ಕವಿಯಾಗಿ ಆದಿಗುರು ಶಂಕರಾಚಾರ್ಯರು

Upayuktha
0



ಭಾರತದ ಈ ಪುಣ್ಯ ನೆಲದಲ್ಲಿ ಕಾಲಕಾಲಕ್ಕೆ ಅನೇಕ ಮಹಾಮಹಿಮರು ಉದಯಿಸಿ ಸನಾತನ ಧರ್ಮದ ಶ್ರೇಷ್ಠತೆಯನ್ನು ಜಗದ ಮುಂದೆ ಎತ್ತಿಹಿಡಿದಿದ್ದಾರೆ. ಅಂತಹ ಪುಣ್ಯ ಪುರುಷರಲ್ಲಿ ಆದಿ ಗುರುಗಳೆಂದೇ ಖ್ಯಾತರಾದ ಶಂಕರಾಚಾರ್ಯರು ಅಗ್ರಗಣ್ಯರು. ಭಾರತೀಯ ತತ್ತ್ವಜ್ಞಾನಕ್ಕೆ ಅವರು ನೀಡಿದ ಅದ್ವೈತ ಸಿದ್ಧಾಂತ ಅಪೂರ್ವವಾದದ್ದು. ತಾವು ಜೀವಿಸಿದ್ದ ಅಲ್ಪಾವಧಿಯಲ್ಲೇ ಸಂಸ್ಕೃತ ಭಾಷೆಯ ಮೇಲೆ ಅಸೀಮ ಪ್ರಭುತ್ವವನ್ನು ಸಾಧಿಸಿ  ವೇದ ಉಪನಿಷತ್ತುಗಳ ಮೇಲೆ ಭಾಷ್ಯಗಳನ್ನು ಬರೆದರು. ಕಾಲ್ನಡಿಗೆಯಲ್ಲೇ ಇಡೀ ದೇಶದ ಉದ್ದಗಲಕ್ಕೂ ಸಂಚರಿಸಿ, ನಾಲ್ಕು ಪೀಠಗಳನ್ನು ಸ್ಥಾಪಿಸಿ ಅಪಾರ ಶಿಷ್ಯವರ್ಗವನ್ನು ಸಂಪಾದಿಸುವುದರೊಂದಿಗೆ ಸನಾತನ ಧರ್ಮದ ಸಾರ ಸೌರಭವನ್ನು ತಮ್ಮ ಭಾಷ್ಯಗಳು, ಸ್ತೋತ್ರಗಳು, ರಚನೆಗಳ ಮೂಲಕ  ಇಡೀ ಜಗತ್ತಿಗೆ ಸಾರಿದರು.


ಶಂಕರರ ಆಧ್ಯಾತ್ಮಿಕ ಕೊಡುಗೆಗಳು ಸನಾತನ ಧರ್ಮದ ಹಿರಿಮೆಯನ್ನು ಹೆಚ್ಚಿಸಿದ್ದರೆ, ಅವರ ಸಾಹಿತ್ಯಿಕ ಕೊಡುಗೆಗಳು ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿವೆ.ಅವರು ರಚಿಸಿದ ಭಕ್ತಿಗೀತೆಗಳು, ಸ್ತೋತ್ರಗಳು, ರಚನೆಗಳು ಕಾವ್ಯ ಪ್ರಭೆಯಿಂದ ಎಲ್ಲರನ್ನೂ ಸೆಳೆಯುತ್ತವೆ. ಭಜಗೋವಿಂದಮ್, ಸುಬ್ರಹ್ಮಣ್ಯ ಭುಜಂಗಮ್ ನಂತಹ ಅನೇಕ ಸ್ತೋತ್ರಗಳು ಅಪಾರ ಜನಮನ್ನಣೆ ಪಡೆದಿದ್ದು ಮನೆಮನೆಗಳಲ್ಲಿ ಇಂದಿಗೂ ನಿನಾದಿಸುತ್ತಿರುವುದು ಸರ್ವವೇದ್ಯ. ಅವರ ಇನ್ನಿತರ ರಚನೆಗಳಾದ ಸೌಂದರ್ಯ ಲಹರಿ, ಪಂಚರತ್ನ, ಮಹಿಷಾಸುರ ಮರ್ಧಿನಿ ಸ್ತೋತ್ರ(ಐಗಿರಿ ನಂದಿನಿ ಸ್ತೋತ್ರ), ಶಿವ ಪಂಚಾಕ್ಷರಿ ಸ್ತೋತ್ರ ತಮ್ಮ ಕಾವ್ಯ ಸೌಂದರ್ಯ, ಶಬ್ದ ಮಾಧುರ್ಯಗಳಿಂದ ಕರ್ಣಾನಂದಕರವಾಗಿದ್ದು ಆದಿ ಶಂಕರರ ಕಾವ್ಯ ಪ್ರೌಢಿಮೆಗೆ ಹಿಡಿದ ಕನ್ನಡಿಯಾಗಿದೆ.


ಖ್ಯಾತ ಸಂಗೀತಗಾರ್ತಿ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ಶಂಕರಾಚಾರ್ಯ ವಿರಚಿತ ಭಜಗೋವಿಂದಮ್ ಸ್ತೋತ್ರ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದು ಇಲ್ಲಿ ಸ್ಮರಣಾರ್ಹ. ಶಂಕರರ ಸೌಂದರ್ಯ ಲಹರಿ, ಕನಕಧಾರ ಸ್ತೋತ್ರಗಳು ಭಗವತಿಯ ಸೌಂದರ್ಯ, ಗುಣಗಳನ್ನು ಅನುಪಮವಾಗಿ ವರ್ಣಿಸುವ ಮಹೋನ್ನತ ಕಾವ್ಯಾತ್ಮಕ ಪದಪುಂಜಗಳಾಗಿವೆ. ಗಹನ ಆಧ್ಯಾತ್ಮಿಕ ವಿಚಾರಗಳನ್ನು ಸುರ ಸುಂದರ ಕಾವ್ಯ ಶೈಲಿಯಲ್ಲಿ ಸಮ್ಮಿಳಿತಗೊಳಿಸಿ ಜನಸಾಮಾನ್ಯರಿಗೂ ತಲುಪುವಂತೆ ಮಾಡಿದ್ದು ಅವರ ಹಿರಿಮೆಯೇ ಸರಿ. ಶಬ್ದಾರ್ಥ ಸಹಿತವಾಗಿ, ಮನೋಜ್ಞವಾಗಿ, ರಸಭಾವ ಸಹಿತವಾಗಿ, ಆಕರ್ಷಕವಾಗಿ ಗಹನ ವಿಚಾರಗಳನ್ನು ಓದುಗನ, ಕೇಳುಗನ ಮನ ಮುಟ್ಟುವಂತೆ ತಿಳಿಸುವುದೇ ಕಾವ್ಯನೀತಿ. ಶಂಕರರ ಕೃತಿಗಳಲ್ಲಿ ಈ ಕಾವ್ಯನೀತಿ ಅಕ್ಷರಶಃ ಸಾಕಾರಗೊಂಡಿರುವುದನ್ನು ಕಾಣಬಹುದು. ಅಲಂಕಾರ ಪಿತಾಮಹ ಭಾಮಹಾಚಾರ್ಯರು ಹೀಗೆ ಹೇಳುತ್ತಾರೆ.


“ಸ್ವಾದು ಕಾವ್ಯರಸೋನ್ಮಿ ಶ್ರಂ ಶಾಸ್ತ್ರಮಪ್ಪುಪಯುಂಜಶೇ ಪ್ರಥಮಾಲೀಥಮಧವಃ ಪಿಬನ್ತಿ ಕಟು ಭೈಷಜಮ್‌" ಇದರ ಅರ್ಥ ಸಿಹಿಜೇನಿನೊಡನೆ ಬೆರೆತ ಕಹಿಯಾದ ಔಷಧವೂ ಸೇವಿಸಲು ರುಚಿಕರವಾಗಿರುವಂತೆ ಕಾವ್ಯರಸದೊಡನೆ ಬೆರೆತ ಕಠಿಣ ಶಾಸ್ತ್ರವನ್ನು ಜನರು ಸುಲಭವಾಗಿ ಗ್ರಹಿಸುತ್ತಾರೆ. ಶಂಕರರ ಕೃತಿಗಳಲ್ಲಿನ ಕಾವ್ಯಲಹರಿಗೆ ಇದು ಪರಿಪೂರ್ಣವಾಗಿ ಅನ್ವಯವಾಗುತ್ತದೆ. ಶಂಕರರು ತಮ್ಮ ಕಾವ್ಯ ಪ್ರತಿಭೆಯಿಂದ ಅದ್ವೈತ ತತ್ತ್ವ ಸಿದ್ಧಾಂತಗಳನ್ನು ಜನಸಾಮಾನ್ಯರಿಗೂ ಸುಲಭಗ್ರಾಹ್ಯವಾಗುವಂತೆ ಮಾಡಿದರು. ಹಾಗೆ ನೋಡುವುದಾದರೆ ಶಂಕರರು ವಾಲ್ಮೀಕಿ, ಕಾಳಿದಾಸ, ಭಾಸರಂತೆ ಅಪ್ರತಿಮ ಕಾವ್ಯ ಪ್ರತಿಭೆವುಳ್ಳವರೆಂಬುವುದರಲ್ಲಿ ಸಂಶಯವಿಲ್ಲವು.


ತಮ್ಮ ಕಾವ್ಯಗಳ ಕುರಿತು ಶಂಕರರು ಹೀಗೆ ಹೇಳುತ್ತಾರೆ.

ತವಸ್ತನ್ಯಂ ಮನ್ಯೇ ಧರಣಿಧರಕನ್ಯೇ ಹೃದಯತಃ ಪಯಃಪಾರಾವಾರಃ ಪರಿವಹತಿ ಸಾರಸ್ವತಮಿವ ದಯಾವತ್ಯಾ ದತ್ತಂ ದ್ರವಿಡಶಿಶುರಾಸ್ವಾದ್ಯ ತವ ಯತ್‌ ಕವೀನಾಂ ಪ್ರೌಢಾನಾಮಜನಿ ಕಮನೀಯಃ ಕವಯಿತಾ ॥

ಇದರ ಅರ್ಥ 'ಹೇ ಗಿರಿರಾಜಸುತೆ,ನಿನ್ನ ಎದೆಹಾಲನ್ನು ನಿನ್ನ ಆಂತರ್ಯದಿಂದ ಜನಿಸಿ ಹರಿಯುತ್ತಿರುವ ಕ್ಷೀರಸಾಗರದ ವಾಙ್ಮಯ ವಿಲಾಸವೆಂದು ಅರಿಯುವೆನು. ಏಕೆಂದರೆ ಕರುಣಾಮಯಿಯಾದ ನಿನ್ನಿಂದ ಕೊಡಲ್ಪಟ್ಟ ಎದೆಹಾಲನ್ನು ಕುಡಿದು ಈ ಸ್ತೋತ್ರಗಳನ್ನು ರಚಿಸಿದ ದ್ರಾವಿಡರ ಹುಡುಗನಾದ ನಾನು ಮೇಧಾವಿ ಕವಿವರ್ಯರ ನಡುವೆ ಕಮನೀಯ ಕವಿಯಾದೆನು' ಎಂದು ನುಡಿಯುವ ಮೂಲಕ ತಮ್ಮಲ್ಲಿರುವ ಕಾವ್ಯಪ್ರತಿಭೆ ವಾಗ್ದೇವಿಯ ಕೃಪೆ ಎಂಬ ಸಮರ್ಪಣಾ ಭಾವವನ್ನು ಪ್ರದರ್ಶಿಸಿರುವುದು ಅವರ ವಿನಯಶೀಲತೆಗೆ ಸಾಕ್ಷಿಯಾಗಿದೆ.


ಶ್ರೀ ಶಂಕರರ ಸ್ತೋತ್ರಗಳ ಕಾವ್ಯಶೈಲಿ

ಶ್ರೀ ಶಂಕರರ ಸ್ತೋತ್ರಗಳಲ್ಲಿ ಬಳಕೆಯಾಗಿರುವ ಭಾಷೆ ಮೃದು ಮಧುರವಾದದ್ದು.ಅತ್ಯಂತ ಸರಳ ಸುಂದರವಾಗಿದ್ದು ಶಬ್ದಾಲಂಕಾರಗಳಲ್ಲಿ ಅನುಪ್ರಾಸ,ಯಮಕ ಹೆಚ್ಚು. ಶಂಕರರ ಅನುಪ್ರಾಸಭರಿತ ಪದ್ಯ ಓದುತ್ತಿದ್ದರೆ ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಮತ್ತು ಸುಲಭವಾಗಿ ಕಂಠಪಾಠವಾಗಿಬಿಡುತ್ತವೆ. ಉದಾಹರಿಸುವುದಾದರೆ ಶ್ರೀ ಗಣೇಶ ಪಂಚರತ್ನಮ್ ಸ್ತೋತ್ರದಲ್ಲಿ ಬರುವ ಮೊದಲ ಪದ್ಯವಾದ


ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ

ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಮ್

ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ

ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್


ಅದೇ ರೀತಿ ಶ್ರೀಗಂಗಾ ಸ್ತೋತ್ರದಲ್ಲಿ ಬರುವ 

ಪತಿತೋದ್ಧಾರಿಣಿ ಜಾಹ್ನವಿ ಗಂಗೆ ಖಂಡಿತಗಿರಿವರ ಮಂಡಿತ ಭಂಗೇ l

ಭೀಷ್ಮಜನನಿ ಹೇ ಮುನಿವರ ಕನ್ಯೇ ಪತಿತನಿವಾರಿಣಿ ತ್ರಿಭುವನ ಧನ್ಯೇ l


ಪನರಸದಂಗೇ ಪುಣ್ಯತರಂಗೇ ಜಯ ಜಯ ಜಾಹ್ನವಿ ಕರುಣಾಪಾಂಗೇ l

ಇಂದ್ರಮುಕುಟಮಣಿರಾಜಿತಚರಣೇ ಸುಖದೇ ಶುಭದೇ ಭೃತ್ಯ ಶರಣ್ಯೇ l


ಇಷ್ಟು ಸುಂದರ ಅನುಪ್ರಾಸದ ಬಳಕೆ ಬಹು ದುರ್ಲಭವೆಂದೇ ಹೇಳಬೇಕು. ಅವರ ಕಾವ್ಯರಸಧಾರೆಯಲ್ಲಿ ಇಂತಹ ಶಕ್ತಿಯುಕ್ತ ಶಬ್ದಗಳು,ಅನುಪ್ರಾಸಗಳು ಸಮ್ಮಿಳಿತಗೊಂಡು ಧುಮ್ಮಿಕ್ಕುತ್ತವೆ. ಅವರು ತಮ್ಮ ರಚನೆಗಳಲ್ಲಿ ಬಳಸಿರುವ ಪದಪುಂಜಗಳು ಓದುಗರ ಮನಮುಟುವಂತೆ ಆ ಭಗವಂತನನ್ನೂ ಮುಟ್ಟುತ್ತವೆ!.


ಕಾವ್ಯದ ಪರಿಭಾಷೆಯಲ್ಲಿ ಶಂಕರರು ಅದ್ವೈತ ದರ್ಶನವನ್ನು ,ಆತ್ಮ ಸ್ವರೂಪವನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸಿರುವ ಪರಿ ನಿಜಕ್ಕೂ ಅನನ್ಯ.


ರಜ್ಜು ಕ ಅಜ್ಞಾನಾತ್‌ ಭಾತಿ ರಜ್ಜುಃ ಯಥಾಹಿ

ಸ್ವಾತ್ಮ ಅಜ್ಞಾನಾತ್‌ ಆತ್ಮನೋ ಜೀವಭಾವಃ |

ಆಪ್ರೋಕ್ಸ್ಯಾ ಹಿ ಭ್ರಾಂತಿನಾಶೇ ಸರಜ್ಜಾಃ

ಜೀವೋ ನಾಹಂ ದೇಶಿಕೋಕ್ತ್ಯಾ ಶಿವೋಹಮ್‌...”


ಅಜ್ಞಾನ ವಶದಿಂದ ಹಗ್ಗವು ಹಾವಾಗಿ ತೋರುತ್ತದೆ. ಮತ್ತೆ ಅರಿವು ಮೂಡಿದಾಗ  ಅದು ಹಾವೆಂಬ ಭಾವ ದೂರಾಗಿ ಅದು ಹಗ್ಗವಾಗಿಯೇ ಗೋಚರವಾಗುತ್ತದೆ. ನಾನು ಜೀವನಲ್ಲ, ಶಿವನೇ ಆಗಿದ್ದೇನೆ ಎಂಬುದರ ಅರಿವಾಗಿ ಸತ್ಯಸ್ವರೂಪದ ಅದ್ವೈತ ದರ್ಶನವನ್ನು ಇಲ್ಲಿ ಆಚಾರ್ಯರು ಬಹು ಸೊಗಸಾಗಿ ಕಾವ್ಯಾತ್ಮಕವಾಗಿ ನಿರೂಪಿಸುತ್ತಾರೆ.


ಶಿವನಿಗೆ ಅರ್ಪಿಸುವ ತಮ್ಮ ಕಾವ್ಯಕನ್ನಿಕೆ ಹೇಗಿದ್ದಾಳೆ ಎಂಬುದನ್ನು ವರ್ಣಿಸುವ ಶಿವಾನಂದ ಲಹರಿಯ ಸಾಲುಗಳು ಅವರ ಕಾವ್ಯದ ಉತ್ಕೃಷ್ಟತೆಗೆ ಸಾಕ್ಷಿಯಾಗಿವೆ.


ಸರ್ವಾಲಂಕಾರಯುಕ್ತಾಂ  ಸಾಧುವೃತ್ತಾಂ ಸುವರ್ಣಾಂ ಸದ್ಭಿಃ ಸಂಸ್ತೂಯಮಾನಾಂ ಸರಸಗುಣಯುತಾಂ ಲಕ್ಷಿತಾಂ ಲಕ್ಷಣಾಢ್ಯಾಮ್‌ | ಉದ್ಯದ್ಭೂ ಷಾವಿಶೇಷಾಂ ಉಪಗತವಿನಯಾಂ ದ್ಯೋತಮಾನಾರ್ಥರೇಖಾಂ ಕಲ್ಯಾಣೀಂ ದೇವ ಗೌರೀಪ್ರಿಯ ಮಮ ಕೆವಿತಾಕನ್ಯಕಾಂ ತ್ವಂ ಗೃಹಾ

ಇದರ ಅರ್ಥ'ಹೇ, ಗೌರೀಶ, ನನ್ನ ಕಾವ್ಯ ಕನ್ನಿಕೆಯು ಉಪಮೆ ರೂಪಕಾದಿಗಳಿಂದ ಸರ್ವಾಲಂಕಾರಯುಕ್ತಳೂ, ಲಲಿತ ಪದಗಳಿಂದ ಕೋಮಲಚರಣವುಳ್ಳವಳು, ಸ್ರಗ್ಧರಾ ಮುಂತಾದ ವೃತ್ತಗಳೆಂಬ ಸದಾಚಾರದಿಂದ ಕೂಡಿದವಳೂ, ಸುಂದರವಾದ ಅಕ್ಷರಗಳೆಂಬ ಒಳ್ಳೆಯ ಬಣ್ಣದವಳಾಗಿದ್ದು ವಿದ್ವಾಂಸರಿಂದ ಮೆಚ್ಚುಗೆ ಗಳಿಸಿದವಳೂ, ವಿವಿಧ ರಸ ಮಾಧುರ್ಯಗಳಿಂದ ಸುಗುಣಿಯೂ, ಉತ್ತಮ ಕಾವ್ಯಲಕ್ಷಣಗಳನ್ನು ಹೊಂದಿ ಸುಲಕ್ಷಣ ಸಂಪನ್ನಳೂ, ಶಬ್ದಾರ್ಥ ಅಲಂಕಾರಗಳೆಂಬ ಸುಂದರ ಆಭರಣಯುಕ್ತಳೂ, ವಿನಯಶೀಲಳೂ, ಅಭಿಧಾ, ಲಕ್ಷಣಾ, ವ್ಯಂಗ್ಯಾರ್ಥಗಳೆಂಬ ಧನರೇಖೆಗಳುಳ್ಳವಳೂ, ಮಂಗಳಕರಳೂ ಆಗಿದ್ದು, ನೀನು ಕೃಪೆಮಾಡಿ ಈ ಕನ್ಯೆಯನ್ನು ಸ್ವೀಕರಿಸು' ಎಂದಿರುವಲ್ಲಿ ಶಂಕರರ ಕಾವ್ಯದ ಶ್ರೇಷ್ಠತೆಯ ಗರಿಮೆಯ ಅರಿವು ನಮಗಾಗುತ್ತದೆ.


ಆಚಾರ್ಯರು ತಮ್ಮ ಸ್ತೋತ್ರಗಳ ಸೌಂದರ್ಯ ಹೆಚ್ಚಿಸುವಲ್ಲಿ ಆದಿ ಪ್ರಾಸ ಅಂತ್ಯ ಪ್ರಾಸಗಳನ್ನು ಬಹು ಸೊಗಸಾಗಿ ಹೆಣೆದಿರುವುದನ್ನು ಅವರ ಅನೇಕ ರಚನೆಗಳಲ್ಲಿ ಕಾಣಬಹುದು.ಉದಾಹರಿಸುವುದಾದರೆ,ಬಹು ಪ್ರಸಿದ್ಧ ಕನಕಧಾರ ಸ್ತೋತ್ರವು ಮಂತ್ರಶಕ್ತಿಯಿಂದ ಕೂಡಿ ಪ್ರಭಾವಶಾಲಿಯಾಗಿರುವಂತೆ ಅದರ ಅನೇಕ ಪದ್ಯಗಳು ಆದಿ ಪ್ರಾಸ,ಅಂತ್ಯಪ್ರಾಸಗಳಿಂದ ಕೂಡಿ ಮನೋಹರವಾಗಿವೆ.


ಶ್ರುತ್ಯೈ ನಮೋಽಸ್ತು ಶುಭಕರ್ಮಫಲಪ್ರಸೂತ್ಯೈ

ರತ್ಯೈ ನಮೋಽಸ್ತು ರಮಣೀಯಗುಣಾರ್ಣವಾಯೈ ।

ಶಕ್ತ್ಯೈ ನಮೋಽಸ್ತು ಶತಪತ್ರನಿಕೇತನಾಯೈ

ಪುಷ್ಟ್ಯೈ ನಮೋಽಸ್ತು ಪುರುಷೋತ್ತಮವಲ್ಲಭಾಯೈ ॥


ನಮೋಽಸ್ತು ನಾಳೀಕನಿಭಾನನಾಯೈ

ನಮೋಽಸ್ತು ದುಗ್ಧೋದಧಿಜನ್ಮಭೂಮ್ಯೈ ।

ನಮೋಽಸ್ತು ಸೋಮಾಮೃತಸೋದರಾಯೈ

ನಮೋಽಸ್ತು ನಾರಾಯಣವಲ್ಲಭಾಯೈ ॥


ಈ ರೀತಿಯ ಆದಿ ಪ್ರಾಸ ಅಂತ್ಯಪ್ರಾಸಗಳಿಂದೊಡಗೂಡಿದ ಹೇರಳ ರಚನೆಗಳು ಆಚಾರ್ಯರ ಅಮೋಘ ಕಾವ್ಯ ಪ್ರತಿಭೆಗೆ ನಿದರ್ಶನವಾಗಿವೆ.


ಶಂಕರರ ಅನೇಕ ಪದ್ಯಗಳು ಅತ್ಯಂತ ಸರಳವಾಗಿದ್ದು ಪಂಡಿತರಿಂದ ಪಾಮರರವರೆಗೂ ಅರ್ಥವಾಗುವಂತಹ ಪ್ರಸಾದಗುಣ ಭೂಯಿಷ್ಠವಾದದ್ದು. ಉದಾಹರಣೆಗೆ ಅವರ ಶಿವ ಪಂಚಾಕ್ಷರ ಸ್ತೋತ್ರದಲ್ಲಿರುವ,


ನಾಗೇಂದ್ರಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯ ಮಹೇಶ್ವರಾಯ

ನಿತ್ಯಾಯ ಶುದ್ಧಾಯ ದಿಗಂಬರಾಯ

ತಸ್ಮೈ 'ನ'ಕಾರಾಯ ನಮಃ ಶಿವಾಯ 

ಹಾಗೆಯೇ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿರುವ

ಓಂ ನಮಃ ಪ್ರಣವಾರ್ಥಾಯ ಶುದ್ಧ ಜ್ಞಾನೈಕಮೂರ್ತಯೇ

ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ


ಅವರ ಈ ರೀತಿಯ ಅನೇಕ ಪದ್ಯಗಳು ಬಹು ಸರಳ,ಸುಲಭ ಹಾಗೂ ಸುಂದರವಾಗಿದ್ದು ಅವುಗಳಿಗೆ ಯಾವುದೇ ಟೀಕೆ, ಭಾಷ್ಯ, ತಾತ್ಪರ್ಯಗಳ ಅವಶ್ಯಕತೆಯೇ ಇಲ್ಲವೆಂಬುದು ಮತ್ತೊಂದು ವಿಶೇಷವೇ ಸರಿ.


ಆದಿಗುರು ಶಂಕರಾಚಾರ್ಯರು ತಮ್ಮ ಅದ್ವೈತ ಸಿದ್ಧಾಂತದ ಮೂಲಕ ಭಾರತೀಯ ತತ್ತ್ವಶಾಸ್ತ್ರಕ್ಕೆ ಅಮೋಘ ಕಾಣಿಕೆ ನೀಡುವುದರೊಂದಿಗೆ ತಾವು ರಚಿಸಿದ ಕೃತಿಗಳಲ್ಲಿ ಕಾವ್ಯಪ್ರತಿಭೆಯನ್ನು ಮೆರೆದು ಸಾಹಿತ್ಯಿಕ ಲೋಕವನ್ನು ಶ್ರೀಮಂತಗೊಳಿಸಿರುವರೆಂಬುದರಲ್ಲಿ ಎರಡು ಮಾತಿಲ್ಲ.ಅವರ ಅನೇಕ ಸ್ತೋತ್ರಗಳು ಅನೇಕ ಪ್ರಸಿದ್ಧ ಸಂಗೀತ ವಿದ್ವಾಂಸರ ಗಾಯನದಲ್ಲಿ ಮನೆಮನೆಗೂ ತಲುಪಿ ನಿನಾದಿಸುತ್ತಿರುವುದು ಅವರ ಕಾವ್ಯಪ್ರತಿಭೆಗೆ ನಿದರ್ಶನವಾಗಿದೆ.

ವಸಂತಕಾಲದಲ್ಲಿ ಮಾವಿನ ಚಿಗುರನ್ನು ಸವಿದು ಕೋಗಿಲೆ ಆನಂದದಿಂದ ಹಾಡುವಂತೆ, ಸಹೃದಯರು, ರಸಿಕರು ಶಂಕರರ ರಚನೆಗಳನ್ನು ಆಸ್ವಾದಿಸಿ ಸಂತುಷ್ಟರಾಗುತ್ತಾರೆಂಬುದು ಸತ್ಯ. ಈ ಬಗೆಯ ಕಾವ್ಯರಚನೆಯಲ್ಲಿ ಶಂಕರರಿಗೆ ಶಂಕರರೇ ಸಾಟಿ.ಅವರ ಸ್ತೋತ್ರಕಾವ್ಯಗಳು ಭಕ್ತಿ, ಶಾಂತ, ವಾತ್ಸಲ್ಯ ರಸಗಳಿಂದ ಕೂಡಿ ಅವರು ಅದ್ವೈತಮತ ಸ್ಥಾಪನಾಚಾರ್ಯರಾಗಿ, ಸಮಾಜ ಸುಧಾರಕರಾಗಿ, ಯತಿರಾಜರಾಗಿ ಮಾತ್ರವಲ್ಲದೆ ಅಪ್ರತಿಮ ಪ್ರತಿಭಾ ಸಂಪನ್ನ ಕವಿಯಾಗಿಯೂ ನಮ್ಮ ಮುಂದೆ ನಿಲ್ಲುತ್ತಾರೆ. ಜನಸಾಮಾನ್ಯರಿಗೆ ಕಬ್ಬಿಣದ ಕಡಲೆ ಎನಿಸಿದ ವೇದೋಪನಿಷತ್ತುಗಳನ್ನು ಆಬಾಲವೃದ್ಧರೂ ಸವಿಯುವಂತೆ ಕೃತಿಗಳನ್ನು ರಚಿಸಿದ ಕವಿವರೇಣ್ಯರಾಗಿಯೂ ನಮ್ಮ ಮುಂದೆ ವಿರಾಜಿಸುತ್ತಾರೆ.


ಜಯ ಜಯ ಶಂಕರ 

ಹರ ಹರ ಶಂಕರ 



- ಎಸ್.ಎಲ್. ವರಲಕ್ಷ್ಮೀ ಮಂಜುನಾಥ್

ನಂಜನಗೂಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top