ಪೋಷಣ್ ಮಾಸಾಚರಣೆ - ಸಮಾರೋಪ ಸಮಾರಂಭ

Upayuktha
0


ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಉಡುಪಿ ಇವರ ಸಹಯೋಗದೊಂದಿಗೆ ಪೋಷಣ್ ಅಭಿಯಾನ್ ಯೋಜನೆಯ “ಪೋಷಣ್ ಮಾಸಾಚರಣೆ 2024” ರ ಸಮಾರೋಪ ಸಮಾರಂಭ ಕಾರ್ಯಕ್ರಮವು ಸೋಮವಾರ ನಗರದ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಐ.ಪಿ ಗಡಾದ ಮಾತನಾಡಿ, ದೇಹದ ಸುಸ್ಥಿರ ಅಭಿವೃದ್ಧಿಗೆ ಪೌಷ್ಠಿಕತೆಯ ಪ್ರಾಮುಖ್ಯತೆ ಮತ್ತು ಕಿಶೋರಿಯರ ಆರೈಕೆಯ ಕುರಿತು ವಿವರಿಸುತ್ತಾ ಪೌಷ್ಠಿಕ ಸಮಾಜ ನಿರ್ಮಾಣದತ್ತ ಹೆಜ್ಜೆ ಹಾಕೋಣ ಎಂದರು. 


ಮುಖ್ಯ ಅತಿಥಿಗಳಾದ ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ವಾಸುದೇವ, ಗರ್ಭಿಣಿ ಬಾಣಂತಿಯರ ಆರೈಕೆ ಮತ್ತು ಮಕ್ಕಳ ಲಾಲನೆ ಪಾಲನೆ ಬಗ್ಗೆ ತಿಳಿಸಿದರು.


ಉಡುಪಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್ ನಾಯ್ಕ್ ವಿ, ಪೌಷ್ಠಿಕ ಮಾಸಾಚರಣೆಯ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಗರ್ಭಿಣಿ ಬಾಣಂತಿ ಹಾಗೂ ಮಕ್ಕಳಿಗೆ ಅಂಗನವಾಡಿ ಮುಖಾಂತರ ಹಲವು ಯೋಜನೆ/ಸೌಲಭ್ಯಗಳು ಲಭ್ಯವಿದ್ದು, ಇವುಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು. 


ಸಂಪನ್ಮೂಲ ವ್ಯಕ್ತಿಗಳಾದ ಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಮಾಧವ್ ಪೈ ಮಾತನಾಡಿ, ಗರ್ಭಿಣಿಯರ ಆಹಾರ ಪದ್ಧತಿ, ಗರ್ಭಿಣಿ ಬಾಣಂತಿಯರ ಆರೈಕೆ, ಮಕ್ಕಳ ಪೌಷ್ಠಿಕತೆಯ ಕುರಿತು ವಿವರವಾಗಿ ವಿವರಿಸಿದರು. ಗರ್ಭಿಣಿಯರಲ್ಲಿ ಸಕ್ಕೆರೆ ಖಾಯಿಲೆ ಮತ್ತು ರಕ್ತದ ಒತ್ತಡ ಕಾಣಿಸಿದರೆ ಅದರಿಂದ ಹುಟ್ಟುವ ಮಗುವಿನ ಮೇಲೆ ಉಂಟಾಗುವ ಪರಿಣಾಮದ ಕುರಿತು ಹಾಗೂ ಹದಿಹರೆಯದವರಿಗೆ ರಕ್ತಹೀನತೆಯಿಂದಾಗುವ ಸಮಸ್ಯೆಗಳ ಬಗ್ಗೆ ವಿವರಿಸಿ ರಕ್ತಹೀನತೆಯನ್ನು ಕಡಿಮೆಗೊಳಿಸುವ ಆಹಾರಗಳು ಹಾಗೂ ಕಬ್ಬಿಣಾಂಶ ಮಾತ್ರೆ ಸೇವನೆ ಬಗ್ಗೆ ಹಾಗೂ ಮಹಿಳೆಯರು ತಮ್ಮ ಸ್ವಯಂ ಆರೋಗ್ಯದ ಬಗ್ಗೆ ಗಮನಹರಿಸುವಂತೆ ಮಾಹಿತಿಯನ್ನು ಒದಗಿಸಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ಉಪನಿರ್ದೆಶಕಿ ಶ್ಯಾಮಲಾ ಸಿ.ಕೆ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದರೆ ಮಾತ್ರ ಸಮಾಜದ ಅಭಿವೃದ್ಧಿ ಹೊಂದಲು ಸಾಧ್ಯ, ಕಿಶೋರಿಯರಲ್ಲಿ ಪೌಷ್ಠಿಕತೆ ಮತ್ತು ಸ್ವಚ್ಚತೆ ಅರಿವನ್ನು ಮೂಡಿಸುವುದು ಅಗತ್ಯವಾಗಿದೆ ಎಂದರು.  


ಕಾರ್ಯಕ್ರಮದಲಿ ಉಡುಪಿ ವಲಯದ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಗರ್ಭಿಣಿ, ಬಾಣಂತಿ, ಮಕ್ಕಳು ಹಾಗೂ ಹದಿಹರೆಯದವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.    


ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಬಿ ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ದೀಪಾ ನಿರೂಪಿಸಿ, ಪೋಷಣ್ ಅಭಿಯಾನ ಯೋಜನೆಯ ಜಿಲ್ಲಾ ಸಂಯೋಜಕಿ ಚೈತ್ರಾ ವಂದಿಸಿದರು.


ಪೋಷಣ್ ಮಾಸಾಚರಣೆ ಅಂಗವಾಗಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರಗಳ ಪ್ರಾತ್ಯಕ್ಷಿಕೆಯಲ್ಲಿ ಸ್ಥಳೀಯ ಪೌಷ್ಠಿಕ ಆಹಾರಗಳು, ಸ್ಥಳೀಯ ಲಭ್ಯವಿರುವ ಹಣ್ಣು ತರಕಾರಿಗಳು ಹಾಗೂ  ಕರಾವಳಿಯ ಯಕ್ಷಗಾನ ವೇಶಭೂಷಣ, ವೀರಗಾಸೆ, ಕೋಲಾಟ, ಡೊಳ್ಳುಕುಣಿತ, ಭರತನಾಟ್ಯ ಮೊದಲಾದ ಚಿತ್ರಣಗಳನ್ನು ಸಿರಿಧಾನ್ಯಗಳ ಮೂಲಕ ಜೋಡಿಸಿ ಆಕರ್ಷಕವಾಗಿ ಪ್ರದರ್ಶಿಸಲಾಯಿತು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top