ಮಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಐಐಎಸ್ಸಿ ಮಂಡಳಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರ 17 ಮಂದಿ ಪ್ರಾಧ್ಯಾಪಕರ ವಿರುದ್ದದ ತನಿಖೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
"ನನ್ನ ಮತ್ತು ಇತರರ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಇರುವ ಪ್ರಕರಣದ ಕುರಿತಾದ ತನಿಖೆ ಮತ್ತು ವಿಚಾರಣೆಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರಕರಣವು ನ್ಯಾಯಾಲಯದ ಮುಂದಿರುವ ಕಾರಣ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆಯಿದೆ ಮತ್ತು ನ್ಯಾಯ ಗೆಲ್ಲುತ್ತದೆ ಎಂಬ ನಂಬಿಕೆ ನನ್ನದು" ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
2010 ರಿಂದ 2020 ರವರೆಗಿನ ಘಟನೆಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರೊಫೆಸರ್ ಆರೋಪದ ನಂತರ ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಐಐಎಸ್ಸಿ ಕೌನ್ಸಿಲ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಮತ್ತು 17 ಅಧ್ಯಾಪಕರ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
"ನಾನು ಯಾವಾಗಲೂ ನ್ಯಾಯ, ಸತ್ಯವನ್ನು ನಂಬಿದವನು. ಪ್ರತಿಯೊಬ್ಬರನ್ನೂ ಅವರ ಹಿನ್ನೆಲೆಯನ್ನು ಪರಿಗಣಿಸದೆ ಗೌರವಿಸಬೇಕು ಎಂಬ ವಿಚಾರದಲ್ಲಿ ನಂಬಿಕೆ ಇಟ್ಟವನು. ಆದರೆ ಈಗ ಹಿಂದುಳಿದ ವರ್ಗದ ಸಮುದಾಯಗಳನ್ನು ರಕ್ಷಿಸಲು ಇರುವ ಕಾನೂನನ್ನು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲು ಬಳಸಿ ದುರುಪಯೋಗಪಡಿಸಿಕೊಂಡಿರುವುದು ನನಗೆ ತೀವ್ರ ಬೇಸರ ಉಂಟು ಮಾಡಿದೆ" ಎಂದು ಹೇಳಿದ್ದಾರೆ.
"ನಾನು 2022ರಿಂದ ಐಐಎಸ್ಸಿಯ ಕೌನ್ಸಿಲ್ ಚೇರ್ಮನ್ ಸ್ಥಾನವನ್ನು ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇನೆ. ಆದರೆ ಈಗ ನನ್ನ ಮೇಲಿನ ಆರೋಪ ಇರುವ ಘಟನೆಗಳು 2014ನೇ ಇಸವಿಗಿಂತ ಹಳೆಯ ಘಟನೆಗಳಾಗಿವೆ. ಐಐಎಸ್ಸಿ ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ನಡೆಸುವ ಕುರಿತು ಸ್ಪಷ್ಟ ನೀತಿ ನಿಯಮಗಳನ್ನು ಹೊಂದಿದ್ದು, ಪ್ರಸ್ತುತ ಇರುವ ಕಾರ್ಯನಿರ್ವಾಹಕ ಆಡಳಿತ ಮಂಡಳಿ ಈ ಕುರಿತು ವಿಚಾರ ವಿಮರ್ಶೆ ನಡೆಸುತ್ತಿದೆ" ಎಂದು ವಿವರಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ