ಪಣಜಿ: ಹೊರನಾಡ ಗೋವೆಯಲ್ಲಿ ಯಕ್ಷಗಾನ ಕಲಾಭಿಮಾನಿಗಳು ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವುದು ನಮಗೆಲ್ಲ ಸಂತಸ ತಂದಿದೆ. ಕರ್ನಾಟಕ ಸರ್ಕಾರವು ನಮಗೆ ಅನುದಾನ ನೀಡುತ್ತಿದೆ. ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಯಬೇಕಾದರೆ ಯಕ್ಷಗಾನದ ಮಹತ್ವದ ಪಾತ್ರವಿದೆ. ಮಕ್ಕಳು ಯಕ್ಷಗಾನವನ್ನು ಕಲಿತರೆ ಗುರುಹಿರಿಯರಿಗೆ ಗೌರವ ಕೊಡುವುದು. ಭಜನೆ ಕಲಿಯುವುದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬರುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿ ಬೆಂಗಳೂರು ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡಮಿ ಬೆಂಗಳೂರು, ಮತ್ತು ಗೋವಾ ಕನ್ನಡ ಸಮಾಜ ಪಣಜಿ ಇವರ ಸಂಯುಕ್ತ ಆಶ್ರಯದಲ್ಲಿ ಪಣಜಿಯ ಮೆನೆಜಸ್ ಬ್ರಗಾಂಜ ಸಭಾಗೃಹದಲ್ಲಿ ಮಾರ್ಚ್ 9 ರಂದು ಭಾನುವಾರ ಆಯೋಜಿಸಿದ್ದ "ಯಕ್ಷ ಶರಧಿ" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮೊದಲು ಎಲ್ಲಡೆ ಒಟ್ಟು ಕುಟುಂಬವಿದ್ದಾಗ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತಿತ್ತು. ಆದರೆ ಇಂದು ಮಕ್ಕಳಲ್ಲಿ ಸಂಸ್ಕಾರ ಇಲ್ಲದಂತಾಗಿ ವಯಸ್ಸಾದಾಗ ತಂದೆ ತಾಯಿಗಳು ವೃದ್ಧಾಶೃಮ ಸೇರುವಂತಾಗುತ್ತಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಯಕ್ಷಗಾನ ಕಲೆಯು ಸಂಸ್ಕಾರ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗೋವಾ ಕನ್ನಡ ಸಮಾಜವು ಈ ಕಾರ್ಯಕ್ರಮ ಆಯೋಜನೆಯನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದೆ. ಕನ್ನಡ ಸಮಾಜದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಾ.ತಲ್ಲೂರು ಶಿವರಾಮ ಶೆಟ್ಟಿ ನುಡಿದರು.
ಸಮಾರಂಭದ ಉಧ್ಘಾಟನೆ ನೆರವೇರಿಸಿದ ಗೋವಾ ಬಂಟ್ಸ ಸಂಘದ ಕಾರ್ಯದರ್ಶಿ ಸುನೀಲ್ ಶೆಟ್ಟಿ ಮಾತನಾಡಿ- ಯಕ್ಷಗಾನವು ನಮ್ಮ ಪೌರಾಣಿಕ, ಸಾಮಾಜಿಕ, ಕಥಾನಕಗಳನ್ನು ವೇಷಭೂಷಣ, ಸಂಗೀತ ನೃತ್ಯದ ಮೂಲಕ ಪ್ರದರ್ಶಿಸುವ ಸುಂದರ ಕಲೆ. ಜಗತ್ತಿನ ಯಾವುದೇ ಕಲೆಯಲ್ಲಿಯೂ ಇಷ್ಟೊಂದು ಪ್ರಕಾರಗಳಿಲ್ಲ. ಇಂದು ನಾವೆಲ್ಲರೂ ಒಂದಾಗಿ ಈ ಗಂಡು ಕಲೆ ಯಕ್ಷಗಾನವನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪತ್ರಕರ್ತ ಹಾಗೂ ಭಾಗವತರಾದ ಎ.ಜಿ.ಶಿವಾನಂದ ಭಟ್ ಮಾತನಾಡಿ-ಇಂತಹ ಸುಂದರ ಕಾರ್ಯಕ್ರಮ ವಾಗಬೇಕಾದರೆ, ಉತ್ತಮ ಸಂಘಟನಾತ್ಮಕ ಕಾರ್ಯ ಅಗತ್ಯ. ಇಂದಿನ ಈ ಸುಂದರ ಕಾರ್ಯಕ್ರಮ ಇದಕ್ಕೆ ಉತ್ತಮ ಉದಾಹರಣೆ. ಇಷ್ಟು ದೊಡ್ಡ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಇದರ ಹಿಂದೆ ಗೋವಾ ಕನ್ನಡ ಸಮಾಜದ ಎಲ್ಲ ಪದಾಧಿಕಾರಿಗಳ ಶೃಮವಿದೆ ಎಂದರು.
ಗೌರವ ಅತಿಥಿಗಳಾಗಿ ವೇದಿಕೆಯ ಮೇಲೆ ಉಪಸ್ಥಿತರಿದ್ದ- ಗೋವಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ|| ಗಣೇಶ ಸೋಮಯಾಜಿ ಮಾತನಾಡಿ- ಸುಮಾರು 37 ವರ್ಷಗಳಿಂದ ಗೋವಾದಲ್ಲಿ ಪ್ರಾಧ್ಯಾಪkನಾಗಿ ಸೇವೆ ಸಲ್ಲಿಸುತ್ತಾ ಬದಿದ್ದೇನೆ. ಆದರೆ ಗೋವಾದಲ್ಲಿ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿರುವುದು ಇದೇ ಮೊದಲು. ಇಂತಹ ಸುಂದರ ಕಾರ್ಯಕ್ರಮದ ಆಯೋಜಕರಿಗೆ ಮೊಟ್ಟ ಮೊದಲneಯದಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡಮಿಯ ರಿಜಿಸ್ಟ್ರಾರ್ ನಮ್ರತ ಎಸ್ ಮಾತನಾಡಿ- ಕರ್ನಾಟಕ ಯಕ್ಷಗಾನ ಅಕಾಡಮಿಯ ವತಿಯಿಂದ ನಾವು ಈ ಹಿಂದಿನಿಂದಲೂ ವಿವಿದೆಡೆ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದ್ದೇವೆ. ಇಂದು ನಾವು ಹೊರ ರಾಜ್ಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಗೋವಾಕ್ಕೆ ಹಲವು ದೇಶಗಳ ಹಾಗೂ ವಿವಿಧ ರಾಜ್ಯಗಳ ಪ್ರವಾಸಿಗರು ಬಂದು ಹೋಗುತ್ತಾರೆ. ಇಂತಹ ಪ್ರವಾಸಿ ರಾಜ್ಯದಲ್ಲಿ ಗೋವಾ ಕನ್ನಡ ಸಮಾಜವು ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಇವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಮಾತನಾಡಿ- ಗೋವಾ ಕನ್ನಡ ಸಮಾಜವು ಹಿಂದಿನಿಂದಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ. ಕರ್ನಾಟಕ ಸರ್ಕಾರದ ವಿವಿಧ ಪ್ರಾಧಿಕಾರಗಳು ನಮ್ಮೊಂದಿಗೆ ಕೈಜೋಡಿಸಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಗೋವಾ ಕನ್ನಡ ಸಮಾಜವು ಗೋವಾದಲ್ಲಿ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಲು ವಿವಿಧ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ ಎಂದರು.
ಬೆಳಿಗ್ಗೆ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ,ಹೊನ್ನವಳ್ಳಿ ತಂಡದಿಂದ "ಶರಸೇತು ಬಂಧನ" ತಾಳಮದ್ದಲೆ, ಹಾಗೂ ಸಂಜೆ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ ಹಳುವಳ್ಳಿ ಕಳಸ ತಂಡದ ಕಲಾವಿದರಿಂದ "ಸುಧನ್ವಾರ್ಜುನ" ಯಕ್ಷಗಾನ ಪ್ರದರ್ಶನ ನಡೆಯಿತು. ಮಧ್ಯಾಹ್ನ ಪುರೋಹಿತ ಮತ್ತು ಅರ್ಥಧಾರಿಗಳಾದ ಅಜಿತ ಕಾರಂತ ಟಿ.ವಿ ರವರ ನೇತೃತ್ವದಲ್ಲಿ ಯಕ್ಷಗಾನದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು. ಉಮಾ ರಾವ್ ಸಂಗಡಿಗರಿಂದ ಯಕ್ಷ ನೃತ್ಯ ಕಾರ್ಯಕ್ರಮ ಜರುಗಿತು. ದಿನವಿಡೀ ನಡೆದ ಯಕ್ಷ ಶರಧಿ ಕಾರ್ಯಕ್ರಮದಲ್ಲಿ ಗೋವಾದ ಮೂಲೆ ಮೂಲೆಯಿಂದ ಯಕ್ಷಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಕಾಂಚನ ಜೋಶಿ ಸಂಗಡಿಗರು ನಾಡಗೀತೆ ಹಾಡಿದರು, ಬೆಳಿಗ್ಗಿನ ಕಾರ್ಯಕ್ರಮವನ್ನು ಗೋವಾ ಕನ್ನಡ ಸಮಾಜದ ಕಾರ್ಯಕಾರಿ ಸಮೀತಿಯ ಸದಸ್ಯ ಚಿನ್ಮಯ ಎಂ.ಸಿ ಕಾರ್ಯಕ್ರಮ ನಿರೂಪಿಸಿದರು, ಮಧ್ಯಾನ್ಹದ ಕಾರ್ಯಕ್ರಮವನ್ನು ಪುರೋಹಿತರಾದ ಗೋಪಾಲಕೃಷ್ಣ ನಿರೂಪಿಸಿದರು. ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ ಲೋಣಿ ವಂದನಾರ್ಪಣೆಗೈದರು. ಯಕ್ಷಶರಧಿ ಕಾರ್ಯಕ್ರಮವು ಯಕ್ಷ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ