ಬಸವ ಜಯಂತಿಯಲಿ ಶತಮಾನದಾಚರಣೆ
ಒಸೆದು ಪಡೆವೆವು ನಾವು ನಿಜದಿ ಗುರುಕರುಣೆ ||
ಬಸವಣ್ಣನೇ ಯುಗದ ಉತ್ಸಾಹಕ್ಕೆ ಮೂರ್ತರೂಪ
ಮಾತಿನಲಿ ಕಾರ್ಯದಲಿ ಶುದ್ಧಾಂತಃಕರಣದಲಿ|
ಬಿದ್ದವರ ಎತ್ತುವನು ಹೊಸಯುಗಕೆ ಒಯ್ಯುವನು
ಮಾಣಿಕ್ಯದ ದೀಪ್ತಿಯಲಿ ಸ್ಫಟಿಕದ ಶಲಾಕೆಯಲಿ ||
ಕಲಿಯುಗದ ಕಲ್ಪತರು ಸುರಲೋಕ ಪಥದರ್ಶಿ
ಯುಗಪುರುಷ ಜಗಹರುಷ ಕರುನಾಡ ವರಪುತ್ರ |
ಅರಿತವರ ಅರಿಯವದವರ ಮನದಲ್ಲಿ ನೆಲಸುತ್ತ
ದೀನದುರ್ಬಲರನ್ನು ಹಿಡಿದೆತ್ತಿ ಹರಸುವ ಮಿತ್ರ ||
ಒಣತತ್ತ್ವ ಒಣಜಂಭ ಪೊಳ್ಳು ಆಶ್ವಾಸಗಳ
ಕೊಳ್ಳುಕೊಡೆಗಳ ಹರಕೆ ಅಂತರಾಳದ ಮರ್ಮ |
ಕುರುಡನಿಗು ಹೆಳವನಿಗು ಜೀವನದಿ ಉತ್ಸಾಹ
ಪುಟಿದೆದ್ದು ಹರಿಸುವುದೆ ನಿಜವಾದ ನರಧರ್ಮ ||
ಸತ್ಯ ಅಹಿಂಸೆ ಧರ್ಮ ನ್ಯಾಯ ಪರೋಪಕಾರ
ಸನ್ನಡತೆಗಳಲಡಗಿಹುದು ಬಸವೇಶ್ವರ ತತ್ತ್ವ |
ಆಚಾರದೊಳು ನಾಕ ಅನಾಚಾರದೊಳು ನರಕ
ಪ್ರೀತಿ ವಿಶ್ವಾಸದೊಳು ಶರಣಸಖ ಮಿತ್ರತ್ವ ||
ಪಾಪ ಪುಣ್ಯಗಳೆರಡು ನಮ್ಮ ಕೈಯೊಳಗಿರಲು
ಸ್ವಾರ್ಥ ಪರಾರ್ಥಗಳು ತೊರೆದು ಹೋಗುವವೆ |
ಪರಚಿಂತೆ ನಮಗೇಕೆ ನಮ್ಮ ಚಿಂತೆಯು ಸಾಲದೆ
ಹಾಸಿ ಹೊದೆಯಲಿರುವಾಗ ಶಿವಾತ್ಮನಲಿ ಮತ್ಸರವೆ ||
ಮಾನವನು ದಾನವನಾಗೆ ಶರಣಾರ್ಥಿ ನೆಲೆಯೇನು
ದಾನವನು ಮಾನವನಾಗೆ ಪುರುಷಾರ್ಥ ಗೆಲುವೇನು |
ಶರಣ ಗುರು ಲಿಂಗ ಜಂಗಮರ ಕಾಯಕದ ಬೆಲೆಯೇನು
ಕರುಣಿ ಕೂಡಲ ಸಂಗಮನ ನಿಜವನರಿಯುವೆಯೇನು ||
ದೇಹವೇ ದೇಗುಲವಾಗಿ ಜೀವವೇ ಪರಮಾತ್ಮನಾಗೆ
ಡಂಭಿನಾ ಭಕುತಿಯಲಿ ನಿಲುಕದವ ಶಿವಶರಣ |
ಬೇಕಿಂದು ನಮಗೆಲ್ಲ ಯುಗಪೂರ್ತಿ ಉತ್ಸಾಹ
ಕರುಣಿಸದೆ ನೆಲೆಯಿಲ್ಲ ದೊರೆವನಕ ಗುರುಚರಣ ||
(ಬಸವ ಜಯಂತಿಯ ಹಾರ್ದಿಕ ಶುಭಾಶಯಗಳೊಂದಿಗೆ)
- ವಿ.ಬಿ.ಕುಳಮರ್ವ, ಕುಂಬ್ಳೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ