ಬೆಂಗಳೂರು: ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಸಿವಿಲ್ ಇಂಜಿನಿಯರಿಂಗ್ನ ಪಾತ್ರ ಮಹತ್ವಪೂರ್ಣವಾದುದು. ಬಹುಶಃ ಸಹಸ್ರಾರು ವರ್ಷಗಳ ಹಿಂದೆಯೇ ನಾಗರೀಕತೆಯ ಆರಂಭದ ದಿನಗಳಿಂದಲೇ ಅಸ್ತಿತ್ವದಲ್ಲಿರುವ ಏಕೈಕ ತಂತ್ರಜ್ಞಾನ ಶಾಖೆ –‘ಸಿವಿಲ್ ಇಂಜಿನಿಯರಿಂಗ್’ ಎಂದರೆ ತಪ್ಪಾಗಲಾರದು. ಈಗ ಈ ಶಾಖೆಗೆ ‘ಕೃತಕ ಬುದ್ದಿಮತ್ತೆ’ಯ ನೆರವಿನಿಂದ ವಿಶೇಷ ಶಕ್ತಿ ಬಂದಿದೆ. ನಮ್ಮ ಮೆದುಳನ್ನು ಸದಾ ಜಾಗೃತವಾಗಿಟ್ಟು ಅಲ್ಲಿ ಬರುವ ಹೊಸ ಹೊಸ ಚಿಂತನೆಗಳಿಂದ ‘ಕೃತಕ ಬುದ್ದಿಮತ್ತೆ’ಯನ್ನು ನಾವು ಸೃಷ್ಟಿಸಿ ಬಳಕೆ ಮಾಡಬಹುದು. ಇದು, ಯಾವುದೇ ಲೋಪವಿಲ್ಲದೆ ಕಟ್ಟಡ, ರಸ್ತೆ, ಸೇತುವೆ ಇತ್ಯಾದಿಗಳನ್ನು ನಿರ್ಮಿಸಲು ಸಿವಿಲ್ ಇಂಜಿನಿಯರ್ ಗಳಿಗೆ ಅಗತ್ಯ ಸೌಲಭ್ಯ ಹಾಗೂ ಮಾರ್ಗದರ್ಶನಗಳನ್ನು ನೀಡುತ್ತದೆ’, ಎಂದು ‘ಕ್ರಿಟಿಕಲ್ ಏಐ’ ಉದ್ಯಮದ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೆ. ಕರ್ನಲ್. ಪಿ.ಜೆ. ಆನಂದ್ ಕುಮಾರ್ ನುಡಿದರು.
ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ‘ಸರ್ವೇಕ್ಷಣ 2025’ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಉತ್ಸವದ ಉದ್ದೇಶ – ದೇಶದ ಏಳಿಗೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಎದುರಾಗುವ ತಾಂತ್ರಿಕ ಸವಾಲುಗಳನ್ನು ನಿವಾರಿಸುವ ವಿಧಿವಿಧಾನಗಳ ಚರ್ಚೆಗೆ ವೇದಿಕೆ ಕಲ್ಪಿಸುವುದು ಮತ್ತು ಇದಕ್ಕೆ ಅಗತ್ಯವಿರುವ ಕೌಶಲ್ಯವರ್ಧನೆಗೆ ಸೂಕ್ತ ತರಬೇತಿಯನ್ನು ನೀಡುವುದು.
‘ನಿರ್ಮಾಣ ಎಷ್ಟು ಮುಖ್ಯವೋ ನಿರ್ನಾಮವೂ ಅಷ್ಟೇ ಮುಖ್ಯ. ನಾವು ಹಳೆಯ ಕಟ್ಟಡಗಳ ನಿರ್ನಾಮ ಮಾಡುವಾಗ ಪರಿಸರ-ಸ್ನೇಹಿ ಮಾರ್ಗ ಹಿಡಿಯ ಬೇಕಾಗುತ್ತದೆ. ಅಲ್ಲದೆ ನಿರ್ನಾಮವಾದ ಕಟ್ಟಡಗಳ ಕೆಲವು ವಸ್ತುಗಳನ್ನು ಪುನರ್ಬಳಕೆ ಮಾಡಿಕೊಳ್ಳಲು ಹಾಗೂ ಅಪಾಯಕಾರಿ ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮಾಡಲು ಗಮನ ನೀಡಬೇಕಾಗುತ್ತದೆ. ಇದಕ್ಕೂ ಕೃತಕ ಬುದ್ದಿಮತ್ತೆ ಸಹಾಯ ಮಾಡುತ್ತದೆ. ಯುದ್ಧ ಭೂಮಿಯಲ್ಲಿ ಕೆಲವೊಮ್ಮೆ ಶತ್ರುಗಳ ಬರುವಿಕೆ ತಡೆಯಲು ಸೌಕರ್ಯಗಳ ನಿರ್ನಾಮ ಮಾಡುವುದೂ ಒಂದು ವಿಶಿಷ್ಟ ಸವಾಲು. ಇದಕ್ಕೆ ಅಗತ್ಯ ಕೌಶಲ್ಯ ಬೇಕು’ ಎಂದರು.
ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದವರು ಎಪ್ಕೊಜೆನ್ ಪ್ರೈವೇಟ್ ಲಿಮಿಟೆಡ್ನ ಉಪಾಧ್ಯಕ್ಷ ಎಂ.ಎಸ್. ಚಂದ್ರಶೇಖರ್ ಅವರು ತಮ್ಮ ಭಾಷಣದಲ್ಲಿ, ‘ ‘ಸರ್ವೇಕ್ಷಣ’ ನಮ್ಮ ಜ್ಞಾನ ಹಾಗೂ ಕೌಶಲ್ಯಗಳನ್ನು ವೈಜ್ಞಾನಿಕವಾಗಿ ‘ಸರ್ವೆ’ ಮಾಡಿಕೊಳ್ಳಲು ನಿಜಕ್ಕೂ ದೇಶದಲ್ಲಿಯೇ ಇರುವ ಒಂದು ಅಪೂರ್ವ ವೇದಿಕೆ’ ಎಂದು ನುಡಿದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್, ಶೈಕ್ಷಣಿಕ ಮುಖ್ಯಸ್ಥ ಡಾ. ಜೆ. ಸುಧೀರ್ ರೆಡ್ಡಿ, ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಎಲ್, ಸಮಾರಂಭದ ಸಂಯೋಜಕರಾದ ಡಾ. ಸುಮಾರಾಜ್ ಹಾಗೂ ಡಾ. ಮೃಣಾಲ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ