ಭಾರತ ವರ್ಷದ ಚರಿತ್ರೆಯನ್ನು ಅವಲೋಕಿಸಿದರೆ ನೂರಾರು ವರ್ಷಗಳಿಂದ ಈ ನೆಲದಲ್ಲಿ ಅಭಿವೃದ್ಧಿ ಎಂಬುದು ಕಾಲ-ದೇಶ ಸಂದರ್ಭದಲ್ಲಿ ನಡೆಯುತ್ತಲೇ ಬಂದಿದೆ. ರಾಜವಂಶಗಳು, ಸಾಮ್ರಾಟರು, ಅಧೀನ ರಾಜರುಗಳು, ಒಡೆಯರುಗಳು ಮುಂತಾದವು ಜನರ ನಿತ್ಯ ಬದುಕಿಗೆ ಅನುಕೂಲವಾಗುವಂಥ ಅಭಿವೃದ್ಧಿಯನ್ನು ತಮ್ಮದೇ ಆದ ಕಾರ್ಯ ನೆಲೆಯಲ್ಲಿ, ತಮ್ಮದೇ ಇತಿಮಿತಿಯಲ್ಲಿ ಇರುವ ಅರ್ಥಿಕತೆಯ ಬಲದಲ್ಲಿ ಕಾರ್ಯಗತಗೊಳಿಸಲು ಸಾಧ್ಯವಾಗುವಂಥ ಅಭಿವೃದ್ಧಿ ಕಾರ್ಯಗಳನ್ನು ಮಾಡಿಯೇ ಇದ್ದಾರೆ. ಪ್ರಜೆಗಳ ತೆರಿಗೆ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ರಾಜ ವೈಭೋಗಗಳಿಂದ ಮೆರೆದದ್ದೂ ಇದೆ. ಸ್ವ ಪ್ರತಿಷ್ಠೆಗಾಗಿ ಅನಗತ್ಯ ಅನಾವಶ್ಯಕ ದುಂದು ವೆಚ್ಚದ ಯುದ್ಧಗಳಿಂದ ಹಾನಿಯಾಗಿದ್ದೂ ಇದೆ. ಅವು ಅಭಿವೃದ್ಧಿಗೆ ಬಹುದೊಡ್ಡ ಹೊರೆಯೆಂಬುದರಲ್ಲಿ ಪ್ರಶ್ನೆಯೇ ಇಲ್ಲ. ನಮ್ಮೊಳಗಿನ ಮತ್ಸರದಿಂದಾಗಿ ಹುಟ್ಟಿಕೊಂಡ ಜಗಳದಿಂದ ಸಂಘರ್ಷಗಳಿಂದ ಕಾದಾಡುವಾಗ ಬಂದವರೇ ಯುರೋಪ್ ಮೂಲದ ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಮತ್ತು ಫ್ರೆಂಚರು. ಅವರನ್ನೆಲ್ಲ ಬದಿಗೆ ಸರಿಸಿ ಬ್ರಿಟಿಷರು ಮುನ್ನೆಲೆಗೆ ಬಂದರು.
ಹಾಗಾದರೆ ಬ್ರಿಟಿಷರು ಭಾರತವನ್ನು ಉದ್ಧಾರ ಮಾಡಲೆಂದು ಬಂದಿದ್ದರೆ? ನೋ ಚಾನ್ಸ್. ಅವರು ದೇಶವನ್ನು ಕೊಳ್ಳೆ ಹೊಡೆಯುತ್ತಲೇ ಕೊಂಡುಹೋದರು. ಅನಾಯಾಸವಾಗಿ ಇಲ್ಲಿಯ ಸಂಪತ್ತನ್ನು ಅನುಭವಿಸಿದರು. ದೋಚುವುದಕ್ಕೆ ಬೇಕಾಗಿ ಅನುಕೂಲವಾಗುವಂಥ ಕಾರ್ಯುಗಳನ್ನು ಮಾಡಿಕೊಂಡರು. ಅವುಗಳನ್ನೇ ಅಭಿವೃದ್ಧಿ ಎಂದರೂ ಆಫ್ ಕೋರ್ಸ್ ತಪ್ಪೇನಿಲ್ಲ. ಭಾರತದ ಸಂಪತ್ತನ್ನು ವರ್ಷಗಳ ಕಾಲ ನಿರಂತರವಾಗಿ ತಮ್ಮ ದೇಶಕ್ಕೆ ಸಾಗಿಸುವುದೇ ಅವರ ಕಾಯಕವಾಗಿದ್ದರೂ ಭಾರತ ಕಳೆದುಕೊಳ್ಳುತ್ತಲೇ ಸಂಪತ್ತಿನ ಬರವನ್ನು ಕಂಡಿತು. ಇದನ್ನೇ ದಾದಾಬಾಯ್ ನವರೋಜಿ ಅವರು ಸಂಪತ್ತಿನ ಸೋರಿಕೆ ಎಂಬ ಸಿದ್ಧಾಂತದಲ್ಲಿ ಪ್ರತಿಪಾದಿಸಿದ್ದಾರೆ. ಈ ನಡುವೆ ಸ್ವಾತಂತ್ರ್ಯ ಹೋರಾಟ, ಪ್ರತಿಭಟನೆ ಇತ್ಯಾದಿಗಳ ಸಂಘರ್ಷದಲ್ಲಿ, ಬ್ರಿಟಿಷರ ಮೇಲಿನ ರೋಷಕ್ಕೆ ನಮ್ಮ ಸಂಪತ್ತನ್ನು ನಾವೇ ಹಾಳುಮಾಡಿಕೊಂಡಿದ್ದೂ ಇದೆ.
ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಜನಸಂಖ್ಯೆ 33 ಕೋಟಿ. ಅಷ್ಟು ಜನರಿಗೆ ಬೇಕಾದ ಬಟ್ಟೆ, ವಸತಿ, ಶಿಕ್ಷಣ, ರಸ್ತೆ, ಅಭಿವೃದ್ಧಿ, ಅರೋಗ್ಯ ಇತ್ಯಾದಿಗಳನ್ನು ಬಿಡಿ, ಹೊತ್ತು ಊಟ ಕೊಡುವುದಕ್ಕೂ ನಮ್ಮಲ್ಲಿ ಶಕ್ತಿಯಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು. ಈಗ 142 ಕೋಟಿ ಜನಸಂಖ್ಯೆಗೆ ಆಹಾರದ ಕೊರತೆ ಕಾಣುತ್ತಿಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ಬದಲಾಗಿ ಆಹಾರ ಪದಾರ್ಥಗಳನ್ನು ರಫ್ತು ಮಾಡುತ್ತಿದ್ದೇವೆ, ಇದು ಸಾಧ್ಯವಾಗಿದ್ದು ಯಾರಿಂದ? ಯಾರು ಚಂದ್ರಲೋಕದಿಂದ ಇಳಿದು ಬಂದಿದ್ದರು? ಯೋಜನಾ ಆಯೋಗ, ಪಂಚವಾರ್ಷಿಕ ಯೋಜನೆ, ಭಾಕ್ರಾ ನಂಗಲ್ ತೆಹರಿ, ಹಿರಾಕುಡ್, ಸರ್ದಾರ್ ಸರೋವರ, ದಾಮೋದರ್ ಇತ್ಯಾದಿ ಹಲವು ಡ್ಯಾಮ್ ಗಳನ್ನು, ಕೆರೆಕಟ್ಟೆಗಳನ್ನು, ಚೆಕ್ ಡ್ಯಾಮ್ ಗಳನ್ನು ಕಟ್ಟಿ ಲಕ್ಷಾಂತರ ಎಕರೆ ನೀರಾವರಿ ಜಮೀನು ಮಾಡಿದವರು ಯಾರು? ನೂರಾರು ನದಿಗಳಿಗೆ ಸಾವಿರಾರು ಸೇತುವೆಗಳನ್ನು ಕಟ್ಟಿದವರು ಯಾರು? ಭಿಲಾಯಿ, ದುರ್ಗಾಪುರ, ರೂರ್ಕಿ ಸಹಿತ ಐದು ಉಕ್ಕಿನ ಘಟಕಗಳನ್ನು ಆರಂಭಿಸಿದ್ದು ಯಾರು? ಕೈಗಾರಿಕ ನೀತಿ ಯಾರು ಮಾಡಿದ್ದು? ದೇಶದ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಕೊಟ್ಟವರಾರು? ಗ್ರಾಮೀಣ ಮಟ್ಟದಲ್ಲಿ ರಸ್ತೆಗಳನ್ನು ನಿರ್ಮಿಸಿದವರು ಯಾರು? ಇಸ್ರೋ ಕಟ್ಟಿದವರು ಯಾರು? HAL ಕಟ್ಟಿದವರು ಯಾರು? Tata institute of fundmental research ಸ್ಥಾಪಿಸಿದವರ್ಯಾರು? ಹಳ್ಳಿಹಳ್ಳಿಗಳಲ್ಲಿ ಗ್ರಾಮ ಪಂಚಾಯತ್, ಪಂಚಾಯತ್ ಚುನಾವಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕುಗಳಲ್ಲಿ ಹಾಗೂ ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಶಾಲೆಗಳು, ಜಯದೇವ, ಕಿದ್ವಾಯಿ, ವಿಕ್ಟೋರಿಯಾದಂತಹ ಆಸ್ಪತ್ರೆಗಳನ್ನು ದೇಶದ ಕೆಲವು ಕಡೆ ಕಟ್ಟಿ ಬೆಳೆಸಿದವರು ಯಾರು? ಹಳ್ಳಿ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳು, ಕಾಲೇಜುಗಳು, ಹತ್ತಾರು ವಿವಿಗಳು, ನಗರಗಳ ಕಾಲೇಜುಗಳಲ್ಲಿ ಸಾವಿರಾರು ಹೊಸ ಬಗೆಯ ಕೋರ್ಸುಗಳನ್ನು ಆರಂಭಿಸಿದವರು ಯಾರು? ಸ್ವಾತಂತ್ರ್ಯ ಬಂದಾಗ ಎಂಟು ಪರ್ಸೆಂಟ್ ಅಕ್ಷರಸ್ಥರಿದ್ದರು. ಸಮಾಜದ ಕಟ್ಟಕಡೆಯ ಜನರಿಗೂ ಸಹ ಅಕ್ಷರಭ್ಯಾಸವನ್ನು ಮಾಡಿಸುವ ಸಾಹಸಕ್ಕೆ ಕಾರಣರಾದವರು ಯಾರು? 2011ರ ವೇಳೆಗೆ ಏಷ್ಯದ ಅತಿದೊಡ್ಡ ರೈಲ್ವೆ ವ್ಯವಸ್ಥೆಯನ್ನು ಕಟ್ಟಿದವರು ಯಾರು? ಹಸಿರು ಕ್ರಾಂತಿ, ನೀಲಿ ಕ್ರಾಂತಿ ಹಾಗೂ ಹಳದಿ ಕ್ರಾಂತಿ ಮಾಡಿದವರು ಯಾರು? 1971ರ ಪಾಕಿಸ್ತಾನವನ್ನು ಗೆದ್ದು ಎರಡು ಭಾಗಗಳನ್ನಾಗಿಸಿ ದುರ್ಬಲಗೊಳಿಸಿದವರು ಯಾರು?
ಯೋಜನಾ ಆಯೋಗದ ಸ್ಥಾಪನೆ, ಸಾರ್ವಜನಿಕ ವಲಯದ ಹೊರಹೊಮ್ಮುವಿಕೆ, ಭೂಸುಧಾರಣೆಗಳು, ಕೈಗಾರಿಕಾ ಏಕಸ್ವಾಮ್ಯದ ಮೇಲಿನ ನಿಯಮಗಳು, ರಾಜ್ಯ ವ್ಯಾಪಾರ, ರಾಜಪ್ರಭುತ್ವದ ರಾಜ್ಯಗಳಿಗೆ ಖಾಸಗಿ ಪರ್ಸ್ಗಳ ರದ್ದತಿ, 14 ದೊಡ್ಡ ಬ್ಯಾಂಕ್ಗಳ ರಾಷ್ಟ್ರೀಕರಣ, ಕಲ್ಲಿದ್ದಲು, ಉಕ್ಕು, ತಾಮ್ರ, ಸಂಸ್ಕರಣೆ, ಹತ್ತಿ ಜವಳಿ ಮತ್ತು ವಿಮಾ ಉದ್ಯಮಗಳ ರಾಷ್ಟ್ರೀಕರಣ, ಮತ್ತು ಉದ್ಯೋಗ ಮತ್ತು ಸಂಘಟಿತ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಿದ್ದು, 1973ರಲ್ಲಿ ತೈಲ ಕಂಪನಿಗಳ ರಾಷ್ಟ್ರೀಕರಣ, ಇಂಡಿಯನ್ ಆಯಿಲ್ ಕಾರ್ಪೊರೇಶನ್ (IOC), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (BPCL) ಅಗತ್ಯವಿದ್ದಾಗ ಮಿಲಿಟರಿಗೆ ಸರಬರಾಜು ಮಾಡಲು ತೈಲದ ಕನಿಷ್ಟ ಸ್ಟಾಕ್ ಮಟ್ಟವನ್ನು ಇಟ್ಟುಕೊಳ್ಳುವ ವ್ಯವಸ್ಥೆ ಮಾಡಿದ್ದು, 1972ರಲ್ಲಿ ಮೇಘಾಲಯಕ್ಕೆ ರಾಜ್ಯ ಸ್ಥಾನಮಾನ, ಮಣಿಪುರ ಮತ್ತು ತ್ರಿಪುರ, ಈಶಾನ್ಯ ಫ್ರಾಂಟಿಯರ್ ಏಜೆನ್ಸಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ, ಅರುಣಾಚಲ ಪ್ರದೇಶ ಎಂದು ಮರು ನಾಮಕರಣ, ಈ ಪ್ರದೇಶಗಳಿಗೆ ರಾಜ್ಯತ್ವದ ಪರಿವರ್ತನೆಯ ಯಶಸ್ವಿ ಮೇಲ್ವಿಚಾರಣೆ, 1975ರಲ್ಲಿ ಸಿಕ್ಕಿಂ ವಿಲೀನ, 1971ರ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ನಿರ್ಣಾಯಕ ಗೆಲುವು, ಸಾಧಿಸಿದ್ದು, ಹಸಿರು ಕ್ರಾಂತಿಯಿಂದ ಭಾರತವು ಕಳಪೆ ಕೃಷಿ ಉತ್ಪಾದಕತೆಯನ್ನು ಜಯಿಸಲು ಅವಕಾಶ ಮಾಡಿಕೊಟ್ಟಿದ್ದು, ಆಹಾರ ಧಾನ್ಯ ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾದದ್ದು, ಹೆಚ್ಚಿನ ಇಳುವರಿಯ ಬೀಜಗಳು, ರಾಸಾಯನಿಕ ಗೊಬ್ಬರಗಳು ಮತ್ತು ನೀರಾವರಿಯ ಹೆಚ್ಚಿನ ಬಳಕೆಯ ಮೂಲಕ ಅಗತ್ಯವಾದ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾದದ್ದು, ಆಹಾರಧಾನ್ಯಗಳಲ್ಲಿ ಸಾಕಷ್ಟು ವೃದ್ಧಿ, ವಿಶ್ವದ ಅತಿದೊಡ್ಡ ಡೈರಿ ಅಭಿವೃದ್ಧಿ ಕಾರ್ಯಕ್ರಮವಾದ ಆಪರೇಷನ್ ಫ್ಲಡ್ ಅನ್ನು ಪ್ರಾರಂಭಿಸಿದ್ದು, ಭಾರತವನ್ನು ಹಾಲಿನ ಕೊರತೆಯ ರಾಷ್ಟ್ರದಿಂದ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಮಾರ್ಪಡಿಸಿದ್ದು, ಮತ್ತು USA ಅನ್ನು ಮೀರಿಸಿದ್ದನ್ನು ಮರೆಯಲಾದೀತೆ?
ನವದೆಹಲಿಯಲ್ಲಿ ಧನಸಹಾಯ ಮತ್ತು ಅಭಿವೃದ್ಧಿ, 1967ರಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಅಧಿಕಾರ ನೀಡಿದ್ದು, 1974ರಲ್ಲಿ ಭಾರತವು ಭೂಗತ ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಅನಧಿಕೃತವಾಗಿ "ಸ್ಮೈಲಿಂಗ್ ಬುದ್ಧ" ಎಂದದ್ದು, 1960-70ರ ದಶಕದ ಉತ್ತರಾರ್ಧದಲ್ಲಿ ಪಶ್ಚಿಮ ಬಂಗಾಳದಲ್ಲಿ ಉಗ್ರಗಾಮಿ ಕಮ್ಯುನಿಸ್ಟ್ ದಂಗೆಗಳನ್ನು ಹತ್ತಿಕ್ಕಿದ್ದು, 1966ರಲ್ಲಿ ಮಿಜೋ ದಂಗೆಗೆ ಪ್ರತಿಕ್ರಿಯೆಯಾಗಿ ಬೃಹತ್ ಪ್ರತೀಕಾರದ ದಾಳಿ, ಭಾರತೀಯ ವಾಯುಪಡೆಯು ಐಜ್ವಾಲ್ನಲ್ಲಿ ವೈಮಾನಿಕ ದಾಳಿಯನ್ನು ನಡೆಸುವ ಮೂಲಕ ದಂಗೆಯನ್ನು ನಿಗ್ರಹ, ನಾಗಾಲ್ಯಾಂಡ್ನಲ್ಲಿ ದಂಗೆಗಾಗಿ, 1970ರ ದಶಕದಲ್ಲಿ ಶಕ್ತಿಶಾಲಿ ಮಿಲಿಟರಿ ಆಕ್ರಮಣದಿಂದ ತುರ್ತು ಪರಿಸ್ಥಿತಿಯ ಸಮಯದಲ್ಲಿ ದಂಗೆಕೋರರ ಶರಣಾಗತಿ, 1975ರಲ್ಲಿ ಶಿಲ್ಲಾಂಗ್ ಒಪ್ಪಂದ, ಪಾಕಿಸ್ತಾನವನ್ನು ಸೋಲಿಸಲು ಮತ್ತು ಪೂರ್ವ ಪಾಕಿಸ್ತಾನವನ್ನು ಸ್ವತಂತ್ರ ಬಾಂಗ್ಲಾದೇಶವಾಗಿ ಪರಿವರ್ತಿಸಲು ಅಮೆರಿಕದ ಒತ್ತಡವನ್ನು ಎದುರಿಸಿದ್ದು, ವಿಶ್ವ ಪರಮಾಣು ಕ್ಲಬ್ಗೆ ಭಾರತವನ್ನು ಸೇರಿಸಿದ್ದು, ಭಾರತವು ಅಧಿಕೃತವಾಗಿ ಅಲಿಪ್ತ ಚಳವಳಿಯ ಭಾಗವಾಗಿದ್ದರೂ, ಭಾರತೀಯ ವಿದೇಶಾಂಗ ನೀತಿಯನ್ನು ಸೋವಿಯತ್ ಬ್ಲಾಕ್ನ ಕಡೆಗೆ ಒಲವನ್ನು ನೀಡಿದ್ದು, ಆಧಾರ್ ಯೋಜನೆ, ರಾಷ್ಟ್ರೀಯ ಶಿಕ್ಷಣ ನೀತಿ, ಸರ್ವ ಶಿಕ್ಷಣ ಅಭಿಯಾನ- ಇವುಗಳನ್ನೆಲ್ಲ ಸಾರಾಸಗಟಾಗಿ ನಿರಾಕರಿಸಲು ಸಾಧ್ಯವೇ? ನೋ ಚಾನ್ಸ್. ಈ ಕಾಲಘಟ್ಟದಲ್ಲೇ ಇಡಿಯ ಭಾರತದಲ್ಲಿ ಅನೇಕ ಮಹನೀಯರು ಕಲೆ, ಲಲಿತಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ಇತಿಹಾಸ, ಗಣಿತ, ಪರಿಸರ, ಮಾಧ್ಯಮ, ಶಿಲ್ಪಕಲೆ, ಶಿಕ್ಷಣ, ಕ್ರೀಡೆ’ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದಿದ್ದನ್ನು ಮರೆಯಲಾದೀತೆ? ಮರೆಮಾಚಲಾದೀತೆ?
ಇವೆಲ್ಲ ಯಾವ ಜಾದೂಗಾರ, ಯಾವ ಗ್ರಹದಿಂದ ಬಂದು ಮಾಡಿದ? ಸುಳ್ಳುಗಳನ್ನು ಸೃಷ್ಟಿಸುವುದು, ಹರಡುವುದು ಹಾಗೂ ಅದರಿಂದ ಜನರ ಮೈಂಡ್ ವಾಷ್ ಮಾಡಿ ಅವರಿಗೆ ಉಂಡೆನಾಮ ಹಾಕಿ ವಿವಿಧ ರೀತಿಯ ಅಧಿಕಾರ, ಅನುಕೂಲ ಹಾಗೂ ಸೌಲಭ್ಯಗಳನ್ನು ಪಡೆಯುವುದು ಈ ದೇಶದಲ್ಲಿ ಲಾಗಾಯ್ತಿನಿಂದಲೂ ಬಹಳ ಸುಲಭವಾಗಿ ನಡೆಯುತ್ತ ಬಂದಿದೆ. ಇಂದಿಗೂ ಅದು ವಂಶದ ಬಳುವಳಿಯೆಂಬಂತೆ ನಡೆಯುತ್ತಲೇ ಇದೆ. ಅದಕ್ಕಾಗಿ ಹಣಹೂಡುವ ಭಾರೀ ಕುಳಗಳು ಆನಂತರ ತಮಗೆ ಬೇಕಾದದ್ದನ್ನು ಮಾಡಿಸಿಕೊಳ್ಳುವುದನ್ನು ನೋಡುತ್ತಲೇ ಬಂದಿದ್ದೇವೆ. ಆದರೆ ಇಂತಹ ಭಯಂಕರ ಸುಳ್ಳುಗಳ ಪ್ರವಾಹದ ನಡುವೆಯೂ ಕೂಡ ಅಲ್ಲಲ್ಲಿ ಸತ್ಯಗಳನ್ನು ಗ್ರಹಿಸುವುದು, ಅರ್ಥಮಾಡಿಕೊಳ್ಳುವುದು ಮತ್ತು ಒಪ್ಪಿಕೊಳ್ಳುವುದು ಬಹುಕಷ್ಟ. ಹಾಗಾಗಿ ಬಹಳ ಜನಕ್ಕೆ ಅದು ಸಾಧ್ಯವಾಗುವುದೇ ಇಲ್ಲ. "ಸುಳ್ಳು ಅನ್ನೋದು ಕಿಕ್ ಕೊಡುವ ಆಲ್ಕೋಹಾಲ್ ಇದ್ದ ಹಾಗೆ. ಸತ್ಯ ಅನ್ನೋದು ಕಾಯಿಲೆಯನ್ನು ವಾಸಿಮಾಡುವ ಕಹಿಯಾದ ಮದ್ದು ಇದ್ದ ಹಾಗೆ." ಸುಳ್ಳಿನ ಸೌಧದಡಿಯ ನೆರಳಿಗಾಗಿ ಬಯಸುವುದರಲ್ಲೂ ಹಿತವಿದೆ. ಸತ್ಯದ ನೆರಳಲ್ಲಿ ಹಿತವೆನಿಸುವುದಿಲ್ಲ.
ಜನಕ್ಕೆ ಯಾವುದು ಬೇಕೋ ಅದನ್ನೇ ಆಯ್ಕೆ ಮಾಡಿಕೊಳ್ಳಲಿ. ಅದು ಅವರ ಹಣೆಬರಹ. ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆ ಯಾವ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತಿ ಬೇಕಾದರೆ ಪಡೆದು ಮಜಾ ಮಾಡಲಿ. ಹಾಗೆಂದು ಈ ಹಿಂದೆ ಇದ್ದವರು ದೇಶವನ್ನು ಸಂಪೂರ್ಣವಾಗಿ ಉದ್ಧಾರ ಮಾಡಿದ್ದಾರೆ, ಭ್ರಷ್ಟಾಚಾರ ಮಾಡೇ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಅವರು ಭ್ರಷ್ಟಾಚಾರ ಮಾಡಿದ್ದಾರೆ, ದೇಶದ ಸಂಪನ್ಮೂಲಗಳನ್ನು ಹಾಳು ಮಾಡಿದ್ದಾರೆ, ಲೂಟಿಗೈದಿದ್ದಾರೆ. ಸಾಲ ಮಾಡಿದ್ದಾರೆ. ಜನರನ್ನು ಯಾಮಾರಿಸಿದ್ಧಾರೆ. ಅರಾಷ್ಟ್ರೀಯ ಮನಸ್ಥಿತಿಯನ್ನು ಬೆಳೆಸಿದ್ದಾರೆ ಎಂಬುದು ಪೂರ್ತಿಯಾಗಿ ಸುಳ್ಳಲ್ಲವೇ ಅಲ್ಲ. ಇವೆಲ್ಲವೂ ವಾಸ್ತವವೇ! ಅವರೆಲ್ಲ ತಪ್ಪು ಮಾಡಿದ್ದಾರೆ. ಅದಕ್ಕಾಗಿಯೇ ಜನ ಅವರಿಗೆ ತಕ್ಕ ಶಿಕ್ಷೆಯನ್ನೂ ನೀಡಿದ್ದಾರೆ. ಅಧಿಕಾರದಿಂದ ದೂರವಿಟ್ಟಿದ್ದಾರೆ. ಮಾಡಿದ ತಪ್ಪುಗಳಿಗೆ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ ಎಂದು ಹೇಳುವುದು ಯಾವುದೇ ಪಕ್ಷಗಳಿಗೂ ನಾಯಕರುಗಳಿಗೂ ಶೋಭೆಯನ್ನು ತರುವುದಿಲ್ಲ. ಅದು ಇತಿಹಾಸಕ್ಕೆ ಮಾಡುವ ಅಪಚಾರ!
- ಟಿ. ದೇವಿದಾಸ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ