ಆರೋಗ್ಯದ ಸೀಕ್ರೆಟ್ ಇರುವುದು ಪಥ್ಯ ಮಾಡುವುದು ಹೇಗೆ? ಉದರದ ಚಪಲ ಕಾಟಗಳನ್ನು ತಡೆಯುವುದು ಹೇಗೆ ಎಂಬುದರಲ್ಲಿ. ಪ್ರಕೃತಿಯ ಮಗುವಾಗಿ ಬದುಕುವುದು ಹೇಗೆ ಎಂಬ ಸೂಕ್ಷ್ಮವನ್ನು ಮನನ ಮಾಡಿಕೊಳ್ಳುವುದರಲ್ಲಿ. ಕುಂಡೆ ನೋವಿನಿಂದ ಹೃದಯ, ಗಂಟುಗಳು ಎಂದು ಮಂಡೆಯವರೆಗಿನ ಹಲವಾರು ಹಳೆಯ ರೋಗಗಳಿಗೆ ಮತ್ತು ಲೇಟೆಸ್ಟ್ ಜೀವನಶೈಲಿಯಿಂದ ನಾವೇ ಸೃಷ್ಟಿಸಿಕೊಂಡಿರುವ ಖಾಯಿಲೆ, ಕಸಾಲೆಗಳಿಗೆ ಬೇಕಾದ ನೇಚರ್ ಕ್ಯೂರ್ ಗಳನ್ನು ಕಲಿತು ಅಳವಡಿಸಿಕೊಳ್ಳಲು ಈಗ ಅವಕಾಶವೂ ಇದೆ.
ಒಟ್ಟಿನಲ್ಲಿ ಮುಂದಿನ ಬಾರಿ ಏನಾದ್ರೂ ಸೆಲೆಬ್ರೇಟ್ ಮಾಡಬೇಕೆಂಬ ಅದುಮಿಡಲಾರದ ಉತ್ಸಾಹವೆದ್ದರೆ ಎಂದಿನಂತೆ ಪಾರ್ಟಿ ಮಾಡಬೇಡಿ. ಏಕೆಂದರೆ ಪಾರ್ಟಿಗೆ ಮಾಡುವ ಖರ್ಚಿಗಿಂತಲೂ ಬೊಜ್ಜು ದೇಹದ ದಢೂತಿಗಳ ಆರೋಗ್ಯ ರಕ್ಷಣೆಗೆ ಹೆಚ್ಚು ವೆಚ್ಚವಾಗುತ್ತದೆ. ಜಗತ್ತಿನ ವಿವಿಧ ಜನಾಂಗಗಳಲ್ಲಿ ಅವರವರ ಊಟದ ಸಂಸ್ಕೃತಿ ಕೈಬಿಟ್ಟು, ಬಾಯಿಚಪಲದಿಂದ ಅಮೆರಿಕಾದ ಫಾಸ್ಟ್ ಫುಡ್ ಕಲ್ಚರ್ಗೆ ಮುಗಿಬಿದ್ದವರ ಆರೋಗ್ಯದ ಪರಿಸ್ಥಿತಿ ಕಂಗಾಲು ಕಥೆಯಾಗುತ್ತಿದೆ.
ಆದ್ದರಿಂದಲೇ ನಮ್ಮ ನಮ್ಮ ಆಹಾರಸಂಸ್ಕೃತಿ ಉಳಿಸಿ ಕಾಪಾಡಿಕೊಳ್ಳಬೇಕು. ನಿಯತ ಉಪವಾಸ ಈ ದೇಶದ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗ ತಾನೆ? ಮತ್ತದೇ ಸಂಸ್ಕೃತಿ ಮೇಡಂ, ಪ್ರಕೃತಿ ಮೇಡಂನಿಂದ ಕಲಿತು ಅಭ್ಯಸಿಸಿದ ಆರೋಗ್ಯ ಪಾಠವನ್ನು ಅನುಸರಿಸಬಾರದೇಕೆ?
ಭಾರತೀಯ ಜಾನಪದದಲ್ಲಿ 'ಕಲ್ಪವೃಕ್ಷ'ವೆಂದೂ ದಾಖಲಾಗಿರುವ ಹಾಗೂ ಅಸಡ್ಡೆಗೊಳಗಾಗಿದ್ದ ನೀಮ್ ಟ್ರೇ ಕಹಿಬೇವು ಇಂದು ಜಗತ್ತಿನಾದ್ಯಂತದಲ್ಲಿ ವೈಜ್ಞಾನಿಕ ಸಂಶೋಧನೆಗೊಳಗಾಗಿ ವಾಣಿಜ್ಯ ಆಕರ್ಷಣೆಯ ಕೇಂದ್ರವಾಗಿ ಪೇಟೆಂಟ್ ಸ್ವಾಮ್ಯದ ಬಲೆಯಲ್ಲೂ ಸಿಲುಕಿ ಕೊಂಡಿದೆ. ಬೇವಿನ ಮರದ ಔಷಧೀಯ ಮತ್ತಿತರ ಗುಣಲಕ್ಷಣಗಳು ಮತ್ತು ಬಳಕೆಗಳ ಬಗ್ಗೆ ನಮ್ಮ ದೇಶದಲ್ಲಿ ಗೊತ್ತಿರುವುದು ಇಂದು, ನಿನ್ನೆಯಲ್ಲ, ಶತಮಾನಗಳ ಚರಿತ್ರೆಯೇ ದಾಖಲಾಗಿದೆ, ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ನಂಬಿಕೆಯ ನಡುವೆಯೇ, ಈ ಗಿಡದ ಗುಣಕಾರಿ ಪ್ರಭಾವಳಿಯಿಂದ ಹಿತ್ತಲಗಿಡ ಮದ್ದಲ್ಲವೆಂಬ ಪುರಾತನ ನಾಣ್ಣುಡಿ ಬುಡಮೇಲಾಗಿದೆ. ಈ ಭಾರತೀಯ ಮನೋಭಾವ- ಕಂಟ್ರಿಯದ್ದೆಲ್ಲ ಕಂತ್ರಿ ಎಂಬ ಭಾವನೆಯೇ ನಮ್ಮ ಶಾಪವೆಂದರೂ ತಪ್ಪಲ್ಲ. ಇಲ್ಲವಾದರೆ, ನಾಟೀ ವೈದ್ಯದಲ್ಲಿರುವ ಮತ್ತು ದೇಸೀ ಅಡುಗೆಯಲ್ಲಿನ ಮಹಿಮೆ ಸಂಶೋಧಿಸಿ ಬೆಳೆಸುವ ಬದಲು, ನಾವು ಅದರ ಪ್ರಾಕ್ಷೀಶನರುಗಳನ್ನು ಆಳಲೇಕಾಯಿ ಪಂಡಿತರೆಂದು ರೇಗಿಸುತ್ತಿದ್ದೇವೇನು!
ಬೇವಿನ ಚರಿತ್ರೆ ಅದನ್ನೇ ಮರು ಪಠಿಸುತ್ತದೆ. ಅಮೇರಿಕಾ, ಇಂಗ್ಲೆಂಡು, ಜಪಾನುಗಳಲ್ಲಿ " ನ್ಯೂಸ್ ಬ್ರೇಕ್" ಎಂದಾದ ಬಳಿಕವೇ "ಅದು ನಮ್ಮ ಅಮೂಲ್ಯ ಕೊಡುಗೆ" ಎಂದು ನಮ್ಮ ಬೆನ್ನು ತಟ್ಟಿಕೊಳ್ಳುವ ಸಂಸ್ಕೃತಿ ದಾಸರು ನಾವು. ಬೇವಿನ ಮರದ ಬಗ್ಗೆ ಮತ್ತೆ ವೈಜ್ಞಾನಿಕ ಮತ್ತೆ ವೈಜ್ಞಾನಿಕ ಆಸಕ್ತಿ ಭಾರತದಲ್ಲಿ ನಾಲೈದು ದಶಕಗಳ ಹಿಂದೆಯೇ ತೊಡಗಿತ್ತೆನ್ನಬಹುದು. ಬೆಳೆಗಳ ಕ್ರಿಮಿಕೀಟ ಕಾಟ ನಾಶಕ್ಕೆ ಬೇವಿನರಸ, ದನಕರುಗಳಿಗೆ ಬೇವಿನ ಹಿಂಡಿ, ಅಡುಗೆಗೆ ಬೇವಿನ ಸೊಪ್ಪು ಒಳ್ಳೆಯದೆಂದು ನಮ್ಮ ದೇಶದಲ್ಲಿ ಮನೆಮನೆಗೆ ಪ್ರಚಾರ ಮಾಡಿದವರು ಮಲ್ಟಿನೇಶನಲ್ ಕಂಪೆನಿಗಳಲ್ಲ. ನಮ್ಮ ಮನೆಮನೆಯಲ್ಲಿರುವ ಅಜ್ಜ ಅಜ್ಜಮ್ಮಂದಿರುಗಳು ಅಲ್ಲದೆ ಬೇರಾರೂ ಅಲ್ಲ!
ಕೃತಕ ಕ್ರಿಮಿಕೀಟನಾಶಕಗಳಿಂದ ಪ್ರಕೃತಿಯಲ್ಲಾಗುವ ಏರುಪೇರು ಅರಿತಾಗ ಭಾರತೀಯ ಮೂಲದ ಈ ಮರದ ಸು ಗುಣದ ಪ್ರಭಾವ ವಿದೇಶೀ ಸಂಶೋಧಕರಿಗೆ ಮನವರಿಕೆಯಾಯಿತು. ಇವತ್ತು ಬೇವಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಮಿಡತೆ ಕಾಟದಿಂದ ಏಯ್ಡ್ಸ್ ಭೀತಿ ನಿವಾರಣೆವರೆಗೆ ಅದರ ಮಹಿಮೆ ತಿಳಿಯಲಾಗುತ್ತಿದೆ. ಬೇವು ಈಗ ಅಮೇರಿಕಾದಿಂದ ಆಸ್ಟ್ರೇಲಿಯಾದವರೆಗೆ ಜಗತ್ತಿನಾದ್ಯಂತ 50 ರಂದಾಜು ದೇಶಗಳಲ್ಲಿ ಬೆಳೆಯುತ್ತಿದೆ. ದೇವರು ಕೊಟ್ಟ ಮರವೆಂದೂ ಪೂಜಿಸುವ ಮಟ್ಟಕ್ಕೆ ಹೋಗುತ್ತಿದೆ. ಜಗತ್ತಿನ ಉಳಿವಿಗೆ ಈ ಮರದ ತಾಳಿಕೆಬಾಳಿಕೆಗೆ ಮತ್ತಷ್ಟು ಪ್ರಯತ್ನ,ಸಂಶೋಧನೆ, ಪ್ರಯೋಗ, ತಿಳಿವಳಿಕೆಗಳು ಆಗಲೇ ಬೇಕೆಂದು ವಿಜ್ಞಾನಿಗಳೆಲ್ಲ ಹೋದ ಶತಮಾನಾಂತ್ಯದಲ್ಲಿಯೇ ಪಣತೊಟ್ಟಿದ್ದಾರೆ.
ಇನ್ನು, ಯಾರಾದರೂ ತಾತಂದಿರುಗಳು ಬೆಳ್ಳಂಬೆಳಗ್ಗೆ ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜುವುದನ್ನು ಕಂಡರೆ ಹಳ್ಳಿಗುಗ್ಗು ಎಂದು ಕರೆದು ಮೂರ್ಖರಾಗದಿರೋಣ, ಅವರ ಬುದ್ದಿವಂತಿಕೆಗೆ ಶಿರಬಾಗಿ ನಮಿಸೋಣ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ