ಹಿರಿಯ ನಾಟಕ ನಿರ್ದೇಶಕ, ಒಂದು ಕಾಲದ ಪ್ರಸಿದ್ದ ಸ್ತ್ರೀ ವೇಷಧಾರಿ ರಾಘವ ಅತ್ತಾವರ ಇತ್ತೀಚೆಗೆ ವಿಧಿವಶರಾದರು. ಅವರು ವೃತ್ತಿಯಲ್ಲಿ ನುರಿತ ಮೋಟಾರ್ ಎಲೆಕ್ಟ್ರಿಶನ್, ಪ್ರವೃತ್ತಿ ರಂಗ ಭೂಮಿ. ಸುಮಾರು ನಾಲ್ಕು ದಶಕಗಳ ಕಾಲ ನಾಟಕ ಕ್ಷೇತ್ರದಲ್ಲಿ ಮಂಗಳೂರು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೂರಾರು ನಾಟಕಗಳನ್ನು ನಿರ್ದೇಶಿಸಿದವರು.
ಧನ ಅಪೇಕ್ಷೆ ಇಲ್ಲದೆ, ತನ್ನ ಸ್ಕೂಟರ್ ನಲ್ಲಿ ಪಯಣಿಸಿ, ತಿಂಗಳು ಗಟ್ಟಲೆ ರಂಗ ಅಭ್ಯಾಸ ಮಾಡಿಸಿ ನಾಟಕದ ಯಶಸ್ವಿ ಪ್ರದರ್ಶನ ನೋಡಿ ಸಂಭ್ರಮ ಪಡುತ್ತಿದ್ದ ಕಲಾರಾಧಕ. ಹಲವಾರು ಮಹಿಳಾ ಮಂಡಳಿಗಳು, ಯುವಕ ಮಂಡಳಿಗಳ ಗದ್ದೆಯ ಪರದೆ ನಾಟಕಗಳಿಗೆ ಜೀವ ತುಂಬಿ ಹುರಿದುಂಬಿಸಿ ನೂರಾರು ಕಲಾವಿದರನ್ನು ಸೃಷ್ಟಿಸಿ ಬೆಳೆಸಿದ ರಂಗ ಸಾಧಕ.
ತಾರುಣ್ಯದಲ್ಲಿ ಸ್ತ್ರೀ ವೇಷಧಾರಿಯಾಗಿ ಮರ್ಲೆದಿ, ಮಾಜಂದಿ ಬರವು, ಗಂಗಾರಾಮ್, ಬಯ್ಯ ಮಲ್ಲಿಗೆ, ಸರಸ್ವತಿ, ಮುತ್ತು ಮಾನಿಕ ಮೊದಲಾದ ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡುತ್ತಿದ್ದ ಅಗ್ರ ಪಂಕ್ತಿಯ ಕಲಾವಿದ. ಶೋಭಾ ಯಾತ್ರೆಗಳ, ಮಂಗಳಾದೇವಿ ರಥೋತ್ಸವದ ಟ್ಯಾಬ್ಲೋಗಳಲ್ಲಿ ಹಲವು ವರ್ಷ ಶ್ರದ್ದೆ, ಭಕ್ತಿಯಿಂದ ಪಾತ್ರ ನಿರ್ವಹಿಸಿದ್ದ ನಿಷ್ಠಾವಂತ ಕಲೋಪಾಸಕ.
ರಾಘವ ಅತ್ತಾವರ ಅವರ ನಿರ್ದೇಶನದಲ್ಲಿ ನಾನು ಹಲವಾರು ಸಾಮಾಜಿಕ, ಚಾರಿತ್ರಿಕ, ಜಾನಪದ, ಪೌರಾಣಿಕ ನಾಟಕಗಳಲ್ಲಿ ಅಭಿನಯ ಮಾಡಿದ್ದೇನೆ.
ನಮ್ಮ ಕದ್ರಿ ಕಂಬಳ ಮಿತ್ರ ವೃಂದ, ಸೌರಭ ಕಲಾವಿದರು ಕದ್ರಿ, ಬಲ್ಮಠ ಟ್ರೈನಿಂಗ್ ಶಾಲೆಯ ಹಲವಾರು ನಾಟಕಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಅವರು ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಚಿತ್ರ ನಿರ್ದೇಶಕರಾದ ಸಾಯಿ ಕೃಷ್ಣ, ಆರ್. ಎಸ್. ಸುರೇಶ, ಚಿತ್ರ ನಟರಾದ ಸುಂದರ ಹೆಗ್ಡೆ, ಸುಧೀರ್ ಬಲ್ಮಠ, ನಿರೂಪಕಿ ಸೌಜನ್ಯ ಹೆಗ್ಡೆ ಮೊದಲಾದ ಪ್ರತಿಭೆಗಳ ಆರಂಭದ ಗುರು ಅತ್ತಾವರ ಮಾಸ್ಟ್ರು.
ನಾನು ರಚಿಸಿದ ಮೊದಲ ಹತ್ತು ನಾಟಕಗಳನ್ನು ಅತ್ತಾವರ ಅವರು ನಿರ್ದೇಶನ ಮಾಡಿದ್ದಾರೆ. ಮೂರು ದಶಕಗಳ ಹಿಂದೆ ರಚಿಸಿ, ಇಂದೂ ಪ್ರದರ್ಶನ ಕಾಣುತ್ತಿರುವ "ಕಾರ್ನಿಕದ ಶಿವ ಮಂತ್ರ" ನಾಟಕದ ಮೊದಲ ಗುರು ಇವರೇ.
ಸಾಮಾಜಿಕ ನಾಟಕಗಳಲ್ಲಿ ಅಭಿನಯ ಮಾಡುವಾಗ ಇಣುಕುತ್ತಿದ್ದ ಯಕ್ಷಗಾನದ ಛಾಯೆಯನ್ನು ಬೈದು, ತಿದ್ದಿ ತೀಡಿ, ನೇರ್ಪುಗೊಳಿಸಿದ್ದ ದಿನಗಳನ್ನು ಮರೆಯಲಾಗುವುದಿಲ್ಲ.
ಅವರ ನಿರ್ದೇಶನದ ನಾಟಕದ ಅಂಕದ ಪರದೆ ತೆರೆಯುವ ಹಾಗೂ ಹಾಕುವ ಕಾಯಕವನ್ನು ಸ್ವತಃ ಅವರೇ ಮಾಡುತ್ತಿದ್ದರು. ಚೌಕಿ ಪೂಜೆ ಮಾಡಿ, ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಮಾಡಿ ಅಂಕದ ಪರದೆ ಸರಿಸಿ ಬಿಡುತ್ತಿದ್ದ ರಾಘವ ಅತ್ತಾವರ ನನಗೆ ಇಂದೂ ನನ್ನ ನಾಟಕ ಪ್ರದರ್ಶನ ಕಾಲದಲ್ಲಿ ನೆನಪಾಗುತ್ತಾರೆ.
ಸ್ವಾಭಿಮಾನಿ, ಮಿತ ಭಾಷಿ, ಛಲವಾದಿ, ಅಭ್ಯಾಸ ಕಾಲದಲ್ಲಿ ಶೀಘ್ರ ಕೋಪಿ. ರಂಗ ವೇದಿಕೆಯನ್ನು ಆರಾಧನಾ ಮಂದಿರದಂತೆ ಕಾಣುತ್ತಿದ್ದವರು.
ನಾಟಕದ ಅಂಕದ ಪರದೆಯನ್ನು ನಾಟಕ ಮುಗಿದಾಗ ಅವರೇ ಎಳೆಯುತ್ತಿದ್ದದ್ದು ಸ್ವಾಭಿಮಾನಿ ನಿರ್ದೇಶಕನಾಗಿ. ಅವರ ನಿಧನ ವಾರ್ತೆಯನ್ನು ಅವರ ಮಮತೆಯ ಪುತ್ರಿ ತಿಳಿಸಿದಾಗ ನನಗೆ ಅನಿಸಿದ್ದು- "ಬದುಕಿನ ಅಂಕದ ಪರದೆಯನ್ನೂ ಅವರೇ ಎಳೆದು ಬಿಟ್ಟರಲ್ಲಾ... ಜೀವನ ನಾಟಕ ಸಹಜ ಮುಕ್ತಾಯ ಕಾಣುವ ಮುನ್ನ.!!"
- ಕದ್ರಿ ನವನೀತ ಶೆಟ್ಟಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ