ನಮಿಪೆವು ಜಗದ್ಗುರು ಶಂಕರಾಚಾರ್ಯಗೆ
ಜಗಬೆಳಗಿದ ಜ್ಯೋತಿಯಾದ ದಾರ್ಶನಿಕಗೆ
ಕೇರಳದ ಕಾಲಡಿಯಲ್ಲಿ ಶಿವರೂಪಿಯ ಜನನ
ತೊದಲ್ನುಡಿವ ವಯಸ್ಸಿನಲೇ ವೇದಾಧ್ಯಯನ
ವೈಶಾಖ ಮಾಸ ಶುಕ್ಲ ಪಕ್ಷ ಪಂಚಮಿಯದು
ಧರೆಗಿಳಿದ ಭಗವತ್ಪಾದರ ಜನುಮ ದಿನವದು
ಬಾಲ್ಯದಲೇ ಸನ್ಯಾಸಿಯಾಗಿ ವೈದಿಕ ಪಟುವಾದಿರಿ
ಮಾತೆಗೆ ಕೊಟ್ಟವಚನದಂತೆ ನಡೆದು ತೋರಿಸಿದಿರಿ
ಅದ್ವೈತ ತತ್ವ ಸಿದ್ಧಾಂತ ಪ್ರತಿಪಾದಕ ಶಂಕರ
ಜಗದ ತಿಮಿರವ ಕಳೆಯಲು ಬಂದ ನೇಸರ
ಧರೆಯಲಿ ಇತರ ಧರ್ಮಗಳ ಪಾರಮ್ಯ ಹೆಚ್ಚಿರಲು
ಅವತರಿಸಿದಿರಿ ವೈದಿಕ ಧರ್ಮದ ಕಹಳೆ ಮೊಳಗಿಸಲು
ಶೃಂಗೇರಿˌ ಪುರಿˌ ದ್ವಾರಕಾˌಬದರಿ ಚತುರ್ಪೀಠಗಳ ಸ್ಥಾಪನೆ
ಸ್ತೋತ್ರ ತತ್ವಪದ ಬ್ರಹ್ಮಸೂತ್ರಗಳ ರಚನೆ
ಭರತಖಂಡದ ಉದ್ದಗಲಕ್ಕೂ ಪಯಣದ ಸಿಂಚನ
ಎಂಟು ದಿಕ್ಕಲೂ ಮೊಳಗಿ ಮೂಡಿಸಿತು ಧರ್ಮಸಂಚಲನ
ಶಂಕರರ ನೆತ್ತರ ಕಣಕಣದಲು ವೇದೋಪನಿಷತ್ತಿನ ರಿಂಗಣ
ಮತ್ತೆ ಅವತರಿಸಿರಿ ಉಣಬಡಿಸಲು ಜ್ಞಾನದ ಹೂರಣ
ಅಲ್ಪಾಯುಷ್ಯದಲ್ಲೇ ಧರ್ಮ ಜ್ಯೋತಿ ಬೆಳಗಿದ ಭಾಸ್ಕರ
ದೇವ ಪುರುಷನಿಗೆ ಜನ್ಮವಿತ್ತು ಧನ್ಯವಾದಳು ವಸುಂಧರ
- ಮಧುಮಾಲತಿ ರುದ್ರೇಶ್ ಬೇಲೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ