ಪುಸ್ತಕ ಪರಿಚಯ: ವಿ.ಬಿ ಕುಳಮರ್ವ ಅವರ 'ಕಂದನ ಮುತ್ತು' ಮುಕ್ತಕ ಸಂಕಲನ

Upayuktha
0


ಲೇಖಕರು: ವಿ ಬಿ ಕುಳಮರ್ವ

ಪ್ರಕಾಶಕರು: ಕಥಾ ಬಿಂದು ಪ್ರಕಾಶನ ಮಂಗಳೂರು

ಪುಟಗಳು: 204

ಬೆಲೆ: ರೂ. 175


ಶ್ರೀ ವಿ ಬಿ ಕುಳಮರ್ವ ಪೆರ್ಲದಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸಿ ನಿವೃತ್ತರಾಗಿ ಈಗ ಸಾಹಿತ್ಯ ರಚನೆ  ಮತ್ತು ಕನ್ನಡದ ಕೈಂಕರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಶಿಶು ಸಾಹಿತ್ಯ, ಕಾವ್ಯ ನಾಟಕ ಇತ್ಯಾದಿ ಪ್ರಕಾರಗಳಲ್ಲಿ ಯೂ ಕೈಯಾಡಿಸಿದ್ದು ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಚಿರಪರಿಚಿತ ಸಂಪಾದಕರಾಗಿ ಹೊರತಂದಿರುವ ಹವಿಗನ್ನಡ ಶಬ್ದಕೋಶ.  "ಕಂದನ ಮುತ್ತು" ವಿ.ಬಿ.  ಕುಳಮರ್ವ ಅವರ ಸಾವಿರ ಮುಕ್ತಕಗಳ ಸಂಕಲನವಾಗಿದೆ.


ಮುಕ್ತಕವು ಶಾಸ್ತ್ರೀಯ ಚಿತ್ತಶುದ್ದಿಗೆ ಮೂಲ

ಶಕ್ತವಹ ಸಾಹಿತ್ಯ ಇದರೊಳಿಹುದಿಂದು.

ಯುಕ್ತವಾಗಿಹ ಬರಹ ಮುನ್ನೆಲೆಗೆ ಹರಿದು ಬರೆ

ಮುಕ್ತಿಪಥವಿದು ನಿನಗೆ ಪುಟ್ಟ ಕಂದ


ಇದು ಮನನೀಯವಾದ ಪೂರ್ಣ ಮುಕ್ತಕ. 


ಸಂಸಾರ ಸಾಗರದಿ ಅಲೆಯುಂಟು ನೆಲೆಯುಂಟು

ಹಿಂಸೆಯನು ತೊರೆದಿರಲು ವಾತ್ಸಲ್ಯವುಂಟು

ಹಂಸ ಪಕ್ಷಿಯ ಬಿಳುಪು ಮನದೊಳಗೆ ತುಂಬಿರಲು

ಕಂಸಾರಿ ಸಲಹುವನು ಪುಟ್ಟಕಂದ


ಹಂಸದ ಕಲ್ಪನೆ ಅತ್ಯಂತ ಮನೋಹರ ಮತ್ತು ಸೊಗಸಾದ ರೂಪಕ, ಹಂಸ ಕ್ಷೀರ ನ್ಯಾಯ ಗೊತ್ತೇ ಇದೆ. ನೈರ್ಮಲ್ಯದ ನೆಲೆಯನ್ನು ಇದು ಸಾಕ್ಷೀಕರಿಸುತ್ತದೆ. ಇಂಥಹುದೇ ಇನ್ನೊಂದು ಮುಕ್ತಕವು ಕೃತಜ್ಞತೆಯ ವೈಶಿಷ್ಟ್ಯವನ್ನು ಸಾರುತ್ತದೆ.


ದೋಣಿಯೊಳು ಕುಳ್ಳರಿಸಿ ದಾಟಿಸಿದ ಅಂಬಿಗನ

ಮಾನವಂತಿಗೆ ಉಳ್ಳ ಜನ ಮರೆಯುವರೇನು

ಕ್ಷೋಣಿಯೊಳಗಿಂತಿರುವ ಕಸುಬಿ ನವರೆಷ್ಟಿಹರು

ಕಾಣಬೇಕವರನ್ನು ಪುಟ್ಟ ಕಂದ.


ಹಂಸದ ಕಲ್ಪನೆ ಅತ್ಯಂತ ಮನೋಹರ. ಸೊಗಸಾದ ರೂಪಕ, ಹಂಸಕ್ಷೀರ ನ್ಯಾಯ ಗೊತ್ತೇ ಇದೆ. ನೈರ್ಮಲ್ಯದ ನೆಲೆಯನ್ನು ಇದು ಸಾಕ್ಷಿಕರಿಸುತ್ತದೆ.


ನಂಬಿಕೆಯೇ ಜೀವನಕೆ ಊರು ಗೋಲಾಗಿಹುದು

ನಂಬಿಕೆಯೇ ಜೀವನಕೆ ಮಾರ್ಗದರ್ಶನವು

ನಂಬಿಕೆಯೆ ಜೀವನದ ಹೆಗ್ಗುರಿಯ ತೋರುವುದು

ನಂಬಿಕೆಯ ತೊರೆಯದಿರು ಪುಟ್ಟಕಂದ


ನಂಬಿಕೆ ಎನ್ನುವುದು ನಮ್ಮ ಬದುಕಿನಲ್ಲಿ ಊರುಗೋಲಾಗಿ ಪ್ರವರ್ತಿಸುವ ಪರಿಯೇ ಒಂದು ಸೋಜಿಗ, ನಂಬಿ ಕೆಟ್ಟವರಿಲ್ಲ ಎಂಬ ನಾಣ್ಣುಡಿಯೇ ಇದೆಯಷ್ಟೇ. ಹಾಗೆಯೇ ಬದುಕಿನಲ್ಲಿ ಹದವರಿತು ನಡೆದುಕೊಳ್ಳಲು ಈ ಮಾತುಗಳು. 


ಇಂದಿನದು ಇಂದಿಗಿರೆ, ನಾಳಿನದು ನಾಳೆಗಿರೆ

ಮುಂದಿನದು ಸುಲಭವಾಗಿಹುದು ಜೀವನದಿ

ಚಂದದಿಂದಲಿ ಬದುಕ ಹದವರಿತು ನಡೆಸಿದರೆ

ಕುಂದಿರದು ಭವಿತವ್ಯ ಪುಟ್ಟ ಕಂದ


ಇಂತಹ ನೀತಿ ನಿರೂಪಕ ಮಾತುಗಳು ಪಥಪ್ರದರ್ಶಕ ನುಡಿಮುತ್ತುಗಳೂ ಕೃತಿಯ ಉದ್ದಕ್ಕೂ ಹರಡಿಕೊಂಡಿವೆ. ಈ ಕೃತಿ ಜೀವನ ಮೌಲ್ಯಗಳನ್ನು ಸಾರುವ ಮುಕ್ತಕಗಳ ಸಂಗ್ರಹ, ಪುಸ್ತಕಗಳು ನಾಲ್ಕು ಸಾಲಿನ ರಚನೆಗಳಾದರೂ ಒಂದು ಕವನವನ್ನು ಬರೆಯುವುದಕ್ಕಿಂತ ಕ್ಲಿಷ್ಟ ಮಹತ್ವದ ಮತ್ತು ಮೌಲಿಕ ಭಾವ ಸಾಂದ್ರತೆಯನ್ನು 4 ಸಾಲುಗಳಲ್ಲಿ ಹಿಡಿಸುವುದೇ ಒಂದು ಚಾಕಚಕ್ಯತೆ, ಇನ್ನೂ ಸುಮಾರು 5000 ಮುಕ್ತಕಗಳು ಮುದ್ರಣಕ್ಕೆ ತಯಾರಾಗಿದ್ದು ಅಚ್ಚು ಮನೆಗೆ ಹೋಗಲು ತಯಾರಾಗುತ್ತಿವೆ. ಕಾಸರಗೋಡು ಜಿಲ್ಲೆಯ ಗಮನಾರ್ಹ ವಿದ್ವತ್ಪೂರ್ಣ ಕವಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ವಿ ಬಿ ಕುಳಮರ್ವ ಅವರಿಗೆ ಈ ಪುಸ್ತಕ ಯಶಸ್ಸು ತರಲಿ ಎಂಬ ಶುಭ ಹಾರೈಕೆಗಳು.


- ಡಾ. ಕೊಳಚಪ್ಪೆ ಗೋವಿಂದ ಭಟ್, ಮಂಗಳೂರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top