ಮಂಗಳೂರು: ಕೊರೋನಾ ನಂತರ ಏರುಪೇರುಗಳಿಂದ ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿಯು ಅದಲು ಬದಲಾಗಿದ್ದು ಇದು ವಿದ್ಯಾರ್ಥಿಗಳ ಭವಿಷ್ಯ, ಆರೋಗ್ಯ ಮತ್ತು ಕಾಲೇಜು ಸಂಪನ್ಮೂಲದ ಕುರಿತಾದ ಅನಾನುಕೂಲತೆ ಸೃಷ್ಟಿ ಮಾಡಿದೆ.
ಬದಲಾದ ಶೈಕ್ಷಣಿಕ ವರ್ಷದಿಂದಾಗಿ ಏಪ್ರಿಲ್, ಮೇ ತಿಂಗಳ ಉರಿ ಬಿಸಿಲಿನ ತಾಪಮಾನವು ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಆರೋಗ್ಯದ ಮೇಲೆ ಪ್ರಭಾವ ಬೀರಿದೆ. ಅಷ್ಟೇ ಅಲ್ಲದೆ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ನೀರಿನ ಸಮಸ್ಯೆ ಮತ್ತು ಅಗಾಧ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯ ಬಳಕೆ ಹೆಚ್ಚಾಗಿ ಖರ್ಚು ಅತಿಯಾಗುತ್ತಿದೆ.
ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಅಂಗವಾಗಿರುವ ಪದವಿಪೂರ್ವ ಕಾಲೇಜು ಏಪ್ರಿಲ್ ತಿಂಗಳಲ್ಲಿ ಮುಗಿದಿದ್ದು ಕಾಲೇಜು ಪ್ರಾರಂಭಕ್ಕೆ ಸಪ್ಟೆಂಬರ್, ಅಕ್ಟೋಬರ್ ವರೆಗೂ ಕಾಯುವ ಸ್ಥಿತಿ ಇದೆ. ಈ ಕಾಲಾವಧಿ ದೀರ್ಘವಾಗಿದ್ದು ಸರ್ಕಾರಿ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶಾತಿ ಕೊರತೆಗೂ ಪ್ರಮುಖ ಕಾರಣವಾಗಿದೆ.
ಪಿ.ಯು.ಸಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಿಮುಖವಾಗಿ ಚಿಕ್ಕ ಪುಟ್ಟ ಉದ್ಯೋಗದಲ್ಲಿ ತೊಡಗಿಕೊಂಡು ಅಲ್ಪ ಸ್ವಲ್ಪ ಹಣದ ಅನಿವಾರ್ಯತೆಯಿಂದಾಗಿ ಉನ್ನತ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ.
ಈ ಎಲ್ಲ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಏಕರೂಪದ ಶೈಕ್ಷಣಿಕ ವೇಳಾಪಟ್ಟಿಯನ್ನು ತಯಾರಿಸಬೇಕು ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘವು ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ ಸುಧಾಕರ್ ಅವರಿಗೆ ಮನವಿಯನ್ನು ಸಲ್ಲಿಸಿದೆ.
ಮನವಿಯಲ್ಲಿ ರಾಜ್ಯದ ವಿವಿಧ ವಿಶ್ವದ್ಯಾನಿಯಗಳ ಕುಲಪತಿಗಳ ಸಭೆ ಕರೆದು ಯು.ಜಿ.ಸಿಯ ಅನುಮತಿ ಪಡೆದು ಒಂದುಬಾರಿಯ ಸಿಲೆಬಸ್ ಕಡಿತಗೊಳಿಸಿ ವೇಳಾ ಪಟ್ಟಿಯನ್ನು ಸರಿದೂಗಿಸಬಹುದು. ಈ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢ, ಹಾಗೂ ಪದವಿ ಪೂರ್ವ ಇಲಾಖೆಗಳ ಮಾದರಿಯನ್ನು ಬಳಸಿಕೊಳ್ಳಬಹುದು ಎಂದು ಸಲಹೆಯನ್ನು ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ, ಡಾ. ಮಾಧವ ಎಂ ಕೆ ಅವರು ಮನವಿ ಸಲ್ಲಿಸಿದರು. ಇದರ ಜೊತೆಗೆ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ರಾಜ್ಯ ಉನ್ನತ ಶಿಕ್ಷಣ ಪರಿಷತ್ ನ ಉಪಾಧ್ಯಕ್ಷರು ಹಾಗೂ ವಿವಿಧ ವಿ.ವಿಗಳ ಕುಲಪತಿಗಳಿಗೂ ಮನವಿ ನೀಡಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ