ಲೇಖಾ ಲೋಕ-43: ಅದ್ಭುತ ಚಿಂತಕ, ವಿಮರ್ಶಕ ಎಸ್ ಆರ್ ರಾಮಸ್ವಾಮಿ

Upayuktha
0


ನ್ನಡ ನಾಡಿಗೆ ಚಿರಪರಿಚಿತರಾದ ನಾಡೋಜ ಎಸ್ ಆರ್ ರಾಮಸ್ವಾಮಿ ಅವರು, ಬಹುಶ್ರುತ ವಿದ್ವಾಂಸರು. ಪತ್ರಕರ್ತರು, ವಿಮರ್ಶಕರು, ಚಿಂತಕರು, ಸಾಮಾಜಿಕ ಕಾರ್ಯಕರ್ತರು ಎಂದು ಗುರುತಿಸಲ್ಪಟ್ಟ ವ್ಯಕ್ತಿ. 


ಎಸ್ ಆರ್ ರಾಮಸ್ವಾಮಿ ಅವರು ಪುತ್ರನಾಗಿ ಸೊಂಡಿಕೊಪ್ಪ ಗ್ರಾಮದ ರಾಮಚಂದ್ರಶಾಸ್ತ್ರೀ ಮತ್ತು ಸರಸ್ವತಮ್ಮ ದಂಪತಿಗೆ 29-10-1937 ರಂದು ಜನಿಸಿದರು. ವಿದ್ವತ್ ಪ್ರಭಾವಳಿಯ ಮೇರುವಂಶದ ಹೆಸರಾಂತ ಕುಟುಂಬ. ಇವರು ಶ್ರೇಷ್ಠ ಭಾರತೀಯ ಇತಿಹಾಸ ತಜ್ಞರಾದ ಎಸ್. ಶ್ರೀಕಂಠ ಶಾಸ್ತ್ರಿ ಮತ್ತು ಆಸ್ಥಾನ ವಿದ್ವಾನ್ ಮೋಟಗನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿ ಅವರ ಸೋದರ ಅಳಿಯಂದಿರು. ಭಾಗವತ ಮೂಲ ಸಂಸ್ಕೃತ ಪುರಾಣವನ್ನು ಮೊದಲಿಗೆ ಕನ್ನಡ ಭಾಷೆಗೆ ಭಾಷಾಂತರಿಸಿದ ಆಸ್ಥಾನ್ ವಿದ್ವಾನ್ ಮೋಟಗನಹಳ್ಳಿಯ ರಾಮಶೇಷಶಾಸ್ತ್ರಿ ಅವರ ಸೋದರ ಮೊಮ್ಮಗ ಎಂಬುದು ವಿಶೇಷ. ಎಸ್ ಆರ್ ರಾಮಸ್ವಾಮಿ ಅವರು ಪತ್ರಕರ್ತರಾಗಿ, ಪ್ರಜಾಮತ ಪತ್ರಿಕೆಗೆ ಸಹ ಕೆಲಸ ಮಾಡಿದ್ದ ಎಸ್ ಆರ್ ಕೃಷ್ಣಮೂರ್ತಿ ಅವರ ಕಿರಿಯ ಸೋದರ.


ಎಸ್ ಆರ್ ರಾಮಸ್ವಾಮಿ ಅವರು, ಬೆಂಗಳೂರಿನ ಪ್ರೌಢಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿ, ಬೆಂಗಳೂರಿನ ಬಸವನಗುಡಿಯ ಖ್ಯಾತ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಇವರು ವಿಲಿಯಂ ಕ್ವಾನ್ ಜಡ್ಜ್ ಪ್ರೆಸ್‌ನ ಸಹಾಯಕ ಸಂಪಾದಕರಾಗಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದರು. ನಂತರ ಕನ್ನಡ ವಾರಪತ್ರಿಕೆ "ಸುಧಾ" ಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980 ರಿಂದ ಬೆಂಗಳೂರಿನಲ್ಲಿ ರಾಷ್ಟೋತ್ಥಾನ ಸಾಹಿತ್ಯ ಪ್ರಕಟಿಸುವ "ಉತ್ಥಾನ" ಪತ್ರಿಕೆಗೆ ಪ್ರಧಾನ ಗೌರವ ಸಂಪಾದಕರಾದರು. ಇವರು ಸಕ್ರಿಯವಾಗಿ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ವಿಷಯಗಳ ಬಗ್ಗೆ ದೇಶಾದ್ಯಂತ ವಿಚಾರ ಗೋಷ್ಠಿ, ಸಮಾವೇಶ, ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಹನೀಯರು. ಅನೇಕ ವಿಚಾರ ಲಹರಿಗಳನ್ನು ಪ್ರಮುಖ ಪತ್ರಿಕೆಗಳಲ್ಲಿ ಬರೆದಿದ್ದಾರೆ. ಇವರು ಕನ್ನಡ ಸಂಸ್ಕೃತ, ಇಂಗ್ಲೀಷ್, ತೆಲುಗು, ಹಿಂದಿ, ಜಮ೯ನ್, ಫ್ರೆಂಚ್, ಭಾಷೆಗಳಲ್ಲಿ ಸಹ ಪಾರಂಗತರು.


ವಿವಿಧ ಭಾಷೆಗಳ ಲೇಖನಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿ ನಾಡಿಗೆ ನೀಡಿದ್ದಾರೆ. 50 ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ, ಇಂಗ್ಲೀಷ್ ಭಾಷೆಗೆ ಮೂಡಿಸಿದ್ದಾರೆ. ಫ್ರೆಂಚ್ ಕವಿ ಆಮ್ಬ್ರೋಯಿಸೆ ಪಾಲ್ ಟೌಸಿಯಂಟ್ ಜೂಲ್ಸ್ ವಾಲೆರಿ ಅವರ ಸಾಹಿತ್ಯದ ಕೃತಿಗಳನ್ನು ವಿಮರ್ಶೆ ಮಾಡಿದ್ದಾರೆ. ರಷ್ಯನ್ ಚಿತ್ರ ಕಲಾವಿದ ಸ್ವೆಟೋಸ್ಲಾವ್ ರೋರಿಕ್ ಅವರನ್ನು ಕುರಿತು ಭವ್ಯ ಚಿತ್ರಗಳನ್ನೊಳಗೊಂಡ "ಆರ್ಟ್ ಕ್ಯಾಟಲಾಗ್" ಪುಸ್ತಕವನ್ನು ಸಹ ಬರೆದ ಮಹಾನುಭಾವರು. ಇವರು ಆರು ದಶಕಗಳಿಂದ ಸಾಹಿತ್ಯ ಮತ್ತು ಪತ್ರಿಕಾ ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಭಾರತದಲ್ಲಿ ಸ್ವದೇಶೀ ಚಳುವಳಿಯಲ್ಲಿ ಪ್ರಮುಖ ಪಾತ್ರ ಮತ್ತು ಪ್ರತಿಪಾದಕರಾಗಿದ್ದರು. ಗ್ರಾಮೀಣಾಭಿವೃದ್ಧಿಗೆ ಸಹ ತುಂಬಾ ಕೆಲಸ ಮಾಡಿ, ಅದರ ರೂಪುರೇಷಗಳ ಬಗ್ಗೆ ಮಾರ್ಗದರ್ಶನವನ್ನು ಮಾಡಿ, ಪ್ರಖ್ಯಾತರಾದ ಸಮಾಜಸೇವಕರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನೇಕ ದಿಟ್ಟ ಹೋರಾಟ ಪರಿಸರದ ಬಗ್ಗೆ ಮಾಡಿದ ಅಪರೂಪದ ವ್ಯಕ್ತಿ. ಇವರು ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕುಶಲತೆ ಪಡೆದವರಾಗಿದ್ದಾರೆ. ಭರತನಾಟ್ಯ ಅಧ್ಯಯನ ಮಾಡಿದ್ದಾರೆ.

ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಅಪಾರ ಸೇವೆ ಮಾಡಿ ಖ್ಯಾತರಾದ ಬರಹಗಾರರು. ಇವರು ನೂರಾರು ವಿದ್ವತ್ ಪ್ರಬಂಧಗಳನ್ನು ವಿಚಾರಗೋಷ್ಠಿಯಲ್ಲಿ ಮಂಡಿಸಿದ ವಿದ್ವಾಂಸರು. ಅನೇಕ ಹಿರಿಯ ವ್ಯಕ್ತಿಗಳಾದ ಡಿವಿಜಿ, ವಿ ಸೀತಾರಾಮಯ್ಯನವರು, ರಾಳ್ಲಪಲ್ಲಿ ಅನಂತ ಕೃಷ್ಣ ಶರ್ಮ, ಎ ಆರ್ ಕೃಷ್ಣ ಶಾಸ್ತ್ರಿ, ಪಿ ಕೋದಂಡರಾವ್, ಯಾದವ್ ರಾವ್ ಜೋಷಿ, ಮುಂತಾದವರ ಆಶ್ರಯದಡಿಯಲ್ಲಿ ಬೆಳೆದ ಮಹನೀಯರು. ಇವರ ಬಗ್ಗೆ ಪ್ರೀತಿಯಿಂದ ಡಿವಿಜಿ ಅವರು ಜ್ಞಾಪಕ ಚಿತ್ರ ಶಾಲೆಯಲ್ಲಿ ತಮ್ಮ ಮೆಚ್ಚುಗೆ ಬರೆದಿದ್ದಾರೆ. ಡಿವಿಜಿ ಅವರ ಅನೇಕ ಕೃತಿಗಳನ್ನು, ಸಂಪಾದನೆ ಪುರಾವೆ ಓದುವಿಕೆಯನ್ನು ಮಾಡಿದ್ದರು. ಜೀವನ ಧರ್ಮಯೋಗ ಅಥವಾ ಭಗವದ್ಗೀತೆ ತಾತ್ಪರ್ಯ ಪ್ರಮುಖವಾದ ಬರಹಗಳು. ರಾಮಸ್ವಾಮಿ ಅವರು ಅರ್ಥಶಾಸ್ತ್ರ, ಚರಿತ್ರೆ, ಇತಿಹಾಸ, ನಾಗರಿಕತೆಗಳ ಸಂಘ‍ರ್ಷ, ಸಾಹಿತಿಗಳ ಮುಂತಾದ  ಅನೇಕ ಬರಹಗಳು ಬರೆದಿದ್ದಾರೆ.


ಎಸ್ ಆರ್ ರಾಮಸ್ವಾಮಿ ಅವರಿಗೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಿಥಿಕ್ ಸೊಸೈಟಿ ಗೌರವ, ಡಿವಿಜಿ ಬಳಗದವರ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಪಂಪ ಪ್ರಶಸ್ತಿ, ಹಾಗೂ ಅನೇಕ ಗೌರವಗಳ ಪುರಸ್ಕೃತ ಮಹನೀಯರು. ಸಮಾಜ ಸೇವೆ, ಬರವಣಿಗೆ, ಸಂಘಟನೆ, ಸೇವಾ ಕಾರ್ಯದಲ್ಲಿ ನಿರತರಾದ ಎಸ್ ಆರ್ ರಾಮಸ್ವಾಮಿ ಅವರು ಕರ್ನಾಟಕದ ಭಾರತದ ಶ್ರೇಷ್ಠ ಕೊಂಡಿಯಾಗಿ ನಾಡಿನ ಕೀರ್ತಿ ಹೆಚ್ಚಿಸಿದ ಮಹಾನುಭಾವರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter.

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top