ಸಂಯಮಭರಿತ ಆದರ್ಶವಾದಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ

Upayuktha
0

ಮಹಾತ್ಮಾ ಗಾಂಧೀಜಿ  154ನೇ ಹುಟ್ಟುಹಬ್ಬ




ಸತ್ಯದ ಸಾಧನೆಗೆ ಅಹಿಂಸೆಯೊಂದೇ ಮಾರ್ಗವೆಂದು, ನುಡಿದಂತೆ ನಡೆದ ಸಂಯಮಭರಿತ ಆದರ್ಶವಾದಿ, ಸರಳ ಸಾತ್ವಿಕ ಸ್ವಭಾವದ ತ್ಯಾಗಮಯಿ, ವಿಶ್ವಮಾನವ ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಭಾರತ ಮತ್ತು ಭಾರತೀಯರ ಮನಸ್ಸನ್ನು ಸಾಕಾರವಾಗಿ ಪ್ರತಿಬಿಂಬಿಸಿರುವಷ್ಟು ಬೇರಾರೂ ಪ್ರತಿಬಿಂಬಿಸಿಲ್ಲ. ಮನುಷ್ಯತ್ವದ ಸಾಕಾರ ಮೂರ್ತಿಯಾಗಿದ್ದ ಮಹಾಜೀವ ಮಹಾತ್ಮಾ ಗಾಂಧಿಜೀ ವಿಶ್ವ ಶಾಂತಿಯನ್ನು ಬಯಸಿದವರು. 


ಮಹಾತ್ಮ ಗಾಂಧೀಜಿಯವರು ಸಮಕಾಲೀನ ಜಗತ್ತಿಗೆ ಮಾತ್ರವಲ್ಲದೆ ಭವಿಷ್ಯತ್ತಿನ ಜಗತ್ತಿನಲ್ಲಿ ಅಗತ್ಯವಾದ ಸರ್ವ ಶ್ರೇಷ್ಠ ಚಿಂತನೆಗಳನ್ನು ಕೊಡುಗೆಯಾಗಿ ನೀಡಿದ ಮಹಾನ್ ಚಿಂತಕರಲ್ಲಿ ಸರ್ವಶ್ರೇಷ್ಠರು ಮತ್ತು ಮಹನೀಯರು. ಏಕೆಂದರೆ ಅವರು ಬಹು ಆಯಾಮಗಳಲ್ಲಿ ತಮ್ಮ ಚಿಂತನೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಓರ್ವ ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜಸುಧಾರಕರಾಗಿ, ಸರ್ವಶ್ರೇಷ್ಠ ಆರ್ಥಿಕ ತಜ್ಞರಾಗಿ, ಮೌಲ್ಯಯುತ ಶಿಕ್ಷಣ ತಜ್ಞರಾಗಿ, ಅಧ್ಯಾತ್ಮಿಕ ಯೋಗಿಯಾಗಿ ಸರ್ವಕಾಲಕ್ಕೂ ಸರ್ವವ್ಯಾಪಿಯಾಗಿ ಸ್ಮರಿಸಲು ಯೋಗ್ಯ ರಾಜಕೀಯ ನಾಯಕರಾಗಿ, ಮಾನವೀಯ ಮೌಲ್ಯಗಳ ಮೇರು ವ್ಯಕ್ತಿತ್ವವುಳ್ಳವರಾಗಿ ಭಾರತೀಯರಿಗೆ ದೊರೆತ ಮರೆಯಲಾಗದ ಮಾಣಿಕ್ಯ ನಮ್ಮೆಲ್ಲರ ನೆಚ್ಚಿನ ನಾಯಕ ಮಹಾತ್ಮ ಗಾಂಧೀಜಿಯವರು. 


ಮಹಾತ್ಮ ಗಾಂಧೀಜಿಯವರ ಪೂರ್ಣ ಹೆಸರು ಮೋಹನ್ ದಾಸ್ ಕರಮ್ ಚಂದ್ ಗಾಂಧಿ. ಇವರು ಗುಜರಾತ್ ರಾಜ್ಯದ ಫೋರ್ ಬಂದರ್ ನಲ್ಲಿ ಅಕ್ಟೋಬರ್ 02, 1869 ರಲ್ಲಿ ಕರಮ್ ಚಂದ್ ಗಾಂಧಿ ಹಾಗೂ ಪುತಲೀಬಾಯಿ ರವರ ಮಗನಾಗಿ ಜನಿಸಿದರು. ಇಂದು ನಾವು ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ಯನ್ನು ಆಚರಿಸುತ್ತಿದ್ದೇವೆ. 


ಇಂದಿನ  ಗಾಂಧೀಜಯಂತ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ನಾವು ತಿಳಿದುಕೊಳ್ಳಬೇಕಾದ ವಿಚಾರಗಳು ಬಹಳಷ್ಟಿವೆ. ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಗಾಂಧೀಜಿಯವರು ಮುಂಬಯಿಯಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಆದರೆ ವಕೀಲಿ ವೃತ್ತಿಯಲ್ಲಿ ವಿಫಲವಾದ ಕಾರಣ ಮುಂಬಯಿ ಕಂಪೆನಿಯ ವ್ಯವಹಾರದ ಮೇಲೆ ದಕ್ಷಿಣ ಆಫ್ರಿಕಾಕ್ಕೆ ಹೋದರು. ಅಲ್ಲಿ ವರ್ಣಬೇಧ ನೀತಿಯ ವಿರುದ್ಧ ಹೋರಾಡಿ ಜಯಗಳಿಸಿದರು. 


1915 ರಲ್ಲಿ ಭಾರತಕ್ಕೆ ವಾಪಾಸಾದ ನಂತರ ಗೋಪಾಲಕೃಷ್ಣ ಗೋಖಲೆಯವರನ್ನು ತಮ್ಮ ರಾಜಕೀಯ ಗುರುವಾಗಿ ಸ್ವೀಕರಿಸಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಸ್ವದೇಶಿ ಸರಕುಗಳ ಬಳಕೆ, ಕಾನೂನು ಭಂಗ ಚಳವಳಿ, ಕರನಿರಾಕರಣ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಮುಂತಾದ ಚಳವಳಿಗಳ ಅವಿರತ ಹೋರಾಟದಲ್ಲಿ ಗಾಂಧೀಜಿಯವರು ನಾಯಕತ್ವವಹಿಸಿ ಅಂತಿಮವಾಗಿ 1947, ಆಗಸ್ಟ್ 15 ರಂದು ಬ್ರಿಟಿಷ್ ಆಡಳಿತದಿಂದ ಭಾರತ ಮುಕ್ತಿ ಹೊಂದಿತು. 


ಭಾರತೀಯರು ಸ್ವತಂತ್ರರಾದರು. ಭಾರತ ರಾಮರಾಜ್ಯ ವಾಗಬೇಕು. ಆ ಮೂಲಕ ಗ್ರಾಮ ಸ್ವರಾಜ್ಯ ಸ್ಥಾಪನೆಯಾಗಬೇಕು ಎಲ್ಲರೂ ಸಮಾನತೆಯಿಂದ ಬದುಕಬೇಕು. ಭಾರತದ ಸರ್ವೋದಯ ವಾಗಬೇಕೆಂದು ಅಭೂತಪೂರ್ವ ಪರಿಕಲ್ಪನೆಯನ್ನು ಚಿಂತಿಸಿದರು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಸತ್ಯ ಮತ್ತು ಅಹಿಂಸೆಯನ್ನು ನಂಬಿದ್ದರು ಮತ್ತು ಪಾಲಿಸಿದರು. ಜಗತ್ತಿಗೂ ಅದನ್ನೇ ಬೋಧಿಸಿದರು. 


ಹರಿಜನ , ಹರಿಜನ ಸೇವಕ, ಹರಿಜನ ಬಂಧು ಎಂಬ ಪತ್ರಿಕೆಗಳನ್ನು ಹೊರಡಿಸಿ ಅಸ್ಪೃಶ್ಯತಾ ನಿವಾರಣೆಗೆ ಮತ್ತು ಹಿಂದೂ ಮುಸ್ಲಿಂ ಐಕ್ಯತೆಗಾಗಿ ಅಹರ್ನಿಶಿ ದುಡಿದರು. ಯಂಗ್ ಇಂಡಿಯಾ ಎಂಬ ಆಂಗ್ಲ ಭಾಷೆಯ ವಾರ್ತಾಪತ್ರಿಕೆಯೊಂದನ್ನು ಮಹಾತ್ಮ ಗಾಂಧೀಜಿಯವರು ಭಾರತದಲ್ಲಿ ಪ್ರಾರಂಭಿಸಿದರು. ಆಗ ಭಾರತೀಯರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ಮಾಡುತ್ತಿದ್ದರು. ಸ್ವಾತಂತ್ರ್ಯಕ್ಕಾಗಿ ಲೆಕ್ಕವಿಲ್ಲದೆಷ್ಟು ಬಲಿದಾನಗಳು ನಡೆದು ಹೋದವು. ಭಾರತೀಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. 


ಒಂದು ರಾಷ್ಟ್ರ ಏಕೆ ಸ್ವತಂತ್ರವಾಗಿರಬೇಕು? ಬಲಿದಾನಗಳು ಏಕೆ ಬೇಕು? ರಾಷ್ಟ್ರಾ ಭಿಮಾನ ಎಂದರೆ ಹೇಗಿರಬೇಕು? ಎಂಬುದಕ್ಕೆ 1925 ರಲ್ಲಿ ಮಹಾತ್ಮ ಗಾಂಧಿಯವರು ತಮ್ಮ YOUNG INDIA ಪತ್ರಿಕೆಯಲ್ಲಿ ಹೀಗೆ ಬರೆದಿದ್ದಾರೆ. ವ್ಯಕ್ತಿ ತನ್ನ ಕುಟುಂಬಕ್ಕಾಗಿ, ಕುಟುಂಬ ತನ್ನ ಗ್ರಾಮಕ್ಕಾಗಿ, ಗ್ರಾಮ ತನ್ನ ಜಿಲ್ಲೆಗಾಗಿ, ಜಿಲ್ಲೆ ರಾಜ್ಯಕ್ಕಾಗಿ, ರಾಜ್ಯ ಇಡೀ ರಾಷ್ಟ್ರಕ್ಕಾಗಿ ಸಂಪೂರ್ಣ ಬಲಿದಾನ ಮಾಡಬೇಕೆಂದು ನಮ್ಮ ರಾಷ್ಟ್ರಾಭಿಮಾನ ಹೇಗೆ ಕಲಿಸುತ್ತದೆಯೋ ಹಾಗೆಯೇ ವಿಶ್ವದ ಕ್ಷೇಮಕ್ಕಾಗಿ ತನ್ನ ಬಲಿದಾನವನ್ನು ಸ್ವಾಗತಿಸಲು ಒಂದು ರಾಷ್ಟ್ರ ಸ್ವತಂತ್ರವಾಗಿರಬೇಕು.


ಆದ್ದರಿಂದ ರಾಷ್ಟ್ರಾಭಿಮಾನವು ನನ್ನ ದೃಷ್ಟಿಯಲ್ಲಿ ಮಾನವ ಕುಲದ ನೆಮ್ಮದಿಗಾಗಿ ಅಗತ್ಯವಾದರೆ ತನ್ನ ಪ್ರಾಣದ ಬಲಿದಾನ ಮಾಡಲೂ, ಸಿದ್ಧವಾಗಲು ನಮ್ಮ ದೇಶ ಸ್ವತಂತ್ರವಾಗಬೇಕು." ಎಂದಿದ್ದಾರೆ. ನೋಡಿ, ಎಂತಹ ವಿಶ್ವ ಪರಿಕಲ್ಪನೆಯನ್ನು ನೀಡಿದ್ದಾರೆ. ಇಲ್ಲಿ ಬಲಿದಾನಕ್ಕೊಂದು ಅರ್ಥವನ್ನು ನೀಡಿದ್ದಾರೆ. ರಾಷ್ಟ್ರೀಯತೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ. ವ್ಯಕ್ತಿ ವ್ಯಷ್ಟಿಯಿಂದ ಸಮಷ್ಟಿಯ ಕಡೆಗೆ ಸಾಗುವ ಮೂಲಕ ತನ್ನ ಜೀವ ಮತ್ತು ಜೀವನಕ್ಕೊಂದು ಗುರಿ ಇದ್ದು ಸಾಧನೆಯ ಮಾರ್ಗವನ್ನು ತೋರಿಸಿದ್ದಾರೆ ಗಾಂಧೀಜಿ. 


ಮಹಾತ್ಮ ಗಾಂಧೀಜಿಯವರು ನಿಸ್ವಾರ್ಥ ಬದುಕಿನ ಅದ್ವಿತೀಯ ಶಕ್ತಿ. ತನಗಾಗಿ ಮತ್ತು ತನ್ನ ಸ್ವಂತಕ್ಕಾಗಿ ಏನನ್ನೂ ಬಯಸಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಹೋರಾಡಿದರು. ಕರಿಯರು ಮತ್ತು ಬಿಳಿಯರ ನಡುವಿನ ಅಸಮಾನತೆ ಹೋಗಲಾಡಿಸಲು, ಬಿಳಿಯರಿಂದ ಕರಿಯರಿಗಾಗುತ್ತಿದ್ದ ಶೋಷಣೆ, ಅವಮಾನಗಳನ್ನು ತಪ್ಪಿಸಲು ಅಲ್ಲಿಯೇ ಹತ್ತಾರು ವರ್ಷಗಳ ಕಾಲ ಹೋರಾಟ ಮಾಡಿ ತಮ್ಮ ಅವಿರತ ಶ್ರಮ ಅಂದರೆ ಅಹಿಂಸೆ ಮತ್ತು ಉಪವಾಸ ಸತ್ಯಾಗ್ರಹದ ಮೂಲಕ ಬಿಳಿಯರ ಸರ್ಕಾರದ ವಿರುದ್ಧ ಜಯ ಸಾಧಿಸಿದರು. ಮನುಷ್ಯತ್ವ ಎಲ್ಲಾ ಗುಣಗಳಿಗಿಂತಲೂ ಮಿಗಿಲು ಎಂದು ವಿಶ್ವಕ್ಕೆ ಸಾರಿದರು. 


ಆ ಕ್ಷಣವೇ ನಿರ್ಧರಿಸಿದರು. ಅದೇನೆಂದರೆ ತನ್ನ ತಾಯ್ನಾಡಾದ ಭಾರತವು ಸಹ ಪರಕೀಯರ ದಾಸ್ಯದ ನೆರಳಿನಲ್ಲಿದೆ. ಕೂಡಲೇ ಭಾರತಕ್ಕೆ ಬಂದು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಆ ಮೂಲಕ ಇಡೀ ವಿಶ್ವಕ್ಕೆ ತಮ್ಮ ಮೇರು ನಾಯಕತ್ವದ ಪ್ರದರ್ಶನ ನೀಡಿದರು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರು ನೀಡುತ್ತಿದ್ದ ಒಂದೊಂದು ಕರೆಗೂ ಅಸಂಖ್ಯಾತ ಜನ ಸೇರುತ್ತಿದ್ದರು. ಇದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು.


ಗಾಂಧೀಜಿಯವರ ನಿರ್ಣಯಕ್ಕೆ ಭಾರತೀಯರು ಸಂಪೂರ್ಣವಾಗಿ ತಮ್ಮ ತನು ಮನ ಧನ ಗಳಾದಿಯಾಗಿ ತೊಡಗಿಸಿಕೊಳ್ಳುತ್ತಿದ್ದರು. ಅಂತಿಮವಾಗಿ ಭಾರತ ಆಗಸ್ಟ್ 15, 1947 ರಲ್ಲಿ ಪರಕೀಯರ ದಾಸ್ಯದಿಂದ ಮುಕ್ತಿ ಪಡೆಯಿತು. ಅಂದಿನ ಕಾಲಕ್ಕೆ ಅವರೇ ಕೃಷ್ಣ, ರಾಮ, ಅಲ್ಲಾ, ಜೀಸಸ್ ಎಲ್ಲ. ಅವರ ಸಂದೇಶವೆಂದರೆ ಭಾರತೀಯರಿಗೆ ವೇದವಾಕ್ಯವಾಗಿತ್ತು. ಹಾಗಾಗಿಯೇ ಗಾಂಧೀಜಿ ಮಹೋನ್ನತ ಶಕ್ತಿಯಾಗಿ , ಅವರ ವಿಚಾರಧಾರೆಗಳಲ್ಲಿ ಈಗಲೂ ಗಟ್ಟಿಯಾಗಿ ಬದುಕಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಈಗ ನಮ್ಮಲ್ಲಿರಬೇಕಾಗಿದೆ.  


ಮಹಾತ್ಮಗಾಂಧೀಜಿಯವರು ದೇವರಲ್ಲಿ ಅಪಾರ ನಂಬಿಕೆ ಮತ್ತು ಭಕ್ತಿಯನ್ನು ಹೊಂದಿದ್ದರು. ಪ್ರತಿ ಶುಕ್ರವಾರ ರಾಮ ಮಂದಿರಕ್ಕೆ ಭೇಟಿ ನೀಡಿ ಅಲ್ಲಿ ಸರ್ವಧರ್ಮ ಪ್ರಾರ್ಥನೆಯಲ್ಲಿ ಭಾಗವಹಿಸುವುದು ಅವರ ಅಭ್ಯಾಸವಾಗಿತ್ತು. ದೇವರು ಒಬ್ಬನೇ ನಾಮ ಹಲವು ಎಂಬುದು ಅವರ ನಂಬಿಕೆಯಾಗಿತ್ತು. ಶ್ರೀರಾಮ ನಾಮ, ಜಪ ಮತ್ತು ಭಜನೆಗಳಲ್ಲಿ ತಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತಿದ್ದರು. ಗಾಂಧೀಜಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ರಾಮಾಯಣ – ಮಹಾಭಾರತದ ಕಥೆಗಳನ್ನು ಕೇಳಿದ್ದಷ್ಟೇ ಅಲ್ಲದೆ ಅದರಿಂದ ಸ್ವತಃ ಪ್ರಭಾವಿತರಾಗಿ ಅವುಗಳನ್ನು ಓದಿದರು. 


ಶ್ರವಣಕುಮಾರನ ಪಿತೃಭಕ್ತಿ ಅವರ ಮೇಲೆ ಬಹಳಷ್ಟು ಪ್ರಭಾವ ಬೀರಿದ ಘಟನೆಯಾಗಿದೆ. ತಮ್ಮ ತಾಯಿ ಪುತಲೀಬಾಯಿ ಯವರೊಂದಿಗೆ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಭಕ್ತಿಭಾವದಿಂದ ಉಪವಾಸ ವ್ರತಗಳನ್ನು ಮಾಡುತ್ತಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಭಕ್ತಿಮಾರ್ಗ ಸದಾ ಅವರೊಂದಿಗಿತ್ತು. ಭಗವದ್ಗೀತೆಯನ್ನು ತನ್ನ ತಾಯಿ ಎಂದು ಹೇಳಿದ್ದಾರೆ. ಭಕ್ತಿ ಎಂಬ ಗಿಡದಲ್ಲಿ ಸತ್ಯ, ಅಹಿಂಸೆ, ಶ್ರದ್ಧೆ, ನಿಷ್ಠೆ, ಶ್ರಮ, ಪ್ರಾಮಾಣಿಕತೆ, ನೈತಿಕ ಮೌಲ್ಯಗಳು, ದೃಢವಿಶ್ವಾಸ ಮುಂತಾದ ಹೂಗಳು ಅರಳುತ್ತವೆ. 


ಅವು ಬಾಡುವ ಮುನ್ನವೇ ನಮ್ಮ ಮನಸ್ಸು ಎಂಬ ದೇವರಿಗೆ ಅರ್ಪಿಸಿ ಅದರಿಂದ ಸಿಗುವ ಶುಭಫಲವನ್ನು ನಮ್ಮ ನೆರೆಹೊರೆಯ ಸಮುದಾಯಕ್ಕೆ ಹಂಚುವ ಮೂಲಕ ಸಮಾಜದಲ್ಲಿ ಒಳಿತನ್ನು ಮಾಡಬೇಕು. ಒಳ್ಳೆಯದನ್ನು ಮಾಡಲು ಅವಕಾಶ ದೊರೆತಾಗ ನಾವು ಯಾವುದೇ ಮೀನಮೇಷ ಎಣಿಸದೇ ಒಳ್ಳೆಯದನ್ನು ಮಾಡಿಬಿಡಬೇಕು ಎನ್ನುತ್ತಾರೆ ಬಾಪೂಜಿ. ಆ ಮೂಲಕವೂ ಭಗವಂತನಿಗೆ ಭಕ್ತಿಯ ಸಮರ್ಪಣೆ ಮಾಡಬಹುದು. ಭಕ್ತಿಯ ಭಾವ ಮನಸ್ಸಿಗೆ ಶಾಂತಿ ನೀಡುತ್ತದೆ. 


ಮಹಾತ್ಮಗಾಂಧೀಜಿಯವರು ಭಾರತದ ರಾಷ್ಟ್ರಪಿತ. ಭಾರತ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ. ಇಡೀ ಜಗತ್ತೇ ಗುರುತಿಸಿದ ವ್ಯಕ್ತಿತ್ವ. ಇಂದು ವಿಶ್ವ ದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಗಾಂಧೀಜಿಯವರ ಜೀವನ ಮಾರ್ಗ ಮತ್ತು ವ್ಯಕ್ತಿತ್ವದ ಕುರಿತಾಗಿ ಅಧ್ಯಯನ ಮಾಡುತ್ತಿದ್ದಾರೆ. 


ಅಧ್ಯಯನಕ್ಕೆ ಆಳ ಮತ್ತು ಬರಹಕ್ಕೆ ವಿಸ್ತಾರವಾದ ವ್ಯಕ್ತಿತ್ವವುಳ್ಳವರು ಮಹಾತ್ಮಾ ಗಾಂಧೀಜಿ. ಅಂದಮೇಲೆ ಗಾಂಧೀಜಿ ಒಂದು ವ್ಯಕ್ತಿಯಲ್ಲ, ಅದೊಂದು ಸರ್ವಶ್ರೇಷ್ಠ ಶಕ್ತಿ. ಗಾಂಧೀಜಿಯವರ ಕುರಿತು ಬಹಳಷ್ಟು ಅಧ್ಯಯನಗಳಾಗುತ್ತಿವೆ. ಗಾಂಧೀಜಿಯವರ ಜೀವನ ಬಹಳ ಸರಳತೆಯಿಂದ ಕೂಡಿದೆ. ಅವರ ವ್ಯಕ್ತಿತ್ವದಲ್ಲಿ ಆಡಂಬರವಾಗಲೀ, ಡಂಬಾಚಾರವಾಗಲೀ ಕಾಣುವುದಿಲ್ಲ. ಸತ್ಯ ಮತ್ತು ಪ್ರಾಮಾಣಿಕತೆ ಜೀವನದ ಒಡನಾಡಿ. ಅಹಿಂಸೆ ಮತ್ತು ಉಪವಾಸ ಸತ್ಯಾಗ್ರಹಗಳೆರಡೂ ಗಾಂಧೀಜಿಯವರ ಮಹಾನ್ ಅಸ್ತ್ರಗಳಾಗಿದ್ದು ಇವನ್ನೇ ಬ್ರಿಟಿಷರ ವಿರುದ್ಧ ಗಾಂಧೀಜಿಯವರು ಭಾರತದ  ಸ್ವಾತಂತ್ರ್ಯಕ್ಕಾಗಿ ಬಳಸಿದರು. 


ಉದಾತ್ತ ಚಿಂತನೆಯಿತ್ತು. ಆದ್ದರಿಂದಲೇ ರವೀಂದ್ರನಾಥ ಠಾಗೋರರು ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದು ಗೌರವಿಸಿದರು. ಸರಳ ಜೀವನ ಉದಾತ್ತ ಚಿಂತನೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ವಿಶ್ವಮಟ್ಟದಲ್ಲಿ ರೂಪಿಸುತ್ತವೆ ಎಂಬುದಕ್ಕೆ ಮಹಾತ್ಮಾ ಗಾಂಧೀಜಿಯವರೆ ಸಾಕ್ಷಿಯಾಗಿದ್ದಾರೆ.


ಇಂದು ವಿಶ್ವವು ಮಹಾತ್ಮ ಗಾಂಧೀಜಿಯವರನ್ನು ವಿವಿಧ ಆಯಾಮಗಳಲ್ಲಿ ಅಧ್ಯಯನ ಮಾಡುತ್ತಿದೆ. ಇಲ್ಲಿ ಗಾಂಧಿ ಎಂದರೆ ಆದರ್ಶ ವ್ಯಕ್ತಿತ್ವವುಳ್ಳ ಅದಮ್ಯ ಚೇತನ. ಬಾರ್ಬಾರೆ ವಾರ್ಡ್ ಜಾಕ್ಸನ್ ರವರು "ಗಾಂಧೀಜಿಯವರನ್ನು ಮಾನವನಲ್ಲಿರುವ ಒಳ್ಳೆಯತನದ ವಕೀಲ" ಎಂದಿದ್ದಾರೆ. ಜೆಂಟಾ ಮೌರಿನಾ ಎಂಬ ಲೇಖಕರು "ಗಾಂಧಿ : ಭಾರತದ ಪ್ರತೀಕ ಮತ್ತು ಸಂಕೇತ" ಎಂದಿದ್ದಾರೆ. ಶ್ರೇಷ್ಠ ಇತಿಹಾಸಕಾರ ಆರ್ನಾಲ್ಡ್  ಜೋಸೆಫ್ ಟಾಯ್ನಬಿ ಯವರು "ಗಾಂಧೀಜಿ ಭಾರತಕ್ಕೆ ಒಂದು ಕಾಣಿಕೆ"  ಎಂದಿದ್ದಾರೆ. ಮಾರ್ಗರೇಟ್ ಕೋಲ್ ರವರು "ಗಾಂಧಿ ಮಹಾಪುರುಷ" ಎಂದಿದ್ದಾರೆ. 


ಮಹಾತ್ಮ ಗಾಂಧೀಜಿಯವರಂತೆ ಸರಳ ಜೀವನ ನಡೆಸುವುದು ಬಹಳ ಕಷ್ಟ. ಅಂತಹ ವ್ಯಕ್ತಿತ್ವವುಳ್ಳವರನ್ನು ಹುಡುಕಿದರೆ ಸಿಗುವುದು ಬಹಳ ವಿರಳ. ಸತ್ಯ ಹರಿಶ್ಚಂದ್ರ ನಾಟಕವನ್ನು ನೋಡಿದ ಮೇಲೆ ಗಾಂಧೀಜಿಯವರು ಸತ್ಯವನ್ನು ಚಾಚೂ ತಪ್ಪದೆ ಬದುಕಿನಲ್ಲಿ ಅಳವಡಿಸಿಕೊಂಡರು ಮತ್ತು  ಹಾಗೆಯೇ ನಡೆದರು. 


ನಾಟಕ ನೋಡುವುದಕ್ಕೂ ಮುನ್ನ ಹೇಳಿದ ಸುಳ್ಳುಗಳನ್ನು ತಮ್ಮ ಆತ್ಮಚರಿತ್ರೆಯಲ್ಲಿ ಮರೆಮಾಚದೆ ಬರೆದುಕೊಂಡಿದ್ದಾರೆ. ಜೀವನದಲ್ಲಿ ನಡೆದ ಎಲ್ಲಾ ಘಟನೆಗಳನ್ನು ತಮ್ಮ ಆತ್ಮಚರಿತ್ರೆ MY EXPERIMENT WITH TRUTH ನಲ್ಲಿ ಓದುಗರ ಮನ  ಮುಟ್ಟುವಂತೆ ಚಿತ್ರಿಸಿದ್ದಾರೆ. ಈ ಪುಸ್ತಕದಲ್ಲಿ ಅವರೇ ಹೇಳುವಂತೆ " I HAVE NOTHING NEW TO TEACH THE WORLD. TRUTH AND NON - VIOLENCE ARE AS OLD AS THE HILLS " ನೋಡಿ, ಈ ವಿಶ್ವಕ್ಕೆ ಬೇಕಾಗಿರುವ ಸತ್ಯ ಮತ್ತು ಅಹಿಂಸೆಗಳನ್ನು ಬೋಧಿಸಿದ್ದಾರೆ. 


ಇವುಗಳ ಪಾಲನೆ ಕಷ್ಟ. ಇಂದಿನ ಜಗತ್ತು ಕ್ಷಣಕ್ಷಣಕ್ಕೂ ಮಾನಸಿಕವಾಗಿ ಮತ್ತು ಭೌತಿಕವಾಗಿ ವ್ಯಥೆಪಡುವ ಮೂಲಕ ಹಿಂಸೆ ಅನುಭವಿಸುತ್ತಿದೆ. ಈ ಹಿಂಸೆಗೆ ಕ್ಷಣಕ್ಷಣಕ್ಕೂ ಮಾತನಾಡುವ ಅಸತ್ಯಗಳು ಕಾರಣವಾಗಿರುತ್ತವೆ. ಅಸತ್ಯದ ಮಾರ್ಗ ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಬೇಕು. ಅಸತ್ಯ ಮತ್ತು ಹಿಂಸೆಯ ಮಾರ್ಗದಿಂದ ಜಗತ್ತು ಈಗಾಗಲೇ ಎರಡು ಮಹಾಯುದ್ದಗಳನ್ನು ಕಂಡಿದೆ. ವಿಶ್ವಶಾಂತಿ ಕದಡಿ, ಹಿಂಸೆಯಿಂದ ಮನುಕುಲ ಬಹಳ ನಷ್ಟ ಅನುಭವಿಸಿದೆ. 


ಗಾಂಧೀಜಿ ಸಾರ್ವಜನಿಕ ಬದುಕಿನ ಬಹು ದೊಡ್ಡ ಆದರ್ಶ. ಏಕೆಂದರೆ ಸರ್ವೋದಯ ಎಂಬ ಪರಿಕಲ್ಪನೆಯನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸರ್ವೋದಯ ಎಂದರೆ ಎಲ್ಲರ ಉದಯ, ಎಲ್ಲರ ಏಳಿಗೆ, ಸರ್ವರ ಕಲ್ಯಾಣ, ಸರ್ವರ ಉದ್ಧಾರ ಎಂದರ್ಥ. ಇಲ್ಲಿ ಸರ್ವೋದಯ ಎಂಬುದು ಯಾವುದೇ ಒಂದು ಕ್ಷೇತ್ರ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ವ್ಯಾಪಕವಾದ, ವಿಶಾಲವಾದ ಅರ್ಥವನ್ನು ಒಳಗೊಂಡಿದೆ. 


ಸರ್ವೋದಯ ಪರಿಕಲ್ಪನೆಯಲ್ಲಿ ಬಹು ಮುಖ್ಯವಾದ ವಿಚಾರವೆಂದರೆ ಗ್ರಾಮ ಸ್ವರಾಜ್ಯ. ಗಾಂಧೀಜಿಯವರು ಹಂತಕನ ಗುಂಡೇಟಿಗೆ ಬಲಿಯಾಗುವ ಒಂದು ವಾರ ಮೊದಲು ತಮ್ಮ 'ಹರಿಜನ' ಪತ್ರಿಕೆಯಲ್ಲಿ ಗ್ರಾಮಸ್ವರಾಜ್ಯದ ಕುರಿತಾಗಿ ಬರೆದಿರುತ್ತಾರೆ. ಬೃಹತ್ ಭಾರತ ದೇಶವು ಹಳ್ಳಿಗಳಿಂದ ಕೂಡಿದೆ. ಯಾವಾಗ ಹಳ್ಳಿಗಳು ಉದ್ಧಾರವಾಗುತ್ತವೆಯೋ ಆಗ ಮಾತ್ರ ದೇಶದ ಉದ್ಧಾರ ಸಾಧ್ಯವೆಂದು ನಂಬಿದ್ದವರು ಗಾಂಧೀಜಿ. ಅದಕ್ಕಾಗಿಯೇ ಅಧಿಕಾರದ ವಿಕೇಂದ್ರೀಕರಣ ಪರಿಕಲ್ಪನೆಯನ್ನು ಮಾರ್ಗದರ್ಶಿಸುತ್ತಾರೆ. 


ಅಧಿಕಾರವು ಹಳ್ಳಿಗಳಿಂದ ಆರಂಭವಾಗಿ ಕೇಂದ್ರದ ಮೂಲಕ ಹೊರ ಹೊಮ್ಮಬೇಕು. ಹಳ್ಳಿಗಳಲ್ಲಿ ಯಾವುದೇ ವ್ಯಕ್ತಿಯು ಹಳ್ಳಿಯ ಉದ್ಧಾರಕ್ಕಾಗಿ ತಾನು ಸ್ವತಃ ಆಲೋಚಿಸಿ ಕಾರ್ಯಮಗ್ನನಾಗುವ ಸ್ವಾತಂತ್ರ್ಯ ಹೊಂದಿರಬೇಕು ಎನ್ನುತ್ತಾರೆ ಗಾಂಧೀಜಿ. ಹಳ್ಳಿಗಳು ಆರ್ಥಿಕವಾಗಿ ಸಬಲವಾಗಬೇಕು. ಈ ನಿಟ್ಟಿನಲ್ಲಿ ಗೃಹ ಕೈಗಾರಿಕೆಗಳನ್ನು ಪ್ರೋತ್ಸಾಹಿಸು ತ್ತಾರೆ. ನಮ್ಮ ದೇಶದ ಮಾರುಕಟ್ಟೆಗಳಲ್ಲಿ ಸ್ವದೇಶಿ ವಸ್ತುಗಳನ್ನು ಹೊರತುಪಡಿಸಿ ಯಾವುದೇ ವಿದೇಶಿ ವಸ್ತುಗಳ ಮಾರಾಟವಾಗಬಾರದು ಎಂಬ ಕಲ್ಪನೆ ಗಾಂಧೀಜಿಯವರದಾಗಿತ್ತು. 


ನಮ್ಮ ದೇಶದ ಪ್ರತೀ ವ್ಯಕ್ತಿಯೂ ಆರ್ಥಿಕವಾಗಿ ಸಬಲನಾಗಬೇಕು. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ಅನೇಕ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ, ರೈತರ ಪರ ಹೋರಾಟ, ಕಾರ್ಮಿಕರ ಪರ ಹೋರಾಟ, ಇವುಗಳ ಜೊತೆ ಜೊತೆಯಲ್ಲೇ ಬಡತನದ ವಿರುದ್ಧ ಹೋರಾಟ ಮಾಡಬೇಕು ಎಂಬ ಕಲ್ಪನೆಯನ್ನು ಸಾರ್ವಜನಿಕವಾಗಿ ಆಗಾಗ್ಯೆ ತಮ್ಮ ಭಾಷಣಗಳಲ್ಲಿ ಒತ್ತಿ ಹೇಳುತ್ತಿದ್ದರು. ಸರ್ವ ಜನರೂ ಬಡತನದ ಬೇಗೆಯಿಂದ ಮುಕ್ತರಾಗಬೇಕು ಎಂದರು. 


ನಿರುದ್ಯೋಗವು ಬಡತನಕ್ಕೆ ಕಾರಣವಾಗಿದೆ ಎಂದು ಗಾಂಧೀಜಿ ವಾದಿಸುತ್ತಾರೆ. ಆದ್ದರಿಂದಲೇ ಗಾಂಧೀಜಿಯವರು ಸರ್ವೋದಯ ಎಂಬ ಪರಿಕಲ್ಪನೆಯ ನೀಡಿದ್ದಾರೆ. ಆ ಮೂಲಕ ಗುಡಿಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಿ, ಎಲ್ಲರಿಗೂ ಉದ್ಯೋಗ ದೊರೆಯವಂತಾಗಿ ಬಡತನ ನಿವಾರಣೆಯಾಗುತ್ತದೆ. ಈ ಮೂಲಕ ಶ್ರೀಸಾಮಾನ್ಯನ ಜೀವನ ಹಸನಾಗುತ್ತದೆ. ಯಾವಾಗ ಶ್ರೀಸಾಮಾನ್ಯನೊಬ್ಬನು ತನ್ನ ಬದುಕನ್ನು ಬಡತನದಿಂದ ಮುಕ್ತಗೊಳಿಸಿ ಕೊಳ್ಳುತ್ತಾನೆಯೋ ಆಗ ತನ್ನ ಕುಟುಂಬದಿಂದ ಗ್ರಾಮ, ಗ್ರಾಮದಿಂದ ನಗರ, ನಗರದಿಂದ ರಾಜ್ಯ, ರಾಜ್ಯದಿಂದ ರಾಷ್ಟ್ರ ಹಾಗೂ ರಾಷ್ಟ್ರದಿಂದ ವಿಶ್ವದ ಏಳಿಗೆಯ ತನಕ ಚಿಂತಿಸುತ್ತಾನೆ. 


ಶ್ರೀಸಾಮಾನ್ಯನ ಪ್ರಾಮಾಣಿಕ ಮತ್ತು ಸತ್ಯನಿಷ್ಠೆಯ ಪ್ರಯತ್ನ ಮುಂದೊಂದು ದಿನ ಫಲವನ್ನು ಕೊಟ್ಟೇ ಕೊಡುತ್ತದೆ ಎಂದು ನಂಬಿದ್ದವರು ಗಾಂಧೀಜಿ. ಇಂತಹ ಚಿಂತನೆಗಳಿಂದ ಅವರ ಆತ್ಮವು ಭಾರತೀಯರ ದೃಷ್ಟಿಯಲ್ಲಿ ಮಹಾನ್ ಎಂದು ಗೋಚರಿಸಿತು. ಅದೇ ಎಲ್ಲರಿಂದಲೂ ಮಹಾತ್ಮ ಎಂದೆನಿಸಿಕೊಂಡಿತು. ಗಾಂಧೀಜಿಯವರು ಈ ಲೋಕವನ್ನು ತ್ಯಜಿಸಿ ಎಪ್ಪತ್ನಾಲ್ಕ  ವರ್ಷಗಳಾದರೂ ಇಂದಿಗೂ ನಮ್ಮ ಸಮಕಾಲೀನ ಜಗತ್ತಿನ ಜನಗಣಮನದಲ್ಲಿ  ಅಜರಾಮರವಾಗಿದ್ದಾರೆ. ಗಾಂಧೀಜಿಯವರನ್ನು ನಾವೆಲ್ಲರೂ ದೈಹಿಕವಾಗಿ ಇಂದು ನೋಡದಿದ್ದರೂ, ಅವರ ವಿಚಾರಧಾರೆಗಳ ಮೂಲಕ ಅವರನ್ನು ದರ್ಶಿಸುತ್ತಿದ್ದೇವೆ. ಇದಕ್ಕಾಗಿ ನಾವೆಲ್ಲರೂ ಅವರನ್ನು ಸದಾ ಸ್ಮರಿಸೋಣ.  


ಸತ್ಯ ಮತ್ತು ಅಹಿಂಸೆ ಇವೆರಡು ಗಾಂಧೀಜಿಯವರ ಮೂಲಮಂತ್ರಗಳಾಗಿದ್ದವು. ಗಾಂಧೀಜಿಯವರು ಚಿಕ್ಕವಯಸ್ಸಿನಲ್ಲಿಯೇ ಸತ್ಯ ಹರಿಶ್ಚಂದ್ರ ನಾಟಕವನ್ನು ನೋಡಿ ಸತ್ಯದ ಪಾಲನೆಗೆ ದೃಢ ಸಂಕಲ್ಪ ಮಾಡಿದವರು. ಗಾಂಧೀಜಿಯವರು ಸದಾ ಹೀಗೆ ಹೇಳುತ್ತಿದ್ದರು. 


"ಜೀವನದಲ್ಲಿ ನಾನು ಏನನ್ನು ಬಿಟ್ಟರೂ ಸತ್ಯವನ್ನು ಬಿಡಲಾರೆ. ಏಕೆಂದರೆ ಸತ್ಯಮೇವ ಜಯತೇ ಎಂಬ ಮಾತಿನಲ್ಲಿ ನಾನು ದೃಢ ವಿಶ್ವಾಸವನ್ನು ಹೊಂದಿದ್ದೇನೆ" ಎನ್ನುತ್ತಿದ್ದರು ಮಹಾತ್ಮಾ ಗಾಂಧೀಜಿ. ಇದೇ ರೀತಿ ಅಹಿಂಸೆಯನ್ನು ಸರ್ವ ಶ್ರೇಷ್ಠ ಧರ್ಮವೆಂದು ಪರಿಪಾಲನೆ ಮಾಡುತ್ತಿದ್ದರು. ಕಾರಣ ಮಹಾತ್ಮಾ ಗಾಂಧಿಯವರು ಎಲ್ಲ ಧರ್ಮಗಳ ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. " ಎಲ್ಲ ಧರ್ಮಗಳ ಸಾರವೂ ಒಂದೇ. ಅದೇ ಸತ್ಯ ಮತ್ತು ಅಹಿಂಸೆ. " ಇದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು. 


ಈ ಮನುಕುಲವನ್ನು ಪ್ರೀತಿಸಬೇಕು ಜೊತೆಗೆ ನಮ್ಮೊಡನಿರುವ ಪ್ರಾಣಿ, ಪಕ್ಷಿ, ಪ್ರಕೃತಿಯನ್ನು ಪ್ರೀತಿಸುವುದನ್ನು ಕಲಿಯಬೇಕು. ಗಾಂಧೀಜಿಯವರು ತಮ್ಮ ಜೀವನದಲ್ಲಿ 2039 ದಿನಗಳ ಕಾರಾಗೃಹ ವಾಸವನ್ನು ಅನುಭವಿಸಿದ್ದಾರೆ  ಎಂದು ಓದಿದ ನೆನಪಿದೆ. 


ಅಂತಹ ಸಮಯದಲ್ಲಿ ಭಾರತದ ಜನತೆಗೆ ಒಂದು ಕರೆ ಕೊಟ್ಟಿದ್ದರೆ ಸಾಕಾಗಿತ್ತು. ಜನರು ದಂಗೆ ಎದ್ದು ಬ್ರಿಟಿಷರನ್ನು ನುಚ್ಚುನೂರು ಮಾಡುತ್ತಿದ್ದರು. ಏಕೆಂದರೆ ಆಗ ಗಾಂಧೀಜಿಯವರ ಮಾತಿಗೆ ಅಷ್ಟೊಂದು ಮೌಲ್ಯವಿತ್ತು. ಆದರೆ ಗಾಂಧೀಜಿಯವರು ಹಾಗೆ ಮಾಡಲಿಲ್ಲ. ಹಿಂಸೆಗೆ ಹಿಂಸೆಯೇ ಪರಿಹಾರವಲ್ಲ ಬದಲಿಗೆ ಹಿಂಸೆಯನ್ನು ಅಹಿಂಸೆ ಎಂಬ ಅಸ್ತ್ರದಿಂದ ತುಂಡರಿಸಬೇಕು ಎಂದು ನಂಬಿದ್ದರು ಮತ್ತು ಹಾಗೆಯೇ ನಡೆದುಕೊಂಡರು. ಹಾಗೆಯೇ ಗಾಂಧೀಜಿಯವರು ತಮ್ಮ ಜೀವನದಲ್ಲಿ ಒಟ್ಟು 142 ದಿನಗಳ ಉಪವಾಸವನ್ನು ಮಾಡಿದ್ದಾರೆ ಎಂಬುದನ್ನು ಅಧ್ಯಯನದಿಂದ ತಿಳಿಯಬಹುದಾಗಿದೆ. 


ಗಾಂಧೀಜಿಯವರನ್ನು ದ್ವೇಷಿಸುತ್ತಿದ್ದ ಇಂಗ್ಲೆಂಡ್ ದೇಶವೇ ಅವರ ಮರಣದ ಎಷ್ಟೋ ವರ್ಷಗಳ ನಂತರ ಗಾಂಧೀಜಿಯವರ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ ಮಹತ್ವದ ಸ್ಥಾನವನ್ನು ನೀಡಿತು. ಎಲ್ಲರನ್ನು ಪ್ರೀತಿಸಿ ಎನ್ನುತ್ತಾ  ವಿಶ್ವಕ್ಕೆ ಮಾದರಿಯಾದರು. ವಸುದೈವ ಕುಟುಂಬಕಂ ಎಂಬ ತತ್ವದ ಪ್ರತಿನಿಧಿಯಾದರು. ವಿಶ್ವ ಕುಟುಂಬದ ಎಲ್ಲಾ ಜನರಲ್ಲೂ ನಾವು ನಮ್ಮವರು ಎಂಬ ಭಾವ ಬಂಧ ಬೆಳೆಯಬೇಕು. 


ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸಹಕಾರಿಯಾಗಿ ನಿಂತು ಕಷ್ಟಗಳ ಪರಿಹಾರಕ್ಕೆ ಮುಂದಾಗಬೇಕು ಎನ್ನುತ್ತಾರೆ ಮಹಾತ್ಮಾ ಗಾಂಧೀಜಿ. ಇಂತಹ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ನಾವೆಲ್ಲರೂ ವಿಶ್ವ ಕುಟುಂಬದ ಸದಸ್ಯರಾಗಿ ಪರಸ್ಪರ ಪ್ರೀತಿಸೋಣ. ಸರ್ವರೂ ಒಂದಾಗಿ ಬಾಳೋಣ. 


"1948 ಜನವರಿ 30 ರಂದು ಶುಕ್ರವಾರ ಪ್ರಾರ್ಥನಾ ಸಭೆಗಾಗಿ ರಾಮ ಮಂದಿರಕ್ಕೆ ಹೋಗುತ್ತಿದ್ದ ವೇಳೆ ನಾಥೂರಾಂ ವಿನಾಯಕ ಗೋಡ್ಸೆ ಎಂಬಾತ ಗಾಂಧೀಜಿಯವರ ಎದೆಗೆ ಗುಂಡು ಹಾರಿಸಿದ. " ಹೇ ರಾಮ್ " ಎನ್ನುತ್ತಾ ಗಾಂಧೀಜಿ ಪ್ರಾಣಬಿಟ್ಟರು.  ಈ ಸುದ್ದಿಯು ವಿಶ್ವದಾದ್ಯಂತ ಪ್ರಸಾರವಾಗುತ್ತಿದ್ದಂತೆ ಇಡೀ ಜಗತ್ತು ಒಂದು ಕ್ಷಣ ತಲ್ಲಣಗೊಂಡಿತು. ವಿಶ್ವ ಜನ ಸಮೂಹವು ತಮ್ಮ ಕಿವಿಗಳನ್ನು ತಾವೇ ನಂಬದಾದರು. ಇಡೀ ಲೋಕವೇ ಮೂಕವಾಯಿತು. 


ಎಲ್ಲೆಲ್ಲೂ ಮೌನದ ಕಾರ್ಮೋಡ ಕವಿದು ಕಪ್ಪಿಟ್ಟಿತು. ಭಾರತದಲ್ಲಂತೂ ನೀರವ ಮೌನ. ನಾಥೂರಾಂ ಗೋಡ್ಸೆಗೆ ಇಡೀ ರಾಷ್ಟ್ರವೇ ಹಿಡಿ ಹಿಡಿ ಶಾಪ ಹಾಕಿತು. ' ಭಾರತದ ಮಹಾತ್ಮ ಇನ್ನಿಲ್ಲ ' ಎಂಬ ವಾರ್ತೆಗೆ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಕಂಬನಿಗರೆಯಿತು. ಈ ಸಂದರ್ಭದಲ್ಲಿ ಜನರು ವ್ಯಕ್ತ ಪಡಿಸಿದ ಭಾವನೆಯೇ ದೇಶಾಭಿಮಾನ. ಏಕೆಂದರೆ ಗಾಂಧೀಜಿ ಕೇವಲ ವ್ಯಕ್ತಿಯಾಗಿರಲಿಲ್ಲ. ಬದಲಿಗೆ ರಾಷ್ಟದ ಶಕ್ತಿಯಾಗಿದ್ದರು. ಭಾರತೀಯರ ಸ್ಫೂರ್ತಿಯ ಚಿಲುಮೆಯಾಗಿದ್ದರು. 


ಚೈನತ್ಯದ ಶಕ್ತಿಯಾಗಿದ್ದರು. ಇಡೀ ವಿಶ್ವವೇ ಗಾಂಧೀಜಿಯವರನ್ನು "ಮಹಾತ್ಮಾ" ಎಂದು ಒಪ್ಪಿಕೊಂಡಿತ್ತು. ಅಂತಹ ಮಹಾನ್ ಚೇತನ ಇನ್ನಿಲ್ಲವೆಂದಾಗ  ಕಂಬನಿ ಕಡಲಾಯಿತು. "ಬಾಪು ಹೋದರಲ್ಲ ಭಾರತ ಜ್ಯೋತಿ ಆರಿತಲ್ಲ" ಎಂದರು ಮಹನೀಯರು. ಗಾಂಧೀಜಿಗಾಗಿ ಜನ ಏಕೆ ಕಂಬನಿ ಮಿಡಿಯಿತು? ಗಾಂಧೀಜಿಯವರನ್ನು ಪೂಜನೀಯ ಭಾವದಿಂದ ಕಾಣುವಂತೆ ಮಾಡಿದ ಆ ಶಕ್ತಿ ಯಾವುದು? ಎಂಬ ಪ್ರಶ್ನೆಗಳು ನಮ್ಮಲ್ಲಿ ಆಗಾಗ ಮೂಡುತ್ತವೆ. ಅವೆಲ್ಲ ಪ್ರಶ್ನೆಗಳಿಗೂ ಉತ್ತರ ಗಾಂಧೀಜಿಯವರ ಸರಳ ಜೀವನ ವಿಧಾನ. 


-ಕೆ.ಎನ್. ಚಿದಾನಂದ,  ಹಾಸನ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top