ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಪನ್ಯಾಸ
ಶಿವಮೊಗ್ಗ: ಮನುಷ್ಯನ ದೇಹ ಒಂದು ವಿಶೇಷವಾದ ಸೃಷ್ಟಿ. ಈ ದೇಹದ ಅಂಗಾಂಗಗಳು ಹಾಗೂ ಅದರ ಕಾರ್ಯ ವೈಖರಿ ವಿಶೇಷವಾದುದು. ಇಂತಹ ವಿಶೇಷ ಸೃಷ್ಟಿಯ ಅಂಗಾಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಈ ಎಲ್ಲಕ್ಕೂ ಪ್ರಮುಖವಾಗಿರುವ ನಮ್ಮ ಹೃದಯವನ್ನು ನಾವು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಹಾಗೆಯೆ ನಮ್ಮ ಆರೋಗ್ಯಕ್ಕೆ ಮೂರು ಮುಖ್ಯ ಸೂತ್ರಗಳಿವೆ. ಅವುಗಳೆಂದರೆ- ನಾವು ಸೇವಿಸುವ ನೀರು, ಗಾಳಿ ಹಾಗೂ ಆಹಾರ. ಈ ಮೂರರಲ್ಲೂ ನಾವು ಸ್ವಚ್ಛತೆಯನ್ನು ಹಾಗೂ ಸರಿಯಾದ ಕ್ರಮವನ್ನು ರೂಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ತಿಳಿಸಿದರು.
ಅವರು ಶುಕ್ರವಾರ (ಫೆ.21) ಮಂಡಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಚಿಕೊಪ್ಪ ಗ್ರಾಮದಲ್ಲಿ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ವಾರ್ಷಿಕ ವಿಶೇಷ ಗ್ರಾಮೀಣ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆರೋಗ್ಯ ಪಾಲನೆಯ ಮಹತ್ವದ ಬಗ್ಗೆ ಮಾತನಾಡಿದರು.
ಆಹಾರ ಸೇವನೆಯಲ್ಲಿ ಪೌಷ್ಟಿಕ ಆಹಾರ ಹಾಗೂ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಇದಕ್ಕಿರುವ ಸರಳ ಸೂತ್ರವೆಂದರೆ ನಮ್ಮ ಊಟದ ತಟ್ಟೆಯನ್ನು ತಿರುಗಿಸಿ ಇಡುವುದು. ಅಂದರೆ ನಾವು ಮುಖ್ಯ ಆಹಾರ ಎಂದುಕೊಂಡಿರುವ ಅನ್ನ, ರೊಟ್ಟಿ, ದೋಸೆ ಇತ್ಯಾದಿಯನ್ನು ಕಡಿಮೆ ಪ್ರಮಾಣದಲ್ಲಿಯೂ ತಟ್ಟೆಯ ಬದಿಯಲ್ಲಿರುವ ಪಲ್ಯ ತರಕಾರಿ ಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿಯೂ ಸೇವಿಸಬೇಕು ಎಂದು ತಿಳಿಸಿದರು.
ಇದಲ್ಲದೆ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಸೇವಿಸುವುದು ಮುಖ್ಯ. ಹಾಗೆಯೇ ಶ್ವಾಸಕೋಶದ ಆರೋಗ್ಯಕ್ಕೆ ದೀರ್ಘ ಉಸಿರಾಟ ಬಹಳ ಮುಖ್ಯ ಎಂದು ತಿಳಿಸಿದರು. ಹಲವಾರು ಉದಾಹರಣೆಗಳ ಮೂಲಕ ಈ ಮೂರು ಸೂತ್ರಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ರೀತಿಯನ್ನು ತಿಳಿಸಿಕೊಟ್ಟರು. ಇಷ್ಟು ಮಾತ್ರವಲ್ಲದೆ ದೇಹದ ಆರೋಗ್ಯಕ್ಕೆ ಮನಸ್ಸಿನ ಆರೋಗ್ಯವು ಮುಖ್ಯ ಎಂದು ತಿಳಿಸಿದರು. ನಮ್ಮ ಮನಸ್ಸಿನಲ್ಲಿ ಅಪಾರವಾದ ಶಕ್ತಿ ಇದೆ ನಾವು ಧನಾತ್ಮಕವಾಗಿ ಆಲೋಚಿಸುವುದು ಅತ್ಯಂತ ಮುಖ್ಯ ಎಂದು ಡಾ. ಸರ್ಜಿ ತಿಳಿಸಿದರು.
ನಾವು ಜೀವನದಲ್ಲಿ ಸಾಧನೆಯನ್ನು ಮಾಡಲು ನಾಲ್ಕು D.ಗಳನ್ನು ಪಾಲಿಸಬೇಕು ಅವುಗಳೆಂದರೆ: ದೊಡ್ಡ ಕನಸನ್ನು ಕಾಣುವುದು ಡ್ರೀಮ್ ಬಿಗ್, ಅದಕ್ಕಾಗಿ ನಿರ್ಧಾರಗಳನ್ನು ಮಾಡುವುದು- ಡಿಸಿಷನ್ ಮೇಕಿಂಗ್ ಹಾಗೂ ನಮ್ಮ ಕನಸನ್ನು ಹಂಚಿಕೊಳ್ಳುವುದು- ಡಿಕ್ಲೇರ್ ಯುವರ್ ಡ್ರೀಮ್ಸ್ ಮತ್ತು ಕೊನೆಯದಾಗಿ ಸತತವಾಗಿ ನಿರಂತರವಾಗಿ ಶ್ರಮ ವಹಿಸುವುದು- ಡೆಡಿಕೇಶನ್ ಎಂದು ಅರ್ಥಪೂರ್ಣವಾಗಿ ತಿಳಿಸಿದರು.
ತಾನು ಸ್ವತಃ ಒಬ್ಬ ಪ್ರಸಿದ್ಧ ವೈದ್ಯನಾಗಬೇಕೆಂದು ಮತ್ತು ಜನಪರ ವ್ಯಕ್ತಿಯಾಗಬೇಕೆಂದು ಕಂಡಿದ್ದ ಕನಸು ನನಸಾಗುತ್ತಿದೆ ಹಾಗೂ ಹಾಗೂ ನನ್ನ ಕನಸನ್ನು ನನಸಾಗಿಸುವಲ್ಲಿ ತನ್ನ ಪ್ರಯತ್ನ ಹಾಗೂ ಶ್ರಮ ಮತ್ತು ಎಲ್ಲರ ಬೆಂಬಲ ಕಾರಣ ಎಂದು ತಿಳಿಸಿದರು. ಡಾಕ್ಟರ್ ಅಶೋಕ್ ಪೈರವರು ಬಹಳ ದೊಡ್ಡ ಸಾಧನೆಯನ್ನು ಮಾಡಿದ್ದರು ಹಾಗೂ ಸರಳವಾಗಿ ಜೀವನವನ್ನು ನಡೆಸಿದರು. ಅದರಂತೆಯೇ ಮಾನಸ ಸಂಸ್ಥೆ ಅತ್ಯಂತ ದೊಡ್ಡ ಸಂಸ್ಥೆಯಾದರೂ ಅಲ್ಲಿರುವ ವೈದ್ಯರೆಲ್ಲರೂ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಆದುದರಿಂದ ಇಂದಿನ ಯುವಕ ಯುವತಿಯರು ಸಾಧನೆಯನ್ನು ಮಾಡಬೇಕು ಹಾಗೆಯೇ ಸರಳತೆಯನ್ನು ಪಾಲಿಸಬೇಕು. ಎಷ್ಟು ದೊಡ್ಡವರಾದರೂ ಅಥವಾ ಧನಿಕರಾದರೂ ಪರೋಪಕಾರವನ್ನು ಮರೆಯಬಾರದು ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡುತ್ತಾ, ಡಾಕ್ಟರ್ ಧನಂಜಯ ಸರ್ಜಿ ವೈದ್ಯರಾಗಿ ಹಾಗೂ ಜನ ಪ್ರತಿನಿಧಿಯಾಗಿ ಒಬ್ಬ ಮಾದರಿ ವ್ಯಕ್ತಿಯಾಗಿ ಇದ್ದಾರೆ. ತಮಗೆ ಗೊತ್ತಿರುವ ಮಾಹಿತಿಯನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಅವರ ಸಾಮರ್ಥ್ಯ ಅತ್ಯಂತ ವಿಶೇಷವಾದದು. ಡಾ. ಧನಂಜಯ ಸರ್ಜಿ ಅವರು ತಮ್ಮ ಜನಪರ ಕೆಲಸಗಳಿಂದಲೇ ಜನಪ್ರತಿನಿಧಿಯಾದ ವಿಶೇಷ ರಾಜಕಾರಣಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಚಿ ಕೊಪ್ಪದ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಊರ ಮುಖಂಡರಾದ ಮಹೇಶ್ವರಪ್ಪ, ಗುರುಗಳಾದ ರಾಜಣ್ಣ, ಹಾಲು ಒಕ್ಕೂಟದ ಪ್ರತಿನಿಧಿಗಳು, ಎನ್ಎಸ್ಎಸ್ ಅಧಿಕಾರಿಗಳು ಉಪನ್ಯಾಸಕರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮಂಜುಳಾ ಕಾರ್ಯಕ್ರಮ ನಿರ್ವಹಿಸಿದರು. ತನ್ಮಯಿ ಪ್ರಾರ್ಥನೆಯನ್ನು ಹಾಡಿದರು. ಸಂಗೀತ ಎಲ್ಲರನ್ನು ವಂದಿಸಿದರು.
ಶಿಬಿರದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ದಂತ ವೈದ್ಯಕೀಯ ಮಹಾವಿದ್ಯಾಲಯದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಆರೋಗ್ಯದ ಮಹತ್ವವನ್ನು ಶಿಬಿರಾರ್ಥಿಗಳು ಸಾರಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ