ಉಜಿರೆ: ನಿನ್ನ ಕರ್ತವ್ಯವನ್ನು ನೀನು ಮಾಡು ಫಲಾಪೇಕ್ಷೆ ಬೇಡ ಎಂದು ಶ್ರೀ ಕೃಷ್ಣ ನುಡಿದಿರುವುದು ಅರ್ಜುನನಿಗಾದರೂ ಪ್ರಸ್ತುತ ನಾವೆಲ್ಲರೂ ಇದರ ಅನುಸಂಧಾನ ಮಾಡಿಕೊಳ್ಳಬೇಕು. ಒಳ್ಳೆಯ ಪಥ, ಸತ್ಯ, ಗುರಿನಿರ್ಧಾರ, ಆತ್ಮ ಸಾಕ್ಷಾತ್ಕಾರ, ಪರಿಸರ ಕಾಳಜಿ ಹಾಗೂ ಜಾಗೃತಿ, ನಾಯಕತ್ವ ಹೀಗೆ ಬೇರೆ ಬೇರೆ ಗುಣಗಳಿಗೆ ಭಗವದ್ಗೀತೆಯು ಕೈಪಿಡಿಯಾಗಿದೆ.
ಯಾವುದೇ ಕಠಿಣವಾದ ಕೆಲಸ ನಿರ್ವಹಣೆ ಹಾಗೂ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗೀತೆಯು ಮಾರ್ಗದರ್ಶನ ಮಾಡುತ್ತದೆ. ಮನಃಶಾಂತಿ ಹಾಗೂ ಒತ್ತಡ ನಿರ್ವಹಣೆಗೆ ಭಗವದ್ಗೀತೆ ಸೂಕ್ತ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಉಪ ಪ್ರಾಚಾರ್ಯ ಪ್ರೊ. ಶಶಿಶೇಖರ ಎನ್ ಕಾಕತ್ಕರ್ ಅವರು ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ , ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಸಹಯೋಗದಲ್ಲಿ ನಡೆದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಅವರು ಅಧ್ಯಕ್ಷತೆ ವಹಿಸಿ ಗೀತೆಯ ಮಹತ್ವದ ಬಗ್ಗೆ ಮಾತನಾಡಿದರು.
ಸೋಂದಾ ಸ್ವರ್ಣವಲ್ಲೀ ಮಠದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ ತೃತೀಯ ಬಹುಮಾನ ಪಡೆದ ವಿದ್ಯಾರ್ಥಿನಿ ಹಂಸಿನಿ ಭಿಡೆ ಅವರನ್ನು ಗೌರವಿಸಲಾಯಿತು. ಗೀತಾ ಜಯಂತಿಯ ಅಂಗವಾಗಿ ಕಾಲೇಜಿನಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಹಂಸಿನಿ ಭಿಡೆ ಪ್ರಥಮ ಹಾಗೂ ವಸುಧಾ ದ್ವಿತೀಯ ಸ್ಥಾನ ಪಡೆದ ಇವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ, ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಸಂಯೋಜಕರಾದ ರಜತ್ ಪಡ್ಕೆ ಹಾಗೂ ಗೌತಮಿ ಜಿ. ಉಪಸ್ಥಿತರಿದ್ದರು. ಹರ್ಷಿತಾ ಸ್ವಾಗತಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ಪ್ರದೀಪ ನಿರೂಪಿಸಿ, ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ