್ ವಾರ್ಮಿಂಗ್-ಜಲಕ್ಷಾಮಕ್ಕೆ ಈ ಹೂವು-ಹಣ್ಣು ಬಿಡದ, ಬೇರೆ ಗಿಡಗಳಿಗೆ ಬೆಳೆಯಲು ಬಿಡದ, ಏಕರೂಪ ಅಕೇಶಿಯ ಕಾಡುಗಳೇ ಅಪಾಯವಾ? ಇಲ್ಲ, ಅಧ್ಯಯನದ ಮೆಮೋರಂಡಮ್ ಸಿಲಬಸ್ನಲ್ಲಿ ಅಕೇಶಿಯಾ, ನೀಲಗಿರಿಗಳ ಬಗ್ಗೆ ಅಧ್ಯಯನ ಮಾಡಲು ಪರಿವಿಡಿಗಳೇ ಇಲ್ಲ!!!
10) ಜೀವ ವೈವಿಧ್ಯತೆ, ಜಲಕ್ಷಾಮ ಅಧ್ಯಯನ ತಂಡಗಳು ಪಶ್ಚಿಮ ಘಟ್ಟದ ದಟ್ಟ ಅರಣ್ಯದ ಒಳಗಡೆ ಯಾವುದಾದರು ಪ್ರಾಣಿ, ಪಕ್ಷಿಗಳು ಬದುಕುವಂತಹ ಹುಲ್ಲು, ಹಣ್ಣು, ಹಂಪಲು, ನೀರು, ಕಾಳುಗಳು ಇವೆಯಾ? ಯಾಕೆ ಕಾಡು ಪ್ರಾಣಿಗಳು ಕಾಡಂಚಿನ ಕೃಷಿ ಭೂಮಿಯಲ್ಲೇ ವಾಸಿಸುತ್ತಿವೆ? ಪರೋಕ್ಷವಾಗಿ ಪಶ್ಚಿಮಘಟ್ಟದ ನೆಲವಾಸಿಗಳೇ ಜೀವ ವೈವಿದ್ಯದ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ ಮತ್ತು ಎಲ್ಲ ಜೀವ ಜಾಲವನ್ನು ಸಾಕುತ್ತಿದ್ದಾರಾ? ಉಹೂಂ ಅದನ್ನೆಲ್ಲ ಯಾರೂ ಅಧ್ಯಯನ ಮಾಡಿ ವರದಿ ನೀಡುವುದೂ ಇಲ್ಲ.
ಸರಳವಾಗಿ ಹೇಳವುದಾದರೆ, ಪರಿಪೂರ್ಣ ಜ್ಞಾನ ವಿಲ್ಲದ ಸರಕಾರ, ಜ್ಞಾನವಿಲ್ಲದ ತಜ್ಞರನ್ನು ಸಮಿತಿ ಮಾಡಿ ಮಲೆನಾಡಿನ ಅಧ್ಯಯನಕ್ಕೆ ಕಳಿಸುತ್ತದೆ. ಆ ತಂಡ ಮಲೆನಾಡಿಗೆ ಬಂದು ತಂಗಿ, ತಿಂದು, ಉಂಡು, ಕುಡಿದು ಸುಖವಾದ ಅನುಭವದೊಂದಿಗೆ ಕುಳಿತು, ಸಾವಿರಾರು ಪುಟಗಳ ವರದಿ ಸಿದ್ಧಮಾಡಿ, ಗೌರವ ಧನ ಪಡೆದು, ಹಿಂತಿರುಗಿ, ವಂದನಾರ್ಪಣೆ ಸಲ್ಲಿಸಿ ಮುಗಿಸುತ್ತದೆ.
ಒಂದಾ ವರದಿಯ ಕಟ್ಟು ಕಬೋರ್ಡ್ ಸೇರುತ್ತದೆ, ಒಂದಾ ಅದರಲ್ಲಿನ ಭಯಾನಕ ಶಿಫಾರಸ್ಗಳು ಕಾಡು ಪ್ರಾಣಿಗಳಿಗಿಂತ ಕ್ರೂರವಾಗಿ ಮಲೆನಾಡಿನ ನೆಲವಾಸಿಗಳ ಮನೆಗೆ ಹಿತ್ತಲಕಡೆಯಿಂದ ದಾಳಿ ಇಡುತ್ತವೆ!
ವರದಿ ಸ್ವೀಕರಿಸಿದ ಸರಕಾರ, ಇಲಾಖೆಗಳು ಆಗಾಗ ನೆಲವಾಸಿಗಳಿಗೆ ಆತಂಕವಾಗುವಂತಹ ಅವೈಜ್ಞಾನಿಕ ಕ್ರಮ ಕೈಗೊಳ್ಳುವುದರ ಬಗ್ಗೆ ಪತ್ರಿಕೆಗಳ ಮೂಲಕ ಸ್ಟೇಟ್ಮೆಂಟ್ ಕಳಿಸ್ತಾ ಇರ್ತಾರೆ!
ಸರಕಾರ ಬದಲಾಗುತ್ತೆ, ಮತ್ತೊಂದು ಸರಕಾರ ಮತ್ತೆ ಇದೇ ಅ ಆ ಇ ಈ ಯೊಂದಿಗೆ ಹೊಸ ಅಧ್ಯಯನಕ್ಕೆ ಚಾಲನೆ ಕೊಡುತ್ತದೆ.
ಆತಂಕದಿಂದ ವರದಿಗಳಲ್ಲಿನ ಅವೈಜ್ಞಾನಿಕ ಕ್ರಮಗಳ ವಿರುದ್ಧ, ಸ್ಥಳೀಯರು ಪ್ರತಿಭಟನೆ, ಹೋರಾಟ ಅಂತ ರಸ್ತೆಗೆ ಇಳಿದರೆ, ಸ್ಥಳೀಯ ಶಾಸಕರು, ಸಂಸದರು "ನಿಮ್ಮ ಜೊತೆಗೆ ನಾವಿದ್ದೇವೆ" ಅಂತ ಕೂಗು ಹಾಕಿ, ತಮ್ಮ ಗಮ್ಯವನ್ನು ಸೇರಿಕೊಳ್ತಾರೆ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ