2024 ರ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆ ಕಾರ್ಯಕ್ರಮ
ಮಂಗಳೂರು: ಅಖಿಲ ಭಾರತ ಗೃಹರಕ್ಷಕದಳ ಉತ್ಥಾನ ದಿನಾಚರಣೆ ಇಂದು (ಡಿ.8) ಬೆಳಿಗ್ಗೆ 12:00 ಗಂಟೆಗೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್ ಮಂಗಳೂರು ಇಲ್ಲಿ ಗೃಹರಕ್ಷಕರ ದಿನಾಚರಣೆ ಸಮಾರಂಭವನ್ನು ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ|| ಜಿ. ಸಂತೋಷ್ ಕುಮಾರ್, ಕೆಎಎಸ್, ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ, ಮತ್ತು ಮತ್ತೋರ್ವ ಅತಿಥಿ ರಾಜೇಂದ್ರ ಡಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಆಗಮಿಸಿದ್ದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಜಿ. ಸಂತೋಷ್ ಕುಮಾರ್, ಇವರು ಖಾಕಿ ಸಮವಸ್ತ್ರವನ್ನು ನೋಡಿದಾಗ ನನಗೆ ಗೌರವ ಮತ್ತು ಹೆಮ್ಮೆ ಎನಿಸುತ್ತದೆ, ಖಾಕಿಯನ್ನು ಮುಟ್ಟಬೇಕು ಅನ್ನಿಸುತ್ತದೆ. ಖಾಕಿ ಸಮವಸ್ತ್ರವನ್ನು ಧರಿಸಿದಾಗ ಸಾರ್ವಜನಿಕರಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ಸಮವಸ್ತ್ರದಲ್ಲಿರುವಾಗ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸುವುದು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಕಾಪಾಡುವ ಗೃಹರಕ್ಷಕರಿಗೆ ಗೃಹರಕ್ಷಕ ದಿನಾಚರಣೆ ಅಂಗವಾಗಿ ಅಭಿನಂದಿಸಿದರು.
ಇನ್ನೋರ್ವ ಅತಿಥಿ ರಾಜೇಂದ್ರ ಡಿ.ಎಸ್. ಇವರು ಮಾತನಾಡಿ, ಗೃಹರಕ್ಷಕರು ಸಮಾಜಸೇವೆ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಜೀವರಕ್ಷಣೆ ಹಾಗೂ ಆಸ್ತಿ ಪಾಸ್ತಿಗಳನ್ನು ಕಾಪಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಗೃಹರಕ್ಷಕ ದಳಕ್ಕೆ ಸೇರಿ ಸಮವಸ್ತ್ರ ಧರಿಸಿದಾಗ ಎಲ್ಲಾ ಇಲಾಖೆಗಳ ಪರಿಚಯವಾಗುತ್ತದೆ. ಸಾರ್ವಜನಿಕ ಇಲಾಖೆಗಳೊಂದಿಗೆ ಬೆರೆತಾಗ ನಿಮ್ಮ ಮನೆಯಲ್ಲಿ ಮತ್ತು ಮಕ್ಕಳೂ ಕೂಡ ಶಿಸ್ತನ್ನು ಕಲಿಯುತ್ತಾರೆ. ಮುಂದೆ ನಿಮ್ಮ ಮಕ್ಕಳು ಪೊಲೀಸ್ ಇಲಾಖೆಗಳಲ್ಲಿ ಸೇವೆಯನ್ನು ಮಾಡಬಹುದು. ಯಾರೂ ಕೂಡ ಪೊಲೀಸ್ ಇಲಾಖೆಗೆ, ಆರ್ಮಿ, ಗೃಹರಕ್ಷಕ ದಳ ಮತ್ತು ಮಿಲಿಟ್ರಿಗೆ ಸೇರದಿದ್ದರೆ ದೇಶವನ್ನು ಯಾರು ಕಾಯುವುದು. ಗೃಹರಕ್ಷಕ ದಳಕ್ಕೆ ಹೆಚ್ಚು ಹೆಚ್ಚು ಗೃಹರಕ್ಷಕರು ಸೇರುವಂತೆ ಪ್ರೇರೇಪಣೆ ಮಾಡಬೇಕು. ಗೃಹರಕ್ಷಕರು ವೇತನಕ್ಕಾಗಿ ಕರ್ತವ್ಯ ಮಾಡಬಾರದು, ಮೊದಲು ದೇಶಕ್ಕಾಗಿ ಸೇವೆಯನ್ನು ಮಾಡುವ ಮನಸ್ಸಿಟ್ಟು ಮಾಡಬೇಕು ನಂತರ ಗೌರವ ಧನ ಪಡೆಯಬೇಕು. ಮಹಿಳಾ ಗೃಹರಕ್ಷಕರು ಉತ್ತಮ ಕರ್ತವ್ಯವನ್ನು ಮಾಡುತ್ತಿದ್ದಾರೆ, ಇನ್ನು ಮುಂದೆಯೂ ಹೆಚ್ಚು ಹೆಚ್ಚು ಗೃಹರಕ್ಷಕರನ್ನು ಸೇರಿಸಿ ಗೃಹರಕ್ಷಕ ದಳದ ಸಂಖ್ಯಾಬಲವನ್ನು ಹೆಚ್ಚಿಸಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ|| ಮುರಲೀ ಮೋಹನ ಚೂಂತಾರು ಇವರು ಮಾತನಾಡಿ, ಗೃಹರಕ್ಷಕದಳ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1963 ರಲ್ಲಿ ಪ್ರಾರಂಭಗೊಂಡಿತು. ನಾನು ಸಮಾದೇಷ್ಟನಾಗಿ ಅತ್ಯಂತ ಪ್ರಾಮಾಣಿಕವಾಗಿ ನಿಷ್ಕಾಮ ಸೇವೆಯೇ ಸೇವೆಯ ಪರಮಗುರಿ ಎಂಬ ಧ್ಯೇಯವಾಕ್ಯದಲ್ಲಿ ನೈತಿಕತೆಯಿಂದ 10 ವರ್ಷ ಪೂರೈಸಿರುತ್ತೇನೆ. ನಮ್ಮ ಜಿಲ್ಲೆ ವಿಶಿಷ್ಟವಾದ ಸುಶಿಕ್ಷಿತರ ಜಿಲ್ಲೆ, ನನಗೆ ಯಾವ ರೀತಿ ಸಹಕಾರ ನೀಡಿದಿರೋ ಅದೇ ರೀತಿ ಮುಂದೆ ಬರುವ ಸಮಾದೇಷ್ಟರಿಗೆ ಸಹಕಾರ ನೀಡಿ ಎಂದರು.
ನಮ್ಮ ಜಿಲ್ಲೆಯಲ್ಲಿ ಹಣಕ್ಕಾಗಿ ಕೆಲಸ ಮಾಡುವ ಜನರಲ್ಲ, ಸ್ವಯಂಸೇವಕರಾಗಿ ಕೆಲಸ ಮಾಡುವ ಜನ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದವಿ ಪಡೆದ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕರು ಇದ್ದಾರೆ. ಗೃಹರಕ್ಷಕರು ಅಂದರೆ ದೇಶದೊಳಗಿನ ಸೈನಿಕರು ಎಂದು ನಾನು ಮಗದೊಮ್ಮೆ ಹೇಳಲಿಚ್ಚಿಸುತ್ತೇನೆ. ಗೃಹರಕ್ಷಕ ದಳದಲ್ಲಿ ಬೇರೆ ಬೇರೆ ಜಾತಿ, ಮತ, ಧರ್ಮದ ಜನರು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಗೃಹರಕ್ಷಕರಿಗೆ ಮುಂದಿನ ದಿನಗಳಲ್ಲಿ ಸಮವಸ್ತ್ರ ಧರಿಸಿ ಶಿಸ್ತಿನಿಂದ ಕರ್ತವ್ಯ ನಿರ್ವಹಿಸುವಂತೆ ಇನ್ನೂ ಹೆಚ್ಚಿನ ತರಬೇತಿಯನ್ನು ನೀಡಲಾಗುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕ ದಳಕ್ಕೆ ಸೇರಿ ನಾವೆಲ್ಲ ಸೇರಿ ಬಲಿಷ್ಟವಾದ ದೇಶವನ್ನು ಕಟ್ಟೋಣವೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಹರೀಶ್ ಮೋಟುಕಾನ, ಚಾಕೋ, ಬೆಳ್ತಂಗಡಿ ಘಟಕ, ಉದಯ ಶಂಕರ್ ಭಟ್, ಕಡಬ ಘಟಕ, ಶ್ರೀಮತಿ ಸುಖಿತಾ ಎ. ಶೆಟ್ಟಿ, ಉಪ್ಪಿನಂಗಡಿ ಘಟಕ, ಮತ್ತು ಖಾಲಿದ್, ಉಳ್ಳಾಲ ಘಟಕ ಇವರುಗಳನ್ನು ಮುಖ್ಯ ಅತಿಥಿಗಳು ಹಾಗೂ ಸಮಾದೇಷ್ಟರು ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ನೀಡಿ ಸನ್ಮಾನಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಮಾರ್ಕ್ಶೇರಾ, ಸೀನಿಯರ್ ಪ್ಲಟೂನ್ ಕಮಾಂಡರ್, ಮಂಗಳೂರು ಘಟಕಾಧಿಕಾರಿ ಇವರು ಸ್ವಾಗತ ಭಾಷಣ ಮಾಡಿದರು. ಕಿಶೋರ ಅಮ್ಮಿನಭಾವಿ, ಬೋಧಕರು ಇವರು ಗೃಹರಕ್ಷಕರಿಗೆ ಪ್ರತಿಜ್ಞಾ ಸ್ವೀಕಾರ ಮಾಡಿಸಿ, ಯಾವುದೇ ಸಂದರ್ಭದಲ್ಲಿ ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನನ್ನ ಕರ್ತವ್ಯಗಳನ್ನು ನಿರ್ಭಯದಿಂದ, ದಕ್ಷತೆಯಿಂದ ನಿರ್ವಹಿಸಿ ಸಮಾಜದಲ್ಲಿ ಶಾಂತಿ ನೆಲಸುವಲ್ಲಿ ಹಾಗೂ ಜನತೆಯ ಪ್ರಾಣ ಮತ್ತು ಆಸ್ತಿಗಳಿಗೆ ರಕ್ಷಣೆ ನೀಡುವಲ್ಲಿ ನನ್ನ ಶಕ್ತ್ಯಾನುಸಾರ ಶ್ರಮಿಸುತ್ತೇನೆ ಎಂದು ಗೃಹರಕ್ಷಕರು ಪ್ರತಿಜ್ಞೆ ಮಾಡಿದರು. ಜಿಲ್ಲಾ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ವರದಿ ವಾಚನ ಮಾಡಿದರು.
ಶ್ರೀಮತಿ ಶ್ಯಾಮಲಾ ಎ., ಪ್ರಥಮ ದರ್ಜೆ ಸಹಾಯಕಿ ಇವರು ಕಾರ್ಯಕ್ರಮ ನಿರೂಪಿಸಿದರು. ಹಾಗೂ ಉಪ್ಪಿನಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ. ಇವರು ವಂದನಾರ್ಪಣೆಗೈದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು.
ಕಾಯಕ್ರಮದಲ್ಲಿ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸುನಿಲ್, ಮೂಡಬಿದ್ರೆ ಘಟಕದ ಪ್ರಭಾರ ಘಟಕಾಧಿಕಾರಿ ಚಂದ್ರಶೇಖರ್, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಪಣಂಬೂರು ಘಟಕದ ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯ್ಕ್, ಸುಬ್ರಹ್ಮಣ್ಯ ಘಟಕದ ಹರಿಶ್ಚಂದ್ರ, ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ವೀರನಾಥ್, ಮೂಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್, ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ್, ಬಂಟ್ವಾಳ ಘಟಕದ ಘಟಕಾಧಿಕಾರಿ ಐತ್ತಪ್ಪ, ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ, ಬೆಳ್ತಂಗಡಿ ಘಟಕದ ಜಯಾನಂದ ಮತ್ತು 75 ಗೃಹರಕ್ಷಕ, ಗೃಹರಕ್ಷಕಿಯರು ಭಾಗವಹಿಸಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ