ಶ್ರೀ ಮಹಿಪತಿ ದಾಸರ ಸಾಹಿತ್ಯ ದರ್ಶನವು ಜ್ಞಾನ ಯೋಗ, ಕರ್ಮ ಯೋಗ ಭಕ್ತಿ ಯೋಗ, ರಾಜಯೋಗ ಮಂತ್ರಯೋಗ, ಜಪ, ನಾಮಸಾಧನೆ ಹೀಗೆ ಅನೇಕ ಪ್ರಕಾರದ ಮೂಲಕ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಅಧ್ಯಾತ್ಮದ ಗುರಿಯನ್ನು ಮುಟ್ಟಿದ್ದಾರೆ. ಇಂತಹ ಶ್ರೇಷ್ಠ ಸಾಧಕ ಹರಿದಾಸರಾದ ಶ್ರೀ ಮಹಿಪತಿದಾಸರು ಭಕ್ತಿ ಮತ್ತು ಯೋಗ ಮಾರ್ಗದ ಮೂಲಕ ಭಗವಂತನನ್ನು ಕಂಡಿದ್ದಾರೆ.
ಮಹಿಪತಿ ದಾಸರು ಇದ್ದ ಅವಧಿ ಮಧ್ಯ ಅವಧಿ 16 ನೇ ಶತಮಾನ. ಪುರಂದರ ದಾಸರ ಕಾಲ ಮುಗಿದ ಮೇಲೆ ವಿಜಯದಾಸರ ಕಾಲ (ಕ್ರಿ. ಶ.1564 ರಿಂದ ಕ್ರಿ. ಶ.1682), ಈ ಘಟ್ಟವನ್ನು ಹರಿದಾಸ ಸಾಹಿತ್ಯ ನಿಂತು ಹೋಗಿತ್ತು ಎಂದಿದ್ದಾರೆ. ಆದರೆ ಈ ಘಟ್ಟದಲ್ಲಿ ಮಹಿಪತಿದಾಸರು ಬರುತ್ತಾರೆ. ಅಂದರೆ ಪುರಂದರ ದಾಸರು ಮತ್ತು ಕನಕದಾಸರ ಅನಂತರ ಕಾಲ ಘಟ್ಟ ಮತ್ತು ವಿಜಯ ದಾಸರ ಬರುವ ಮುಂಚೆ (ಹಿಂದಿನ) ಮಹಿಪತಿದಾಸರ ಕಾಲ ಘಟ್ಟ ಬರುತ್ತದೆ.
ಮಹಿಪತಿದಾಸರನ್ನು, ಮಹಿಪತಿ ರಾಜ, ಮಹಿಪತಿ ಸ್ವಾಮಿ, ಮಹಿಪತಿದಾಸರು, ಮಹಿಪತಿರಾಯ ಎಂದು ಕರೆಯುವುದು ಇದೆ. ಇವರು ಹರಿದಾಸ ಸಾಹಿತ್ಯವನ್ನು ವಿಶಿಷ್ಟ ರೀತಿಯಿಂದ ಕೂಡಿದೆ. ಹರಿ ಸರ್ವೋತ್ತಮತೆ ಸಾರುವ ಮಧ್ವಶಾಸ್ತ್ರ ಮತ್ತು ಭಾಗವತಾದಿ ಪುರಾಣಗಳನ್ನು ಸರಳ ಸುಂದರ ಪ್ರಾoತೀಯ ಆಡು ಭಾಷೆಯಲ್ಲಿ ರಚಿಸಿದ್ದಾರೆ, ಹಾಗೇ ಇವರು ಊರು ಊರು ಸುತ್ತಿ ಕಾಲಿಗೆ ಗೆಜ್ಜೆ ಕಟ್ಟಿ ಅಡ್ಡಾಡಿದವರಲ್ಲ, ಕಾಖಂಡಕಿಯಲ್ಲಿ ಸ್ಥಿರವಾಗಿ. ಇದ್ದು, ಯೋಗ ಜಪಗಳ ಮೂಲಕ ಭಗವಂತನ್ನನ್ನು ಕಂಡವರು.
ಶ್ರೀ ಮಹಿಪತಿ ದಾಸರ ಸಾಹಿತ್ಯ ಎಲ್ಲ ಹರಿದಾಸರ ಸಾಹಿತ್ಯಗಳಿಗಿಂತ ವಿಭಿನ್ನ ಶೈಲಿ. ಇವರು ವರಕವಿ, ತತ್ವಜ್ಞಾನಿ, ಅನುಭಾವಿಕರು ಅಂತಲೂ ಹೇಳಬಹುದು. ಗೂಢ ಅನುಭವಗಳನ್ನು ತಮ್ಮ ಪದಗಳನ್ನು ಕೀರ್ತನೆ, ಪದಗಳನ್ನು ರಚಿಸಿದವರು. ಪರಮಾತ್ಮನ ಸಾಕ್ಷಾತ್ಕಾರವನ್ನು ಸವಿದು ಸಾಹಿತ್ಯದ ಮೂಲಕ ಹರಿದಾಸ ಸಾಹಿತ್ಯ ಪೋಷಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿದ "ಮಹಿಪತಿ ರಾಯರ ಕೃತಿಗಳು" ಸಂಗ್ರಹದಲ್ಲಿ ದೊರೆತ ಮಹಿಪತಿ ದಾಸರ ಒಟ್ಟು ಕೃತಿಗಳು 754, ಇವುಗಳಲ್ಲಿ ಹಿಂದಿ, ಮಾರಾಠಿ, ಉರ್ದು, ತೆಲಗು ಮಿಶ್ರ ಭಾಷಾ ಕೃತಿಗಳು ಸೇರ್ಪಡೆಯಗಿವೆ. ಕನ್ನಡ ಕೃತಿಗಳು 685, ಮರಾಠಿ ಕೃತಿಗಳು 46 ಹಿಂದಿ ಕೃತಿಗಳು 18, ಮಿಶ್ರ ಕೃತಿಗಳು 5. ಇನ್ನು ಕನ್ನಡ ಕೃತಿಗಳಲ್ಲಿ 322 ಹರಿವಾಯುಗುರುಗಳು, ಅನುಭಾವ, ಸಾಕ್ಷಾತ್ಕಾರ ೧೩೪, ಸ್ವಾನುಭಾವ ಉಪದೇಶ 153, ದ್ವೈತ ಮತ 15, ಇತರ 63.
ಹೀಗೆ ಮಹಿಪತಿದಾಸರ ಕೃತಿಗಳು ವಿಪುಲ, ಹಾಗೆ ವೈವಿಧ್ಯಮಯ. ಇವರು ಬಹು ಭಾಷಾ ವಿಶಾರದರಾಗಿದ್ದರಲ್ಲದೆ ಬಹು ಭಾಷೆಯಲ್ಲಿ ಸಾಹಿತ್ಯಗಳನ್ನು ರಚಿಸಿದ್ದಾರೆ. ಕನ್ನಡ, ತೆಲಗು, ದಖಣಿ, ಮರಾಠಿ, ಪರ್ಷಿಯನ್ ಭಾಷಾಗಳಲ್ಲಿ ಇವರ ಸಾಹಿತ್ಯ ರಚನೆಗಳು ಇವೆ. ಕೀರ್ತನೆಗಳು, ಸ್ತೋತ್ರ, ಆರತಿ ಪದ, ಕೋಲಾಟದ ಪದ (ದಶಾವತಾರದ ಕೋಲು ಕೊಲೆನ್ನ ಕೋಲ ಶ್ರೀಹರಿಯ ಬಲಗೊಂಬೆ ಕೋಲೆ,) ಶೋಭಾನ ಪದ, ಜನ ಸಾಮಾನ್ಯರಿಗೆ ಲಾವಣಿ ಪದ, ಹಂತಿಪದ, ಸುಗ್ಗಿ ಪದ, ಸತ್ಸಂಗದ ಹಾಡು, ತ್ರಿಪದಿ, ಚೌಪದಿಗಳು, ಸಾಂಗತ್ಯ ಭಾಮಿನಿ, ವಾರ್ಧಕ ಷಟ್ಪದಿ ಹೀಗೆ ಮಹಿಪತಿರಾಯರ ಸಾಹಿತ್ಯವು ಸಂಪದ್ಭರಿತ ಹಾಗೆ ವಿಶಾಲ ದೃಷ್ಟಿಯಿಂದ ಕೋನದಿಂದ ಕೂಡಿದೆ.
ಇವರು ಕನ್ನಡ,ಉರ್ದು, ಮರಾಠಿ, ತೆಲಗು, ಪಾರ್ಸಿ, ಸಂಸ್ಕೃತ ಬಹು ಭಾಷಾ ಪಂಡಿತರಿದ್ದರು. ಇವರ ಒಟ್ಟು ಅಂಕಿತ 14 ಇವೆ. ಇವರ ಸಾಹಿತ್ಯ 700 ಕೃತಿಗಳಿಗಿಂತ ಹೆಚ್ಚು ರಚಿಸಿ, ಅದರಲ್ಲಿ ಹರಿ ಸರ್ವೋತ್ತಮತ್ವದ ಬಗ್ಗೆ ಬಹಳ ಪದ್ಯಗಳು ಇವೆ. ಹೀಗೆ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಇನ್ನು ಅವರ ಜೀವನದ ಕಿರು ನೋಟವೆಂದರೆ, ಶ್ರೀ ಮಹಿಪತಿ ದಾಸರು ಬಾಗಲಕೋಟೆಯ ಕಾಥೋಟೆ ಮನೆತನದ ಕೊನೇರಿರಾಯರ ಮಗ. ಇವರು ಮಾದ್ವ ಸಂಪ್ರದಾಯದವರು. ಇವರ ತಂದೆ ಮದ್ವಶಾಸ್ತ್ರ ಪಂಡಿತರಾಗಿದ್ದರು. ನಂತರ ದಿನಗಳಲ್ಲಿ ಉದರ ನಿಮಿತ್ಯವಾಗಿ ವಿಜಾಪುರಕ್ಕೆ ಬಂದು ನೆಲೆಸಿದರು. ಮುಂದೆ ಇವರು ಸಹ ತಂದೆಯಂತೆ ಮದ್ವ ಶಾಸ್ತ್ರ ಸಂಪನ್ನರಾಗಿ, ಷಟ್ ಶಾಸ್ತ್ರವಂತರಾಗಿ ನಿತ್ಯವು ಭಾಗವತ ಪುರಾಣದಿಗಳನ್ನು, ಹೇಳುತ್ತಿದ್ದರು. ಇವರ ಪುರಾಣ ಪ್ರವಚನ ಕೇಳಲು ಯಾವ ತಾರತಮ್ಯ ಇಲ್ಲದೇ ಎಲ್ಲ ವರ್ಗದ ಜನರು ಬಂದು ಪುರಾಣ ನೀತಿ ಭೋಧೆಗಳನ್ನು ಕೇಳುತ್ತಿದ್ದರು. ಮುಂದೆ ಖವಾಸಖಾನನ ವ್ಯವಹಾರದ ಲೆಕ್ಕ ಸಮಸ್ಯೆ ಪರಿಹಾರಿಸಿದಾಗ ಆದಿಲ್ ಶಾಹಿ ಅವರ ಮೆಚ್ಚುಗೆ, ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆದಿಲ್ ಶಾಹಿ ಅರಮನೆಯ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿಯ ಶಾನುಂಗ ಶಾನುಂಗಿ ಎಂಬ ಸೂಫಿ ಸಹೋದರ ಸಹೋದರಿಯರ ಮಾತಿನಂತೆ, ಸಾರವಾಡ ಗ್ರಾಮಕ್ಕೆ ಹೋಗಿ ಸ್ವರೂಪೋದ್ದಾರಕ ಭಾಸ್ಕರ ಸ್ವಾಮಿಗಳ ಅನುಗ್ರಹ ಪಡೆದು, ಹನ್ನೆರಡು ವರುಷದಲ್ಲಿ ಮುಗಿಸುವಂತಹ ಯೋಗ ಹನ್ನೊಂದು ತಿಂಗಳಲ್ಲಿ ಯೋಗ ಸಾಧನೆ ಮಾಡಿದ ಮಹಾಯೋಗಿಗಳು. ಯೋಗದ ಮೂಲಕ ಭಗವಂತನನ್ನು ಕಂಡವರು. ಅಂದರೆ ಯೋಗ ಮಾರ್ಗದಲ್ಲಿ ವಿವರಿಸಿದ ಆತ್ಮ- ವಿಶ್ವ-ವಿಶ್ವಾತೀತ ಪರಮಾತ್ಮನನ್ನು ಕಂಡವರು.
ಭಾಸ್ಕರ ಸ್ವಾಮಿಗಳ ಅನುಗ್ರಹದಿಂದ ಇಬ್ಬರು ಸುಪುತ್ರರಾದರು. ನಂತರ ಹೆಂಡತಿ ತಿಮ್ಮವ್ವ ತೀರಿಹೋದಳು. ಮಕ್ಕಳಿಬ್ಬರು ದೊಡ್ಡಮ್ಮ ತುಕ್ಕವ್ವ ಮತ್ತು ತಂದೆಯ ನೆರಳಲ್ಲಿ ಬೆಳೆದರು ಹಿರಿಯವನಾದ ದೇವರಾಯ ಅಜ್ಜನ ಮತ್ತು ಸಹೋದರಮಾವನ ಆರೈಕೆಯಲ್ಲಿ ಬೆಳೆದು ದೋಣಿ ಶಿವಾಜಿ ಎಂಬ ಬಿರುದು ಪಡೆದು ಜಲವಾದಿ ದೇಸಗತ್ತಿ ಆಳಿದರು. ಇನ್ನು ಎರಡನೇ ಮಗ ಕೃಷ್ಣ ರಾಯ ತಮ್ಮ ತಂದೆ ಮಹಿಪತಿದಾಸರನ್ನು ಗುರುವನ್ನಾಗಿ ತಂದೆಯ ಹಾದಿಯಲ್ಲಿ ಹರಿದಾಸ ಪಥದಲ್ಲಿ ನಡೆದರು.
ಹೀಗೆ ಮಹಿಪತಿದಾಸರು ಕೃಷ್ಣ ನದಿಯ ತಟದಲ್ಲಿ ಸ್ಥಿರವಾದ ಆಸನ ಹಾಕಿ ಅನುಷ್ಠಾನಕ್ಕೆ ಕುಳಿತು ಸರಿಯಾದ ಏಳನೇ ದಿನವಾದ ಕಾರ್ತಿಕ ವದ್ಯ ಅಮಾವಾಸ್ಯೆಯ ದಿನ ಇವರ ಪ್ರಾಣಪಕ್ಷಿಯು ಶ್ರೀಹರಿಯಲ್ಲಿ ಸೇರಿತು. ಕೃಷ್ಣರಾಯರಿಗೆ ತಂದೆ ಎನಿಸಿದ ಗುರುವಾದ ಮಹಿಪತಿರಾಯರ ನೆನಪು ಬಹಳ ಬಂದು ದುಃಖಿಸುತ್ತಾ ಮಲಗಿದಾಗ ಕನಸಿನಲ್ಲಿ ಮಹಿಪತಿ ದಾಸರು ಬಂದು ನಾನು ನಿತ್ಯ ಅನುಷ್ಠಾನ ಮಾಡುತ್ತಿದ್ದ ಶಮಿ ವೃಕ್ಷ ಭೂಮಿಯ ಕೆಳಗೆ ನಾನು 108 ಸಾಲಿಗ್ರಾಮ ರೂಪದಲ್ಲಿರುವೆ, ವೃಂದಾವನ ಕಟ್ಟಿಸು ನಾನು ಅಲ್ಲಿರುವೆ ಎಂದು ಹೇಳಿದರು. ಅಲ್ಲಿ ಅಗೆದು ನೋಡಲಾಗಿ 108 ಸಾಲಿಗ್ರಾಮಗಳು ದೊರೆತವು. ಆದರಂತೆ ಕೃಷ್ಣರಾಯರು ವೃಂದಾವನ ಕಟ್ಟಿಸಿ, ಯೋಗ ದಂಡ, ಪಾದುಕಾ ಇಟ್ಟು ಪೂಜೆ ಮಾಡುತ್ತಾ ಇದ್ದರು. ಈಗಲೂ ಅದೇ ರೀತಿ ವಿಧಾನ ನಡೆದು ಬಂದಿದೆ. ಬಂದ ಭಕ್ತರನ್ನು ಉದ್ಧರಿಸುತ್ತಾ ಕಾಖಂಡಕಿಯಲ್ಲಿ ನೆಲೆಸಿದ್ದಾರೆ.
- ಪ್ರಿಯಾ ಪ್ರಾಣೇಶ ಹರಿದಾಸ
(ವಂಶಸ್ಥೆ ಆಧ್ಯಾತ್ಮ ಚಿಂತಕಿ, ಕವಿಯತ್ರಿ, ಬರಹಗಾರ್ತಿ)
ಮೊ: 80504 36752