ಕುಂದಾಪುರ ತಾಲೂಕಿನ ಗುಡ್ಡೆಯಂಗಡಿಯ ಯಡಾಡಿ ಮತ್ಯಾಡಿ ಗ್ರಾಮದ ಬಸವ ಮೊಗವೀರ ಹಾಗೂ ಚಿಕ್ಕು ದಂಪತಿಯರ ಮಗನಾಗಿ 20.4.1997ರಂದು ಪ್ರದೀಪ್ ಮೊಗವೀರ ಅವರ ಜನನ. ಬಿಬಿಎಂ ಇವರ ವಿದ್ಯಾಭ್ಯಾಸ. ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನ ಗುರುಗಳು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ಸ್ವಂತ ನಿರ್ಧಾರ ಮತ್ತು ಯಕ್ಷಗಾನದ ಅತೀವ ಆಸಕ್ತಿ ಹಾಗೂ ತಂದೆಯ ಪ್ರೇರಣೆ ಮತ್ತು ವೇಷ ಮಾಡುವುದು. ಕೋಟ ಸುರೇಶ್ ಬಂಗೇರ ಅವರ ಸುಧನ್ವ ಹಾಗೂ ಅವರ ವೇಷ, ಪ್ರವೀಣ್ ಗಾಣಿಗ ಕೆಮ್ಮಣ್ಣು ಹಾಗೂ ಗೋಪಾಲ್ ಆಚಾರ್ ತೀರ್ಥಹಳ್ಳಿ ಇವರ ವೇಷದಿಂದ ಪ್ರೇರಣೆ.
ವಿದ್ಯಾಭ್ಯಾಸದ ಜೊತೆಗೆ ಸುಮಾರು 8 ವರ್ಷಗಳಿಂದ ಗಣೇಶ್ ಬಳೆಗಾರ ಜನ್ನಾಡಿ ಇವರ ಯಕ್ಷನಾದ ವೇಷಭೂಷಣ ಕಲಾತಂಡ ಯಡಾಡಿ ಮತ್ಯಾಡಿ ಇಲ್ಲಿ ಪ್ರಸಾದನ ಕಲಾವಿದನಾಗಿ ಗುರುತಿಸಿಕೊಂಡೆ. ಮೇಳಕ್ಕೆ ಸೇರಬೇಕೆಂದು ನಿರ್ಧರಿಸಿದರು, ಅಷ್ಟು ಹುಚ್ಚು. ಆದರೆ ಸಾಧ್ಯ ಆಗಲಿಲ್ಲ. ಆಗ ಕನಸಿಗೆ ಚಿಗುರೊಡೆದದ್ದು ಊರಿನ ಸಂಘ ಯಕ್ಷ ಕೇದಿಗೆ ಮಹಾಲಿಂಗೇಶ್ವರ ಕಲಾಸಂಘ.
ಯಡಾಡಿ ಮತ್ಯಾಡಿ ಗುಡ್ಡೆಯಂಗಡಿ ಸ್ಥಾಪನೆ ಆದದ್ದು. ಆಗ ಮೊದಲ ಗೆಜ್ಜೆ ಸೇವೆ ಜಾಂಬವತಿ ಕಲ್ಯಾಣದ ಕೃಷ್ಣನಾಗಿ ಮೊದಲ ರಂಗಪ್ರವೇಶ. ಏನು ಗೊತ್ತಿಲ್ಲದ ನನ್ನನ್ನು ತಿದ್ದಿ ನಾನು ಒಬ್ಬ ಕಲಾವಿದನಾಗಿ ರಂಗದಲ್ಲಿ ಕುಣಿಯುವುದಕ್ಕೆ ಮೂಲ ಕಾರಣ ನಮ್ಮ ಪ್ರೀತಿಯ ಪ್ರಸಾದ್ ಗುರುಗಳು. ಅಲ್ಲಿಂದ ನನ್ನ ಯಕ್ಷಪಯಣ ಆರಂಭ ಎಂದರು.
ನೆಚ್ಚಿನ ಪ್ರಸಂಗಗಳು:-
ಅಭಿಮನ್ಯು ಕಾಳಗ, ಶ್ರೀ ದೇವಿ ಮಹಾತ್ಮೆ, ಸುಧನ್ವ ಕಾಳಗ, ಬಬ್ರುವಾಹನ ಕಾಳಗ, ಚಕ್ರಚಂಡಿಕೆ, ವೀರಮಣಿ ಕಾಳಗ, ನವಗ್ರಹ ಮಹಾತ್ಮೆ, ಚಂದ್ರಹಾಸ ಚರಿತ್ರೆ, ಕನಕಾಂಗಿ ಕಲ್ಯಾಣ, ತರಣಿಸೇನ ಕಾಳಗ, ಮೀನಾಕ್ಷಿ ಕಲ್ಯಾಣ, ಶಶಿಪ್ರಭೆ ಪರಿಣಯ.
ನೆಚ್ಚಿನ ವೇಷಗಳು:-
ಅಭಿಮನ್ಯು, ಕೃಷ್ಣ, ಬರ್ಬರೀಕ, ಸುಧನ್ವ, ಬಭ್ರುವಾಹನ, ಚಂಡ ಮುಂಡ, ಬ್ರಹ್ಮ, ವಿಷ್ಣು, ಲವಕುಶ.
ನಿರ್ವಹಿಸಿದ ವೇಷಗಳು:-
ಅಭಿಮನ್ಯು, ಕೃಷ್ಣ, ಬಲರಾಮ, ಇಂದ್ರಜಿತು, ಚಂಡ-ಮುಂಡ, ಬ್ರಹ್ಮ, ವಿಷ್ಣು, ಚಿತ್ರಕೇತನ, ಮನ್ಮಥ, ಲವ ಕುಶ, ಮೈಂದ ದ್ವಿವಿದ, ರುಕ್ಮಾಂಗ, ಶುಭಾಂಗ, ವತ್ಸಾಕ್ಯ, ಪ್ರಹ್ಲಾದ, ಸುಕೇತು.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ:-
ಪ್ರಸಂಗದ ಬಗ್ಗೆ ಅಥವಾ ವೇಷದ ಬಗ್ಗೆ ಅನುಮಾನಗಳು ಬಂದರೆ ಮೊದಲೇ ಗುರುಗಳನ್ನು ಕೇಳಿ ತಿಳಿದು ರಂಗವೇರುತ್ತೇನೆ ಮತ್ತು ಪ್ರಸಂಗದ ಪ್ರತಿಯನ್ನು ಗಮನಿಸಿ ನನಗಿರುವ ಪದ್ಯದ ಜೊತೆಯಲ್ಲಿ ಎದುರು ವೇಷದವರ ಪದ್ಯವನ್ನು ಗಮನಿಸುತ್ತ ಮುಂದುವರೆಯುತ್ತೇನೆ. ನನ್ನ ವೇಷ ಗೆಲ್ಲುವುದರ ಜೊತೆಗೆ ಎದುರು ವೇಷ ಮತ್ತು ಇಡೀ ಪ್ರಸಂಗ ಗೆಲ್ಲುವಲ್ಲಿ ರಂಗದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಸದಾ ಕಾಲ ಮಾಡುತ್ತೇನೆ ಎಂದರು.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಾಲಮಿತಿಗೆ ಹೊಂದಿಕೊಂಡಿರುವ ಪ್ರೇಕ್ಷಕರು ಯಕ್ಷಗಾನ ಸಂಪೂರ್ಣ ಪ್ರಸಂಗ ಆಸ್ವಾದಿಸುವಲ್ಲಿ ಕೊರತೆ ಕಾಣುವುದು ಮತ್ತು ನೇರಪ್ರಸಾರದಲ್ಲಿ ವೀಕ್ಷಣೆಗೆ ಹೆಚ್ಚಿನ ಅವಕಾಶ ಇರುವುದರಿಂದ ನೇರ ಆಟಕ್ಕೆ ಬಂದು ವೀಕ್ಷಿಸುವವರು ಕಡಿಮೆ ಆಗಿದೆ. ಇದು ಕಲಾವಿದರ ಹಿತದೃಷ್ಟಿಯಿಂದ ಮತ್ತು ಯಕ್ಷಗಾನ ಉಳಿವಿನ ದೃಷ್ಟಿಯಿಂದ ಸಮಂಜಸ ಅಲ್ಲ ಎನ್ನುವುದು ಭಾವನೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಹವ್ಯಾಸಿ ಕಲಾವಿದ ಆದರೂ ಯಕ್ಷರಂಗದಲ್ಲಿ ಗುರುಗಳ ನಿರ್ದೇಶನದಲ್ಲಿ ಸಾಕಷ್ಟು ಜವಾಬ್ದಾರಿ ವೇಷ ಮಾಡಿದ ತೃಪ್ತಿ ಇದೆ. ಮುಂದೆಯೂ ಕೂಡ ಕ್ಲಿಷ್ಟಕರ ವೇಷಗಳನ್ನು ಗುರುಗಳ ನಿರ್ದೇಶನದಲ್ಲಿ ಅದನ್ನು ಮಾಡಬೇಕು. ಯಕ್ಷಗಾನ ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುವುದು ನನ್ನ ಆಸೆ ಎಂದರು.
ಸನ್ಮಾನ ಪ್ರಶಸ್ತಿ ಒದಗಿ ಬಂದಿರುವುದಿಲ್ಲ.
ಯಕ್ಷ ಸೌರಭ ಮಹಾಲಿಂಗೇಶ್ವರ ಕಲಾರಂಗ ಕೋಟ (ರಿ) ಆಯೋಜಿಸಿದ ಹವ್ಯಾಸೀ ಕಲಾವಿದರ ಜೋಡಾಟದಲ್ಲಿ ಭಾಗವಹಿಸಿರುವೆ. ನಮ್ಮದೇ ಮಾತೃಸಂಘ ಯಕ್ಷ ಕೇದಿಗೆ ಮಹಾಲಿಂಗೇಶ್ವರ ಕಲಾಸಂಘ ಯಡಾಡಿ ಮತ್ಯಾಡಿ ಗುಡ್ಡೆಯಂಗಡಿ ಹಾಗೂ ಯಕ್ಷಸೌರಭ ಮಹಾಲಿಂಗೇಶ್ವರ.
ಕಲಾರಂಗ(ರಿ) ಕೋಟ.
ಗುರುಗಳ ನಿರ್ದೇಶನದಲ್ಲಿ ಹಾಗೂ ಸುಧೀರ್ ನಾಯ್ಕ್ ಮಂಕಿ, ಪ್ರವೀಣ್ ಮೊಗವೀರ ಬಾಳಿಕೆರೆ ಮತ್ತು ನಮ್ಮದೇ ಮೊಗವೀರ ಬಾಂಧವರಿಂದ ಆರಂಭಗೊಂಡ ಮತ್ಸ್ಯ ಗಂಧ ಇಲ್ಲಿ ಕೂಡ ಗುರುಗಳ ನಿರ್ದೇಶನದಲ್ಲಿ ವೇಷ ಮಾಡುತ್ತಾ ಬಂದಿರುವೆ. ನನ್ನಲ್ಲಿರುವ ಸಣ್ಣ ಪ್ರತಿಭೆ ಗುರುತಿಸಿ ವಡ್ಡರ್ಸೆ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗ ಹಾಗೂ ಯಕ್ಷಮಿತ್ರ ಬಳಗ ಗುಜ್ಜಾಡಿ ಇನ್ನೂ ಹಲವು ಸಂಘ ಸಂಸ್ಥೆಗಳಲ್ಲಿ ನನಗೆ ಅವಕಾಶ ಒದಗಿ ಬಂದಿದೆ. ಇದಕ್ಕೆ ಮೂಲ ಕಾರಣ ನನ್ನ ಗುರುಗಳು ಪ್ರಸಾದ್ ಕುಮಾರ್ ಮೊಗೆಬೆಟ್ಟು.
ನನಗೆ ಸದಾ ಪ್ರೋತ್ಸಾಹ ನೀಡುವ ಗುರುಗಳು ಮತ್ತು ನಮ್ಮ ಮಾತೃ ಸಂಘದ ಗೌರವಾಧ್ಯಕ್ಷರಾದ ಉಮೇಶ್ ಶೆಟ್ಟಿ, ಪ್ರವೀಣ್ ಕುಲಾಲ್, ವೆಂಕಟೇಶ್, ಮಂಜುನಾಥ್ ಮತ್ಯಾಡಿ ಮತ್ತು ಗೋಪಾಲ್ ಕೃಷ್ಣ ಪೈ, ಶಂಕರ ದೇವಾಡಿಗ ಇಂತಹ ಹಿರಿಯ ಕಲಾವಿದರ ಒಡನಾಟ, ವೇಷ ಮಾಡಿದ ಅನುಭವ ಮತ್ತು ಸುಧೀರ್ ಪೀ ನಾಯ್ಕ್ ಮಂಕಿ, ಪ್ರವೀಣ್ ಮೊಗವೀರ ಬಾಳಿಕೆರೆ ಇವರೆಲ್ಲರ ತುಂಬು ಪ್ರೋತ್ಸಾಹವೇ ನಾನಿಂದು ಒಬ್ಬ ಸಾಮಾನ್ಯ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ.
ಗೋಳಿಗರಡಿ, ಸೌಕೂರು, ಹಟ್ಟಿಯಂಗಡಿ, ಸಿಗಂದೂರು ಮೇಳದಲ್ಲಿ ತಿರುಗಾಟ ಮಾಡಿದ ಅನುಭವ. ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರದೀಪ್ ಮೊಗವೀರ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ