ಕಾರ್ಕಳ: ವೇದದ ಅರ್ಹತೆ ಪಡೆದುಕೊಂಡ ರಾಮಾಯಣ ಮಹಾವಿಷ್ಣುವೇ ದಶರಥ ಮಹಾರಾಜನ ಪುತ್ರನಾಗಿ ಈ ಭೂಮಿಯಲ್ಲಿ ಜನಿಸಿದ ಶ್ರೀರಾಮಚಂದ್ರ ತನ್ನ ಆದರ್ಶ ಮತ್ತು ಉದಾತ್ತ ಗುಣಗಳಿಂದ ಮಹಾವಿಷ್ಣುವಿನ ಪದವಿಗೇರಿದ ಮತ್ತು ರಾಮಾಯಣವು ವೇದದ ಅರ್ಹತೆಯನ್ನು ಪಡೆದುಕೊಂಡಿತು ಎಂಬುದಾಗಿ ಖ್ಯಾತ ವಿದ್ವಾಂಸರೂ, ವಾಗ್ಮಿಗಳೂ ಆಗಿರುವ ಡಾ. ರಾಘವೇಂದ್ರ ರಾವ್ ಪಡುಬಿದ್ರಿಯವರು ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಮಾಲೆಯ ದ್ವಿತೀಯ ಸೋಪಾನ ‘ಯಜ್ಞ ಸಂರಕ್ಷಣಿಯ ಪಥದಲ್ಲಿ’ ಎಂಬ ವಿಷಯದ ಕುರಿತು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.
ದ್ವಿತೀಯ ಸೋಪಾನದಲ್ಲಿ ಯಜ್ಞಕ್ಕೆ ಉಪಟಳ ನೀಡುತ್ತಿದ್ದ ರಾಕ್ಷಸರ ಸಂಹಾರಕ್ಕಾಗಿ ವಿಶ್ವಾಮಿತ್ರರು ದಶರಥ ಮಹಾರಾಜನ ಬಳಿ ಹೋಗಿ ರಾಮಲಕ್ಷ್ಮಣರನ್ನು ಕಳಿಸುವಂತೆ ಕೇಳುತ್ತಾರೆ. ದಶರಥ ಒಪ್ಪದಿದ್ದಾಗ ವಶಿಷ್ಠರ ಮಾತಿನಂತೆ ರಾಮಲಕ್ಷ್ಮಣರನ್ನು ಕಳಿಸುತ್ತಾರೆ. ವಿಶ್ವಾಮಿತ್ರರು ರಾಮಲಕ್ಷ್ಮಣರಿಗೆ ಉಪದೇಶಿಸಿದ ಮಂತ್ರಾಸ್ತ್ರಗಳಿಂದ ರಾಕ್ಷಸರನ್ನು ಕೊಂದು ಯಜ್ಞ ಸಂರಕ್ಷಣೆಯನ್ನು ಮಾಡಿದರು ಎಂಬುದನ್ನು ರೋಚಕ ಕಥೆಗಳೊಂದಿಗೆ ವಿವರಿಸಿದರು.
ಡಾ.ನಾ.ಮೊಗಸಾಲೆ, ಎಸ್. ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ, ಏರ್ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್, ಕಾರ್ಯಕ್ರಮದ ಪ್ರಾಯೋಜಕರಾದ ಲಕ್ಷ್ಮಣ ಕುಡ್ವರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು| ಶಾರ್ವರಿ ಪ್ರಾರ್ಥಿಸಿದರು. ಡಾ. ಸುಮತಿ ಪಿ. ನಿರೂಪಿಸಿದ ಕಾರ್ಯಕ್ರಮದಲ್ಲಿ ಸದಾನಂದ ನಾರಾವಿ ಸ್ವಾಗತಿಸಿ ಸುಧಾಕರ ಶ್ಯಾನುಭೋಗ್ ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ