ಕಾರವಾರ: ಅಶೋಕ ಕಾಸರಕೋಡ ಅವರು ಶಾಲಾ ದಿನಗಳಿಂದಲೇ ನೃತ್ಯ, ನಾಟಕ, ಕಲೆಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಸಾಂಸ್ಕೃತಿಕ ಮನಸ್ಸುಳ್ಳ ಸಾಮಾಜಿಕ ಕಾರ್ಯಕರ್ತರು. ಕೊಂಕಣಿ ಖಾರ್ವಿಗಳ ಜಾನಪದ ಕಲೆಗಳಾದ ಹೋಳಿ, ಕೋಲಾಟ, ಗುಮ್ಮಟೆ ಮಾಂಡ್ ಇವುಗಳ ಮಹಿಳಾ ಹಾಗೂ ಪುರುಷರ ತಂಡಗಳ ನೊಳಗೊಂಡ ಕರಾವಳಿ ಬಳಗ ಎಂಬ ಸಂಘಟನೆಯನ್ನು ಕಟ್ಟಿಕೊಂಡು 1999 ರಲ್ಲಿ ಗೋವಾ, ಮಂಗಳೂರು, ಬೆಂಗಳೂರು, ಕುಂದಾಪುರ, ಶಿವಮೊಗ್ಗ ಸೇರಿದಂತೆ ಕರ್ನಾಟಕದಾದ್ಯಂತ ನಡೆದ ಕರಾವಳಿ ಉತ್ಸವ, ಕದಂಬೋತ್ಸವ, ಯುವಜನ ಮೇಳಗಳಲ್ಲಿ ತಮ್ಮ ಸಮಾಜದ ಕಲೆಯನ್ನು ಪ್ರದರ್ಶಿಸಿ ಉಳಿಸಿ ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಅನೇಕ ತಾಲೂಕ ಒಕ್ಕೂಟಗಳ, ಅನೇಕ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ನಿರ್ದೇಶಕರಾಗಿ, ಅಖಿಲ ಕೊಂಕಣಿ ಕಾರ್ಮಿ ಮಹಾಜನ ಸಭಾದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ತಮ್ಮ ಕ್ರಿಯಾಶೀಲತೆ ಮೆರೆದಿದ್ದಾರೆ. ಉತ್ತಮ ಸಂಘಟನಾ ಚಾತುರ್ಯ ಹೊಂದಿರುವ ಇವರು ಮುಂಚುಣಿ ನಾಯಕತ್ವ ವಹಿಸಿಕೊಂಡು ಹಲವಾರು ಜನಪರ ಹೋರಾಟಗಳನ್ನ ಸಂಘಟಿಸಿದ್ದಾರೆ.
ಆದರ್ಶ ನಾಯಕತ್ವ ಮೈಗೂಡಿಸಿಕೊಂಡಿರುವ ಅಶೋಕ ಕಾಸರಕೋಡ್ ಅವರು ಅತಿ ಕಿರು ವಯಸ್ಸಿನಲ್ಲೇ ಕಾಸರಕೋಡ್ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಆಯ್ಕೆಯಾದ ಮೀನುಗಾರ ಯುವಕರಾಗಿದ್ದಾರೆ. ತದನಂತರದಲ್ಲಿ ಮತ್ತೆ ಎರಡನೇ ಬಾರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಸದಸ್ಯರಾಗಿ ಆಯ್ಕೆಯಾಗಿ ಜನಪ್ರಿಯತೆ ಗಳಿಸಿದ್ದಾರೆ. 1994ರಲ್ಲಿ ಹೊನ್ನಾವರದ ಬಾಲ ಪ್ರಗತಿ ಕೇಂದ್ರ ಸಂಘಟಿಸಿದ ದುಷ್ಟಗಳ ವಿರುದ್ಧ ಬೀದಿ ನಾಟಕಗಳಲ್ಲಿ ಪ್ರಧಾನ ಪಾತ್ರಧಾರಿ ಆಗಿ ತಾಲೂಕಿನಾದ್ಯಂತ ಪ್ರದರ್ಶನ ನೀಡಿ ಜನ ಜಾಗೃತಿ ಮೂಡಿಸಿದ್ದಾರೆ. ಅವರು ಸರಕಾರದ ಸುವರ್ಣ ಸಾಂಸ್ಕೃತಿಕ ದರ್ಶಿಕೆಯ ತಾಲೂಕ ಮಾಹಿತಿ ಸಂಗ್ರಹಕಾರರಾಗಿ ತಾಲೂಕಿನ ಸಾಹಿತಿಗಳು, ಕಲಾವಿದರು ಹಾಗೂ ಕಲಾ ಸಂಸ್ಥೆಗಳ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ನೀಡಿದ್ದಾರೆ.
ವಿಭಿನ್ನ ಹಾಗೂ ವಿನೂತನ ಹಲವಾರು ಯಶಸ್ವಿ ಕಾರ್ಯಕ್ರಮಗಳ ಆಯೋಜನೆಯ ರೂವಾರಿಯಾದ ಅಶೋಕ ಕಾಸರಗೋಡ್ ಅವರು ತಮ್ಮ ಸಂಸ್ಕೃತಿ, ಸಾಹಿತ್ಯ ಹಾಗೂ ಜಾನಪದ ಕಲೆಗಳ ಬಗ್ಗೆ ಅತಿ ಅಭಿಮಾನ ಹೊಂದಿದ್ದಾರೆ ಆಧುನಿಕ ಯುಗದಲ್ಲಿ ಕೇವಲ ತಾಂತ್ರಿಕತೆ ಹಾಗೂ ಪಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ಕಲೆ ಸಂಸ್ಕೃತಿ, ಸಾಹಿತ್ಯ ಆಚಾರ ವಿಚಾರಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಜೀವನ ಪ್ರೀತಿ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಕೊಂಕಣಿ ಕನ್ನಡ ನಾಟಕಗಳು, ಕಡಲ ವೈಭವ, ಕೊಂಕಣಿ ಪೋರಾಬ್ ಮುಂತಾದ ಹಲವು ಭಿನ್ನ ರೀತಿಯ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಸಂಘಟಿಸಿ ಕಲಾವಿದರನ್ನ ಪ್ರೋತ್ಸಾಹಿಸುತ್ತಾ ಕಲಾ ರಸಿಕರನ್ನು ರಂಜಿಸುತ್ತಾ ಜಾನಪದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಅಶೋಕ್ ಕಾಸರಕೋಡ್ ಅವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಜಾನಪದ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ. ನವೆಂಬರ್ 10ರಂದು ಹೊನ್ನಾವರ ತಾಲೂಕಿನ ಕಾಸರಕೋಡಿನ ಶಾನ್ ಭಾಗ್ ರೆಸಿಡೆನ್ಸಿಯಲ್ಲಿ ಸಂಜೆ 4:30 ಗಂಟೆಗೆ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


