ಹುನಗುಂದ: ತಾಲೂಕಿನ ಕೂಡಲಸಂಗಮ ಸಾರಂಗಮಠದ ಅಭಿನವ ಜಾತವೇದ ಶಿವಾಚಾರ್ಯ ಸ್ವಾಮೀಜಿಯವರ ಅಂತಿಮ ಸಂಸ್ಕಾರ ಭಾನುವಾರ ಉಜ್ಜಯನಿ ಸದ್ಧರ್ಮ ಪೀಠದ ಸಿದ್ಧಲಿಂಗ ಸ್ವಾಮೀಜಿ, ನಾಡಿನ ವಿವಿಧ ಮಠಾಧೀಶರ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ ನೆರವೇರಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡರು.
ಸಾರಂಗಮಠದ ಸಮುದಾಯ ಭವನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಮಧ್ಯಾಹ್ನ 12:30ಕ್ಕೆ ನಾಡಿನ ಮಠಾಧೀಶರ ನೇತೃತ್ವದಲ್ಲಿ ಟ್ರಾಕ್ಟರ್ನಲ್ಲಿ ಸಾರಂಗಮಠದಿಂದ ಬಸವೇಶ್ವರ ವೃತ್ತ ಮುಖ್ಯ ಬಜಾರ, ಅರ್ಚಕ ಕಾಲೋನಿ ಮೂಲ ಸಾರಂಗಮಠಕ್ಕೆ ಮೆರವಣೆಗೆಯ ಮೂಲಕ ತರಲಾಯಿತು. ಮೆರವಣೆಗೆಯಲ್ಲಿ ಗ್ರಾಮದ ಎಲ್ಲರೂ ನಮಸ್ಕರಿಸಿ ಅಂತಿಮ ವಿದಾಯ ಹೇಳಿದರು.
ಮಧ್ಯಾಹ್ನ 3:30 ರಿಂದ 4:30ರ ವರೆಗೆ ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ ಸಾರಂಮಠ ಆವರಣದಲ್ಲಿಯೇ ಅಂತ್ಯಕ್ರಿಯೆ ನಡೆಯಿತು. ಭಕ್ತರು ಶ್ರೀಗಳು ಬಹುಬೇಗ ಅಗಲಿರುವುದನ್ನು ನೆನೆದು ಸಂತಾಪ ವ್ಯಕ್ತಪಡಿಸಿದರು.
ಸಾರಂಗಮಠದ ಪ್ರಥಮ ಪೀಠಾಧಿಪತಿಯಾದ ಅಭಿನವ ಜಾತವೇದ ಶಿವಾಚಾರ್ಯ ಸ್ವಾಮೀಜಿ ಸಾಮೂಹಿಕ ವಿವಾಹ, ಪ್ರವಚನದ ಮೂಲಕ 18 ವರ್ಷಗಳಿಂದ ಸಾಮೂಜಿಕ ಸೇವೆ ಮಾಡಿದ್ದರು.
ಪ್ರತಿ ವರ್ಷ ಕೂಡಲಸಂಗಮದ ಸಂಗಮೇಶ್ವರ ಜಾತ್ರೆಯ ನಿಮಿತ್ತ ಯುವಕರು ದುಶ್ಚಟಗಳಿಂದ ದೂರವಾಗಬೇಕು ಎಂದು ಸಂಗಮನಾಥನ ಮಾಲೆಯನ್ನು ನೀಡುವ ಮೂಲಕ ಸಾವಿರಾರು ಯುವಕರನ್ನು ದುಶ್ಚಟಗಳಿಂದ ದೂರವಿರುವಂತೆ ಮಾಡಿದ್ದರು.
ಕೂಡಲಸಂಗಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮವಿದ್ದರೂ ಪಾಲ್ಗೊಂಡು ಆಶೀರ್ವಾದ ಮಾಡುತ್ತಿದ್ದ ಶ್ರೀಗಳನ್ನು ಭಾನುವಾರ ಭಕ್ತರು ಸ್ಮರಿಸಿದರು.
ಉಜ್ಜಯನಿ ಸದ್ಧರ್ಮ ಪೀಠದ ಸಿದ್ಧಲಿಂಗ ಸ್ವಾಮೀಜಿ, ನಾಡಿನ ವಿವಿಧ ಮಠಾಧೀಶರು ಸಾರಂಗಮಠದ ಮುಂದಿನ ಪೀಠಾಧಿಪತಿಯಾಗಿ ಗುರುಪ್ರಸಾದ ಸ್ವಾಮೀಜಿಯನ್ನು ನೇಮಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ