ಬೆಳ್ತಂಗಡಿ: ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಎರಡನೇ ಅಧ್ಯಾಯದ ಪ್ರಸ್ತುತಿ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಗಣಪತಿ ಭಟ್ ಕುಳಮರ್ವ ಇವರು ಭಗವದ್ಗೀತೆಯ ಎರಡನೇ ಅಧ್ಯಾಯದ ಉಪನ್ಯಾಸ ಮಾಲಿಕೆಯ ಮಹಾಭಾರತದ ಯುದ್ಧ ಸನ್ನಿವೇಶದಲ್ಲಿ ಧರ್ಮ ಅಧರ್ಮಗಳ ಸಂಘರ್ಷದ ದ್ವಂದ್ವ ಹಾಗೂ ಶ್ರೀಕೃಷ್ಣನು ಅದನ್ನು ನಿವಾರಿಸಿದ ಬಗೆಯನ್ನು ಮನೋಜ್ಞವಾಗಿ ವಿವರಿಸಿದರು.
ಕೃಷ್ಣನು ಅರ್ಜುನನಿಗೆ, ಹೃದಯ ದೌರ್ಬಲ್ಯವನ್ನು ತೊರೆದು ಕ್ಷತ್ರಿಯ ಧರ್ಮವನ್ನು ನೆನಪಿಸುತ್ತಾ, ಕರ್ತವ್ಯದಲ್ಲಿ ನಿರತನಾದವನು ಭಾವನೆಗಳ ದಾಸನಾಗಬಾರದು, ಬರಿಯ ದೇಹದ ಮೇಲೆ ಆಕ್ರಮಣ ಮಾಡಿ ಅವರ ತಪ್ಪಿಗೆ ಶಿಕ್ಷೆ ನೀಡಿ ಅವರನ್ನು ಮೋಕ್ಷಕ್ಕೆ ಕಳುಹಿಸುವ ಮಹತ್ಕಾರ್ಯ ಎಂದು ಭಾವಿಸಿಕೋ ಎಂದು ಹೇಳಿರುವುದನ್ನು ಅವರು ನೆನಪಿಸಿದರು.
ಹಳೆಯ/ಹರಿದ ಅಂಗಿಯನ್ನು ಬದಲಾಯಿಸಿದಷ್ಟೇ ಈ ಸಾವು ಎಂದು ಸರಳೀಕರಿಸಿ, ಸ್ಥಿತ ಪ್ರಜ್ಞನ ಲಕ್ಷಣಗಳನ್ನು ವಿವರಿಸಿ, ಧರ್ಮ ರಕ್ಷಣೆಯ ಅವಕಾಶವನ್ನು ಕೈ ಚೆಲ್ಲಬೇಡ, ಯುದ್ಧವನ್ನು ಪ್ರಾರಂಭಿಸು ಎಂದು ಗೀತೆಯ ಸ್ವಾರಸ್ಯವನ್ನು, ವಿವಿಧ ಉದಾಹರಣೆಗಳ ಮೂಲಕ ಮನೋಜ್ಞವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ ಇವರು ಭಗವದ್ಗೀತೆಯ ಗೀತೋಪದೇಶ ಪ್ರತಿ ಜನಸಾಮಾನ್ಯರ ನಾಡಿ ಮಿಡಿತವಾಗಬೇಕು ಎಂಬ ಸದುದ್ದೇಶ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಇವರ ಆಶಯ. ಈ ನಿಟ್ಟಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿ ಆಯೋಜಿಸಿದ ಈ ಪುಣ್ಯ ಕಾರ್ಯದ ಸದುಪಯೋಗವನ್ನು ಯುವ ಜನರು ಪಡೆದುಕೊಳ್ಳುವಂತಾಗಬೇಕು ಎಂದು ನುಡಿದರು.
ಗೌರವ ಉಪಸ್ಥಿತರಿದ್ದ ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ ಇವರನ್ನು ಶ್ರೀಮತಿ ವಸಂತಿ ಕುಳಮರ್ವ ಇವರು ಮತ್ತು ಸಂಪನ್ಮೂಲ ವ್ಯಕ್ತಿ ಪ್ರೊ. ಗಣಪತಿ ಭಟ್ ಕುಳಮರ್ವ ಇವರನ್ನು ಅ.ಭಾ.ಸಾ.ಪ. ಬೆಳ್ತಂಗಡಿ ತಾಲೂಕು ಸಮಿತಿ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ ಇವರು ತಾಂಬೂಲ ನೀಡಿ ಗೌರವಿಸಿದರು.
ಅತಿಥಿಗಳು ಶಾರದ ಮಾತೆ ಮತ್ತು ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು. ಸಮಿತಿಯ ಸದಸ್ಯೆರಾದ ಶ್ರೀಮತಿ ಆಶಾ ಅಡೂರು ಮತ್ತು ಅಕ್ಷತಾ ಅಡೂರು ಶಾರದೆಯನ್ನು ಸ್ತುತಿಸಿದರು. ಸುಭಾಷಿಣಿಯವರು ರಚಿಸಿದ ಆಶಯ ಗೀತೆಯನ್ನು ಶ್ರೀಮತಿ ಅಶ್ವಿಜ ಶ್ರೀಧರ್ ಇವರು ರಾಗ ಸಂಯೋಜಿಸಿ ಸುಶ್ರಾವ್ಯವಾಗಿ ಹಾಡಿದರು.
ಜತೆ ಕಾರ್ಯದರ್ಶಿ ಶ್ರೀಮತಿ ವಿನುತಾ ರಜತ್ ಗೌಡ ಇವರು ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ರಾಮಕೃಷ್ಣ ಭಟ್ ಬದನಾಜೆ ಧನ್ಯವಾದವನ್ನಿತ್ತರು.
ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಪ್ರಕಾರ ಪ್ರಮುಖರು ಮತ್ತು ಸದಸ್ಯರು, ನಮ್ಮ ಮನೆ ಹವ್ಯಕ ಭವನ ಕ್ರಿಯಾ ಸಮಿತಿಯ ಸದಸ್ಯರು, ಲಯನ್ಸ್ ಕ್ಲಬ್ ಬೆಳ್ತಂಗಡಿಯ ಸದಸ್ಯರು, ಸ್ಥಳೀಯ ಭಜನಾ ಮಂಡಲದ ಪದಾಧಿಕಾರಿಗಳು ಸದಸ್ಯರು, ವೇದವ್ಯಾಸ ಶಿಶುಮಂದಿರದ ಪದಾಧಿಕಾರಿಗಳು, ಹಾಗೂ ಊರಿನ ಮಹನೀಯರು ಮತ್ತು ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ