ಮಂಗಳೂರು: ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಬಾಲಕನ ಜನಿವಾರ ತೆಗೆಸಿದ ಪ್ರಕರಣವನ್ನು ಮಂಗಳೂರಿನ ವಿಪ್ರ ವೇದಿಕೆ ಮತ್ತು ಸಮಾನ ಮನಸ್ಕ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಈ ಕುರಿತು ಪ್ರಕಟಣೆ ನೀಡಿರುವ ವಿಪ್ರ ವೇದಿಕೆ ಕೋಡಿಕಲ್ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ಅವರು, ಬ್ರಾಹ್ಮಣ್ಯದ ಪ್ರಬಲ- ಪ್ರಮುಖ ಸಂಕೇತವಾಗಿರುವ ಜನಿವಾರ ದಾರವನ್ನು ತೆಗೆಸಿದ್ದು ಖಂಡನೀಯ. ಮತ್ತೆ ಆ ಬಾಲಕ ಮಾರನೇ ದಿನ ಹೊಸ ಜನಿವಾರವನ್ನು ಧರಿಸಲೇಬೇಕು- ಇದು ನಮ್ಮಲ್ಲಿನ ನಿಯಮ. ಸಮಾಜದಲ್ಲಿ ರೀತಿ- ರಿವಾಜುಗಳನ್ನು ಅರಿತು ನಿಯಮ ಮಾಡಬೇಕೇ ವಿನಃ ಪಟ್ಟಭದ್ರರನ್ನು ಓಲೈಸಲಲ್ಲ ಎಂದು ಘಟನೆಯನ್ನು ಖಂಡಿಸಿದ್ದಾರೆ.
ಈ ಕಟ್ಟುಪಾಡುಗಳನ್ನು ನೀವು ಎಲ್ಲಾ ವರ್ಗಗಳಲ್ಲೂ ಪಾಲಿಸುತ್ತೀರಾ? ಭಂಡರು ನೀವು. ಅಧಿಕಾರದಲ್ಲಿದ್ದಾಗ ದಾಷ್ಟ್ಯತೋರಿದರೂ ನೀವೂ ಈ ರಾಷ್ಟ್ರದ ಪ್ರಜೆ ಎಂಬದನ್ನು ಮರೆಯಬೇಡಿ. ಈ ಕೃತ್ಯ ಎಸಗಿದವನು ಯಾರೇ ಆಗಲಿ, ಆತನನ್ನು ನ್ಯಾಯಾಲಯ ವಿಚಾರಿಸಿಕೊಳ್ಳಲೇ ಬೇಕು. ಇಲ್ಲವಾದರೆ ನಾವೇ ಮೈಕೊಡವಿ ನಿಲ್ಲುತ್ತೇವೆ, ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.
ಯಾವನೇ ವ್ಯಕ್ತಿ ಜನಿವಾರದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂಬ ಉದಾಹರಣೆಯೇ ಇಲ್ಲ. ಅಲ್ಪ ಮತಿಯ ಅಧಿಕಾರಿಯೊಬ್ಬ ಹೇಳಿದಂತೆ ಪರೀಕ್ಷಾ ನಿಯಮಗಳು ಅಲ್ಲ. ಇದನ್ನು ಬ್ರಾಹ್ಮಣ ಸಮಾಜ ವಿರೋಧಿಸುತ್ತದೆ. ಉಳಿದ ವರ್ಗಕ್ಕೆ ಹೇಗೆ ಅವರಂದುಕೊಂಡಂತೆ ಬದುಕಲು ಹಕ್ಕಿದೆಯೋ ಬ್ರಾಹ್ಮಣ ಸಮಾಜಕ್ಕೂ ಇದೆ. ಈಗ ನಡೆದಿರುವ ಘಟನೆಯನ್ನು ಖಂಡಿಸುವುದೂ ಕೂಡಾ ನಮ್ಮ ಹಕ್ಕು ಹಾಗೂ ಕರ್ತವ್ಯ (rights & duties). ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟವರಲ್ಲಿ ನಾವು ಆಗ್ರಹಿಸುತ್ತೇವೆ ಎಂದು ರವಿ ಅಲೆವೂರಾಯ ಆಗ್ರಹಿಸಿದ್ದಾರೆ.
ಇತ್ತೀಚೆಗೆ ದೇಶದ ಸಂವಿಧಾನದ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯುತ್ತಾ ಇದೆ. ಈ ದೇಶದ ಮೇಲೆ ಕಮ್ಮಿ ನಿಷ್ಠೆಯುಳ್ಳವರೂ ಕೂಡಾ ಸಂವಿಧಾನದ ಬಗ್ಗೆ ಬೊಂಬಡ ಬಡಿಯುತ್ತಾರೆ. ನಾಗರಿಕನೋರ್ವ ತಾನು ನಂಬಿದ ಸಿದ್ಧಾಂತವನ್ನು ಅನುಷ್ಠಾನಗೊಳಿಸುತ್ತಾ ಬಾಳು ಬೆಳಗಲು ಸಂಪೂರ್ಣ ಅವಕಾಶ ಮಾಡಿಕೊಟ್ಟಿದೆ. ನಮ್ಮ ಸಂವಿಧಾನ ಅಲ್ಲದೇ ಇದ್ದರೂ, ಈ ಸಮಾಜದಲ್ಲಿ ಖಂಡಿತವಾಗಿಯೂ ಗುರುತಿಸಿಕೊಳ್ಳಬಲ್ಲ ಅಗ್ರಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯ ಈ ದೇಶದ ಅಸ್ಮಿತೆಯನ್ನು ಗೌರವಿಸುತ್ತಿದೆ. ತನ್ನದಾದ ಬ್ರಹ್ಮ ವರ್ಚಸ್ಸಿನಿಂದ ತಾನು ಬಯಸಿದ್ದನ್ನು ಪಡೆಯುತ್ತಾ, ಸಮಾಜವನ್ನು ತನ್ನೊಂದಿಗೇ ಒಯ್ಯಬಲ್ಲ' ಧೀಯೋ ಯೋನ ಪ್ರಚೋದಯಾತ್' ಶಕ್ತಿ ಬ್ರಾಹ್ಮಣ್ಯಕ್ಕಿದೆ, ಆದರೆ ಈಗ ಈ ಸಮಾಜದಲ್ಲಿ ಕೆಲವೊಂದು' ಅಲ್ಪವಿದ್ಯಾ ಮಹಾಗರ್ವಿ' ಎಂಬ ಹಾಗೆ ವರ್ತಿಸುತ್ತಾರೆ ಎಂಬುದಕ್ಕೆ ರಾಜ್ಯದಲ್ಲಿ ನಡೆದ ಜನಿವಾರ ಪ್ರಕರಣ ಉದಾಹರಣೆ. ನಮ್ಮ ಮಕ್ಕಳು/ ಹೆಮ್ಮಕ್ಕಳ ಮೈ ಮೇಲಿನ ಯಾವುದೇ ಸಾಂಪ್ರದಾಯಿಕ ಅಲಂಕಾರಗಳನ್ನು ಖಡಾಖಂಡಿತವಾಗಿ ನಿಷ್ಠುರತೆ ಯಿಂದ ಕ್ರೂರಿಗಳಂತೆ ತೆಗೆಸುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವರ್ಕಾಡಿ ರವಿ ಅಲೆವೂರಾಯ (ಅಧ್ಯಕ್ಷ ವಿಪ್ರ ವೇದಿಕೆ (ರಿ) ಕೋಡಿಕಲ್), ವೇI ಮೂ| ವಿಶ್ವ ಕುಮಾರ್ ಜೋಯಿಸ್, ಜಯರಾಮ ಪದಕಣ್ಣಾಯ, ಗಿರೀಶ್ ರಾವ್, ಅನೂಪ್ ರಾವ್ ಬಾಗ್ಲೋಡಿ, ಶ್ರೀಧರ ಹೊಳ್ಳ, ವಿದ್ಯಾ ಗಣೇಶ್ ರಾವ್, ದುರ್ಗಾದಾಸ್ ಕಟೀಲು, ಪ್ರಭಾವತಿ ಮಡಿ ಅವರು ಜಂಟಿಯಾಗಿ ಈ ಪ್ರಕಟಣೆ ನೀಡಿದ್ದಾರೆ,
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ