ಬೆಂಗಳೂರು: ನೃತ್ಯ ದಿಶಾ ಟ್ರಸ್ಟಿನ ಸಂಸ್ಥಾಪಕರೂ ಗುರುಗಳೂ ಆದ 'ಕಲಾಭೂಷಿಣಿ' ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು|| ದೀಪಾರಾಣಿರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಇತ್ತೀಚೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ 'ಸಂಗೀತ ಕಲಾರತ್ನ' ಡಾ|| ಎಂ. ಸೂರ್ಯಪ್ರಸಾದ್, ಕಲಾಮಂಡಲಂ ಗುರು ಉಷಾ ಧಾತರ್, ಮಂಜುನಾಥ್ ಜಿ ಕೆ ಅವರು ಭಾಗವಹಿಸಿದ್ದರು.
ಮೊದಲಿಗೆ ಭರತನಾಟ್ಯ ಮಾರ್ಗದಲ್ಲಿನ ಅಮೃತವರ್ಷಿಣಿ ರಾಗದ 'ಪುಷ್ಪಾಂಜಲಿ ಹಾಗೂ ಅಷ್ಟದಿಕ್ಪಾಲಕ ವಂದನೆಯೊಂದಿಗೆ ದೀಪ ಕಾರ್ಯಕ್ರಮ ಪ್ರಾರಂಭಿಸಿದರು . ಅಷ್ಟದಿಕ್ಪಾಲಕ ವಂದನೆ ವೇಷ ರಚನೆಯಾಗಿತ್ತು. ಪ್ರತಿ ಒಂದು ದಿಕ್ಪಾಲಕರಿಗೆ ಇರುವ ತಾಳ ವಿಶೇಷತೆಯನ್ನು ಬಳಸಿಕೊಂಡು ಈ ನೃತ್ಯ ಸಂಯೋಜನೆ ಮಾಡಲಾಗಿತ್ತು. ತದನಂತರ ನರ್ತಿಸಿದ ಗಣೇಶ ಕೃತಿಯನ್ನು ಅಮೋಘವಾಗಿ ಅಭಿನಯಿಸಿದರು.
ಮುಂದಿನ ಆಯ್ಕೆ ಚೂರ್ಣಿಕೆ ಕೂಡ ವಿಶೇಷವಾಗಿತ್ತು .ಇದು ತ್ಯಾಗರಾಜರ ರಚನೆಯಾಗಿದ್ದು ಅದ್ಭುತವಾಗಿ ಸಂಯೋಜಿಸಲಾಗಿತ್ತು. ಮಹಾಭಾರತ ಶಬ್ದಂನಲ್ಲಿ ದೀಪರವರು ತಮ್ಮ ಅದ್ಭುತ ಅಭಿನಯದಿಂದ ನೋಡುಗರ ಪ್ರಶಂಸೆಗೆ ಪಾತ್ರರಾದರು.
ಶ್ರೀ ಕೃಷ್ಣ ಕರಣಾಮೃತವನ್ನು ಆಧರಿಸಿ ಕೃಷ್ಣನ ವಿವಿಧ ಲೀಲೆಗಳ ವರ್ಣವನ್ನು ಲೀಲಾಜಾಲವಾಗಿ ನರ್ತಿಸಿದರು. ಕ್ಲಿಷ್ಟಕರ ಲಯ ವಿನ್ಯಾಸದ ಜತಿಗಳನ್ನು ಮನೋಹರವಾಗಿ ನರ್ತಿಸಿದರು ದೀಪಾ. ಶಂಕರಾಚಾರ್ಯರ ಸೌಂದರ್ಯ ಲಹರಿಯನ್ನು ಆಧರಿಸಿ ದೇವಿ ನವರಸ ಹಾಗೂ ನಾರಾಯಣತೀರ್ಥರ ಒಂದು ಸುಂದರವಾದ ರಚನೆ ದುರ್ಗಾ ರಾಗದ ಕೃತಿ ಜಯ ಜಯ ದುರ್ಗೆಯಲ್ಲಿ ದೀಪಾರವರ ಅಭಿನಯ ಕುಶಲತೆಯ ಗಮನ ಸೆಳೆಯಿತು.
ದೀಪ ಅವರ ಕಾರ್ಯಕ್ರಮದಲ್ಲಿ ತುಂಬಾ ಮೆಚ್ಚುಗೆ ಪಡೆದ ನೃತ್ಯ ಪುರಂದರದಾಸರ "ಹನುಮಂತ ದೇವ ನಮೋ". ದೀಪ ತನ್ಮಯತೆಯಿಂದ ಹನುಮಂತನ ಗುಣಗಾನ ಮಾಡಿದಳು. ಕಾರ್ಯಕ್ರಮವು ವಲಚಿ ರಾಗದ ತಿಲ್ಲಾನ ಹಾಗೂ ಮಂಗಳದೊಂದಿಗೆ ಸಂಪೂರ್ಣಗೊಂಡಿತು. ಗುರು ದರ್ಶಿನಿ ಮಂಜುನಾಥ್ ರವರ ಸುಂದರ ಸಂಯೋಜನೆಗೆ ಅದ್ಬುತವಾಗಿ ನೃತ್ತ ಹಾಗೂ ಅಭಿನಯಗಳಿಂದ ರಸಿಕರ ಮನ ಗೆದ್ದರು ದೀಪಾ. ಒಟ್ಟಾರೆ ನೃತ್ಯ ದಿಶಾ ಟ್ರಸ್ಟ್ ನ 16ನೇ ರಂಗಪ್ರವೇಶ ಯಶಸ್ವಿಯಾಗಿ ಮೂಡಿಬಂತು. ಗುರು.ದರ್ಶಿನಿ ಅವರ ಸಂಯೋಜನೆ ಕು|| ದೀಪಾರಾಣಿ ಅವರ ಅಭಿನಯಕ್ಕೆ ರಸಿಕರು ಪ್ರಸಂಶೆ ವ್ಯಕ್ತಪಡಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ