ಕಾಸರಗೋಡು: ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಡೆದ ದೇವಾಲಯ ಉತ್ಸವದ ಸಂದರ್ಭದಲ್ಲಿ ಎರಡು ಆನೆಗಳು ಭೀತಿಯಿಂದ ಓಡಾಡಿ ಮೂವರು ಸಾವನ್ನಪ್ಪಿ, 30 ಜನರು ಗಾಯಗೊಂಡಿದ್ದಾರೆ. ಗುರುವಾರ ಸಂಜೆ ಈ ದುರ್ಘಟನೆ ನಡೆದಿದೆ.
ಕೊಯಿಲಾಂಡಿ ಪ್ರದೇಶದ ಮನಕುಲಂಗರ ದೇವಸ್ಥಾನ ಜಾತ್ರೋತ್ಸವದ ವೇಳೆ ಪಟಾಕಿ ಸಿಡಿಸಿದಾಗ, ಜಾತ್ರೆಗಾರಿ ದೇವಸ್ಥಾನಕ್ಕೆ ತರಲಾದ ಪೀತಾಂಬರನ್ ಹೆಸರಿನ ಆನೆ ಕೆರಳಿದ್ದು, ಪಕ್ಕದಲ್ಲಿ ನಿಂತಿದ್ದ ಗೋಕುಲ್ ಹೆಸರಿನ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿತು. ಆಗ ಎರಡೂ ಆನೆಗಳು ಗುದ್ದಾಟ ಆರಂಭಿಸಿ ಯದ್ವಾತದ್ವಾ ಓಡಾಡಿದವು.
ಈ ಘಟನೆಯಿಂದ ನೆರೆದಿದ್ದ ಜನತೆ ಭಯಭೀತರಾಗಿ ಓಡಿದರು. ಆಗ ಉಂಟಾದ ಕಾಲ್ತುಳಿತದಲ್ಲಿ ಹಲವರು ನೆಲಕ್ಕೆ ಬಿದ್ದರು. ಕೆರಳಿದ ಆನೆಗಳು ಸಿಕ್ಕಸಿಕ್ಕಲ್ಲಿ ಗುದ್ದಾಡಿ ದೇವಸ್ಥಾನದ ಕಚೇರಿಯನ್ನು ನಾಶಪಡಿಸಿದವು. ನೆಲಕ್ಕೆ ಬಿದ್ದ ಕೆಲವರು ಆನೆಗಳ ಕಾಲ್ತುಳಿತಕ್ಕೂ ಸಿಲುಕಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಟ್ಟಾರೆ ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಸುಮಾರು 30 ಜನರು ಗಾಯಗೊಂಡಿದ್ದು, ಅವರಲ್ಲಿ ಕನಿಷ್ಠ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಹಬ್ಬಗಳು ಮತ್ತು ಇತರ ಆಚರಣೆಗಳ ಸಮಯದಲ್ಲಿ ಆನೆಗಳ ಮೆರವಣಿಗೆಗೆ ಕೇರಳ ಹೈಕೋರ್ಟ್ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅದಾಗಿ ಮೂರು ತಿಂಗಳೊಳಗೆ ಈ ಘಟನೆ ನಡೆದಿದೆ. ಆದಾಗ್ಯೂ, ಹೈಕೋರ್ಟ್ನ ನಿರ್ದೇಶನಗಳು "ಅಪ್ರಾಯೋಗಿಕ" ಎಂದು ಸುಪ್ರೀಂ ಕೋರ್ಟ್ ನಿರ್ಬಂಧಗಳನ್ನು ತಡೆಹಿಡಿದಿತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ