ಹೊಸ ಕನಸು... ಹೊಸ ಹುರುಪು... ಹೊಸ ಭರವಸೆ... ಹೊಸ ಗುರಿ... ಹೊಸ ಸಾಹಸ... ಹೀಗೆ ಹೊಸತನವನ್ನು ಹೊತ್ತು ತರುವ ಖುಷಿಯ ಹೊಸ ವರ್ಷ ಮತ್ತೆ ಬಂದಿದೆ ಹೊಸ ವರ್ಷ. ಹೊಸ ಹರ್ಷ ತರಲಿ. ವರ್ಷಕೊಮ್ಮೆ ಕ್ಯಾಲೆಂಡರ್ ಬದಲಾಗುತ್ತೆ. ಆದರೆ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ಹಾಗಾಗಿ ಹೊಸ ವರ್ಷದ ಹೊಸ ಕ್ಷಣಗಳನ್ನು ಸ್ವಾಗತಿಸಲು ಸಿದ್ಧರಾಗಿ. ಹೊಸ ವರ್ಷದ ಆಚರಣೆ ಬರೀ ಮೋಜು ಮಸ್ತಿಯಿಂದ ಕೂಡಿರುವುದಲ್ಲ ಒಂದಷ್ಟು ವಿಭಿನ್ನ ಗುರಿ ಮತ್ತು ಕನಸುಗಳೊಂದಿಗೆ ಹೆಜ್ಜೆ ಇಡುವುದು 'ಪರಿವರ್ತನೆ ಜಗದ ನಿಯಮ.. ವಿಕಾಸ ನವಪಥದ ಉಗಮ..!' ಹರಿವ ತೊರೆ ಬಂಡೆಗಪ್ಪಳಿಸಿ ಧುಮುಕಿದರೆ ಜಲಪಾತದ ಪಾತ್ರ ಪಡೆಯುವಂತೆ, ಅನುದಿನವೂ ನಾವೆಲ್ಲ ಸಮಯದ ಗೊಂಬೆಗಳಾಗಿ ನಮ್ಮ ಪಾತ್ರ ಬದಲಾಯಿಸುತ್ತೇವೆ.
ದಿನದ ಆರಂಭದಿಂದ ಹಿಡಿದು ಅಂತ್ಯದವರೆಗೆ ಜೀವನದ ಸಂತೋಷಕ್ಕಾಗಿ ಹಂಬಲಿಸುತ್ತೇವೆ. ದಿನವಿಡೀ ಖುಷಿಯಾಗಿರಬೇಕೆಂಬುದೇ ಎಲ್ಲರ ಪರಮ ಆಶಯ.
ಜ್ಯೂಲಿಯನ್ ಕ್ಯಾಲೆಂಡರ್ ಆಗಮನದ ನಂತರ ಪ್ರತಿ ವರ್ಷ ಜನವರಿ 1 ರಂದು ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಹೊಸ ವರ್ಷದ ಶುಭ ಸಂದರ್ಭದಲ್ಲಿ ಅನೇಕ ವರ್ಣರಂಜಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ದಿನದಂದು ಪ್ರತಿಯೊಬ್ಬರೂ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಅಭಿನಂದನಾ ಸಂದೇಶಗಳನ್ನು ನೀಡುತ್ತಾರೆ, ಶುಭಾಶಯ ಕೋರುತ್ತಾರೆ.
ಹೊಸವರ್ಷ ಬಂತೆಂದರೆ ನಾವು ಯಾವ ರೀತಿ ಸಂಭ್ರಮಿಸಿ ಸಿಹಿಹಂಚಿ ಪರರ ಜೀವನಕ್ಕೆ ಶುಭ ಹಾರೈಸುತ್ತೇವೋ ಅದೇ ರೀತಿ ನಾವೂ ಜೀವನದ ಪ್ರತಿಕ್ಷಣವನ್ನೂಅನುಭವಿಸಿದರೆ ಪ್ರತಿದಿನವೂ ಹೊಸ ವರುಷವಾಗಬಹುದು. ಹೊಸ ವರ್ಷದ ಮೊದಲ ದಿನವನ್ನು ಒಂದಷ್ಟು ಕೊರಗು ಮತ್ತೊಂದಿಷ್ಟು ಪ್ರತಿಜ್ಞೆಗಳೊಂದಿಗೆ ಆಚರಿಸುತ್ತೇವೆ. ಇನ್ನುಳಿದ ದಿನಗಳಲ್ಲಿ ಮತ್ತದೇ ಸಂತೋಷದ ಹುಡುಕಾಟ. ಜ್ಞಾನಶಿರೋಮಣಿ ಬದ್ದರು 'ಆಸೆಯೇ ದುಃಖಕ್ಕೆ ಮೂಲ ಕಾರಣ' ಎನ್ನುತ್ತಾರೆ. ಹನಿಹನಿಗೂಡಿ ಹಳ್ಳವಾಗುವಂತೆ ಪ್ರತಿಕ್ಷಣದ ಧನಾತ್ಮಕತೆ ವರ್ಷಪೂರ್ತಿ ಋಣಾತ್ಮಕತೆಯಿಂದ ಮುಕ್ತವಾಗಿಸುತ್ತದೆ. ಭವಿಷ್ಯದ ಬಗ್ಗೆ ಚಿಂತಿತರಾಗದೆ ಪ್ರತಿಕ್ಷಣವೂ ಒಳ್ಳೆಯ ಕೆಲಸ ಮಾಡುವುದರಿಂದ ಪ್ರತಿಕ್ಷಣವೂ ಹೊಸವರುಷವಾಗಿ ಹರುಷದಿಂದ ಕಳೆಯಬಹುದು.
- ಮಂಜುಳಾ ಪ್ರಕಾಶ್
ಎಂಸಿಜೆ ವಿದ್ಯಾರ್ಥಿನಿ,
ಆಳ್ವಾಸ್ ಕಾಲೇಜು ಮೂಡುಬಿದಿರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ