ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಶ್ರೀ ಮಂಜುನಾಥೇಶ್ವರ ಪಾದಯಾತ್ರೆ ಸಮಿತಿ ವತಿಯಿಂದ ನಡೆಯುವ 12ನೇ ವರ್ಷದ ಪಾದಯಾತ್ರೆ ನ.26 ರಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದಿಂದ ಆರಂಭಗೊಂಡು ಧರ್ಮಸ್ಥಳದವರೆಗೂ ನಡೆಯಿತು.
ಮಂಗಳವಾರ ಸಂಜೆ 3 ಗಂಟೆಗೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಾಲಯದಲ್ಲಿ ದೀಪ ಬೆಳಗಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಉಜಿರೆಯ ಜನಾರ್ದನ ಮಂದಿರದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ವಿದ್ಯಾರ್ಥಿ ನಿಲಯಗಳ ಆಡಳಿತ ವಿಭಾಗದ ಸಿಇಒ ಪೂರನ್ ವರ್ಮಾ ಮುಂತಾದವರು ಜೊತೆಗೂಡಿ ದೀಪ ಬೆಳಗಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ ಹೆಗ್ಡೆ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಅನಿಲ್, ಜನ ಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ವಸಂತ್ ಸಾಲಿಯಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೧೫ ವಲಯಗಳ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು, ನಾಗರಿಕರು, ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಸಂಘಸಂಸ್ಥೆಗಳು, ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪಾದಯಾತ್ರೆ ಮೆರವಣಿಗೆಯಲ್ಲಿ ವಿಶೇಷವಾಗಿ ಅಲಂಕರಿಸಲಾದ ವಾಹನ ರಥಗಳು ಗಮನ ಸೆಳೆದವು. ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರವನ್ನು ಇಟ್ಟು, ದಾರಿಯುದ್ದಕ್ಕೂ ಭಜನೆಗಳನ್ನು ಹಾಡುತ್ತಾ, ಘೋಷಣೆಗಳನ್ನು ಹಾಕುತ್ತಾ ಪಾದಯಾತ್ರಿಗಳು ಹುರುಪಿನಿಂದ ಧರ್ಮಸ್ಥಳದತ್ತ ಹೆಜ್ಜೆ ಹಾಕಲು ಪ್ರಾರಂಭಿಸಿದರು. ಭಕ್ತರ ಜತೆಗೆ ಶಿವನ ಮೂರ್ತಿಯನ್ನೊಳಗೊಂಡ ಸ್ತಬ್ಧ ಚಿತ್ರ, ಶ್ರೀ ಮಂಜುನಾಥ ಸ್ವಾಮಿಯ ಭಾವಚಿತ್ರಗಳ ವಾಹನಗಳು ಸಾಗಿದವು.
ಜನಾರ್ದನ ಸ್ವಾಮಿ ದೇವಸ್ಥಾನದಿಂದ ಹೊರಟ ಪಾದಯಾತ್ರೆಯಲ್ಲಿ ಸುಮಾರು 8 ಕಿ.ಮೀ.ದೂರದ ಧರ್ಮಸ್ಥಳಕ್ಕೆ 8-10 ಸಾವಿರಕ್ಕೂ ಅಧಿಕ ಭಕ್ತರು ಹೆಜ್ಜೆ ಹಾಕಿದರು. ಮಕ್ಕಳು, ಮಹಿಳೆಯರು, ಅಬಾಲವೃದ್ಧರ ತನಕ ಯಾವುದೇ ಬೇಧ-ಭಾವ ಇಲ್ಲದೆ ಯಾತ್ರೆಯಲ್ಲಿ ಹುರುಪಿನಿಂದ ಹೆಜ್ಜೆ ಹಾಕುತ್ತಾ ದಾರಿಯುದ್ದಕ್ಕೂ ದೇವರ ನಾಮವನ್ನು ಜಪಿಸುತ್ತಾ, ಘೋಷಣೆಯನ್ನು ಕೂಗುತ್ತಾ ಸಾಗಿದರು.
-ಶಶಿಕುಮಾರ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ