ಪಂಜ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೂತ್ಕೂಂಜ ಗ್ರಾಮದ ಪಂಜ ಸೀಮೆಯ ದೇವರೆಂದು ಖ್ಯಾತಿಯಾದ ಶ್ರೀ ಪರಿವಾರ ಸಮೇತ ಪಂಚಲಿಂಗೇಶ್ವರನು ಜ್ಞಾತಾಜ್ಞಾತವಾಗಿರುವ ಹಲವು ದೈವ, ದೇವರುಗಳನ್ನೊಳಗೊಂಡು ಮಹತ್ವಪೂರ್ಣವಾಗಿ ಕಂಗೊಳಿಸುತ್ತಿದ್ದಾನೆ. ಇಲ್ಲಿಯ ಮಹಿಮೆಯನ್ನು ಪುರಾಣ ಇತಿಹಾಸಗಳಲ್ಲಿ ಕಾಣಬಹುದು. ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂಬ ಐದು ಹೆಸರಿನಲ್ಲಿ ಬೇರೆ ಬೇರೆಯಾಗಿ ಶಿವನ ಸ್ವರೂಪವನ್ನು ಆರಾಧಿಸಿಕೊಂಡು ಬಂದವರಲ್ಲಿ ಪಾಂಡವರು ಮೊದಲಿಗರು, ಪಾಂಡವರು ವನವಾಸದ ಕಾಲದಲ್ಲಿ, ತ್ರಿಗರ್ತ ಪ್ರದೇಶದ ದಕ್ಷಿಣ ಭಾಗದ ಒಂಬತ್ತು ಕಡೆಗಳಲ್ಲಿ ನೆಲೆಯಾಗಿ ಶಿವಲಿಂಗಾರ್ಚನೆ ಮಾಡಿದ ಕಡೆಗಳಲ್ಲಿ ಇಂದು ಪಂಚಲಿಂಗೇಶ್ವರ ದೇವಾಲಯವನ್ನು ಕಾಣಬಹುದು. ಈ ಪೈಕಿ ಪಂಜ ಶ್ರೀ ಪರಿವಾರ ಸಮೇತ ಪಂಚಲಿಂಗೇಶ್ವರ ದೇವಾಲಯವೂ ಒಂದು.
ಎಲ್ಲಾ ಶಿವದೇವಾಲಯದಲ್ಲಿ ಎದುರಿನ ಮಂಟಪದಲ್ಲಿ ನಂದಿಯ ಸಾನಿಧ್ಯವನ್ನು ಕಾಣಬಹುದು. ಆದರೆ ಈ ಕ್ಷೇತ್ರದಲ್ಲಿ ನಂದಿ ಮಾಯವಾಗಿ ಸದಾಶಿವ ದೇವರ ಸಾನಿಧ್ಯವಿದೆ. ಜೈನ ಬಲ್ಲಾಳರ ಆಡಳಿತ ಕಾಲದಲ್ಲಿ, ಅರ್ಚಕರು ಸಮೇತ ಪಂಚಲಿಂಗೇಶ್ವರ ಸ್ವಾಮಿಯನ್ನು ಪೂಜಿಸಿ, ನಾಗತೀರ್ಥವೆಂಬ ಹೆಸರಿನ ಜಲವಾಹಿನಿ ಉಗಮ ಸ್ಥಾನವಾದ ಬಂಟಮಲೆಯ ತುತ್ತ ತುದಿಯಲ್ಲಿ ಸಾನಿಧ್ಯವಿದ್ದ ಶ್ರೀ ಸದಾಶಿವ ದೇವರನ್ನು ಪೂಜಿಸ ಬೇಕಿತ್ತು. ದಟ್ಟ ಅರಣ್ಯ ಪ್ರದೇಶದ ನಡುವೆ ದುರ್ಗಮವಾದ ದಾರಿಯನ್ನು ಕ್ರಮಿಸಬೇಕಾದ ಕಾರಣ, ಬ್ರಹ್ಮಜ್ಞಾನಿಯೂ, ಯೋಗಿಯೂ ಆದ ಆರ್ಚಕರ ಭಕ್ತಿಯ ಪ್ರಾರ್ಥನೆಗೆ ಒಲಿದು ಶ್ರೀ ಪಂಚಲಿಂಗೇಶ್ವರ ದೇವರ ಎದುರಿನಲ್ಲಿದ್ದ ನಂದಿಯನ್ನು ಸೂಕ್ಷವನ್ನಾಗಿಸಿ ಶ್ರೀ ಸದಾಶಿವ ಲಿಂಗ ಉದ್ಭವವಾಯಿತು ಎಂದು ಹಿರಿಯರಿಂದ ಬಂದಂತಹ ಕೃತಿ ವಾಕ್ಯವನ್ನು ಕೇಳಬಹುದು.
ಹಾಗೆಯೇ ಪೂರ್ವಾಭಿಮುಖವಾಗಿ ಗಜಪೃಷ್ಠಾಕಾರದ ಶ್ರೀ ಪಂಚಲಿಂಗೇಶ್ವರ ಗರ್ಭಗುಡಿಯನ್ನು ಹಾಗೂ ಅಲ್ಲಿಂದ ಸರಳ ರೇಖೆಯಲ್ಲಿ ಒಂದೇ ಕಡೆಯಲ್ಲಿ ಪೂರ್ವಾಭಿಮುಖವಾಗಿ ಶ್ರೀ ಸದಾಶಿವ ದೇವರನ್ನೂ ಕಾಣಬಹುದು. ಆದ್ದರಿಂದ ಏಕಕಾಲದಲ್ಲಿ ಪೂಜೆ ಸ್ವೀಕರಿಸುವ ಎರಡು ಶಿವ ಸಾನಿಧ್ಯವನ್ನು ಈ ಕ್ಷೇತ್ರದಲ್ಲಿ ವಿಶೇಷವಾಗಿ ಕಾಣಬಹುದು. ಈ ದೇಗುಲವು ಐವತ್ತೇಳು ಗ್ರಾಮದೊಳಗಿನ ಸಾವಿರದಿಂದಲೂ ಹೆಚ್ಚಿನ ದೈವ, ದೇವರುಗಳನ್ನೊಳಗೊಂಡ ಅತ್ಯಂತ ಕಾರಣಿಕ ಕ್ಷೇತ್ರವಾದ ಪಂಜ ಸೀಮೆಯ ದೇವಾಲಯವಾಗಿದೆ. ನಿತ್ಯವೂ ಶ್ರೀ ಪರಿವಾರ ಶ್ರೀ ದೇವಳದಲ್ಲಿ ತ್ರಿಕಾಲ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ. ವಿಶೇಷವಾಗಿ ರುದ್ರಾಭಿಷೇಕ, ಏಕಾದಶ ರುದ್ರಾಭಿಷೇಕ, ಶತ ರುದ್ರಾಭಿಷೇಕ ಹೆಚ್ಚಿನ ಸಂಖ್ಯೆಯಲ್ಲಿ ಸಿಯಾಳಾಭಿಷೇಕ, ರಂಗಪೂಜೆ, ಶಿವಪೂಜೆ, ಮಹಾಪೂಜೆ, ಜಿಲ್ವಾರ್ಚನೆ ಇತ್ಯಾದಿ ವಿಶೇಷ ಸೇವೆಗಳು ನಿರಂತರ ನಡೆಯುತ್ತವೆ.
ಮೃತ್ಯು ಕಂಟಕಗಳ ಪರಿಹಾರಕ್ಕಾಗಿ ಮೃತ್ಯುಂಜಯ ಪೂಜೆ. ಜಪ, ಹೋಮ, ನವಗ್ರಹ ಹೋಮ, ಸಂಧಿದೋಷ ನಿವಾರಣೆಗೆ ಸಂಧಿ ಶಾಂತಿ ಹೋಮ, ವಿವಾಹ ಯೋಗ್ಯತೆಯ ಸಲುವಾಗಿ ಸ್ವಯಂವರ ಪಾರ್ವತೀ ಪೂಜೆ, ಶನಿದಶಾಭುಕ್ತಿಯಲ್ಲಿರುವ ದೋಷಗಳ ನಿವಾರಣೆಗಾಗಿ ಶನಿ ಪೂಜೆ, ಜಪಗಳು ನಡೆಯುತ್ತವೆ. ವರ್ಷಕ್ಕೊಮ್ಮೆ ಪೂರ್ವ ಸಂಪ್ರದಾಯದಂತೆ ವಿಜೃಂಭಣೆಯಿಂದ ಒಂಬತ್ತು ದಿನದ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ಪಂಜ ಸಾವಿರ ಸೀಮೆಯ ಒಡೆಯ ಸದಾಶಿವ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆ ಮಹೋತ್ಸವ ಜನವರಿ 24ರಿಂದ ಫೆಬ್ರವರಿ 9ರ ತನಕ ನಡೆಯಿತು. ಜನವರಿ 24 ರಂದು ಪ್ರಾರ್ಥನೆ ನಡೆದು ಗೊನೆ ಕಡಿಯುವುದು ನಡೆಯಿತು. ಕೊಂಬು, ಶಂಖ ಜಾಗಟೆ ವಾದ್ಯ ಮೇಳದೊಂದಿಗೆ ಸ್ಥಳೀಯ ಭಕ್ತರೊಬ್ಬರ ತೋಟದಿಂದ ಜಾತ್ರೋತ್ಸವದ ಗೊನೆ ಮುಹೂರ್ತಕ್ಕಾಗಿ ಬಾಳೆಗೊನೆಗಳನ್ನು ಕಡಿದು ಕ್ಷೇತ್ರಕ್ಕೆ ಅರ್ಪಿಸಲಾಗುತ್ತದೆ. ಫೆಬ್ರವರಿ 1 ರಂದು ತಂತ್ರಿಯರ ಆಗಮನವಾಗಿ ಧ್ವಜಾರೋಹನದ ಸಂಭ್ರಮ ನಡೆಯಿತು.
ಫೆಬ್ರವರಿ 2 ರಂದು ಬೆಳಿಗ್ಗೆ ಬಂಟಮಲೆಯಿಂದ ಪವಿತ್ರ ತೀರ್ಥವನ್ನು ತಂದು ದೇವರಿಗೆ ಅರ್ಪಿಸಲಾಯಿತು. ಈ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ಶಿಲೆಯಲ್ಲಿ ನಾಗನ ಪ್ರತಿ ರೂಪದಂತೆ ಇರುವ ನಾಗ ಬೆಡೆಯ ಪ್ರತಿರೂಪದಿಂದ ಸ್ವಾಭಾವಿಕವಾಗಿ ಮೇಲಿನಿಂದ ಹರಿದು ಬರುವ ನೀರು ಇದರ ಮೇಲಿನಿಂದ ಆಗಿ ಇಳಿದು ಬರುವುದರಿಂದ ಇದಕ್ಕೆ ನಾಗತೀರ್ಥ ಎಂಬ ಹೆಸರು ಬಂದಿದೆ. ರಾತ್ರಿ ನಿತ್ಯ ಬಲಿ ಉತ್ಸಾಹ ನಡೆಯಿತು. ಫೆಬ್ರವರಿ 3 ರಂದು ಹಸಿರು ಕಾಣಿಕೆ ಸಮರ್ಪಣೆ ನಡೆಯಿತು. ಪುತ್ಯ ಕಟ್ಟೆಯಿಂದ ಮೆರವಣಿಗೆ ಮೂಲಕ ವಿಶೇಷವಾಗಿ ಪಂಜ ಸೀಮೆಯ ವಿವಿಧ ಕಡೆಯಿಂದ ಹಸಿರು ಕಾಣಿಕೆಯಲ್ಲಿ ಅಡಿಕೆ, ಬಾಳೆ, ಅಕ್ಕಿ, ಸಿಂಗಾರ, ತೆಂಗಿನ ಕಾಯಿ, ಮುಂತಾದ ವಸ್ತುಗಳನ್ನು ಜೊತೆಗೆ ತರಕಾರಿಗಳನ್ನು ದೇವಾಲಯದ ಜಾತ್ರೋತ್ಸಕ್ಕೆ ನೀಡಿರುತ್ತಾರೆ. ಆಟೋ ಚಾಲಕ ಮಾಲಕರ ಸಂಘ ಮೆರವಣಿಗೆಯಲ್ಲಿ ಪಾಲ್ಗೊಂಡರು. ರಾತ್ರಿ ದಂಡಮಾಲೆ ಹಾಕಿ ಬೇತಾಳಗಳು ಇಳಿದು ಭಕ್ತಿಪೂರ್ಣ ಜಾತ್ರೆಯ ಬಲಿ ಉತ್ಸವ ನಡೆಯಿತು. ಫೆಬ್ರವರಿ 4 ರಂದು ಬೆಳಿಗ್ಗೆ ದೇವರ ಉತ್ಸವ ಮಧ್ಯಾಹ್ನ ಮಹಾಪೂಜೆ ಉತ್ಸಾಹ ಪೂಜೆ ನಡೆಯಿತು. ಫೆಬ್ರವರಿ 5 ರಂದು ದೇವರ ದರ್ಶನ ಬಲಿ ನಡೆಯಿತು. ದೇವರಿಗೆ ಪ್ರಧಾನ ದೈವದ ದರ್ಶನ ಪ್ರಾರ್ಥಿಗಳು ಬಂದು ಪಂಚಲಿಂಗೇಶ್ವರ ದೇವರಿಗೆ ಕಟ್ಟೆ ಪೂಜೆ ನಡೆದು ದೇವರಿಗೆ ಪ್ರಾರ್ಥನೆ ಸಲ್ಲಿಸಿ ದೇವರಿಗೆ ದರ್ಶನ ಬಲಿಗೆ ಅನುಮಾಡಲಾಗಿತ್ತು. ಆಕರ್ಷಣೆಯ ಚಂಡ ನಡೆಯಿತು. ದರ್ಶನ ಬಲಿ ಮುಗಿದ ತಕ್ಷಣ ಬಟ್ಟಲ ಕಾಣಿಕೆ ನಡೆಯಿತು. ರಾತ್ರಿ ದೀಪೋತ್ಸವ, ದೇವರ ಬಲಿ ಹೊರಟು ವಸಂತ ಕಟ್ಟೆ ಪೂಜೆ, ದೈವಗಳ ನರ್ತನೆ ದೇವರ ಉತ್ಸವ ನಡೆಯಿತು.
ಫೆಬ್ರವರಿ 6 ರಂದು ಪರಿವಾರ ಪಂಚಲಿಂಗೇಶ್ವರ ದೇವರ ಬ್ರಹ್ಮ ರಥೋತ್ಸವ, ಕಾಜುಕುಂಜುವ ದೈವ ನರ್ತನೆ ಹಾಗೂ ಸಿಡಿಮದ್ದು ಪ್ರದರ್ಶನ ನಡೆಯಿತು. ಫೆಬ್ರವರಿ 7 ರಂದು ಮುಂಜಾನೆ ಬಲಿ ಹೊರಟು ರಾಜಗೋಪುರದ ಮೂಲಕ ಸಾಗಿ ಬಂದು ಪೂಜೆ ಗಳನ್ನು ಪಡೆದು ಅವಭ್ರತ ಸ್ನಾನಕ್ಕೆ ತೆರಳಿದರು. ದೇವರ ಪ್ರಧಾನ ಸೇವಕನಾದ ಕುಚುಕುಜುಂಬ ದೇವರನ್ನು ಆಧಾರದಿಂದ ಬರಮಾಡಿ ತನ್ನ ಒಡೆಯನ ಜಳಕದ ಬಳಿಯಲ್ಲಿ ಪಾಲ್ಗೊಳ್ಳುವುದು ಇಲ್ಲಿಯ ಸಂಪ್ರದಾಯ, ಜಳಕದ ಹೊಳೆಯಲ್ಲಿ ದೇವರ ಜಳಕ ಜರುಗಿತು. ಬಳಿಕ ದೇವಳದಲ್ಲಿ ಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಣ ಜರುಗಿತು. ಸಂಜೆ ದೇಗುಲದಿಂದ ಕಾಚುಕುಜುಂಬ, ಉಳ್ಳಾಕುಲು ದೈವಗಳ ಭಂಡಾರ ವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿ ಬೈಲಿಗೆ ಕೊಂಡೊಯ್ದು ಧ್ವಜಾರೋಹಣ, ಕಾಚುಕುಜುಂಬ ದೈವದ ನೇಮ ನಡೆಯಿತು. ಫೆಬ್ರವರಿ 8ರಂದು ಮುಂಜಾನೆ ಗರಡಿ ಬೈಲಿನ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ, ಉಳ್ಳಾಕುಲು ದೈವದ ನೇಮ, ಧ್ವಜಾರೋಹಣ, ದೇವಳದಲ್ಲಿ ಸಂಪ್ರೋಕ್ಷಣೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ ನಡೆಯಿತು. ರಾತ್ರಿ ಶಿರಾಡಿ ದೈವದ ಭಂಡಾರ ಬರುವುದು, ಫೆಬ್ರವರಿ 9ರಂದು ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ ಜರಗಿತು.
ವರದಿ: ಜಯಶ್ರೀ ಸಂಪ ಪಂಜ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ