50 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದುಳಿದ ಸಮಾಜಗಳ ಶ್ರೇಯೋಭಿವೃದ್ಧಿಗಾಗಿ ನಿಸ್ವಾರ್ಥ, ಪ್ರಾಮಾಣಿಕ ಸೇವೆಗೈದ ಹಿರಿಯ ಚೇತನ ದಿವಂಗತ ದಾಮೋದರ ಆರ್ ಸುವರ್ಣ ಅವರ ಜನ್ಮಶತಾಬ್ದಿ ಸಂಭ್ರಮವನ್ನು ನ. 24ರಂದು ಆಯೋಜಿಸಲಾಗಿದೆ. ಕಾರ್ಯಕ್ರಮವು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ದಾಮೋದರ ಸುವರ್ಣ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
24.09.1924 ರಂದು ಜನಿಸಿರುವ ದಾಮೋದರ ಆರ್. ಸುವರ್ಣ ರವರು ತಮ್ಮ ಜೀವಿತಾವಧಿಯ 69 ವರುಷಗಳ ಬದುಕನ್ನು ಕೇವಲ ಸಂಸಾರ, ತನ್ನ ಕುಟುಂಬ ಎಂದು ಯೋಚಿಸದೆ ಸಮಸ್ಯೆ ಹಿಂದುಳಿದ ಸಮಾಜ ತನ್ನ ಕುಟುಂಬ ಎಂಬ ಕಲ್ಪನೆಯಲ್ಲಿ ಕಾರ್ಯನಿರ್ವಹಣೆ ಮಾಡಿದವರು.
ಶೋಷಿತ ಸಮಾಜಕ್ಕೆ ಸಾಮಾಜಿಕ ಕ್ರಾಂತಿಯ ಮೂಲಕ ಭವ್ಯ ಭವಿಷ್ಯ ಕರುಣಿಸಿದ ಯುಗಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ನಿರಂತರವಾಗಿ ದುಡಿದವರು, 1976 ರಲ್ಲಿ ಬಿಲ್ಲವರ ಮಾತೃ ಸಂಸ್ಥೆಯಾಗಿರುವ ಅಖಿಲ ಭಾರತ ಬಿಲ್ಲವರ ಯೂನಿಯನ್ ಆಡಳಿತ ಚುಕ್ಕಾಣಿ ಹಿಡಿದು ಕಾಲಿಗೆ ಚಕ್ರ ಕಟ್ಟಿದ ರೀತಿಯಲ್ಲಿ ಅವಳಿ ಜಿಲ್ಲೆಗಳಲ್ಲಿ ಸುತ್ತಾಡಿ ಸಮಾಜದ ಸಂಘಟನೆಯನ್ನು ಬೆಳೆಸಿದವರು. ಗ್ರಾಮ ಗ್ರಾಮಗಳಲ್ಲಿ ಬಿಲ್ಲವ ಸಂಘಗಳ ಉಗಮಕ್ಕೆ ನಾಂದಿ ಹಾಡಿದವರು.
1977 ರಲ್ಲಿ ಆರ್ಥಿಕ ದುರ್ಬಲ ಕುಟುಂಬದ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಗಗನಕುಸುಮವಾಗಿದೆ. ಕಾಲಘಟ್ಟದಲ್ಲಿ ತಮ್ಮ ಸ್ವಂತ ದುಡಿಮೆಯ ಆದಾಯದಿಂದ ಕುದ್ರೋಳಿಯಲ್ಲಿ ನಾರಾಯಣ ಗುರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಈಗಲೂ ಇಡೀ ಜಿಲ್ಲೆಯಲ್ಲಿ ಅತೀ ಕನಿಷ್ಠ ಶುಲ್ಕದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡುವ ಸಂಸ್ಥೆ ಇದಾಗಿದೆ. ಪ್ರಸ್ತುತ ಈ ಸಂಸ್ಥೆ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ತಾಂತ್ರಿಕ ವಿಭಾಗಗಳಿಗೆ ವಿಸ್ತರಣೆಯಾಗಿ ಸುಮಾರು 1500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಕಲಿತು ತಮ್ಮ ಭವ್ಯ ಭವಿಷ್ಯ ರೂಪಿಸಿದ್ದಾರೆ.
ದಾಮೋದರ ಆರ್.ಸುವರ್ಣ ಅವರದು ಒಬ್ಬ ಅಸಾಧಾರಣ ಶಕ್ತಿಯ ವ್ಯಕ್ತಿತ್ವ, ಸರ್ಕಾರಗಳು ಪ್ರಸ್ತುತ ಜಾರಿಗೊಳಿಸುವ ನಿರ್ಧಾರಗಳನ್ನು ಅವರು ಅಂದು ತಮ್ಮ ಅವಧಿಯಲ್ಲಿಯೇ ಕಾರ್ಯಗತ ಮಾಡಿದವರು. 1980 ರಲ್ಲಿ ಎರಡು ವ್ಯಾನ್ ಮೂಲಕ ಸಂಚಾರಿ ಕ್ಲಿನಿಕ್ ನ್ನು ಸ್ಥಾಪಿಸಿ ವೈದ್ಯರುಗಳೊಂದಿಗೆ ಅವಿಜಿತ ದ ಕ ಜಿಲ್ಲೆಯಾದ್ಯಂತ ಗ್ರಾಮಗ್ರಾಮಗಳಿಗೆ ಸಂಚರಿಸುವ ಮೂಲಕ ಉಚಿತವಾಗಿ ಬಡಜನರ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ ತೋರಿದವರು. ಬಡಹೆಣ್ಣು ಮಕ್ಕಳ ಹೊಸಜೀವನಕ್ಕೆ ದಿವ್ಯ ಸ್ಪರ್ಶ ನೀಡಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ, ದೀನ ದಲಿತರ ಸೇವೆಗಾಗಿ ವಿಶೇಷ ಅನುದಾನಗಳನ್ನು ನೀಡಿದ ಮಹನೀಯರು.
ಪ್ರಸ್ತುತ ಈ ವರುಷ ಅವರ ಜನ್ಮಶತಾಬಿಯನ್ನು ಅವರ ಆದರ್ಶಗಳನ್ನು ಪರಿಪಾಲಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ದಾಮೋದರ ಆರ್.ಸುವರ್ಣ ಜನ್ಮಶತಾಬ್ದಿ ಸಂಭ್ರಮ ನವೆಂಬರ್ 24 ಭಾನುವಾರ ಬೆಳಗ್ಗೆ 10.00 ಘಂಟೆಗೆ ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನವನ್ನು ವೃತ್ತಿಪರ ಶಿಕ್ಷಣ ಪಡೆಯುವ ಆರ್ಥಿಕ ದುರ್ಬಲ ಕುಟುಂಬದ ಹಿಂದುಳಿದ ಸಮಾಜದ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಅದೇ ರೀತಿ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಅಭಿನಂದನೆ ನಡೆಸಲಾಗುವುದು ಎಂದು ನವೀನ್ ಚಂದ್ರ ಸುವರ್ಣ ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ರವರು ಸಾಹಿತಿಗಳಾದ ಮುದ್ದು ಮೂಡುಬೆಳ್ಳೆಯವರು ರಚಿಸಿರುವ ದಾಮೋದರ ಆರ್.ಸುವರ್ಣರವರ ಬದುಕಿನ 'ಶಕಪುರುಷನಿಗೆ ಶತನಮನಗಳು ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಕೇಂದ್ರದ ಸಚಿವೆ ಕು.ಶೋಭಾ ಕರಂದ್ಲಾಜೆಯವರು ವಿದ್ಯಾರ್ಥಿವೇತನ ವಿತರಣೆಗೆ ಚಾಲನೆ ನೀಡಲಿದ್ದಾರೆ. ಲೋಕಸಭಾ ಸಚೇತಕರು, ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ರಾಜ್ಯ ಸಚಿವರು, ದ.ಕ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್, ಸಚಿವ ಮಧು ಬಂಗಾರಪ್ಪ, ದ. ಕ. ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಜೇಶ್ ಚೌಟ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಶಾಸಕರಾದ ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಮಾಜಿ ಸಚಿವ ವಿನಯಕುಮಾರ್ ಸೊರಕೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಬೆಳಗ್ಗೆ, 9.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಸದಸ್ಯರು ಹಾಗೂ ಸುವರ್ಣ ಸಹೋದರರಾದ ಉದಯಚಂದ್ರ ಡಿ. ಸುವರ್ಣ, ವಿನಯಚಂದ್ರ ಡಿ. ಸುವರ್ಣ ಹಾಗೂ ಜಗದೀಪ್ ಡಿ. ಸುವರ್ಣ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ