ಲೇಖಾ ಲೋಕ-23: ಅದ್ಭುತ ಸಂಶೋಧಕ- ಕವಿ ಸಿ.ಪಿ. ಕೃಷ್ಣಕುಮಾರ್

Upayuktha
0


ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣ ಕುಮಾರ್ ಅವರು ಸಾಹಿತ್ಯ ವಲಯದಲ್ಲಿ ಸಿಪಿಕೆ ಎಂದು ಪ್ರಸಿದ್ಧರಾಗಿ, ಅನೇಕ ಲೇಖನಗಳ ಮತ್ತು ಕವನಗಳ, ವಿಮರ್ಶೆ, ಅನುವಾದ, ಜಾನಪದ ಲೇಖನಗಳ, ಚುಟುಕುಗಳ ಲೇಖಕರು. ನೂರಕ್ಕೂ ಹೆಚ್ಚು ಕೃತಿಗಳನ್ನು ಅದರಲ್ಲೂ ಪ್ರಬಂಧಗಳನ್ನು ಕವನಗಳನ್ನು, ವಿಮರ್ಶೆಗಳನ್ನು, ಅನುವಾದಗಳನ್ನು ಬರೆದು ನಾಡಿಗೆ ನೀಡಿದ ಸಾಹಿತಿಗಳು.


ಪುಟ್ಟೇಗೌಡರ ಪುತ್ರನಾಗಿ, ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲ್ಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ತಾ॥ 8-4-1939 ರಂದು ಜನಿಸಿದರು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯ ಆಶ್ರಯದಲ್ಲಿ ಬೆಳೆದರು. ನಂತರ ಮೈಸೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಜೆ.ಎಸ್.ಎಸ್ ಮಹಾರಾಜಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಬಿ.ಎ.(ಆನರ್ಸ್) ಪದವಿ ಪರೀಕ್ಷೆ ಪಾಸು ಮಾಡಿದರು. 1961ರಲ್ಲಿ ಎಂ.ಎ. ಪದವಿಯನ್ನು ಮಾನಸ ಗಂಗೋತ್ರಿಯಲ್ಲಿ ಪಡೆದರು. ಸಂಸೃತ ಅಭ್ಯಾಸ ಮಾಡಿ, ಭಾರತೀಯ ವಿದ್ಯಾಭವನದ ಸಂಸ್ಕೃತ ಕೋವಿದ ಪದವಿಯನ್ನು ಪಡೆದರು. ತಕ್ಷಣವೇ ಸಿಪಿಕೆ ಅವರಿಗೆ  ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನೆಗೆ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಇವರ ವಿವಾಹ ಶಾರದಾ ಅವರೊಂದಿಗೆ 1962 ರಲ್ಲಿ ಜರುಗಿತು.


1964ರಲ್ಲಿ ತಾವು ಅಭ್ಯಾಸ ಮಾಡಿದ ಮಹಾರಾಜಾ ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ ಅಧ್ಯಾಪಕರಾದರು. ನಂತರ 1967 ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1974 ರಲ್ಲಿ ಸಂಶೋಧನೆ ಮಾಡಿ ಪಿಹೆಚ್ ಡಿ ಪದವಿಯನ್ನು ಪಡೆದು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಿರ್ದೇಶಕರಾದರು.   


ಶಿವಮೊಗ್ಗದಲ್ಲಿ ಜರುಗಿದ 49ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಾಂತರ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ, ಯಶಸ್ವಿಯಾಗಿ ಮಾಡಿದರು. ಸಿಪಿಕೆ ಅವರು, ಜಾನಪದ ಸಮ್ಮೇಳನದ ಸಾಹಿತ್ಯ ಗೋಷ್ಠಿ, ಟಿ ನರಸೀಪುರದಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಡ್ಯದಲ್ಲಿ ಜರುಗಿದ (1994)ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ, ಲಕ್ನೋದಲ್ಲಿ ಜರುಗಿದ ಗಣರಾಜ್ಯೋತ್ಸವದ ಕವಿಗೋಷ್ಠಿಗೆ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಗಂಗಾವತಿಯಲ್ಲಿ ಜರುಗಿದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ (2011) ಸಮ್ಮೇಳನದ ಅಧ್ಯಕ್ಷತೆ ವಹಿಸಿ ಯಶಸ್ವಿಗೊಳಿಸಿದ ಮಹನೀಯರು. ಇವರು ಅನೇಕ ಗೌರವಗಳಿಗೆ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. 

ವೈವಿಧ್ಯಮಯ ಕೃತಿಗಳನ್ನು ರಚಿಸಿದ ಮಹಾನುಭಾವರು. ಅಂತರತಮ ವಚನಗಳು, ಅನಂತ ಪೃಥ್ವಿ, ಒಳದನಿ, ತಾರಾಸುಖ, ನೀವೆ ನಮಗೆ ದಿಕ್ಕು, ಮತ್ತು ನೂರೊಂದು ವಚನಕವನ, ಪ್ರಕೃತಿ, ಬೊಗಸೆ, ವರ್ತಮಾನ, ಹನಿಮಿನಿ ಎಂಬ ಕಾವ್ಯಗಳನ್ನು ಅಲ್ಲದೇ ಪ್ರಬಂಧಗಳ ಪೈಕಿ, ಚಿಂತನಬಿಂದು, ಮೆಲುಕು ಮತ್ತು ವಿಮರ್ಶಾ ಗ್ರಂಥಗಳು, ಸಂಶೋಧನಾ ಗ್ರಂಥಗಳನ್ನು ರಚಿಸಿದ ಲೇಖಕರು.


ಎರಡು ಜೈನ ಪುರಾಣಗಳನ್ನು, ಆಲೋಚನ, ಉಪಚಯ, ಐವರು ವಚನಕಾರರು, ಕನ್ನಡ ಕಾವ್ಯ, ಹತ್ತು ವರ್ಷ, ಕನ್ನಡ ಚತುರ್ಮುಖ ಮುಂತಾದ ಹೀಗೆ ಅನೇಕ ಕೃತಿಗಳನ್ನು ರಚಿಸಿದ ಅದ್ಭುತ ಬರಹಗಾರರು. ಇವರು ಬರೆದ ವಚನ ವಿಲೋಕನ ಕೃತಿಗೆ, ಬಸವ ಸಾಹಿತ್ಯಶ್ರೀ ಪ್ರಶಸ್ತಿ ತದನಂತರ, ಕಾವ್ಯಾನಂದ ಪುರಸ್ಕಾರ, ಹೀಗೆ ಅನೇಕ ಪ್ರಶಸ್ತಿಗೆ ಭಾಜನರು. ಅದಲ್ಲದೇ, ಗೌರವಯುತ ವಿದ್ವತ್ ಶಿರೋಮಣಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಮುಕ್ತಕ ಅಕಾಡೆಮಿಯ ಹರಿಕಾರ ಪ್ರಶಸ್ತಿ ಮತ್ತು ಕನಾ೯ಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಜಾನಪದ, ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಎಸ್‌ವಿಪಿ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ ಹೀಗೆ ಹಲವಾರು ಪುರಸ್ಕಾರಗಳಿಗೆ ಭಾಜನರು.


ಇವರ ಅಭಿಮಾನಿಗಳು ಶಿಷ್ಯರು, ಪ್ರೀತಿಯಿಂದ "ಸಾರ್ಥಕ" ಎಂಬ ಗೌರವ ಗ್ರಂಥ ಅಪಿ೯ಸಿದ್ದಾರೆ. ಸಿಪಿಕೆ ಅವರು ಆರು ಕಾವ್ಯ ಗ್ರಂಥಗಳನ್ನು, ಎರಡು ಪ್ರಬಂಧಗಳನ್ನು ಐದು ವಿಮರ್ಶಾ ಕೃತಿಗಳನ್ನು, ಎರಡು ಜಾನಪದ ಕೃತಿಗಳನ್ನು, ರಚಿಸಿದ್ದಾರೆ. ಆಯ್ದ ಕುವೆಂಪು ಕವನಗಳನ್ನು, ಕಟ್ಟಿಮನಿ ಅವರ ಬದುಕು ಬರಹ ಎಂಬ ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಸಾಹಿತ್ಯದಲ್ಲಿ ಮುಖ್ಯವಾಗಿ ಜಾನಪದ ಸಾಹಿತ್ಯ ಪ್ರವೇಶಿಕಾ, ಜಾನಪದ ಸರಸ್ವತೀ ಪ್ರಸಿದ್ಧ ಕೃತಿಗಳು.


ಸದಾ ಲವಲವಿಕೆಯಿಂದ ಅನೇಕ ಕವನಗಳು, ಚುಟುಕುಗಳನ್ನು ವಿವಿಧ ಪತ್ರಿಕೆಗಳಲ್ಲಿ ಬರೆಯುತ್ತಾ ಅನೇಕ ಶಿಷ್ಯರನ್ನು ಸಂಪಾದಿಸಿದ ಕೀರ್ತಿಯನ್ನು ಸಂಪಾದಿಸಿದ ಅಪರೂಪದ ಮಹಾನ್ ಲೇಖಕರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top