ನಿವೇಶನ ದಾಖಲೆಗಳ ಗೊಂದಲ: ಉಡುಪಿಯ ಸರ್ವ ನಾಗರಿಕರಲ್ಲಿ ಒಂದು ಮನವಿ

Upayuktha
2 minute read
0


ಮಗೆಲ್ಲಾ ತಿಳಿದಿರುವಂತೆ ಉಡುಪಿ, ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಕರ್ನಾಟಕ ರಾಜ್ಯದಾದ್ಯಂತ ಭೂಹಿಡುವಳಿ/ನಿವೇಶನ ದಾಖಲೆಗಳ ಮತ್ತು ನೋಂದಣಿ ಕುರಿತಂತೆ ತುಂಬಾ ಸಮಸ್ಯೆ, ಗೊಂದಲ ಮತ್ತು ದಾವೆಗಳಿವೆ. ದೊಡ್ಡ ಸಂಖ್ಯೆಯ ಜನರು ಸಂತ್ರಸ್ತರಾಗಿ ಬಳಲುತ್ತಿದ್ದಾರೆ. ಒಟ್ಟಾರೆ ಇವೆಲ್ಲವೂ ಎಷ್ಟು ಜಠಿಲವಾಗಿವೆ ಎಂದರೆ ಸರಕಾರವು ಒಂದು ಶಾಶ್ವತ, ವಿವೇಚನಾಬದ್ಧ ಪರಿಹಾರ ತರಲು ಸಂಪೂರ್ಣ ವಿಫಲವಾಗಿದೆ. ನ್ಯಾಯಾಲಯಗಳು ಕೂಡ ಈ ಬ್ರಹ್ಮಾಂಡ ಗೊಂದಲಕ್ಕೆ ವಿಳಂಬವೇ ಪರಿಹಾರ ಎಂದು ತೀರ್ಮಾನಿಸಿದಂತೆ ಕಾಣುತ್ತದೆ. ವಸ್ತುಸ್ಥಿತಿಯನ್ನು ಗಮನಿಸುವಾಗ ಭೂಮಾಫಿಯಾದವರೇ ಇಡೀ ರಾಜ್ಯವನ್ನು ಹಿಂಡುತ್ತಿರುವ ಈ ಸಮಸ್ಯೆಯ ಸೂತ್ರಧಾರರಾಗಿದ್ದಾರೆ ಎಂದು ನಿಚ್ಚಳವಾಗಿ ಕಂಡುಬರುತ್ತಿದೆ.


ಈ ಗೊಂದಲದ ಗೂಡನ್ನು ಕೆದಕುವಂತೆ ಕರ್ನಾಟಕ ಸರಕಾರವು ಅಕ್ರಮ ಮತ್ತು ಅನಧಿಕೃತ ನಿವೇಶನ ಮತ್ತು ಬಡಾವಣೆಯ ನಿವಾಸಿ/ಮಾಲಕರ ಅನುಕೂಲಕ್ಕಾಗಿ ಬಿ- ಖಾತಾ ನೀಡುವ ಹೊಸ ಹಾಗೂ ವಿಲಕ್ಷಣ ಯೋಜನೆಯನ್ನು ಘೋಷಿಸಿದೆ. ಇದು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ತರುತ್ತದೆ ಮತ್ತು ಇನ್ನು ಮುಂದೆ ಕರ್ನಾಟಕದಲ್ಲಿ ಭೂಹಿಡುವಳಿ/ನಿವೇಶನಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಳಿಯುವುದಿಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಅದರ ಪ್ರಚಾರದಲ್ಲಿ ತೊಡಗಿದ್ದಾರೆ ಮತ್ತು ಅಧಿಕಾರಿಗಳ ಬಾಯಲ್ಲಿ ಅದನ್ನೇ ಹೇಳಿಸುತ್ತಿದ್ದಾರೆ. ಇವರನ್ನು ನಂಬಬಹುದೇ?


ವಾಸ್ತವ ಏನು!? ವಾಸ್ತವದಲ್ಲಿ ಈ ಬಿ- ಖಾತಾ ಯಾವ ಪರಿಹಾರವನ್ನೂ ತರುವುದಿಲ್ಲ. ಅನಧಿಕೃತ ಬಡಾವಣೆಯ ನಿವೇಶನದಾರರು ತಮ್ಮ ನಿವೇಶನಗಳನ್ನು ಮಾರಬಹುದೇ, ಅವರಿಗೆ ಅದರಲ್ಲಿ ಮನೆ ಕಟ್ಟಲು ಪರವಾನಗಿ ಸಿಗುತ್ತದೆಯೇ, ಮನೆ ಕಟ್ಟಲು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸಿಗುತ್ತದೆಯೇ, ಮನೆ ಕಟ್ಟಿದರೆ ಮನೆ ನಂಬ್ರ ಸಿಗುತ್ತದೆಯೇ, ವಿದ್ಯುಚ್ಛಕ್ತಿ ಮತ್ತು ನೀರಿನ ಸಂಪರ್ಕ ಸಿಗುತ್ತದೆಯೇ, ಅದನ್ನು ತಮ್ಮ ಮಕ್ಕಳ ಹೆಸರಿಗೆ ನೋಂದಣಿ ಮಾಡಿಸಬಹುದೇ ಎಂಬಿತ್ಯಾದಿ ಯಾವ ಪ್ರಶ್ನೆ, ಅನುಮಾನಗಳಿಗೂ ಅದು ಉತ್ತರ ಕೊಡುವುದಿಲ್ಲ; ಅವುಗಳ ಪ್ರಸ್ತಾಪ ಕೂಡ ಇಲ್ಲ. ಅಕ್ರಮ, ಅನಧಿಕೃತ, ಅಕ್ರಮ ನಿರ್ಮಾಣ ಇತ್ಯಾದಿಗಳ ನಡುವೆ ಗೊಂದಲ ಮುಂದುವರಿದಿದೆ. ನಿಜವೆಂದರೆ, ಅನಧಿಕೃತ ಬಡಾವಣೆಯ ನಿವೇಶನದಾರರ ಸ್ಥಿತಿಯನ್ನು ಅದು ಮತ್ತಷ್ಟು ದುರ್ಬಲಗೊಳಿಸುತ್ತದೆ.


ಹಲವು ದಾವೆಗಳು ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಇರುವಾಗಲೇ ಸರಕಾರ ಅವಸರದಲ್ಲಿ ಈ ಅರೆಬೆಂದ ಯೋಜನೆಯನ್ನು ರೂಪಿಸಿದ್ದನ್ನು ಗಮನಿಸಿದರೆ ದಂಡ, ಶುಲ್ಕ ಮತ್ತು ತೆರಿಗೆ ಸಂಗ್ರಹವೇ ಸರಕಾರದ ಗುಪ್ತ ಉದ್ದೇಶವಾಗಿ ಕಾಣುತ್ತದೆ. ಇದರ ಉದ್ದೇಶವೇ ಭೂಮಾಫಿಯಾದವರ ಲಾಭಕ್ಕಾಗಿ ಹಲವು ಹೊಸ ಗೊಂದಲಗಳನ್ನು ಹುಟ್ಟಿಸುವುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದವರಿದ್ದಾರೆ. 


ಇಂತಹ ಒಂದು ದೊಡ್ಡ ಅನಾಹುತಕಾರಿ ಯೋಜನೆಯನ್ನು ಸರಕಾರ ಜಾರಿಗೊಳಿಸುತ್ತಿರುವಾಗ ಮಾಧ್ಯಮ ಮತ್ತು ನ್ಯಾಯಾಲಯ ನಮ್ಮನ್ನು ಎಚ್ಚರಿಸಬೇಕಾಗಿತ್ತು. ಅವರ ಮೌನ ನಿಜವಾಗಿಯೂ ನಿರಾಶಾದಾಯಕ. ಆದರೆ ಸಂತ್ರಸ್ತರು ಆಶಾಭಾವನೆಯನ್ನು ತಳೆದಿದ್ದಾರೆ. ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಪದ್ಬಾಂಧವನಾಗಿ ಕಾಣಿಸುವುದು ಸಹಜ. ಆದರೆ ನಮ್ಮ ವಿನಂತಿ ಏನೆಂದರೆ ದಯವಿಟ್ಟು ಯಾರೂ ಇದನ್ನು ನಂಬಬೇಡಿ ಮತ್ತು "ಒತ್ತಾಯ ಮಾಡಿ ಕರೆಯುತ್ತಾರೆ" ಎಂಬ ಕಾರಣಕ್ಕೆ ಬಿ ಖಾತಾ ಮಾಡಿಸಲು ಓಡಬೇಡಿ. ಇದ್ಯಾವುದೂ ಶಾಶ್ವತ ಪರಿಹಾರ ತರಲಾರದು ಮತ್ತು ವ್ಯತಿರಿಕ್ತ ಪರಿಣಾಮವನ್ನೇ ಬೀರುತ್ತದೆ.‌ ನಿಮಗೆ ಪರಿಹಾರ ಬೇಕು ಎಂಬ ಅಭಿಲಾಷೆಯಿದ್ದರೆ ತಮ್ಮತಮ್ಮ ಸಮಸ್ಯೆಯ ಸ್ವರೂಪಕ್ಕೆ ಅನುಗುಣವಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ದಾವೆ/writ petition/Impleadment ದಾಖಲಿಸಬಹುದು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆದ ಅನಧಿಕೃತ ಬಡಾವಣೆ ಹಗರಣದ ಸಂತ್ರಸ್ತರಾದ ನಾವು ಸುಪ್ರೀಂ ಕೋರ್ಟಿನಲ್ಲಿ Impleadment ಸಲ್ಲಿಸಿದ್ದೇವೆ. (Impleadment to SLP (C) No. 000956 - 000957/ 2017 registered on 10-1-2017)


ಸರಕಾರವು ತನ್ನ ಹಣಕಾಸು ಅಶಿಸ್ತಿನಿಂದ ಉಂಟಾದ ಕೊರತೆಯನ್ನು ನೀಗಿಸಲು ಅಮಾಯಕ ಸಂತ್ರಸ್ತರನ್ನು, ಪ್ರಜೆಗಳನ್ನು ಸುಲಿಗೆ ಮಾಡಲು ಹೊರಟಿದೆ ಎಂಬ ಸತ್ಯವನ್ನು ಮನಗಂಡು ತಾರ್ಕಿಕ ಮಾರ್ಗವನ್ನು ಹಿಡಿಯಿರಿ ಎಂದು ಕರ್ನಾಟಕದ ಪ್ರಜೆಗಳನ್ನು ಕೋರಿಕೊಳ್ಳುತ್ತಿದ್ದೇವೆ.


- ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ನಡೆದ ಅನಧಿಕೃತ ಬಡಾವಣೆ ಹಗರಣದ ಸಂತ್ರಸ್ತರು.


Post a Comment

0 Comments
Post a Comment (0)
To Top