ಬೆಂಗಳೂರು: ‘ಲಿಂಗ ತಾರತಮ್ಯಕ್ಕೆ ಕೊನೆ ಹೇಳಿ ಲಿಂಗ ಸಮಾನತೆಗೆ ಆದ್ಯತೆ ನೀಡುವ ಸಮಯ ಇದು. ಏಕೆಂದರೆ ಈ ಆಧುನಿಕ ಕಾಲದಲ್ಲಿ ಕೆಲವು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಹಿರಿಮೆ ಯನ್ನು ಸಾಬೀತುಪಡಿಸುತ್ತಿದ್ದಾರೆ. ಆದರೆ ಬಹುತೇಕ ಮಹಿಳೆಯರು ಇನ್ನೂ ತಾರತಮ್ಯದ ಕಾರಣಕ್ಕಾಗಿ ಶೋಷಣೆಗೀಡಾಗುತ್ತಿದ್ದಾರೆ. ನಿಜಕ್ಕೂ ಇದು ಭಯಾನಕ. ವಿಶ್ವಸಂಸ್ಥೆ ಕೂಡ ಈ ಕುರಿತು ಜಾಗತಿಕ ಆಂದೋಲನಕ್ಕೆ ಕರೆ ನೀಡಿದೆ. ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ನಾವು ಪ್ರತಿ ವರ್ಷ ಆಚರಿಸುತ್ತಿದ್ದೇವೆ. ಪ್ರತಿಸಲ ನಾವು ಲಿಂಗ ಸಮಾನತೆಗೆ, ಸ್ತ್ರೀಯರ ಸಾಧನೆಗಳಿಗೆ ಮಾನ್ಯತೆ ನೀಡುವುದರ ಬಗ್ಗೆ ಹೇಳುತ್ತಲೇ ಇರುತ್ತೇವೆ. ಆದರೆ ಇದು ಪರಿಣಾಮಕಾರಿಯಾಗಿ ನೆರವೇರಬೇಕಾದರೆ ಪುರುಷರ ಮನಸ್ಥಿತಿ ಹಾಗೂ ಮಹಿಳೆಯರ ಬಗೆಗಿನ ದೃಷ್ಟಿಕೋನ ಬದಲಾಗಬೇಕು ಹಾಗೂ ಮಹಿಳೆಯರಲ್ಲಿ ಅಪೂರ್ವ ಸಾಧನೆ ಮಾಡುವ ಛಲವಿರಬೇಕು’ ಎಂದು ಸಿನಾಪ್ಸಿಸ್ ಸಂಸ್ಥೆಯ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಮಂಜುಳಾ ವಿ. ಕಡೆತೊಟದ್ ನುಡಿದರು.
ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬೆಂಗಳೂರು ಶಾಖೆಯ ದಿ ಇನ್ಸ್ಟಿಟ್ಯೂಶನ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯುನಿಕೇಶನ್ ಇಂಜಿನಿಯರ್ಸ್ (ಐ.ಇ.ಟಿ.ಇ) ಸಂಸ್ಥೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನದ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
‘ಮಹಿಳೆ ಹತ್ತಾರು ಸವಾಲುಗಳನ್ನು ಕೆಲವೊಮ್ಮೆ ಒಟ್ಟಿಗೇ ನಿಭಾಯಿಸುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ ಏಕೆಂದರೆ ಆಕೆ ತನ್ನ ಕಾರ್ಯಕ್ಷೇತ್ರದಲ್ಲಿ ಕ್ಷಮತೆ ತೋರುವಲ್ಲಿ ಮಾತ್ರವಲ್ಲ, ಮನೆಯ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳುವಲ್ಲಿ ಕೂಡ ಪರಿಶ್ರಮಿಸಬೇಕು’ ಎಂದು ನುಡಿದರು.
ಐ.ಇ.ಟಿ.ಇ ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ಡಾ. ಸಿ.ವಿ. ರವಿಶಂಕರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ‘ಪ್ರತಿಯೊಬ್ಬರೂ ಕನಿಷ್ಠಪಕ್ಷ ಐವರು ಬಡ ಹೆಣ್ಣುಮಕ್ಕಳನ್ನು ಸಂಪರ್ಕಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಪುಣ್ಯಕಾರ್ಯದಲ್ಲಿ ತೊಡಗಬೇಕು. ಏಕೆಂದರೆ ನಮ್ಮಲ್ಲಿ ಬಹುತೇಕ ಮಹಿಳೆಯರು ಬಡತನದ ಕನಿಷ್ಠ ರೇಖೆಗಿಂತಲೂ ಕೆಳಗಿದ್ದಾರೆ, ಶಿಕ್ಷಣದಿಂದ ವಂಚಿತರಾಗಿದ್ದಾರೆ ಮತ್ತು ಬಾಲ್ಯವಿವಾಹ ಇತ್ಯಾದಿ ಸಾಮಾಜಿಕ ಕಂಟಕಗಳಿಗೆ ಬಲಿಯಾಗುತ್ತಿದ್ದಾರೆ. ಈ ಬಗೆಗಿನ ಲಭ್ಯ ಅಂಕಿಅಂಶಗಳು ನಿಜಕ್ಕೂ ಗಾಬರಿ ಹುಟ್ಟಿಸುವಂತಿವೆ. ಅಂತಾರಾಷ್ಟ್ರೀಯ ಮಹಿಳಾದಿನದಂದು ನಾವೆಲ್ಲರೂ ತಾರತಮ್ಯಗಳನ್ನು ನಿವಾರಿಸುವ ಸಲುವಾಗಿ ಪ್ರತಿಜ್ಞೆ ಮಾಡಬೇಕಿದೆ. ಆಗಲೇ ಇಂದಿನ ಸಂಭ್ರಮಾಚರಣೆಗೆ ಮಹತ್ವ ಲಭಿಸುವುದು’ ಎಂದರು.
ಸಮಾರಂಭದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ಸಂಸ್ಥೆಯ ವಿದ್ಯಾರ್ಥಿ ಸಮಾಲೋಚನಾ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಶಾಸ್ತ್ರಿ, ವಿದ್ಯಾರ್ಥಿ ಕಲಾಣ ವಿಭಾಗದ ಡೀನ್ ಡಾ. ಹಿತಾ ಶೆಟ್ಟಿ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪರಮೇಶಾಚಾರಿ ಬಿ.ಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಐ.ಇ.ಟಿ.ಇ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಶಿಕ್ಷಕಿಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ