ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದ ತಜ್ಞರ ಒಕ್ಕೊರಲ ಅಭಿಮತ

ವರದಿ: ರಾಮಚಂದ್ರ ಮುಳಿಯಾಲ
ಬೆಂಗಳೂರು: ಜೈವಿಕ ತಂತ್ರಜ್ಞಾನ ಸಹಿತ ಯಾವುದೇ ಕ್ಷೇತ್ರದ ಉನ್ನತ ಶಿಕ್ಷಣದಲ್ಲಿ ಪ್ರಾಯೋಗಿಕ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಈ ಕುರಿತು ಶೈಕ್ಷಣಿಕ ಕ್ಷೇತ್ರ ಹಾಗೂ ಉದ್ಯಮವು ಸಮನ್ವಯ ಸಾಧಿಸಬೇಕು ಎಂದು ಜೈವಿಕ ಕ್ಷೇತ್ರದ ತಜ್ಞರು ಒಕ್ಕೊರಲ ಅಭಿಮತ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್ ಶೃಂಗಸಭೆಯ ಮೊದಲ ದಿನ ನಡೆದ ಉದ್ಯಮ ನೇತಾರರು ಹಾಗೂ ಶಿಕ್ಷಣ ತಜ್ಞರು ಒಟ್ಟಾಗಿ ನಡೆಸಿದ ‘ಬಯೋ-ಉದ್ಯೋಗ ಮತ್ತು ಕೌಶಲ್ಯತೆ’ ಕುರಿತ ಸಂವಾದಲ್ಲಿ ಅಭಿಪ್ರಾಯ ಹೊರಹೊಮ್ಮಿತು.
ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರಾಯೋಗಿಕಕ್ಕಿಂತ ಥಿಯರಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಪ್ರಾಯೋಗಿಕ ಅನುಭವವನ್ನು ಅಧ್ಯಯನ ವೇಳೆಯಲ್ಲೇ ಒದಗಿಸಿದರೆ ಉದ್ಯಮಕ್ಕೆ ಸಿದ್ಧವಾದ ವಿದ್ಯಾರ್ಥಿಗಳನ್ನು ರೂಪಿಸುವುದು ಸುಲಭವಾಗಲಿದೆ ಎಂದು ಆಲ್ಕನ್ ಗ್ಲೋಬಲ್ ಸರ್ವೀಸ್ನ ಜಾಗತಿಕ ಮುಖ್ಯಸ್ಥ ವಿನೀತ್ ದ್ವಿವೇದಿ ಹೇಳಿದರು.
ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ಒದಗಿಸುವಲ್ಲಿ ಶಿಕ್ಷಣ ಸಂಸ್ಥೆಗಳೊಂದಿಗೆ ಕಾರ್ಪೊರೇಟ್ ಜಗತ್ತು ಕೈಜೋಡಿಸಬೇಕಿದೆ. ಬ್ರಿಡ್ಜ್ ಕೋರ್ಸ್ಗಳು ಉತ್ತಮ ಪರಿಹಾರವಾಗಬಲ್ಲುದು ಎಂದು ಅವರು ಅಭಿಪ್ರಾಯಪಟ್ಟರು.
ಜೈವಿಕ ತಂತ್ರಜ್ಞಾನ ಪಠ್ಯಕ್ರಮ ಮರುರಚನೆಯ ಕುರಿತು ಚಿಂತನೆ ನಡೆಸಬೇಕು. ಬಹು ವಿಭಾಗಗಳ ಏಕೀಕರಣ ನಡೆಯಬೇಕಿದೆ. ಪ್ರಕ್ರಿಯೆ ಆಧಾರಿತ ಕಲಿಕೆಯನ್ನು ನಾವು ನೀಡಬೇಕು. ಇದಕ್ಕಾಗಿ ಕ್ರಿಯಾಶೀಲ ಚಿಂತನೆ ಬೇಕು ಎಂದು ಬಯಾಕಾನ್ ಅಕಾಡೆಮಿಯ ಡೀನ್, ಸಲ್ವಾಡಿ ಈಶ್ವರನ್ ಅವರು ಹೇಳಿದರು.
2ನೇ ಹಂತದ ನಗರಗಳ ಶಿಕ್ಷಣ ಸಂಸ್ಥೆಗಳಲ್ಲಿ ಲ್ಯಾಬ್ಗೆ ಹಣದ ಕೊರತೆಯಿದೆ ಎಂಬ ವಾಸ್ತವ ಸಂಗತಿಯನ್ನು ಬೊಟ್ಟು ಮಾಡಿದ ಐಐಎಸ್ಸಿಯ ಬಯೋಇಂಜಿನಿಯರಿಂಗ್ ಪ್ರೊಫೆಸರ್ ಕೌಶಿಕ್ ಚಟರ್ಜಿ, ಪ್ರೊಫೆಸರ್ಗಳು ಉದ್ಯಮದ ಗತಿಯನ್ನು ಅರ್ಥ ಮಾಡಿಕೊಳ್ಳಬೇಕು ಹಾಗೂ ಅಪ್ಗ್ರೇಡ್ ಆಗಬೇಕು ಎಂದೂ ಅಭಿಪ್ರಾಯಪಟ್ಟರು.
ಜೈವಿಕ ತಂತ್ರಜ್ಞಾನ, ಜೀವ ವಿಜ್ಞಾನ ಕ್ಷೇತ್ರ ತುಂಬಾ ಬೆಳೆದಿದ್ದು, ಭಾರತ ಜಗತ್ತಿನಲ್ಲಿ ಬಲಿಷ್ಠ ಸ್ಥಾನ ಪಡೆದುಕೊಂಡಿದೆ. ಈ ಹಂತದಲ್ಲಿ ನಾವು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಜತೆಗೆ ಉದ್ಯಮದ ಪ್ರಾಯೋಗಿಕ ಅನುಭವ ನೀಡುವುದು ತುರ್ತು ಅಗತ್ಯವಾಗಿದೆ ಎಂದು ಮೆರ್ಕ್ ಲೈಫ್ ಸೈನ್ಸ್ನ ಅತೀಜಿಯೋ ನರ್ಗುಣಂ ಅವರು ಹೇಳಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ