ಉಡುಪಿ: ಕೇರಳದಲ್ಲಿ ಜ್ಯೋತಿಷವಿಭಾಗದ ಬಹುದೊಡ್ಡ ಸಂಘಟನೆಯಾದ ಕೇರಳ ಜ್ಯೋತಿಷ ಪರಿಷತ್ತಿನ 2025ನೇ ಸಾಲಿನ "ದೈವಜ್ಞ ಪುರಸ್ಕಾರ"ವು ಜ್ಯೋತಿಷರತ್ನ ಬೇಳ ಶ್ರೀ ಪದ್ಮನಾಭ ಶರ್ಮಾ ಅವರಿಗೆ ನೀಡಲಾಗುತ್ತಿದೆ.
ತ್ರಿಶೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಗುವುದು. ಕಾಸರಗೋಡಿನ ಬೇಳದವರಾದ ಶ್ರೀಯುತರು ಪ್ರಸ್ತುತ ತ್ರಿಶೂರಿನ ಸಮೀಪದ ಇರಿಂಜಾಲಕ್ಕುಡದಲ್ಲಿ ನೆಲೆಸಿದ್ದಾರೆ.
ಸಿದ್ಧ ಜ್ಯೋತಿಷಿಗಳಾದ ಕೈಮುಕ್ಕು ವೈದಿಕನ್ ಶ್ರೀ ಪರಮೇಶ್ವರನ್ ನಂಬೂದಿರಿಯವರ ಪ್ರಧಾನ ಶಿಷ್ಯರಾದ, ಲೋಕವಿಶ್ರುತರಾದ ಶ್ರೀ ಶರ್ಮರು ಫಲಜ್ಯೋತಿಷ, ಅಷ್ಟಮಂಗಲಪ್ರಶ್ನೆಯ ವಿಭಾಗದಲ್ಲಿ ಈ ಕಾಲದ ಅದ್ವಿತೀಯರಾಗಿದ್ದಾರೆ.
ಗುರುವಾಯೂರು, ತಿರುವನಂತಪುರ, ಶಬರಿಮಲೆ, ಏಟ್ಟುಮಾನೂರು, ಕೊಲ್ಲೂರು, ಸಾಲಿಗ್ರಾಮ, ಉಡುಪಿ, ಕಟೀಲು, ಪೊಳಲಿ, ಶ್ರೀರಂಗ, ಕಾಶಿ, ಪ್ರಯಾಗ, ತಿರುಪತಿ, ಶ್ರೀಲಂಕಾದ ಕಡಿರುಗಾಮ, ಮಸ್ಕತ್ತಿನ ಮೋತೀಶ್ವರ್ ಮಹಾದೇವ್, ಮೈಸೂರು ಚಾಮುಂಡೇಶ್ವರಿ, ನಂಜನಗೂಡು ಮುಂತಾದ ಹಲವಾರು ಮಹಾಕ್ಷೇತ್ರಗಳಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಯಶಸ್ವಿಯಾಗಿ ನೆರವೇರಿಸಿದ ಗರಿಮೆ ಇವರದು.
ಕಾಂಚಿ ಶ್ರೀಗಳಿಂದ ಜ್ಯೋತಿಷರತ್ನ ಬಿರುದು, ಉಡುಪಿಯಲ್ಲಿ ಹೋರಾ ಧೌರೇಯ ಬಿರುದು, ಪ್ರಶ್ನಮಾರ್ಗಾಚಾರ್ಯ ಪ್ರಶಸ್ತಿ, ಕೇರಳ ತಂತ್ರ ವಿದ್ಯಾಪೀಠದ ಆಚಾರ್ಯಸ್ಮೃತಿ ಪುರಸ್ಕಾರವೇ ಮುಂತಾದ ಹಲವಾರು ಗೌರವಗಳು ಶ್ರೀ ಶರ್ಮರನ್ನು ಅರಸಿಬಂದಿವೆ.
ಆರ್ಷಜ್ಯೋತಿಷದ ವಿದ್ವಜ್ಜನವಲ್ಲಭ ಗ್ರಂಥಕ್ಕೆ "ಸರಸ್ವತೀ" ಎಂಬ ವ್ಯಾಖ್ಯಾನವನ್ನ ರಚಿಸಿದ ಕೀರ್ತಿಯೂ ಶ್ರೀ ಪದ್ಮನಾಭ ಶರ್ಮರದ್ದಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ