ಒಂಚೂರು ಏನೋ ಹೇಳಬೇಕಿದೆ.
ಸೀದಾ ಎದೆಗಿಳಿಸಿಕೊಳ್ಳಬೇಕು ಸರಿಯಾ?
ಮನಸಿನಳತೆಗೆ ಮೀರಿದ್ದೇನೂ ಅಲ್ಲ
ಎಲ್ಲವೂ ನಮ್ಮೊಳಹೊರಗಿನದ್ದೇ..!
ಯಾವುದೂ ಹದ ಮೀರಿರಲಿಲ್ಲವಾದರೆ,
ದಿನವೊಂದರ ಮೀಸಲು ಬೇಡವಿತ್ತೇನೋ
ನಾನೂ ಮತ್ತು ನೀನೂ ಪ್ರೇಮಕ್ಕೆ ಅಂಕುರಿಸಿದ,
ಕಿಂಚಿತ್ತಷ್ಟೇ ವ್ಯತ್ಯಯಿಸಿರುವ ಪ್ರಾಕೃತಿಕರೇ!
ಬೇಷರತ್ತಾಗಿ ಮಾಡಬೇಕಾದ್ದು ಇಬ್ಬರಿಗೂ ಇದ್ದೀತು!
ತೀರಾ ಸಾಮಾನ್ಯವಾಗುವ ಹಕ್ಕೂ ಕೂಡ!
ಬರೀ ತ್ಯಾಗ, ದಾನಗಳ ಉತ್ಕೃಷ್ಟ ಉದಾಹರಣೆಗಳನ್ನೇ
ನನಗೆ ನಿಯತಿ, ನೀತಿ, ಆದರ್ಶವೆಂದುಬಿಟ್ಟರೆ..?
ಜೀವ-ಜೀವಂತಿಕೆ, ಒಲವು, ಛಲ, ಬಲ
ನಾನೂ, ನನ್ನದು, ನನಗೆ, ಎಂದು
ನಾನೆಂದರೆ ಬದುಕಿದ ಹಾಗಲ್ಲವೇ?
ನನಗಿಲ್ಲಿ ನಿನ್ನನ್ನೋ ಅಥವಾ
ಏನನ್ನೋ ಮೀರಿಸುವ ತವಕವಿಲ್ಲ!
ಎಲ್ಲಕ್ಕೂ ಹೋರಾಡಿ ಪಡೆಯುವ ಧಾವಂತವಿಲ್ಲ!
ಚುಕ್ಕಾಣಿ, ಮನ್ನಣೆ, ಅಧಿಕಾರದ ಗೊಡವೆ ಮೊದಲೇ ಇಲ್ಲ!
ನನಗೆ ನನ್ನ ಹಾಗೆಯೇ ಇರಬೇಕಿದೆ!
ಹುಟ್ಟಿನಷ್ಟೇ ಸ್ವಾಭಾವಿಕವಾಗಿ. ನಿರತ ನಿರಾಳವಾಗಿ!
ಹಾಗೆಂದು ವೈರಾಗ್ಯವಿಲ್ಲ, ಸಿನಿಕತೆಯೂ ಅಲ್ಲ..
ಹಾಗೆಂದು ವೈರಾಗ್ಯವಿಲ್ಲ. ಸಿನಿಕತೆಯೂ ಅಲ್ಲ..
ಸದಾ ಸಮಚಿತ್ತ ಸಾಧ್ಯವೂ ಇಲ್ಲ!
ಸ್ವಾಸ್ಥ್ಯಕ್ಕೆ ಸಕಲವೂ ವ್ಯಕ್ತವಾಗಬೇಕಿದೆ..
ನಾನಾಗುವ ಪಾತ್ರಗಳಲ್ಲಿ ಹೆಣ್ಣನದ ಬೆಳಗಿದೆ.
ಜೊತೆಗೊಂದು ಸ್ವಾಭಾವಿಕ ಸಜೀವ ಮನಸೂ ಸಹ!
ಆಣತಿ, ಆಕ್ಷೇಪ, ಪೂರ್ವಾಗ್ರಹವಿರದ ತೀರ್ಪಿಗೊಡ್ಡದ
ಸಾಂಗತ್ಯವಷ್ಟೇ ಸಾಕು! ಸುಖ ಅದು!
ತಣ್ಣಗಿದ್ದುಬಿಡಬಲ್ಲೆ ಇಲ್ಲಿ.
ನಿನಗೂ ಇವು ಬೇಕಿದೆಯಾದರೆ, ನನಗೂ!
ಇದುವೇ ಸರಸ ಮತ್ತು ಸ್ವಾಭಾವಿಕ.
ನಾನು ಪ್ರಕೃತಿ, ಹದ ಮೀರಿದರಷ್ಟೇ ಅನರ್ಥ.
ಸಮವಿದ್ದರೆ ಬಾಳ್ವೆ ಚಂದ.
ಬರೆದು ಜೀಕಿದರೆ ಅಂತ್ಯ ಕಾಣದ ನೀಳ್ಗತೆಯಾದೀತು.
ಸೂಚ್ಯವಾಗಿಸಿದ್ದೇನೆ.
ಚಂದವಾಗಿಬಿಡೋಣ.!
-ಲಕ್ಷ್ಮಿ ಟಿ. ಎನ್.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ