ಮಹಾಕುಂಭಮೇಳದಲ್ಲಿ ಕಾಶ್ಮೀರ, ಬಾಂಗ್ಲಾ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಚಿತ್ರ ಪ್ರದರ್ಶನ

Upayuktha
0

ಬಾಂಗ್ಲಾದೇಶ ಮತ್ತು ಕಾಶ್ಮೀರಿ ಹಿಂದೂಗಳ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಹಿಂದೂಗಳು ಒಗ್ಗೂಡಬೇಕು: ಸ್ವಾಮಿ ಕಂಜಲೋಚನ್ ಕೃಷ್ಣದಾಸ್





ಪ್ರಯಾಗರಾಜ್: ಮಹಾಕುಂಭಮೇಳದಲ್ಲಿ 40 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನಕ್ಕಾಗಿ ಸೇರುವವರಿದ್ದಾರೆ; ಆದರೆ, ಇಂದು ಬಾಂಗ್ಲಾದೇಶ ಮತ್ತು ಕಾಶ್ಮೀರದಲ್ಲಿ ಹಿಂದೂಗಳು ಎದುರಿಸುತ್ತಿರುವ ಅನ್ಯಾಯ ಮತ್ತು ದಬ್ಬಾಳಿಕೆಯನ್ನು ನಾವು ಮರೆಯಬಾರದು. ಇಂದು ಬಾಂಗ್ಲಾದೇಶದಲ್ಲಿ ನಮ್ಮ ದೇವಾಲಯಗಳು ಮತ್ತು ವಿಗ್ರಹಗಳನ್ನು ಧ್ವಂಸ ಮಾಡಲಾಗುತ್ತಿದೆ. 


ಈ ಸಮಸ್ಯೆ ಬಗೆಹರಿಯಬೇಕಾದರೆ, ಬಾಂಗ್ಲಾದೇಶ, ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲಾ ಹಿಂದೂಗಳು ಒಗ್ಗೂಡಬೇಕು. ಆಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅದಕ್ಕಾಗಿ, ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಕುರಿತು ಪ್ರದರ್ಶನವನ್ನು ಭಕ್ತರು ಖಂಡಿತವಾಗಿಯೂ ನೋಡಬೇಕು, ಎಂದು ಇಸ್ಕಾನ್ ವೃಂದಾವನ ಧಾಮದ  ಶ್ರೀ ಚಂದ್ರೋದಯ ಮಂದಿರದ ಸ್ವಾಮಿ ಕಂಜಲೋಚನ್ ಕೃಷ್ಣದಾಸ್ ಇವರು ಕರೆ ನೀಡಿದರು.


ಅವರು ಮಹಾಕುಂಭಮೇಳದ ಭಾರದ್ವಾಜ್ ಮಾರ್ಗದ ಕೈಲಾಸಪುರಿಯ ಸೆಕ್ಟರ್ 6 ರಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಕಟ್ಟರವಾದಿಗಳು ಮತ್ತು ಭಯೋತ್ಪಾದಕರು ನಡೆಸಿದ ಭೀಕರ ದೌರ್ಜನ್ಯಗಳ ಕುರಿತಾದ ಛಾಯಾಚಿತ್ರ ಪ್ರದರ್ಶನ ಮತ್ತು ಗ್ರಂಥ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


ಇಸ್ಕಾನ್ ನ ಸ್ವಾಮಿ ಕಂಜಲೋಚನ್ ಕೃಷ್ಣದಾಸ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಮತ್ತು ಸಮಿತಿಯ ಉತ್ತರ-ಪೂರ್ವ ಭಾರತದ ಮಾರ್ಗದರ್ಶಕ ಸದ್ಗುರು ನೀಲೇಶ ಸಿಂಗಬಾಳ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇಸ್ಕಾನ್ ನ ಸ್ವಾಮಿ ರಾಧಾ ಮೋಹನ್ ದಾಸ್ ಮತ್ತು ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸಂಯೋಜಕ  ವಿಶ್ವನಾಥ ಕುಲಕರ್ಣಿ ಉಪಸ್ಥಿತರಿದ್ದರು.


“ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಏನಾಗುತ್ತಿದೆ? ಇತರ ರಾಜ್ಯಗಳಲ್ಲಿ ಹಿಂದೂಗಳ ಸ್ಥಿತಿ ಏನು ? ಇದರ ಬಗ್ಗೆ ಪ್ರಮುಖ ಮಾಹಿತಿಯನ್ನು ಈ ಪ್ರದರ್ಶನದಲ್ಲಿರುವ ಫಲಕಗಳಲ್ಲಿ ಕಾಣಬಹುದು. ಕುಂಭಮೇಳಕ್ಕೆ ಬರುವ ಎಲ್ಲಾ ಭಕ್ತರು ಖಂಡಿತವಾಗಿಯೂ ಈ ಪ್ರದರ್ಶನವನ್ನು ನೋಡಲೇಬೇಕು. ಅಲ್ಲದೆ, 'ಸನಾತನ ಧರ್ಮ ಎಂದರೇನು ?' ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಪ್ರದರ್ಶನದಿಂದ ಸುಲಭವಾಗಿ ಪಡೆಯಬಹುದು" ಎಂದು ಸ್ವಾಮಿ ಕಂಜಲೋಚನ್ ಕೃಷ್ಣದಾಸ್ ಹೇಳಿದರು.


ಜನವರಿ 19, 1990 ರಂದು ಭಯೋತ್ಪಾದನೆಯಿಂದಾಗಿ ಕಾಶ್ಮೀರಿ ಹಿಂದೂಗಳು ಕಾಶ್ಮೀರದಿಂದ ಸ್ಥಳಾಂತರಗೊಂಡು 34 ವರ್ಷಗಳಾಗಿವೆ. ಆದರೂ ಸರಕಾರ, ನ್ಯಾಯಾಲಯಗಳು ಮತ್ತು ಸಂಸತ್ತು ಇದ್ದರೂ ಕಾಶ್ಮೀರದಲ್ಲಿ ಸ್ಥಳಾಂತರಗೊಂಡ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ವಿಫಲವಾಗಿರುವುದು ಪ್ರಜಾಪ್ರಭುತ್ವದ ಸೋಲು ಎನ್ನಬಹುದು. 


ಈ ಪ್ರದರ್ಶನವು ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ, ಸಾಧು-ಸಂತರ ಹತ್ಯೆಯ ಪಿತೂರಿ, ಲವ್ ಜಿಹಾದ್, ಮತಾಂತರದ ಸಮಸ್ಯೆ ಮತ್ತು ಉಪಾಯ, ಗೋ ರಕ್ಷಣೆ, ದೇವಾಲಯ ರಕ್ಷಣೆ, ಗಲಭೆಗಳ ಸಮಯದಲ್ಲಿ ಹಿಂದೂಗಳ ರಕ್ಷಣೆ ಮತ್ತು ದೇವತೆಗಳಿಗೆ ಗೌರವದ ಕುರಿತು ಧರ್ಮರಕ್ಷಣಾ ವಿಭಾಗಗಳನ್ನು ಆಯೋಜಿಸಿದೆ. ಅಲ್ಲದೆ, ರಾಷ್ಟ್ರ ಜಾಗೃತಿ ವಿಭಾಗದಲ್ಲಿ ಜಿಹಾದಿ ಭಯೋತ್ಪಾದನೆ, ರಾಷ್ಟ್ರದ್ರೋಹಿ ಹಲಾಲ್ ಜಿಹಾದ್, ರಾಷ್ಟ್ರೀಯ ಪ್ರತೀಕಗಳ ಸನ್ಮಾನ, ಸ್ಥಳೀಯ ಆಸ್ಮಿತೆಯ ಸಂರಕ್ಷಣೆ ಮತ್ತು ಸುರಾಜ್ಯ ಅಭಿಯಾನದ ಕುರಿತು ಮಹತ್ವಪೂರ್ಣ ಫಲಕ ಪ್ರದರ್ಶನಗಳು ಇರುತ್ತದೆ. 


ಈ ಪ್ರದರ್ಶನವು ಹಿಂದೂ ರಾಷ್ಟ್ರದ ಬಗ್ಗೆ ಆಕ್ಷೇಪ ಮತ್ತು ಖಂಡನೆ, ಸಂತರು ಮತ್ತು ಧರ್ಮಪ್ರಚಾರಕರ ಮಾರ್ಗದರ್ಶನ, ಸಂದೇಹ ನಿವಾರಣೆ ಮತ್ತು ಹಿಂದೂಗಳಿಗೆ ಧರ್ಮಾಚರಣೆಯನ್ನು ಮಾಡುವಂತೆ ಪ್ರೇರೇಪಿಸುವ ಕಕ್ಷೆಗಳನ್ನು ಒಳಗೊಂಡಿದೆ ಎಂದು ಸಮಿತಿಯ  ವಿಶ್ವನಾಥ ಕುಲಕರ್ಣಿ ಇವರು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top