ಬೆಳ್ತಂಗಡಿ: ಭಾರತಾದ್ಯಂತ ಹಬ್ಬಿರುವ ಭಾಷೆಗಳನ್ನು ಬಳಸಿ ನಮ್ಮ ದೇಶದಲ್ಲಿ ಭಾರತೀಯತೆಯನ್ನು ಪುನಃ ಸ್ಥಾಪಿಸಲು ಎಂದೇ ಸಾಹಿತ್ಯದ ಪ್ರೇರಕ, ಪೋಷಕ ಹಾಗೂ ರಕ್ಷಕ ಶಕ್ತಿಯಾಗಿ ದುಡಿಯುತ್ತಿರುವ ಸಾಹಿತ್ಯ ಸಂಘಟನೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್. ಇದು 1966 ಅಕ್ಟೋಬರ್ 27 ರಂದು ಸ್ಥಾಪನೆಗೊಂಡು ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ ಅವರಿಗೆ ತರಬೇತಿಯನ್ನು ನೀಡುತ್ತಾ, ಸಾಹಿತ್ಯ ಪ್ರಕಟನೆಯಂತಹ ಮಹತ್ವದ ಕೆಲಸವನ್ನು ಕೂಡ ಮಾಡುತ್ತಿದೆ.
ಕರ್ನಾಟಕದಲ್ಲಿ 2014 ರಲ್ಲಿ ಆರಂಭಗೊಂಡ ಈ ಸಾಹಿತ್ಯ ಸಂಘಟನೆಯು 2016 ರಲ್ಲಿ ಡಾ.ದೊಡ್ಡರಂಗೇಗೌಡರವರ ಅಧ್ಯಕ್ಷತೆಯಲ್ಲಿ ಸಾಹಿತ್ಯದಲ್ಲಿ ಕೌಟುಂಬಿಕ ಮೌಲ್ಯಗಳು ವಿಷಯದಲ್ಲಿ ಮೊದಲನೇ ರಾಜ್ಯ ಅಧಿವೇಶನವು ಶಿರಸಿಯಲ್ಲಿ ನಡೆಯಿತು. 2018ರಲ್ಲಿ ಎರಡನೇ ರಾಜ್ಯ ಅಧಿವೇಶನವು ಪ್ರೊ.ಪ್ರೇಮ ಶೇಖರ್ರವರ ಅಧ್ಯಕ್ಷತೆಯಲ್ಲಿ ಸಾಹಿತ್ಯದಲ್ಲಿ ಭಾರತೀಯತೆ ಎನ್ನುವ ವಿಷಯದಲ್ಲಿ ಮೈಸೂರಿನಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಿತು. ಇನ್ನು ಮೂರನೇ ಅಧಿವೇಶನವು ಸ್ವರಾಜ್ಯ -75 ಎನ್ನುವ ವಿಷಯದಲ್ಲಿ ಕೊರೋನದ ಅಬ್ಬರದ ನಡುವೆಯೂ 2022 ರಲ್ಲಿ ಉಜಿರೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಈಗ ಜೂನ್ 7 ಮತ್ತು 8 ರಂದು ಸಾಹಿತ್ಯದಲ್ಲಿ ಸ್ವ ವಿಷಯದಲ್ಲಿ ನಾಲ್ಕನೆಯ ರಾಜ್ಯ ಅಧಿವೇಶನವು ದಾವಣಗೆರೆಯಲ್ಲಿ ನಡೆಯಲಿದೆ. ಆ ಪ್ರಯುಕ್ತ 'ಸ್ವ'ತ್ವಯುತ ಸಾಹಿತಿಗಳ ಸಂಪರ್ಕ ಅಭಿಯಾನ ದಲ್ಲಿ ಉಜಿರೆಯ ಎಸ್.ಡಿ. ಶೆಟ್ಟಿ ಹಾಗೂ ಶರತ್ಕುಮಾರ್ ಟಿ.ಕೆ.ಯವರ ಮನೆಗೆ ಮಾರ್ಚ್ 1ರಂದು ಅಭಾಸಾಪ ಬೆಳ್ತಂಗಡಿ ತಾಲೂಕು ಸಮಿತಿಯ ಕಾರ್ಯಕರ್ತರು ಮತ್ತು ದ.ಕ. ಜಿಲ್ಲಾ ಸಮಿತಿಯ ಕಾರ್ಯಕರ್ತರೊಂದಿಗೆ ಸೇರಿಕೊಂಡು ಭೇಟಿ ನೀಡಿ ಸನ್ಮಾನಿಸಿದರು. ಅವರ ಜತೆ ವಾರ್ತಾಲಾಪ ಮಾಡಿ ಅವರ ಸಾಹಿತ್ಯ ಸಾಧನೆಗಳನ್ನು ತಿಳಿದುಕೊಳ್ಳುವುದರೊಂದಿಗೆ, ಅಭಾಸಾಪ ದ ಧ್ಯೇಯೋದ್ದೇಶಗಳನ್ನೂ, ಶೈಲಿ-ಕಾರ್ಯ ಸ್ವರೂಪಗಳನ್ನೂ ಅವರಿಗೆ ತಿಳಿಸಲಾಯಿತು. ಈರ್ವರೂ ಅಭಾಸಾಪ ದ ಕಾರ್ಯವೈಖರಿಯನ್ನು ಶ್ಲಾಘಿಸಿ, ಅಧಿವೇಶನಕ್ಕೆ ಶುಭ ಕೋರಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ