ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ "ಶ್ರೀಪಾದ ಕೃಷ್ಣ ರೇವಣಕರ ದತ್ತಿ" ಉಪನ್ಯಾಸ ಕಾರ್ಯಕ್ರಮವು ಮಾಚ್೯ 16 ರಂದು 'ಶ್ರೀಪಾದ ಗುಲಾಬಿ' ನಿವಾಸದಲ್ಲಿ ನಡೆಯಿತು. ಸಾಮಾಜಿಕ ಸೇವಾಕರ್ತರೂ ನಿವೃತ್ತ ಅಧ್ಯಾಪಕರೂ ಆದ ಶ್ರೀ ಸುಧಾಕರ ರಾವ್ ಪೇಜಾವರರವರು ಶ್ರೀಪಾದ ರೇವಣಕರರ ವ್ಯಕ್ತಿತ್ವ ಪರಿಚಯವನ್ನು ಮಾಡಿಕೊಟ್ಟರು. ಸರಳತೆಯ ಬದುಕನ್ನು ಮೈಗೂಡಿಸಿಕೊಂಡು, ಆದರ್ಶ ತಂದೆಯಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಟ್ಟು ಬೆಳೆಸುವುದರೊಂದಿಗೆ, ಅಂಚೆ ಇಲಾಖೆಯಲ್ಲಿ ಅಂಚೆ ಅಣ್ಣನಾಗಿ ಅವರು ಗೈದ ಸೇವೆಯನ್ನೂ, ಮನೆಮನಗಳನ್ನು ಬೆಸೆಯುವಂತಹ ಕೈಂಕರ್ಯಗಳನ್ನೂ ಸ್ಮರಿಸಿಕೊಂಡರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಶ್ರೀ ಪುಷ್ಪರಾಜ್ ಕೆ. ಯವರು "ಗ್ರಾಮೀಣ ಬದುಕು ಶಿಕ್ಷಣ ನೀತಿ" ಎಂಬ ವಿಷಯದ ಬಗ್ಗೆ ದತ್ತಿ ಉಪನ್ಯಾಸವನ್ನು ನೀಡಿದರು. ಗ್ರಾಮೀಣ ಶಿಕ್ಷಣವು ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣದೊಂದಿಗೆ ಅನೌಪಚಾರಿಕ ಶಿಕ್ಷಣವನ್ನು ನೀಡಿ ಬದುಕಿನ ಯಾವುದೇ ಸವಾಲುಗಳನ್ನು ಎದುರಿಸಲು ಸಮರ್ಥರಾಗುವಂತೆ ಮಾಡುತ್ತದೆ ಎಂಬುದನ್ನು ಹೇಳುತ್ತಾ, ಇಂದು ಗ್ರಾಮೀಣರು ಅದನ್ನು ಬಿಟ್ಟು ನಗರೀಕರಣದೆಡೆಗೆ ಸೆಳೆಯಲ್ಪಟ್ಟು ಸಂಸ್ಕೃತಿ ಹಾಗೂ ಕೃಷಿ ಚಟುವಟಿಕೆಗಳಿಂದ ದೂರವಾಗುವುದರೊಂದಿಗೆ ಮಾನವೀಯ ಸಂಬಂಧಗಳು ಕುಸಿಯುತ್ತಾ ಹೋಗುತ್ತಿರುವ ಬಗ್ಗೆ ಖೇದವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ.ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಮಂಜುನಾಥ ರೇವಣಕರರು ವಹಿಸಿದ್ದರು. ಶ್ರೀಪಾದ ಕೃಷ್ಣ ರೇವಣಕರರ ಪುತ್ರರಾದ ಅಂಬರೀಷ ರೇವಣಕರ, ರಾಜೇಂದ್ರ ರೇವಣಕರ, ಅಳಿಯ ಚಂದ್ರಕಾಂತ ಸಾನುರವರು ಮತ್ತು ಕುಟುಂಬದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ, ತುಳು ಭಾಷಾ ವಿದ್ವಾಂಸ ಡಾ. ವಾಮನ ನಂದಾವರರ ಸಾಹಿತ್ಯ ಸೇವೆಯನ್ನು ಸ್ಮರಿಸಿ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಲಾಯಿತು.
ಕಸಾಪ ಮಂಗಳೂರು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಸಮಿತಿಯ ಮಾರ್ಗದರ್ಶಕರೂ ಆದ ಡಾ. ಮುರಲೀ ಮೋಹನ ಚೂಂತಾರರು ಸ್ವಾಗತಿಸಿದರು. ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿದರು. ಡಾ. ಮೀನಾಕ್ಷಿ ರಾಮಚಂದ್ರರವರು ದತ್ತಿ ಉಪನ್ಯಾಸಕರನ್ನು ಪರಿಚಯಿಸಿದರು.
ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀಯವರು ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಸುಬ್ರಾಯ ಭಟ್ ರವರು ವಂದಿಸಿದರು. ಕ.ಸಾ.ಪ.ಕೇಂದ್ರ ಸಮಿತಿಯ ಡಾ. ಮಾಧವ, ಜಿಲ್ಲಾ ಸಮಿತಿಯ ಸನತ್ ಕುಮಾರ್ ಜೈನ್, ಮಂಗಳೂರು ತಾಲೂಕು ಘಟಕದ ಬೆನೆಟ್ ಅಮ್ಮನ್ನ, ತಿರುಮಲೇಶ್ವರ ಭಟ್ ಹಾಗೂ ಸಾರ್ವಜನಿಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ