ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಮೂಲಕ ಇಂದಿನ ಯುವ ಜನತೆಯಲ್ಲಿ ಕನ್ನಡದ ಅಭಿಮಾನ ಮತ್ತು ಮಮತೆ ತುಂಬಬೇಕು ಎಂದು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶ್ರೀಕೃಷ್ಣ ಭಟ್ಟ ಸುಣ್ಣಂಗುಳಿ ಹೇಳಿದರು.
ದ.ಕ. ಜಿಲ್ಲಾ ಕ.ಸಾ.ಪ ಮಂಗಳೂರು ತಾಲೂಕು ಘಟಕ, ಮಂಗಳೂರಿನ ಅಳಕೆಯ ' ಗುಲಾಬಿ ಶ್ರೀಪಾದ ನಿವಾಸ'ದ ಸಭಾಂಗಣದಲ್ಲಿ ನಡೆದ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಸಂದೇಶ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತನ್ನು ಸಂಸ್ಥಾಪಿಸಿ, ಅದ್ಭುತವಾದ ಸಮಾಜಮುಖೀ ಕಾರ್ಯಗಳನ್ನು ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯದಂತೆ ಇಂದಿಗೂ ಪರಿಷತ್ತು ಕನ್ನಡದ ಧ್ವನಿಯಾಗಿ ಹತ್ತು ಹಲವು ಮಹತ್ತರ ಕಾರ್ಯಗಳನ್ನೆ ಸಗುತ್ತಾ ಮುಂದುವರಿಯುತ್ತಿರುವುದು ಹೆಮ್ಮೆಯ ವಿಚಾರ. ಶಾಲೆ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದತ್ತ ಒಲವು ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಈ ಪರಿಷತ್ತು ಕನ್ನಡಿಗರ ಏಕತೆಯ ಸಂಕೇತವೆಂದೂ ಅವರು ನುಡಿದರು.
ಆರಂಭದಲ್ಲಿ ಪರಿಷತ್ತಿನ ಸಂಸ್ಥಾಪಕ ನಾಲ್ವಡಿ ಕೃಷ್ಣ ರಾಜ ಒಡೆಯರ್ ರ ಭಾವಚಿತ್ರಕ್ಕೆ ಪುಷ್ಪ ವೃಷ್ಟಿ ಯೊಂದಿಗೆ ಗೌರವ ಸಮರ್ಪಿಸಲಾಯಿತು. ಕ.ಸಾ.ಪ ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀಮೋಹನ್ ಚೂಂತಾರ್ ಸ್ವಾಗತಿಸಿದರು. ಘಟಕದ ಅಧ್ಯಕ್ಷ ಡಾ.ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ರತ್ನಾವತಿ ಜೆ. ಬೈಕಾಡಿ ಕನ್ನಡ ಪ್ರಾರ್ಥನೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸನತ್ ಕುಮಾರ್ ಜೈನ್, ರವೀಂದ್ರನಾಥ ಕೆ. ಪಿ., ಹೇಮಾ ರೇವಣ್ಕರ್, ಡಾ. ಸೌಜನ್ಯ ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಎನ್. ಗಣೇಶ್ ಪ್ರಸಾದ್ ಜೀ ನಿರೂಪಿಸಿದರು. ಗೌರವ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ