ಭಾರತೀಯ ಜೀವವಿಮಾ ನಿಗಮ ಪುತ್ತೂರು ಶಾಖೆಯ ವತಿಯಿಂದ ‘ಗುರುವಂದನೆ’
ಪುತ್ತೂರು: ಭಾರತೀಯ ಜೀವ ವಿಮಾ ನಿಗಮ ಬದುಕಿಗೆ ಭದ್ರತೆ ಒದಗಿಸುವ ಕಾರ್ಯ ಮಾಡುತ್ತದೆ. ನಾವು ತೊಡಗಿಸಿದ ಹಣ ನಮಗೆ ಭದ್ರತೆ ನೀಡುವುದರೊಂದಿಗೆ ದೇಶದ ಆರ್ಥಿಕ ಭದ್ರತೆˌಮೂಲಭೂತ ಸೌಕರ್ಯದ ಅಭಿವೃದ್ಧಿಗೂ ಅನುಕೂಲವಾಗುತ್ತದೆ. ಹಾಗಾಗಿ ಉದ್ಯೋಗದಿಂದ ನಿವೃತ್ತಿಗೊಂಡಾಗ ಸಿಕ್ಕುವ ಹಣವನ್ನು ಹೇಗೆ ಹೂಡಿಕೆ ಮಾಡಬೇಕೆಂದು ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಅಂಕಣಕಾರ ಟಿ. ನಾರಾಯಣ ಭಟ್ ಹೇಳಿದರು.
ಅವರು ಪುತ್ತೂರಿನ ಭಾರತೀಯ ಜೀವವಿಮಾ ಶಾಖೆಯ ಉನ್ನತಿ ತಂಡದಿಂದ ನಗರದ ಮನೀಷಾ ಸಭಾಂಗಣದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ 2023-24ನೇ ಸಾಲಿನಲ್ಲಿ ನಿವೃತ್ತರಾದ 19 ಮಂದಿ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಾಯೋಜಕˌ ಪುತ್ತೂರು ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿˌ ಉನ್ನತಿ ತಂಡದ ನಾಯಕ ಬಾಲಕೃಷ್ಣ ಕೆ.ಆರ್. ಮಾತನಾಡಿ ಭಾರತ ದೇಶದಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಗೌರವಿಸುವ ಅವಕಾಶ ಸಿಕ್ಕಿರುವುದು ನಿಜವಾಗಿಯೂ ನಮ್ಮ ಸೌಭಾಗ್ಯ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಶಿಕ್ಷಕರ ಸಮೂಹ ಜೀವವಿಮಾ ನಿಗಮದ ಜೊತೆ ನಿಕಟ ಸಂಪರ್ಕ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ಯು. ಉಜ್ವಲ್ ಅವರು ಮಾತನಾಡಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮುಖಾಂತರ ದೇಶಕಟ್ಟುವ ಕೆಲಸ ಮಾಡಿದರೆ ಭಾರತೀಯ ಜೀವ ವಿಮಾ ನಿಗಮ ಗ್ರಾಹಕರ ಜೀವಕ್ಕೆ ಆರ್ಥಿಕ ಭದ್ರತೆ ಹಾಗೂ ಉಳಿತಾಯದ ವ್ಯವಸ್ಥೆ ಮಾಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ, ಭಾರತೀಯ ಜೀವವಿಮಾ ನಿಗಮದ ಪುತ್ತೂರು ಶಾಖೆಯ ಉಪ ಪ್ರಬಂಧಕ ಗುರುರಾಜ್ ಎಂ.ಯು. ಅವರು ನಿವೃತ್ತಿಯ ಬಳಿಕ ಉಳಿತಾಯ ಯೋಜನೆ ಹೂಡಿಕೆಗಳ ಬಗ್ಗೆ ಹಾಗೂ ಜೀವನಪರ್ಯಂತ ಪಿಂಚಣಿ ಬರುವಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಪುತ್ತೂರು ಹಾಗೂ ಕಡಬ ತಾಲೂಕಿನ ವಿಶ್ರಾಂತ ಪ್ರಾಥಮಿಕ ಶಾಲಾ ಶಿಕ್ಷಕರುಗಳಾದ ಪ್ರೇಮಲತಾˌ ನಾಗರತ್ನಾˌ ತೆರೇಜಾ ಎಂ. ಸಿಕ್ವೇರಾˌ ಶುಭಲತಾˌ ಸವಿತಾ ಕುಮಾರಿ ಎಂ.ಡಿ.ˌ ಯಮುನಾ ಬಿˌ ಚಂದ್ರಪ್ರಭಾ ಎಸ್ˌ ನೀಲಾವತಿ ಕೆˌ ಸಾವಿತ್ರಿ ಎನ್ˌ ಇಂದಿರಾ ಕೆˌ ನೇತ್ರಾವತಿ ಬಿˌ ಸೊಬಿನಾ ಎನ್. ನೊರೊನ್ಹಾˌ ಜೀನಪ್ಪ ಗೌಡˌ ತಾರಾ ಎಸ್ˌ ಕುಶಲಾವತಿˌ ಅನಸೂಯ ಬಾಯಿ ಹಾಗೂ ಪೌಢಶಾಲಾ ಶಿಕ್ಷಕರಾದ ವನಲಕ್ಷ್ಮೀ ಎನ್.ಎಚ್. ಹಾಗೂ ಇಂದಿರಾ ಕೆ.ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿತರ ಪರವಾಗಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕಿಯರಾದ ಶುಭಲತಾ ಹಾಗೂ ಅನಸೂಯ ಬಾಯಿ ಟಿ. ಅಭಿಪ್ರಾಯ ವ್ಯಕ್ತಪಡಿಸಿದರು. ಜೀವ ವಿಮಾ ಪ್ರತಿನಿಧಿ ನಾರಾಯಣ ಗೌಡ ಸ್ಪಾಗತಿಸಿ, ಪ್ರತಿನಿಧಿ ನವೀನಾ ಬಿ.ಡಿ. ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ, ಪ್ರಸ್ತುತ ಎಲ್ ಐ ಸಿ ಪ್ರತಿನಿಧಿ ಹಾಗೂ ಕಾರ್ಯಕ್ರಮದ ಪ್ರಾಯೋಜಕರಲ್ಲೊಬ್ಬರಾದ ಯಶೋದಾ ಕೆ.ಎಸ್. ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಕಮಲಾ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.ಜೀವವಿಮಾ ನಿಗಮದ ಪ್ರತಿನಿಧಿಗಳಾದ ಪ್ರೇಮಾ ಆನಂದˌ ಆನಂದ ರಾಮಕುಂಜˌ ರಾಘವೇಂದ್ರˌ ಸಂಧ್ಯಾˌ ಪ್ರಸಾದ ಬೈಪಡಿತ್ತಾಯ ಹಾಗೂ ಇತರ ಪ್ರತಿನಿಧಿ ಮಿತ್ರರು ಸಹಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ