ಉಡುಪಿಯಲ್ಲಿ ಡ್ರೋನ್‌ ದಾಳಿ- ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನ

Upayuktha
0




ಉಡುಪಿ: ಕಾಪು ಹೊರವಲಯದ ಪಾದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಇಂಡಿಯನ್  ಸ್ಟ್ರಾಟೆಜಿಕ್‌ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐ.ಎಸ್.ಪಿ.ಆರ್.ಎಲ್) ಮೇಲೆ ಡ್ರೋನ್ ಮೂಲಕ ಬಾಂಬ್) ದಾಳಿ ಹಾಗೂ ರಕ್ಷಣಾ ಕಾರ್ಯಾಚರಣೆ ಅನುಕು ಪ್ರದರ್ಶನ ನಡೆಯಿತು.

  

ಕಂಪನಿ ಮುಂಭಾಗದ ಹೊರಭಾಗದಲ್ಲಿ ಹಾಗೂ ಒಳಭಾಗದಲ್ಲಿ ಸೋಮವಾರ  ಸಂಜೆ ಭಾಂಬ್‌ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿತು. ತಕ್ಷಣದಲ್ಲಿಯೇ ಸೈರನ್ ಮೊಳಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿಯನ್ನು ನೀಡಲಾಯಿತು. ಐ.ಎಸ್.ಪಿ.ಆರ್.ಎಲ್ ನ ಬೆಂಕಿ ನಂದಕ ವಾಹನವು ಕಂಪನಿಯ ಒಳಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಆರಿಸಲು ಪ್ರಾರಂಭಿಸಿದರೆ, ಅದಾನಿ ಕಂಪನಿಯ ಫೈರಿಂಜಿನ್ ಹೊರಭಾಗದ ಬೆಂಕಿ ನಂದಿಸುವ ಕಾರ್ಯವನ್ನು ಕೈಗೊಂಡು, ಮೊದಲ ಹಂತದಲ್ಲಿ ನಾಲ್ಕರಿಂದ ಐದು ನಿಮಿಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಂಕಿಯನ್ನು ನಂದಿಸಿವೆ. 


ಒಳಭಾಗದ ಬೆಂಕಿ ನಂದಿಸಲು ಕಾರ್ಕಳದ ಅಗ್ನಿ ಶಾಮಕ ವಾಹನವು ಕಾರ್ಯಾಚರಣೆಯಲ್ಲಿ ಕೈಜೋಡಿಸಿತು. ಕಾಪು ಪೊಲೀಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ತುರ್ತು ಕಾರ್ಯಾಚರಣೆ ಕೈಗೊಳ್ಳಲು ಮುಂದಾದರು. ಕಂಪನಿಯ ಒಳಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ೩೫ ಜನರಿಗೆ ತೀವ್ರ ತರಹದ ಹಾಗೂ ಸಾಮಾನ್ಯ ಗಾಯಗಳು ಉಂಟಾಗಿದ್ದು, ಅವರುಗಳನ್ನು ಸ್ಥಳಾಂತರಿಸುವ ಕಾರ್ಯಗಳನ್ನು ಕಂಪನಿಯ ಇತರೆ ಕೆಲಸಗಾರರು ಮಾಡಿದರು. 


ಪೊಲೀಸ್ ತಂಡವು ಘಟನಾ ಸ್ಥಳದ ಸುತ್ತಮುತ್ತ ಹಾಗೂ ಇತರ ಅಗತ್ಯ ಸ್ಥಳಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ನಿರ್ವಹಣೆಯನ್ನು ಮಾಡಿತು. ಕಾಪುವಿನ ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಒಳಗೊಂಡ ತಂಡವು ಘಟನಾ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ, ಆದ್ಯತೆಯ ಮೇಲೆ ಚಿಕಿತ್ಸೆ ನೀಡಿತು. ಪ್ರಾಥಮಿಕ ಚಿಕಿತ್ಸೆಗಳನ್ನು ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ ಮೂಲಕ ಹತ್ತಿರದ ಆಸ್ಪತ್ರೆಗೆ ರವಾನಿಸಿದರು. ಬಾಂಬ್ ನಿಷ್ಕ್ರಿಯ ದಳದವರು ಶ್ವಾನದೊಂದಿಗೆ ಆಗಮಿಸಿ, ಸ್ಥಳದಲ್ಲಿ ಪರಿಶೀಲನಾ ಕಾರ್ಯಗಳನ್ನು ಕೈಗೊಂಡರು. ಕ್ವಿಕ್ ರಿಯಾಕ್ಷನ್ ಫೋರ್ಸ್ನ ತಂಡದವರು ಆಗಮಿಸಿ, ಸುರಕ್ಷತೆಗೆ ಸನ್ನದ್ಧರಾದರು. ಪ್ರಕರಣ ಆದ 40 ನಿಮಿಷದ ಒಳಗಾಗಿ ಮಂಗಳೂರಿನ ಎಸ್.ಡಿ.ಆರ್.ಎಫ್ ತಂಡವು ಆಗಮಿಸಿ, ಗಾಯಾಳುಗಳ ಸ್ಥಳಾಂತರ ಕಾರ್ಯಗಳು ಸೇರಿದಂತೆ ಮತ್ತಿತರ ಪ್ರಥಮ ಚಿಕಿತ್ಸೆಯನ್ನು ನೀಡಿದರು. ಘಟನಾ ಸ್ಥಳದಲ್ಲಿ ಎರಡು ಜನ ಮೃತಪಟ್ಟಿದ್ದು,  12 ಜನ ಚಿಕಿತ್ಸೆಗಾಗಿ ಕಾಪುವಿನ ಆಸ್ಪತ್ರೆಗೆ ಹಾಗೂ 20 ಜನರನ್ನು ಶಿರ್ವದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಿ ಐಸಿಯು ನಲ್ಲಿ ಇರಿಸಲಾಗಿದೆ. 




ಘಟನಾ ಪ್ರದೇಶದ ಹತ್ತಿರದಲ್ಲಿ ವಾಸಿಸುವ ಸಾರ್ವಜನಿಕರನ್ನು ಹತ್ತಿರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಕಂದಾಯ ಇಲಾಖೆಯ ತಂಡ ಮುಂದಾಗಿತ್ತು.  ಎರಡನೇ ಬಾರಿ ಡ್ರೋನ್ ಮೂಲಕ ಆಕ್ರಮಣವನ್ನು ಮಾಡಲು ಮುಂದಾದಾಗ ಡ್ರೋನ್ ದಾಳಿಯು ನಿಖರ ಗುರಿಯನ್ನು ತಪ್ಪಿಸಿ ಐ.ಎಸ್.ಪಿ.ಆರ್.ಎಲ್ ನ ಗೇಟ್‌ನ ಬಳಿ ಬೀಳಿಸಿದ್ದರಿಂದ ಹೆಚ್ಚು ಹಾನಿಯಾಗಿರುವುದಿಲ್ಲ. ಡಿ.ಎ.ಆರ್. ಕ್ವಿಕ್ ರೆಸ್ಪಾನ್ಸ್ ಟೀಮ್ ನವರು ಗೇಟ್‌ನ ಬಳಿಯೇ ನಿಷ್ಕ್ರಿಯಗೊಳಿಸಿದರು.  ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಘಟನಾ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಭೇಟಿ ಮಾಡಿ, ನಂತರ ಸ್ಥಳ ಪರಿಶೀಲನೆ ಮಾಡಿದರು. ಪರಿಸ್ಥಿತಿಯು ಪೂರ್ಣಪ್ರಮಾಣದಲ್ಲಿ ಹತೋಟಿಗೆ ಬರುವುದರೊಂದಿಗೆ ಅಣುಕು ಪ್ರದರ್ಶನವು ಮುಕ್ತಾಯಗೊಂಡಿತು.


ಆಪರೇಷನ್ ಅಭ್ಯಾಸದ ಮೂಲಕ ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಟಿಸಿ 270 ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ತಾಲೀಮು ನಡೆಸಿದರು. ಆಪರೇಷನ್ ಅಭ್ಯಾಸ್ ರಕ್ಷಣಾ ಕಾರ್ಯಚರಣೆಯಲ್ಲಿ ರೆವಿನ್ಯೂ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಕೈಗಾರಿಕಾ ಭದ್ರತಾ ಪಡೆ, ಕೋಸ್ಟಲ್ ಸೆಕ್ಯೂರಿಟಿ ಫೋರ್ಸ್, ಆರ್.ಟಿ.ಓ, ಆರೋಗ್ಯ ಇಲಾಖೆ, ಮೆಸ್ಕಾಂ,ಎಸ್.ಡಿ.ಆರ್.ಎಫ್ ತಂಡ, ಗೃಹರಕ್ಷಕದಳದವರು, ಐ.ಎಸ್.ಪಿ.ಆರ್.ಎಲ್ ನ ರಕ್ಷಣಾ ಸಿಬ್ಬಂದಿ ಹಾಗೂ ಮತ್ತಿತರರು ಭಾಗವಹಿಸಿದ್ದರು.


ಅಣುಕು ಪ್ರದರ್ಶನದ ಮುಕ್ತಾಯಗೊಂಡ ನಂತರ  ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಆಪರೇಷನ್ ಅಭ್ಯಾಸ್ ಅಣುಕು ಪ್ರದರ್ಶನವನ್ನು ಐ.ಎಸ್.ಪಿ.ಆರ್.ಎಲ್ ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ. ಇಂದು ನಡೆದ ಅಣುಕು ಪ್ರದರ್ಶನದಲ್ಲಿ ಡ್ರೋನ್ದಾಳಿಯ ಸಂದರ್ಭದಲ್ಲಿ ಮಾನವನ ರಕ್ಷಣೆ ಹಾಗೂ ಸ್ಥಾವರಗಳ ರಕ್ಷಣೆ ಕೈಗೊಳ್ಳುವ ಕುರಿತು ನಡೆಸಲಾಗಿತ್ತು. ರಕ್ಷಣಾ ಕಾರ್ಯದಲ್ಲಿ ಪ್ರತಿಯೊಂದು ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನೆರವೇರಿಸುವುದರೊಂದಿಗೆ ಪರಿಸ್ಥಿತಿಯನ್ನು ಅಲ್ಪಕಾಲದಲ್ಲಿಯೇ ಹತೋಟಿಗೆ ತಂದು ರಕ್ಷಣೆಯನ್ನು ಒದಗಿಸಿದರು. ಈ ರೀತಿಯ ಆಪರೇಷನ್ ಅಭ್ಯಾಸದ ಉದ್ದೇಶ ವಿಕೋಪ ಸಂಕಷ್ಟ ಪರಿಸ್ಥಿತಿಯಲ್ಲಿ ಪ್ರಾಣಹಾನಿ ಹಾಗೂ ಆಸ್ತಿ ಹಾನಿ ತಡೆಗಟ್ಟುವುದರ ಜೊತೆಗೆ ರಕ್ಷಣೆ ಒದಗಿಸುವುದೇ ಮುಖ್ಯ ಉದ್ದೇಶ ಎಂದ ಅವರು, ಘಟನೆ ನಡೆದ ೪೦ ನಿಮಿಷದ ಒಳಗಾಗಿ ಮಂಗಳೂರಿನ ಎಸ್.ಡಿ.ಆರ್.ಎಫ್ ತಂಡವು ಆಗಮಿಸಿ, ರಕ್ಷಣಾ ಕಾರ್ಯ ಕೈಗೊಂಡಿರುವುದು ವಿಶೇಷವಾಗಿತ್ತು ಎಂದರು.


ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ: 0820-2574802 ಅಥವಾ 1077 ಹಾಗೂ ಪೊಲೀಸ್ ಕಚೇರಿಯ ಸಹಾಯವಾಣಿ ಸಂಖ್ಯೆ: 112 (ಕಂಟ್ರೋಲ್ ರೂಂ ನಂಬರ್ 0820-2526444) ಕರೆ ಮಾಡಬಹುದು ಎಂದರು.  ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಎಎಸ್‌ಪಿ ಪಿ.ಎ ಹೆಗಡೆ, ಸಹಾಯಕ ಕಮೀಷನರ್ ರಶ್ಮಿ ಎಸ್, ಐ.ಎಸ್.ಪಿ.ಆರ್.ಎಲ್ ನ ಮುಖ್ಯ ಸೈಟ್ ಇನ್‌ಚಾರ್ಜರ್ ಜಿ.ಕೆ ಯುವರಾಜ್, ಕಾಪು ತಹಶೀಲ್ದಾರ್ ಪ್ರತಿಭಾ, ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯಾಯ, ಜಿಲ್ಲಾ ಆರ್.ಟಿ.ಓ ಅಧಿಕಾರಿ ಎಲ್.ಪಿ

ನಾಯಕ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ರವಿ ಓಜನಾಹಳ್ಳಿ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top