ಉಳ್ಳಾಲ: “ಸರ್ವಜ್ಞನ ವಚನಗಳು ಸರ್ವ ಕಾಲಕ್ಕೂ ಪ್ರಸ್ತುತ. ಸರ್ವಜ್ಞನ ವಚನಗಳಲ್ಲಿ ಜೀವನಾದರ್ಶ ಅಡಗಿದೆ. ಮಾನವರೆಲ್ಲರೂ ಒಂದೇ ಜಾತಿ. ಜಾತಿಮತಗಳ ನಡುವೆ ಮೇಲು-ಕೀಳು ಭಾವನೆ ಸಲ್ಲದು. ಜಗತ್ತಿನ ಹಿತವನ್ನು ಬಯಸುವ ಸರ್ವಜ್ಞನ ವಚನಗಳು ಲೋಕಪ್ರಿಯವಾಗಿವೆ. ವಚನಗಳನ್ನು ಅರ್ಥೈಸಿಕೊಂಡು ಅನುಸರಿಸಿದಲ್ಲಿ ನಮ್ಮ ಬದುಕನ್ನು ಶ್ರೇಷ್ಠವಾಗಿಸಿಕೊಳ್ಳಲು ಸಾಧ್ಯ” ಎಂದು ಉಳ್ಳಾಲ ತಾಲೂಕು ಉಪತಹಶೀಲ್ದಾರ್ ವಿಜಯವಿಕ್ರಮ್ ಅಭಿಪ್ರಾಯ ವ್ಯಕ್ತಪಡಿಸಿದರು.
ಉಳ್ಳಾಲ ತಾಲೂಕು ಆಡಳಿತ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ/ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ(ರಿ.) ಇದರ ಉಳ್ಳಾಲ ಸಮಿತಿ ಸಹಭಾಗಿತ್ವದಲ್ಲಿ ಉಳ್ಳಾಲ ತಾಲೂಕು ಕಚೇರಿ ನಾಟೆಕಲ್ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತ ವೆಂಕಪ್ಪ ಮಾಸ್ತರ್ ಅಸೈಗೋಳಿ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಸರಕಾರಿ ಪದವಿಪೂರ್ವ ಕಾಲೇಜು ಕುರ್ನಾಡು ಮುಡಿಪು ಇಲ್ಲಿನ ಭೌತಶಾಸ್ತ್ರ ಉಪನ್ಯಾಸಕ ಡಾ.ಲೋಕೇಶ್ ಕುಲಾಲ್ ನಾರ್ಶ ತ್ರಿಪದಿ ಬ್ರಹ್ಮ ಸರ್ವಜ್ಞನ ಕುರಿತು ಉಪನ್ಯಾಸ ನೀಡಿದರು. ಆಕಾಶವಾಣಿ ಮಂಗಳೂರು ಕೇಂದ್ರದ ಉದ್ಘೋಷಕ ಪ್ರವೀಣ ಅಮ್ಮೆಂಬಳ ಸರ್ವಜ್ಞನ ವಚನಗಳನ್ನು ವಾಚಿಸಿದರು.
ವಿಶೇಷ ಅಭ್ಯಾಗತರಾಗಿ ಆಗಮಿಸಿದ್ದ ಲಯನ್ ಅನಿಲ್ದಾಸ್ ಅಂಬಿಕಾರೋಡ್ ಮಾತನಾಡಿ, ಸರ್ವಜ್ಞನ ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿವೆ. ಈ ವಚನಗಳ ಸಾರವನ್ನು ಮಕ್ಕಳಿಗೆ, ಯುವಜನತೆಗೆ ತಲುಪಿಸುವ ಜವಾಬ್ದಾರಿ ಹಿರಿಯರಿಗಿದೆ ಎಂದು ನುಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಕುರ್ನಾಡು ಮುಡಿಪು ಇಲ್ಲಿನ ಆರೋಗ್ಯ ಸುರಕ್ಷಾಧಿಕಾರಿ ಶಾಲಿನಿ ಎಂ., ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಭಾಸ್ಕರ ಕುತ್ತಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವೇದಿಕೆಯ ಅಧ್ಯಕ್ಷ ನವೀನ್ ಪಿದಮಲೆ, ಉಪಾಧ್ಯಕ್ಷ ಹರೀಶ್ ಮೂಳೂರು ಉಪಸ್ಥಿತರಿದ್ದರು.
ಯುವ ಉದ್ಯಮಿ ಹಾಗೂ ಸಮಾಜಸೇವಾ ಕಾರ್ಯಕರ್ತ ಕಿಶೋರ್ ಮುನ್ನೂರು, ಯಕ್ಷಗಾನ ಕಲಾವಿದ ದಿನೇಶ್ ಪೂಪಾಡಿಕಲ್ಲ್, ಬಾಲಕೃಷ್ಣ ಸಾಲಿಯಾನ್ ಕುತ್ತಾರ್ ಕಂಪ(ಮೂಲ್ಯಣ್ಣ), ನಾರಾಯಣ ಪೂಪಾಡಿಕಲ್ಲ್, ರಮೇಶ್ ಹನ್ನೆರಡುಮುಡಿ, ಮಂಜುನಾಥ ಮೂಲ್ಯ ಮಜಲು, ಮೋಹನ ಮಜಲು, ಜಯ ಕುಲಾಲ್ ಪಾದಲ್ಪಾಡಿ, ಸುಂದರ ಕುಲಾಲ್ ಕೊಡಕ್ಕಲ್ಲು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜಯಂತ ಸಂಕೊಳಿಗೆ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು. ಪ್ರಜ್ಞಾಶ್ರೀ ಮೂಳೂರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ