ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ ಮಹಿಳಾ ಪ್ರಾಕಾರ ಬೆಳ್ತಂಗಡಿ ತಾಲೂಕು ಘಟಕದ ನೇತೃತ್ವದಲ್ಲಿ ದಿನಾಂಕ ಗುರುವಾರ (ಮಾ.13) ಸಂಜೆ ಗೂಗಲ್ ಮೀಟ್ನಲ್ಲಿ ಮಾತೃ ದೇವೋ ಭವ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಶಾರದಾ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷೆ ಆಶಾ ಅಡೂರು ಅವರು ಪ್ರಾರಂಭಿಸಿದರು.
ಮಹಿಳಾ ಪ್ರಾಕಾರದ ಪ್ರಮುಖ್ ಆಗಿರುವ ವನಿತಾ ಶೆಟ್ಟಿ ಅವರು ಸರ್ವರನ್ನು ಸ್ವಾಗತಿಸಿದರು. ವಕೀಲರು, ಕವಯಿತ್ರಿ, ವಿಮರ್ಶಕಿ ಹಾಗೂ ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಸಂಸ್ಥಾಪಕಿಯೂ ಆಗಿರುವ ಪರಿಮಳಾ ರಾವ್ ಇವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು.
ಸಂಸಾರ/ಸಮಾಜದ ವ್ಯವಸ್ಥಿತ ಸ್ವರೂಪದ ಚೈತನ್ಯಕ್ಕೆ ಚೇತನಾ ಶಕ್ತಿ ಪುರುಷನಾದರೆ ಬೆಳಕಾಗಿ ಸ್ತ್ರೀ ಹೊಳೆಯುವಳು. ಸಮಾನತೆ ಬೇಕು ಎಂಬ ಸಂಘಟನೆಯಿಂದ ತನ್ನೊಳಗಿನ ತನ್ನನ್ನೇ ಮರೆಯುತ್ತಿದ್ದಾಳೆ ಸ್ತ್ರೀ. ಮಹಿಳಾ ದಿನಾಚರಣೆ ನಮ್ಮ ಸಂಸ್ಕೃತಿ ಖಂಡಿತ ಅಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ನಮ್ಮನ್ನು ನಾವು ತೊಡಗಿಸಿಕೊಂಡು ಮೌಲ್ಯವನ್ನು ಕಾಣದೇ ಕುರುಡರಾಗೋ ಪರಿಸ್ಥಿತಿ ಎದುರಾಗಿದೆ. ತನ್ನೊಳಗೆ ತಾನು ಹೊಕ್ಕು,ತನ್ನನ್ನು ತಾನು ಗೌರವಿಸುವುದನ್ನು ಕಲಿತು ನಂಬಿಕೆಯಿಂದ ಮುಂದುವರೆದಾಗ ಸ್ತ್ರೀಗೆ ತನಗೆ ಇರುವ ಮಹತ್ವದ ಅರಿವು ಮೂಡುತ್ತದೆ. ಹೀಗಾದಾಗ ಹೋರಾಟಗಳನ್ನು ಮಾಡುವ ಸಂದರ್ಭಗಳು ಸೃಷ್ಟಿಯಾಗಲಾರದು. ಒಟ್ಟಿನಲ್ಲಿ ಸಂಸ್ಕೃತಿ ಸಂಸ್ಕಾರಗಳನ್ನು ರೂಢಿಸಿಕೊಂಡು ಮುನ್ನಡೆದಾಗ ಮಾತ್ರ ಏಳಿಗೆಯೆಂಬ ಮೆಟ್ಟಿಲೇರಿ ಸಾಧನೆ ಮಾಡಲು ಸಾಧ್ಯ ಎಂದು ಅವರು ನುಡಿದರು.
ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ, ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾದ ಪ್ರೊ. ಗಣಪತಿ ಭಟ್ ಕುಳಮರ್ವ, ಕಾರ್ಯದರ್ಶಿ ಸುಭಾಷಿಣಿ ಬೆಳ್ತಂಗಡಿ ಹಾಗು ಅನೇಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಘಟಕದ ಕೋಶಾಧಿಕಾರಿ ನಯನಾ ಟಿ ಅವರು ವಂದಿಸಿದರು. ಕಾರ್ಯದರ್ಶಿ ಮೇಘನಾ ಪ್ರಶಾಂತ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ