ಜ.4-5: ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ

Upayuktha
0


ಬೆಂಗಳೂರು: ನಮ್ಮ ರಾಜ-ಮಹಾರಾಜರು ದೇವಸ್ಥಾನಗಳನ್ನು ನಿರ್ಮಿಸಿದರು. ಕದಂಬರಿಂದ ಹಿಡಿದು ವಿಜಯನರದ ರಾಜಮಹಾರಾಜರು, ಇತ್ತೀಚಿನ ಮೈಸೂರು ಮಹಾರಾಜರವರೆಗೆ ಸಾವಿರಾರು ದೇವಸ್ಥಾನಗಳ ನಿರ್ಮಾಣ ಮಾಡಿದರು ಹಾಗೂ ಆಕ್ರಮಣಕಾರರಿಂದ ಧ್ವಂಸಗೊಂಡಿದ್ದ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದರು. ಇಂದು ಮಾತ್ರ ದೇವಸ್ಥಾನಗಳು 'ಸೆಕ್ಯುಲರ್'ವಾದಿ ರಾಜ್ಯವ್ಯವಸ್ಥೆಯ ಕೈವಶವಾಗಿರುವುದರಿಂದ ಸರಕಾರಿಕರಣ, ಭ್ರಷ್ಟಾಚಾರ, ಅಹಿಂದೂಗಳಿಗೆ ದೇವಸ್ಥಾನದಲ್ಲಿ ಪ್ರವೇಶ, ವಕ್ಫ್ ಬೋರ್ಡ್ ನಿಂದ ದೇವಸ್ಥಾನ ಭೂಮಿಯ ಅತಿಕ್ರಮಣ, ಹಣ ಪಡೆದು ವಿ.ಐ.ಪಿ. ದರ್ಶನ, ದೇವಸ್ಥಾನದ ಜಾಗ ಕಬಳಿಕೆ, ದೇವಾಲಯಗಳಲ್ಲಿ ಕಳ್ಳತನದ ಪ್ರಮಾಣ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ದೇವಸ್ಥಾನ ಸಂಸ್ಕೃತಿಯ ರಕ್ಷಣೆ ಮಾಡುವುದು ಹಿಂದೂ ಸಮಾಜದ ಜವಾಬ್ದಾರಿ ಎಂದು ಕರ್ನಾಟಕ ಮಂದಿರ ಮಹಾಸಂಘ'ದ ರಾಜ್ಯ ಸಂಯೋಜಕರಾದ ಮೋಹನ ಗೌಡ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟಾರೆ ದೇವಸ್ಥಾನದ ಸಮಸ್ಯೆ ನಿವಾರಣೆ ಮಾಡುವುದು, ದೇವಸ್ಥಾನದಲ್ಲಿ ಬರುವ ಭಕ್ತರಿಗಾಗಿ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ದೇವಸ್ಥಾನ ಪರಂಪರೆಯ ರಕ್ಷಣೆ ಮಾಡುವುದು ಇದಕ್ಕಾಗಿ ದೇವಸ್ಥಾನದ ವಿಶ್ವಸ್ಥರು, ಅರ್ಚಕರು, ಭಕ್ತರು ಮುಂತಾದವರ ಸಂಘಟನೆ ಆವಶ್ಯಕವಾಗಿದೆ. ಅದಕ್ಕಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಜನವರಿ 4 ಮತ್ತು 5 2025 ರಂದು ಬೆಂಗಳೂರಿನ ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್ ಸೆಂಟರ್ ನಲ್ಲಿ ‘ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ’ದ ಆಯೋಜಿಸಿದೆ ಎಂದರು.


ಈ ಅಧಿವೇಶನದಲ್ಲಿ ರಾಜ್ಯದಾದ್ಯಂತದ 1000 ಕ್ಕೂ ಅಧಿಕ ದೇವಸ್ಥಾನ ವಿಶ್ವಸ್ಥರು, ಪ್ರತಿನಿಧಿಗಳು, ಪುರೋಹಿತರು, ದೇವಸ್ಥಾನದ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು ಮುಂತಾದವರು ಸಹಭಾಗಿಯಾಗುವರು ಎಂದು ಮಾಹಿತಿ ನೀಡಿದರು.


ಪತ್ರಿಕಾಗೋಷ್ಠಿಯಲ್ಲಿ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್ ಪಿ ರವಿಶಂಕರ, ವಕೀಲ ಹರ್ಷ ಮುತಾಲಿಕ, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ್ ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷ ಡಾ. ರಾಘವೇಂದ್ರ ಭಟ್, ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷ ಕೆ ಎಸ್ ಶ್ರೀಧರ, ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ  ಸುನೀಲ ಘನವಟ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಉಪಸ್ಥಿತರಿದ್ದರು.


ಡಿಸೆಂಬರ್ 16, 2023 ರಲ್ಲಿ 'ಕರ್ನಾಟಕ ರಾಜ್ಯ ಪ್ರಥಮ ಮಂದಿರ ಅಧಿವೇಶನ’ ಬೆಂಗಳೂರಿನಲ್ಲಿ ನಡೆದಿತ್ತು. ಅದೇ ರೀತಿ ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಈ ಅಧಿವೇಶನಗಳು ನಡೆದಿವೆ. ಅದರ ನಂತರ ಮಹಾಸಂಘದ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಎರಡು ವರ್ಷದಲ್ಲಿ ಸಂಪೂರ್ಣ ದೇಶದಾದ್ಯಂತ ತಲುಪುತ್ತಿದೆ. ಕರ್ನಾಟಕ ಮಂದಿರ ಮಹಾಸಂಘದ ಮಾಧ್ಯಮದಿಂದ ರಾಜ್ಯದ 250 ಕ್ಕೂ ಹೆಚ್ಚಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ, ಹಾಗೂ 15 ಸಾವಿರಗಿಂತಲೂ ಹೆಚ್ಚಿನ ದೇವಸ್ಥಾನಗಳ ದೇಶಾದ್ಯಂತ ಸಂಘಟನೆಯಾಗಿದೆ ಎಂದು ಮೋಹನ ಗೌಡ ತಿಳಿಸಿದರು.


ಗುರುಪ್ರಸಾದ ಗೌಡ ಇವರು ಮಾತನಾಡಿ, ಈ ಅಧಿವೇಶನಕ್ಕೆ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಗಳು, ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಆಯುಕ್ತ  ನಂದಕುಮಾರ ಐಎಎಸ್, ಹಿರಿಯ ವಕೀಲ ಅರುಣ ಶ್ಯಾಮ್, ಪ್ರಮೀಳಾ ನೇಸರ್ಗಿ, ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿ  ಮುಂತಾದ ಗಣ್ಯರು ಸಹಭಾಗಿಯಾಗುವರು ಎಂದರು.


ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಸುನೀಲ ಘನವಟ ಇವರು ಮಾತನಾಡಿ, ಮಂದಿರ ಮಹಾಸಂಘವು ಪಂಚ ಸೂತ್ರದ ಆಧಾರದಲ್ಲಿ ಕಾರ್ಯ ಮಾಡುತ್ತದೆ. ಮಂದಿರ ವಿಶ್ವಸ್ಥರ ಸಂಘಟನೆ, ಸಮನ್ವಯ, ಮಂದಿರಗಳ ಸುವ್ಯವಸ್ಥಾಪನೆ, ಮಂದಿರಗಳ ಸುರಕ್ಷತೆ ಮತ್ತು ಮಂದಿರಗಳನ್ನು ಸನಾತನ ಧರ್ಮಪ್ರಚಾರದ ಕೇಂದ್ರಗಳನ್ನಾಗಿಸುವುದು. ರಾಮ ಮಂದಿರದ ನಿರ್ಮಾಣವಂತೂ ಆಯಿತು ಆದರೆ ಕಾಶಿ ಮಥುರಾದೊಂದಿಗೆ ಸಂಪೂರ್ಣ ದೇಶದ 4 ಲಕ್ಷಕಕ್ಕೂ ಅಧಿಕ ಮಂದಿರಗಳು ಸರಕಾರದ ನಿಯಂತ್ರಣದಲ್ಲಿದೆ. ಅವುಗಳನ್ನು ಮುಕ್ತಗೊಳಿಸಿ ಭಕ್ತರ ಕೈಗೊಪ್ಪಿಸುವ ಮುಖ್ಯ ಉದ್ದೇಶದೊಂದಿಗೆ ಮಂದಿರ ಮಹಾಸಂಘದ ಕಾರ್ಯ ಮಾಡುತ್ತಿದೆ ಎಂದರು.


ಈ ಮಂದಿರ ಅಧಿವೇಶನದಲ್ಲಿ ಗಣ್ಯರ ಮಾರ್ಗದರ್ಶನ, ದೇವಸ್ಥಾನಕ್ಕೆ ಸಂಬಂಧಿತ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿದೆ. ಇದರಲ್ಲಿ ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತಗೊಳಿಸುವುದು, ಅಹಿಂದೂಗಳ ಪ್ರವೇಶವನ್ನು ನಿಷೇಧಿಸುವುದು, ದೇವಸ್ಥಾನಗಳನ್ನು ಸನಾತನ ಧರ್ಮಪ್ರಚಾರದ ಕೇಂದ್ರಗಳನ್ನಾಗಿ ಮಾಡುವುದು, ವಕ್ಫ್ ಕಾನೂನಿನ ಮೂಲಕ ದೇವಸ್ಥಾನಗಳ ಜಾಗದ ಅತಿಕ್ರಮಣ ಮತ್ತು ದೇವಸ್ಥಾನ ಭೂಕಬಳಿಕೆಯ ಕುರಿತು ಉಪಾಯ, ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯಮಾಂಸ ನಿಷೇಧ, ನಿರ್ಲಕ್ಷಿತ ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಈ ಅಧಿವೇಶನ ಕೇವಲ ಆಮಂತ್ರಿತರಿಗಾಗಿ ಇದ್ದು ಅದರಲ್ಲಿ ಸಹಭಾಗಿಯಾಗಲು 7204082609 ಈ ಕ್ರಮಾಂಕಕ್ಕೆ ಸಂಪರ್ಕಿಸಬೇಕು, ಎಂದು ಮಂದಿರ ಮಹಾಸಂಘದಿಂದ ಕರೆ ನೀಡಲಾಗಿದೆ. ಜೊತೆಗೆ ನಾಡಿನ ಸಮಸ್ತ ಹಿಂದೂ ಬಾಂಧವರವರೆಗೆ ಈ ಅಧಿವೇಶನ ತಲುಪಿಸಲು Hindujagruti.org/Kannada ಈ ಜಾಲತಾಣದ ಮೂಲಕ ನೇರಪ್ರಸಾರವನ್ನೂ ಏರ್ಪಡಿಸಲಾಗಿದೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top