ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2024
ಬಳ್ಳಾರಿ: ಗ್ರಂಥಾಲಯದ ಪುಸ್ತಕಗಳು ಮತ್ತು ಅವುಗಳ ಮಾಹಿತಿಯು ಬಹಳ ಉಪಯುಕ್ತವಾಗಿದ್ದು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರು ಆದ ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2024ರ ಅಂಗವಾಗಿ ನಗರ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2024ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಡಾ.ಎಸ್.ಆರ್. ರಂಗನಾಥನ್ ಹಾಗೂ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಕೇಂದ್ರ ಗ್ರಂಥಾಲಯಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಮಹಾನಗರ ಪಾಲಿಕೆಯಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಬಿ.ಜಾನಕಿ ಅವರು ಮಾತನಾಡಿ, ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಂಡು ಗ್ರಂಥಾಲಯದ ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಬಿ.ಕೆ.ಲಕ್ಷ್ಮೀ ಕಿರಣ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಕೇಂದ್ರ ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನರಸಣ್ಣ ಅವರು ಮಾತನಾಡಿ, ಗ್ರಂಥಾಲಯದ ಸದುಪಯೋಗ ಪಡೆಯಲು ಎಲ್ಲಾರು ಗ್ರಂಥಾಲಯದ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಹಾಗೂ ನಿವೃತ್ತ ಉಪನ್ಯಾಸಕರಾದ ಎನ್.ಬಸವರಾಜ ಅವರು “ಆಧುನಿಕ ಯುಗದಲ್ಲಿ ಓದುವ ಸಂಸ್ಕೃತಿ” ಕುರಿತು ವಿಶೇಷ ಉಪನ್ಯಾಸ ನೀಡಿ, ಗ್ರಂಥಾಲಯದ ಕುರಿತಾಗಿ ಉತ್ತಮ ಮಾಹಿತಿ ನೀಡಿ, ಓದಿನ ಪ್ರಾಮುಖ್ಯತೆ ಹಾಗೂ ಓದುವ ಸಂಸ್ಕೃತಿ ಬಗ್ಗೆ ತಿಳಿಸಿ, ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2024ರ ನಿಮಿತ್ತ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ “ಆಧುನಿಕ ಯುಗದಲ್ಲಿ ಗ್ರಂಥಾಲಯಗಳ ಮಹತ್ವ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು ಮತ್ತು ಗ್ರಂಥಾಲಯದ ಉತ್ತಮ ಓದುಗರಲ್ಲಿ ಇಬ್ಬರಿಗೆ ಉತ್ತಮ ಓದುಗರ ಪ್ರಶಸ್ತಿಯನ್ನು ಹಾಗೂ ಗ್ರಂಥಾಲಯದ ಸದುಪಯೋಗ ಪಡೆದು ಸಾಧನೆ ಮಾಡಿದ ಇಬ್ಬರಿಗೆ ಸಾಧನೆಗೈದ ಉತ್ತಮ ಓದುಗ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು.
ನಗರ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿ ನಾನು ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದೇನೆ. ಈ ನಗರ ಕೇಂದ್ರ ಗ್ರಂಥಾಲಯದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ವಾತವರಣವಿದ್ದು, ಸಿಬ್ಬಂದಿಗಳು ಚೆನ್ನಾಗಿ ಸಹಕಾರ ನೀಡುತ್ತಾರೆ. ಎಲ್ಲರೂ ಸದುಪಯೋಗ ಪಡೆದುಕೊಳ್ಳಿ.
- ಅಖಿಲ್ ಕುಮಾರ್,
ಜ್ಯೂನಿಯರ್ ಇಂಜಿನಿಯರ್, ಕೆ.ಪಿ.ಡಬ್ಲ್ಯು.ಡಿ. ಗಂಗಾವತಿ ಮತ್ತು ಸಾಧನೆಗೈದ ಉತ್ತಮ ಓದುಗ ಪ್ರಶಸ್ತಿ ವಿಜೇತ.
ನಗರ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿ ಉದ್ಯೋಗಕ್ಕೆ ಆಯ್ಕೆಯಾಗಿದ್ದೇನೆ. ಇಲ್ಲಿನ ವಾತಾವರಣವು ಎಲ್ಲರನ್ನು ಓದುವುದಕ್ಕೆ ಪ್ರೇರೆಪಿಸುತ್ತದೆ. ಎಲ್ಲರೂ ಗ್ರಂಥಾಲಯದ ಉಪಯೋಗ ಹೊಂದಬೇಕು.
- ಬಸವರಾಜ ಕುಮಾರ್.ಎನ್.,
ಲೆಕ್ಕಪರಿಶೋಧಕ, ಸ್ಥಳೀಯ ಲೆಕ್ಕ ಪರಿಶೋಧಕರ ಕಚೇರಿ, ಬಳ್ಳಾರಿ.
ಸಮಾರಂಭದಲ್ಲಿ ಬಳ್ಳಾರಿ ಕೆಇಬಿಯ ಇಂಜಿನೀಯರ್ ಕೆ.ಟಿ. ಆಂಜನೆಯಲು ಮತ್ತು ಗಾಂಧಿನಗರ ನಿವಾಸಿ ವಿಜಯಲಕ್ಷ್ಮೀ ಇವರಿಬ್ಬರು ಉತ್ತಮ ಓದುಗ ಪ್ರಶಸ್ತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶ್ರೀಮೇಧ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಸುಮ.ವೈ., ನಿವೃತ್ತ ಸಬ್ ಇನ್ಸ್ಪೆಕ್ಟರ್ ಹುಸೇನ್ ಸಾಬ್, ಗ್ರಂಥಾಲಯ ಸಹಾಯಕರಾದ ಸಿದ್ದಪ್ಪ.ಕೆ., ಸಂತೋಷ್ ಕುಮಾರ್.ಎಸ್., ಸಹ ಗ್ರಂಥಪಾಲಕ ಎಸ್.ಟಿ.ಪ್ರಭಾಕರ್, ಗ್ರಂಥಪಾಲಕ ಆರ್.ಶಾರದ, ದ್ವಿದಸ ಡೊಳ್ಳಿನ ಮಹೇಂದ್ರ, ವಾಹನ ಚಾಲಕ ಶ್ರೀನಿವಾಸ, ಬೆರಳಚ್ಚುಗಾರ ಸಂತೋಷ್ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯದ ಇತರೆ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕ ಓದುಗರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ